ಟ್ರೆಕ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಟ್ರೆಕ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಡಿಸೆಂಬರ್ 4, 2011

ಪ್ರಕೃತಿಯ ಮಡಿಲಲ್ಲಿ ಮಳೆ ಚಾರಣ / ಟ್ರೆಕ್



ದಿನಾಂಕ:  ೧೧.೦೬.೨೦೧೧ ಮತ್ತು ೧೨.೦೬.೨೦೧೧    

ಸ್ಥಳ :   ಕುದುರೆಮುಖ ಪರ್ವತ                                        

ಎತ್ತರ: ಸಮುದ್ರ ಮಟ್ಟಕ್ಕಿಂತ ಸುಮಾರು ೧೮೯೨ ಮೀಟರ್

ಜಿಲ್ಲೆ: ಚಿಕ್ಕಮಗಳೂರು

ತಂಡ: ಸಂತೋಷ್, ಸಾಯಿಪ್ರಕಾಶ್, ಗಜೇಂದ್ರ, ಶ್ರೀಕಾಂತ್ ಮತ್ತು ನಾನು

ದೂರ: ಒಟ್ಟು ೩೦ ಕಿ.ಮೀ

*********************************************************************************

ಈ ಸಲ ಎಲ್ಲರ ಮಹದಾಶೆಯಂತೆ ಕುದುರೆಮುಖ ಶಿಖರಕ್ಕೆ ಚಾರಣ ಹೋಗುವುದು ಖಾತ್ರಿಯಾಗಿತ್ತು, ಅಂದು ಶುಕ್ರವಾರ ರಾತ್ರಿ ಸಮಯ ೧೦.೪೦ ಕ್ಕೆ ಬೆಂಗಳೂರನ್ನು ಬಿಟ್ಟ ನಾವು ಸಾಯಿಪ್ರಕಾಶ್‌ರವರ ಕಾರಿನಲ್ಲಿ ಪ್ರಯಾಣ ಬೆಳೆಸಿ ಕಳಸ ತಲುಪಿದಾಗ ಬೆಳಿಗ್ಗೆ ಸಮಯ ೬.೨೫, ಅಲ್ಲಿಂದ ಮಾರ್ಗಧರ್ಶಿ ಸತೀಶ್‌ಗೆ ಕರೆ ಮಾಡಿ ಬರುತ್ತಿರುವುದಾಗಿ ತಿಳಿಸಿದೆವು, ಅಷ್ಟೊತ್ತಿಗಾಗಲೇ ಅವರು ಅರಣ್ಯ ಇಲಾಖೆಯಿಂದ ಅನುಮತಿ ಪಡೆದಿದ್ದ ಸತೀಶ್‌ ನಮ್ಮನ್ನು ಬರುವಂತೆ ಸೂಚಿಸಿದರು, ಕಳಸದಿಂದ ಕುದುರೆಮುಖ ಮಾರ್ಗದಲ್ಲಿ ಸಿಗುವ ಬಾಳ್‌ಗಲ್ ತಲುಪಿದೆವು ಅಲ್ಲಿಯೇ ಇದ್ದ ಒಂದು ಮನೆಯ ಬಳಿ ಕಾರನ್ನು ನಿಲ್ಲಿಸಿ, ಪಕ್ಕದಲ್ಲೆ ಇದ್ದ ಅಂಗಡಿಯೊಂದರಲ್ಲಿ ಚಹಾ ಕುಡಿದು ನಮ್ಮ ಬೆನ್ನು ಚೀಲಗಳನ್ನು ಹೆಗಲಿಗೇರಿಸಿ ಜೀಪ್ ಹಾದಿಯಲ್ಲಿ ಚಾರಣ ಶುರು ಮಾಡಿದೆವು.


ಹಲಸಿನ ಹಣ್ಣನ್ನು ಕೀಳುತ್ತಿರುವ ಗಜೇಂದ್ರ

ಹಾದಿ ಮಧ್ಯೆ ಹಲಸಿನ ಮರದಿಂದ ಕೈಗೆಟುಕುವ ಅಂತರದಲ್ಲೆ ಇದ್ದ ಹಲಸಿನ ಹಣ್ಣನ್ನು ಗಜೇಂದ್ರರವರು ಕಿತ್ತು ತಂದರು, ಮಾಗಿದ ಹಲಸಿನ ಹಣ್ಣನ್ನು ದಾರಿಯುದ್ದಕ್ಕೂ ತಿನ್ನುತ್ತ ನಡೆದೆವು, ಅಷ್ಟೊತ್ತಿಗಾಗಲೇ ಬಿಡದೇ ಕಾಡುವ ಮಲೆನಾಡ ಜಡಿ ಮಳೆ ಶುರುವಾಯಿತು,ಸುಮಾರು ಆರೇಳು ಕಿ.ಮೀ ದೂರ ಮಳೆಯಲ್ಲಿಯೇ ಚಾರಣದ ಹಾದಿಯನ್ನು ಸವೆಸಿ ಮುಳ್ಳೋಡಿಯ ಸತೀಶ್‌ ಮನೆಯ ಬಳಿ ಬಂದಾಗ ಸಮಯ ಬೆಳಿಗ್ಗೆ ೯.೧೫ ಆಗಿತ್ತು, ಅಷ್ಟೊತ್ತಿಗಾಗಲೇ ಸಿದ್ಧವಾಗಿದ್ದ ತಿಂಡಿ ತಿಂದು ಮುಗಿಸಿ (ಮಲೆನಾಡ ವಿಶೇಷ ಕಡುಬಿಟ್ಟು, ಚಟ್ನಿ) ಒಂದು ದಿನದ ಚಾರಣಕ್ಕೆ ಮಾತ್ರ ಅನುಮತಿ ಸಿಕ್ಕಿದ್ದರಿಂದ ನಮ್ಮ ಬೆನ್ನುಚೀಲಗಳನ್ನು ಸತೀಶ್ ಮನೆಯಲ್ಲಿಯೇ ಇಳಿಸಿ ಚಾರಣ ಶುರುಮಾಡಿದಾಗ ಸಮಯ ಹತ್ತಾಗಿತ್ತು.


ಚಾರಣದ ಹಾದಿಯ ಪಕ್ಕದಲ್ಲಿಯೇ ಕಾಣುವ ಸೋಮಾವತಿ ಜಲಪಾತ

ಸುಮಾರು ಅರ್ಧ ಗಂಟೆ ಚಾರಣದ ನಂತರ ಒಂಟಿ ಮರದ (ನೇರಳೆ ಮರ)  ಬಳಿ ಬಂದೆವು, ಆರಂಭದ ಹಾದಿ ಅಷ್ಟೇನು ಆಯಾಸವಿಲ್ಲದ್ದು, ಅಷ್ಟರಲ್ಲಿ ನಮ್ಮ ಮಾರ್ಗಧರ್ಶಿ ಸತೀಶ್ ನಮ್ಮನ್ನು ಕರೆದು ಪಕ್ಕದ ಶಿಖರವನ್ನೇರುತ್ತಿದ್ದ ಕಾಡೆಮ್ಮೆಯನ್ನು ತೋರಿಸಿದರು, ಕಾಡೆಮ್ಮೆ ಮಿಂಚಿನಂತೆ ಶಿಖರವನ್ನೇರಿ ಮಾಯವಾಯ್ತು, ಇಲ್ಲಿಂದ ಮುಂದಕ್ಕೆ ಸತತ ಒಂದು ಗಂಟೆ ಚಾರಣದ ನಂತರ ಬೆಳ್ತಂಗಡಿ ತಾಲ್ಲೂಕಿನ ನಾವೂರಿನ ಕಡೆಗೆ ಹೋಗುವ ದಾರಿ ಸಿಕ್ಕಿತು, ಕೆಲವು ಚಾರಣಿಗರು ನಾವೂರಿನ ಕಡೆಯಿಂದಲೂ ಕುದುರೆಮುಖ ಪರ್ವತಕ್ಕೆ ಚಾರಣ ಮಾಡುವುದುಂಟು.


ಅಲ್ಲಿಂದ ಸ್ವಲ್ಪ ಮುಂದೆ ಬಂದಾಗ ಬಹಳ ಸನಿಹದಲ್ಲಿ ನನ್ನ ಕಣ್ಣಿಗೆ ಕಂಡಿದ್ದು ಪುಟ್ಟ ಜಿಂಕೆ ಮರಿ,  ನೋಡಿದಾಕ್ಷಣ ಖುಷಿಯಿಂದ ಎಲ್ಲರನ್ನು ಕೂಗಿ ಕರೆದೆ, ಅಷ್ಟರಲ್ಲಿ ಕೂಗಿ ಕರೆದ ಸದ್ದಿನಿಂದ ಅಂಜಿ ಜಿಂಕೆ ಕಾಡಿನೊಳಗೆ ನುಗ್ಗಿ ಮರೆಯಾಯಿತು.

ಚಿಟ ಪಟ ಸದ್ದಿನೊಂದಿಗೆ ಆಕಾಶದಿಂದ ಧರೆಗೆ ಮುತ್ತಿಕ್ಕುತಿದ್ದ ಮಲೆನಾಡ ವರ್ಷಧಾರೆಯ ಸೊಬಗು ನಿಜಕ್ಕೂ ಅವಿಸ್ಮರಣೀಯ, ಯಾವ ಕಡೆ ಕಣ್ಣಾಯಿಸಿದರೂ ತುಂಬಿ ಹರಿಯುತ್ತಿದ್ದ ತೊರೆ ಹಳ್ಳಗಳ ರಮಣೀಯ ಸೌಂದರ್ಯ ನಮ್ಮನ್ನು ಮಂತ್ರ ಮುಗ್ಧರನ್ನಾಗಿಸಿತು.


ಜಡಿ ಮಳೆ ಕೊಂಚವೂ ಕಮ್ಮಿಯಾಗಲಿಲ್ಲ "ಧೋ" ಎಂದು ಒಂದೇ ಸಮನೇ ಬೀಳುತ್ತಲ್ಲೇ ಇತ್ತು ನಾವೆಲ್ಲ ಅದಕ್ಕೆ ತಯಾರಾಗೆ ಬಂದಿದ್ದೆವು, ಮುಂದೆ ಸಾಗುತ್ತಿದ್ದಂತೆ ಕೆಂಪು ನೀರಿನ ಹಳ್ಳ ಎದುರಾಯಿತು ಹಳ್ಳದಲ್ಲೆ ಸ್ವಲ್ಪ ದೂರ ನಡೆದು ಹಳ್ಳ ಬಿಟ್ಟಿ ಮತ್ತೆ ಕಾಡಿನ ಹಾದಿಯಲ್ಲಿ ನಡೆಯತೊಡಗಿದೆವು, ಅಷ್ಟೊತ್ತಿಗೆ ಒಂದನೇ ಲೋಭೊ ಮನೆಯ ಬಳಿ ಬಂದೆವು.


ಸುಂದರ ವನಪುಷ್ಪ


ಹಾದಿಯುದ್ದಕ್ಕೂ ಸಾಯಿಪ್ರಕಾಶ್‌ರವರ ಹಾಸ್ಯಭರಿತ ಚಟಾಕಿಗಳು ಮಲೆನಾಡ ಮಳೆಯಷ್ಟೆ ಮನಸ್ಸಿಗೆ ಮುದನೀಡುತ್ತಿದ್ದವು, ಕೆಲವೇ ನಿಮಿಷದ ಅಂತರದಲ್ಲಿ ಎರಡನೇ ಲೋಭೊ ಮನೆ ಸಿಕ್ಕಿತು ಇಲ್ಲಿಂದ ಸ್ವಲ್ಪ ಮುಂದಕ್ಕೆ ನಡೆದು ಬಯಲಿನಂತ ಜಾಗದಲ್ಲಿ ಬಂದು ನಿಂತೆವು, ರಾಷ್ಟ್ರೀಯ ಉದ್ಯಾನವನ ಆಗುವುದಕ್ಕೂ ಮುಂಚೆ ಲೋಭೊ ವಾಸಿಸುತ್ತಿದ್ದ ಸಮಯದಲ್ಲಿ ವ್ಯವಸಾಯ ಮಾಡುತ್ತಿದ್ದ ಜಾಗ ಅದಾಗಿತ್ತು.  


                                 ವಿವಿಧ ಭಂಗಿಯಲ್ಲಿ ಛಾಯಾಗ್ರಹಣ ಮಾಡುತ್ತಿರುವ ಸಾಯಿಪ್ರಕಾಶ್‌.

ಪಾಳುಬಿದ್ದ ಮೂರನೆಯ ಲೋಭೊ ಮನೆಯ ಬಳಿ ಬಂದಾಗ ಸಮಯ ೧೧:೫೦, ಮನೆಯ ಮುಂಬಾಗದಲ್ಲೆ ಇದ್ದ ಮಾವಿನಮರದಿಂದ ಒಂದೆರಡು ಮಾವಿನಕಾಯಿ ಉದುರಿಸಿ ಚಪ್ಪರಿಸಿದೆ ತುಂಬಾ ಚೆನ್ನಾಗಿತ್ತು, ಇಲ್ಲಿಂದ ಮುಂದಕ್ಕೆ ಏರುದಾರಿ ನಡೆಯುತ್ತ ನಡೆಯುತ್ತ ತುಂಬಾ ಆಯಾಸವಾಗತೊಡಗಿತು.


ಪಾಳುಬಿದ್ದ ಲೋಭೊ ಮನೆ


ಏರುಹಾದಿಯಲ್ಲಿ ಆ ಬೆಟ್ಟವನ್ನು ಏರಿ ಅದರ ಅಂಚಿನಲ್ಲೆ ಚಾರಣ ಮುಂದುವರೆಸಿದೆವು, ಸಂತೋಷ್, ಸಾಯಿ, ಮತ್ತು ಶ್ರೀಕಾಂತ್ ಬಹಳ ಮುಂದೆ ಹೋಗುತ್ತಿದ್ದರು ಗಜೇಂದ್ರರವರು ನನಗಿಂತ ತುಸು ಅಂತರದಲ್ಲಿ ಮುಂದೆ ಸಾಗುತ್ತಿದ್ದರು, ಹಾಗೆ ಸಾಗುತ್ತ ಮುಂದೆ ಬಂದಾಗ ಕಾಡು ಎದುರಾಯಿತು ಎದುರಿಗೆ ಅಲ್ಲೊಂದು ಸುಂದರ ಮನಮೋಹಕ ಜಲಧಾರೆಯ ಧರ್ಶನವಾಯಿತು, ಹರಿದು ಬರುತಿದ್ದ ನೀರು ಮುತ್ತಿನ ಮಣಿಗಳಂತೆ ಕಾಣುತ್ತಿದ್ದ ದೃಶ್ಯ ಸೊಬಗು ನಿಜಕ್ಕೂ ರಮಣೀಯವಾಗಿತ್ತು.


ಸುಂದರ ಮನಮೋಹಕ ಜಲಧಾರೆ

 ಒಂದೆರಡು ದೃಶ್ಯಾವಳಿಗಳನ್ನು ನನ್ನ ಕ್ಯಾಮೆರಾ ದಲ್ಲಿ ಸೆರೆಹಿಡಿದೆ, ಜಿಗಣೆಗಳ ಕಾಟ ಹೆಚ್ಚಾಗುತ್ತಿದ್ದಂತೆ  ಗಜೇಂದ್ರರವರು ಮೋಹನ್ ಓಡಿ... ಓಡಿ... ಎಂದು ಹೇಳಿ ಓಡತೊಡಗಿದರು, ನಾನು ಕೂಡ ಅವರನ್ನೇ ಹಿಂಬಾಲಿಸಿ ಓಡತೊಡಗಿದೆ ಅಷ್ಟೊತ್ತಿಗಾಗಲೇ ಕಾಲಿಗೆ ಹತ್ತಿದ್ದ ಹತ್ತಿಪ್ಪತ್ತು ಜಿಗಣೆಗಳನ್ನು ಕಿತ್ತು ಮುಂದೆ ಓಡುವಷ್ಟರಲ್ಲಿ ಸಾಕಾಗಿ ಹೋಗಿತ್ತು.



ಕುದುರೆಮುಖ ಶಿಖರ ಶ್ರೇಣಿಯ ಸುಂದರ ದೃಶ್ಯ

ಹಾಗೆ ಹಾದಿಯಲ್ಲಿ ನಡೆಯುವಾಗ ಬೆಟ್ಟದಿಂದ ನೀರು ಜಲಪಾತವಾಗಿ ಧುಮುಕುತ್ತಿದ್ದ ದೃಶ್ಯ ಸೊಬಗು ಮನಮೋಹಕವಾಗಿತ್ತು, ಆ ಜಲಪಾತವಿರುವ ಪರ್ವತವನ್ನು ಏರಿ ಜಲಪಾತವನ್ನು ದಾಟಿ ಇನ್ನೊಂದು ಸಣ್ಣ ಗುಡ್ಡವನ್ನು ಏರಿದರೆ ಕುದುರೆಮುಖ ಶಿಖರದ ತುದಿ ತಲುಪಬಹುದು.

ಎಲ್ಲರು ನನಗಿಂತ ಬಹಳ ಅಂತರದಲ್ಲಿ ಮುಂದಿದ್ದರು, ತುಂಬಾ ಆಯಾಸವಾಗಿದ್ದ ಕಾರಣ ಅವರನ್ನು ಸೇರಲು ನನಗೆ ಸಾಧ್ಯವಾಗಲಿಲ್ಲ ನಾನೆ ಕೊನೆಯ ಸರದಿಯವನಾಗಿದ್ದೆ.

ಯಾವ ಚಾರಣದಲ್ಲೂ ನನಗೆ ಈ ರೀತಿ ಬಳಲಿಕೆ ಆಗಿರಲಿಲ್ಲ ಅಂದೇಕೊ ಏನೋ? ಬಳಲಿಕೆ ಎಂಬ ಭೂತ ಬೆಂಬಿಡದೆ ನನ್ನನ್ನು ಕಾಡುತಿತ್ತು, ಹೇಗೊ ಕಷ್ಟಪಟ್ಟು ಕಡಿದಾದ ಹಾದಿಯಲ್ಲಿ ಶಿಖರನ್ನೇರಲು ಮನಸ್ಸು ಮಾಡಿ ಒಂದೊಂದ್ದೆ ಹೆಜ್ಜೆ ಇಡುತ್ತ ಮುಂದೆ ಸಾಗುತ್ತಿದ್ದೆ, ನೀರಿನ ಬಾಟೆಲ್ ನನ್ನ ಸೇಹಿತರ ಬಳಿ ಇದ್ದ ಕಾರಣದಿಂದ ಬಾಯಾರಿಕೆ ನೀಗಿಸುವುದು ಕಷ್ಟದ ಕೆಲಸವಾಗಿತ್ತು, ಬೀಳುತಿದ್ದ ಮಳೆ ಹನಿಗೆ ನಾಲಿಗೆ ಹೊರ ಚಾಚಿ ಗಂಟಲು ತೇವ ಮಾಡಿಕೊಳ್ಳುತ್ತ ಮುಂದೆ ಮುಂದೆ ಸಾಗುತ್ತಿದ್ದೆ.


ಬಹಳ ಕಷ್ಟಪಟ್ಟು ಕೊನೆಗೂ ಆ ಪರ್ವತವನ್ನೇರಿ ಜಲಪಾತದ ತುದಿಗೆ ಬಂದು ನಿಂತೆ, ಆಗಲೇ ಒಂದು ಚಾರಣಿಗರ ಒಂದು ತಂಡ ಶಿಖರದಿಂದ ಇಳಿದು ಜಲಪಾತದ ಬಳಿ ವಿಶ್ರಾಂತಿ ಪಡೆಯುತಿತ್ತು, ನನ್ನ ಪಾಡು ನೋಡಿ ಮರುಗಿದರೋ ಏನೋ?
ಹರಿಯುತ್ತಿದ್ದ ನೀರನ್ನು ಮನಸೋ ಇಚ್ಚೆ ಕುಡಿದ ಮೇಲೆ ಸ್ವಲ್ಪ ಆಯಾಸ ಕಮ್ಮಿಯಾಯಿತು, ಅಲ್ಲೆ ಸ್ವಲ್ಪ ಹೊತ್ತು ವಿಶ್ರಮಿಸಿಕೊಂಡು ಪುನಃ ಎದ್ದು ಹೊರಟೆ ಆಗ ನನ್ನ ಎದುರಿಗಿದದ್ದು ಮಂಜು ಮುಸುಕಿದ ಒಂದು ಸಣ್ಣ ಗುಡ್ಡ ಮಾತ್ರ!


ಆಷ್ಟರಲ್ಲಿ ನಮ್ಮ ಚಾರಣ ಮಿತ್ರರು ಶಿಖರದ ತುದಿ ತಲುಪಿಯಾಗಿತ್ತು, ಮತ್ತೆ ಹೆಜ್ಜೆ ಹೆಜ್ಜೆ ಇಡುತ್ತ ತುಸು ಸಮಯದಲ್ಲೇ ನಾನು ಕೂಡ ಶಿಖರದ ತುದಿ ತಲುಪಿದೆ ಆಗ ಗಡಿಯಾರದ ಕಡೆಗೆ ಓಮ್ಮೆ ಕಣ್ಣಾಯಿಸಿದಾಗ ಸಮಯ ಮದ್ಯಾಹ್ನ ಎರಡೂವರೆಯಾಗಿತ್ತು,
ಆಗಲೇ ನಮ್ಮ ಚಾರಣ ಮಿತ್ರರು ಶಿಖರವನ್ನೇರಿದ ಸಂತೋಷದಲ್ಲಿ ಪ್ರಕೃತಿ ಸೊಬಗನ್ನು ಸವಿಯುತ್ತಿದ್ದರು.

ಗಜೇಂದ್ರ: ಯಾಕ್ ಮೋಹನ್ ಏನಾಯ್ತು?  

ನಾನು: ನನ್ನ ಕೈಲಿ ಆಗ್ತಾ ಇಲ್ಲ, ತುಂಬಾ ಸುಸ್ತು.

ಗಜೇಂದ್ರ: ಸ್ವಲ್ಪ ಹೊತ್ತು ಆರಾಮಾಗಿ ಕುತ್ಕೊಳ್ಳಿ ಮೋಹನ್, ಸರಿಹೋಗುತ್ತೆ.

ಅವರು ಕೊಟ್ಟ ಹಸಿ ಖರ್ಜೂರ ತಿಂದು ಸ್ವಲ್ಪ ಹೊತ್ತು ನೆಲಕ್ಕೊರಗಿ ವಿಶ್ರಾಂತಿ ಪಡೆದ ಮೇಲೆ ಸ್ವಲ್ಪ ಆರಾಮೆನಿಸಿತು, ಅಷ್ಟರಲ್ಲೆ ಕಡವೆಯೊಂದು ಕ್ಯಾಟ್ ವಾಕ್ ಮಾದರಿಯಲ್ಲಿ ಬಂದು ಪುಸಕ್ಕನೆ ಮಾಯವಾಯ್ತು, ತದ ನಂತರ ನನ್ನ ಕ್ಯಾಮೆರಾಗೆ ಸ್ವಲ್ಪ ಕೆಲಸ ಕೊಟ್ಟು ಆ ಸ್ವರ್ಗದ ಸೊಬಗಿನ ಸುಂದರ ದೃಶ್ಯಾವಳಿಗಳನ್ನ ಸೆರೆಹಿಡಿದೆ.


ಕುದುರೆಮುಖ ಶಿಖರ ಏರಿದ ಸಂದರ್ಭದಲ್ಲಿ ಜಯದ ನಗೆ


ಎತ್ತಕಡೆ ಕಣ್ಣಾಯಿಸಿದರೂ ಹಸಿರನ್ನೆ ಹೊದ್ದು ಕುಳಿತ ಕುದುರೆಮುಖ ಪರ್ವತ ಶ್ರೇಣಿಯ ಬೆಟ್ಟಗಳು, ಮಳೆಕಾಡ ಕಣಿವೆಗಳ ಅದ್ಬುತ ಹಸಿರು ಸೌಂದರ್ಯ ಮನಸನ್ನು ಸೂರೆಗೊಳ್ಳುವುದರಲ್ಲಿ ಸಂದೇಹವೆ ಇಲ್ಲ.


ಆಷ್ಟರಲ್ಲಿ ದಟ್ಟ ಮಂಜು ನಮ್ಮನ್ನಾವರಿಸಿತು ಏನೂ ಕಾಣುತ್ತಿರಲಿಲ್ಲ, ಸ್ವಲ್ಪ ಸಮಯ ಅಲ್ಲೆ ಕಳೆದು ತದನಂತರ ಎಲ್ಲರೂ ಹೊರಡಲು ತೀರ್ಮಾನಿಸಿ ಅಲ್ಲಿಂದ ಹೊರ‍ಟೆವು.

 ಸಂಜೆಯ ಒಳಗಾಗಿ ಮುಳ್ಳೋಡಿ ತಲುಪಬೇಕಾದ್ದರಿಂದ ಹೆಚ್ಚು ಸಮಯವಿಲ್ಲದೆ ಎಲ್ಲರೂ ಸರಸರನೆ ಇಳಿಯತೊಡಗಿದೆವು ಅದರಲ್ಲಿ ನಾನೆ ಮೊದಲಿಗನಾಗಿದ್ದೆ ಏಕೆಂದರೆ ನಮ್ಮ ಬಳಿ ಇದ್ದ ಅಲ್ಪ ಸ್ವಲ್ಪ ತಿಂಡಿಗಳು ಖಾಲಿಯಾಗಿ ಹೊಟ್ಟೆ ಭಣಗುಡುತ್ತಿತ್ತು, ಹಾಗಾಗಿ ಸುಮಾರು ಐದಾರು ಕಿ,ಮೀ. ದೂರ ಕಡಿದಾದ ಬೆಟ್ಟಗುಡ್ದಗಳನ್ನು ಇಳಿದು ಲೋಭೊ ಮನೆಯ ಬಳಿ ತೆರಳಿ ಅಲ್ಲಿದ್ದ ಮಾವಿನ ಮರದಿಂದ ಮಾವಿನಕಾಯಿ ಬೀಳಿಸಿ ತಿಂದು ಹೊಟ್ಟೆಯ ಹಸಿವೆಯನ್ನು ನೀಗಿಸುವುದು ನನ್ನ ಉದ್ದೇಶವಾಗಿತ್ತು (ನಿಜವಾಗಿಯೂ ಇಂತ ಪರಿಸ್ಥಿತಿಯಲ್ಲಿಯೇ ಅನ್ನದ ಬೆಲೆ ಏನು ಅಂತ ತಿಳಿಯೋದು).


ಸಣ್ಣ ಗುಡ್ಡವನ್ನು ಇಳಿದು ಜಲಪಾತದ ಬಳಿ ಬಂದು ಮತ್ತೆ ನೀರು ಕುಡಿದು ಬಾಯಾರಿಕೆ ನೀಗಿಸಿ ಮತ್ತೊಂದು ದೊಡ್ಡ ಪರ್ವತ ಇಳಿಯಲು ಶುರು ಮಾಡಿದೆ ಎಲ್ಲರೂ ಹಿಂದೆ ಬರುತ್ತಿದ್ದರು, ಆ ಪರ್ವತವನ್ನು ಇಳಿದು ಶಕ್ತಿಯಿಲ್ಲದೇ ನಿತ್ರಾಣಗೊಂಡರೂ ಸಹ ಎಲ್ಲಿಯೂ ವಿಶ್ರಾಂತಿ ತೆಗೆದುಕೊಳ್ಳದೆ ಸಾಗುತ್ತಿದ್ದೆ.

ಸ್ಪಟಿಕದಂತೆ ಬೀಳುತ್ತಿದ್ದ ಮತ್ತೊಂದು ಸುಂದರ ಜಲಪಾತದ ಬಳಿ ಬಂದು ಬಾಯಾರಿಕೆ ನೀಗಿಸಿಕೊಂಡು ಹೊಟ್ಟೆಯಲ್ಲಿರುವ ಅಗ್ನಿದೇವನನ್ನು ಸಂತೃಪ್ತಿಪಡಿಸಲು ಮತ್ತೆ ಲೋಭೊ ಮನೆಯತ್ತ ಭರ ಭರನೆ ಹೆಜ್ಜೆ ಹಾಕತೊಡಗಿದೆ.  


ನಾನು ಸಾಗುತ್ತಿದದ್ದು ಪರ್ವತದ ಅಂಚಿನಲ್ಲಿ, ಪಕ್ಕದ ಗುಡ್ದದಲ್ಲಿ ಹುಲ್ಲು ಮೇಯುತ್ತಿದ್ದ ನಾಲ್ಕೈದು ಜಿಂಕೆಗಳು ಧರ್ಶನ ಕೊಟ್ಟರೂ ಸಹ ಕ್ಯಾಮೆರ ತೆಗೆದು ಚಿತ್ರ ತೆಗೆಯುವ ಆಶಕ್ತಿ ಇಲ್ಲದೆ ಮುನ್ನಡೆದೆ, ಅಷ್ಟರಲ್ಲಿ ಮಳೆ ಕೂಡ ನಿಂತಿತ್ತು  ನನ್ನ ಚಾರಣ ಮಿತ್ರರು ಸ್ವಲ್ಪ ಅಂತರದಲ್ಲೆ ನನ್ನ ಹಿಂದೆ ಬರುತ್ತಿದ್ದರು,  ನಂತರ  ಆ ಪರ್ವತದ ಅಂಚನ್ನು ಬಿಟ್ಟು ಇಳಿಜಾರು ಹಾದಿಯಲ್ಲಿ ಇಳಿದು ಲೋಭೊ ಮನೆ ತಲುಪುವಷ್ಟರಲ್ಲಿ ತುಂಬಾ ಆಯಾಸವಾಗಿತ್ತು, ನನಗೆ ಮೊದಲು ಕಂಡಿದ್ದು ಪಾಳುಮನೆಯ ಮುಂದೆ ಇದ್ದ ಮಾವಿನ ಮರ, ಅಲ್ಲೆ ಬಿದ್ದಿದ್ದ ಕೆಲವು ಹೆಂಚಿನ ಚೂರು ತಗೊಂಡು ಮಾವಿನ ಕಾಯಿ ಗೊಂಚಲಿಗೆ ಗುರಿ ಇಟ್ಟು ಬೀಸಿದೆ ಮೈನಲ್ಲಿ ಶಕ್ತಿ ಇಲ್ಲದೆ ಅವು ಗುರಿ ತಪ್ಪಿ ಎತ್ತಲೋ ಹೋಗುತ್ತಿದ್ದವು ಹೀಗೆ ಹಲವಾರು ಬಾರಿ ಪ್ರಯತ್ನಪಟ್ಟರೂ ಪ್ರಯೋಜನವಾಗಲಿಲ್ಲ, ಕೊನೆಗೆ ನೆಲದ ಮೇಲೆ ಬಿದ್ದಿದ್ದ ಮಾವಿನಕಾಯಿಯನ್ನು ಎತ್ತುಕೊಂಡು ತಿನ್ನಬೇಕಾದ ಪ್ರಸಂಗ ಬಂದಿತ್ತು, ಮಾವಿನಕಾಯಿ ತಿಂದ ನಂತರ ತಕ್ಕಮಟ್ಟಿಗೆ ಹಸಿವು ಶಾಂತವಾಯಿತು.


ಅಷ್ಟೊತ್ತಿಗೆ ಎಲ್ಲ ಸ್ನೇಹಿತರು ಬಂದರು ನಂತರ ಮತ್ತೆ ಚಾರಣ ಮುಂದುವರೆಸಿ ಮುಳ್ಳೋಡಿಯ ಸತೀಶ್ ಮನೆ ತಲುಪಿದಾಗ ಸಮಯ ಸಂಜೆ ಆರೂವರೆಯಾಗಿತ್ತು.

ಬಂದ ತಕ್ಷಣವೆ ಬಿಸಿನೀರಿನ ಸ್ನಾನ ಮುಗಿಸಿದ ಬಳಿಕ ಬಳಲಿ ಬೆಂಡಾಗಿ ಹೋಗಿದ್ದ ನಮ್ಮ ಮೈಮನಗಳು ಯಥಾಸ್ಥಿತಿಗೆ ಮರಳುವುದಕ್ಕೆ ಜಾಸ್ತಿ ಸಮಯ ಬೇಕಾಗಲಿಲ್ಲ, ನಂತರ ರುಚಿಯಾದ ಊಟ (ಚಪಾತಿ,ಪಲ್ಯ, ಅನ್ನ, ಸಾಂಬಾರ್ ಮತ್ತು ಮಜ್ಜಿಗೆ) ತಿಂದು ಮುಗಿಸಿ ನಿದ್ರಾದೇವಿಗೆ ಶರಣಾದೆವು.

ಬೆಳಿಗ್ಗೆ ಎದ್ದಾಗ ಸಮಯ ಏಳಾಗಿತ್ತು ನಂತರ ಹೋದದ್ದು ಸೋಮಾವತಿ ಜಲಪಾತದೆಡೆಗೆ...
ಮಳೆಗಾಲದ ಸಮಯವಾದ್ದರಿಂದ ಜಲಪಾತದಲ್ಲಿ ನೀರು ಸಮೃದ್ದವಾಗಿತ್ತು, ಬಹಳ ಎತ್ತರದಿಂದ ಬೀಳದಿದ್ದರೂ ಸಹ ನೋಡಲು ಸೊಗಸಾಗಿತ್ತು, ಅಲ್ಲೆ ನಮ್ಮ ಸ್ನಾನಾಧಿ ಕಾರ್ಯ ಮುಗಿಸಿ ಮತ್ತೆ ಸತೀಶ್ ಮನೆಗೆ ಬಂದು ತಿಂಡಿ  (ಆಕ್ಕಿ ರೊಟ್ಟಿ, ಚಟ್ನಿ ಮತ್ತು ಸಾಂಬಾರ್) ಮುಗಿಸಿ ಸತೀಶ್ ಮತ್ತು ಅವರ ಕುಟುಂಬದವರಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿ ಬಾಳ್‌ಗಲ್‌ ಕಡೆ ಚಾರಣ ಹೊರಟಾಗ ಸಮಯ ಬೆಳಿಗ್ಗೆ ಹತ್ತಾಗಿತ್ತು.


ಮುಳ್ಳೋಡಿಯ ಸತೀಶ್ ಮನೆ ಮುಂದೆ ಗಜೇಂದ್ರ, ಶ್ರೀಕಾಂತ್, ಸಾಯಿಪ್ರಕಾಶ್ ಮತ್ತು ನಾನು

ಮತ್ತೆ ವರುಣನ ಲೀಲೆಯಿಂದ ಮಳೆಯಲ್ಲಿಯೇ ನೆನೆದು ಚಾರಣ ಮಾಡಬೇಕಾಗಿ ಬಂತು ಸತೀಶ್ ಕೂಡ ನಮ್ಮ ಜೊತೆಯಲ್ಲಿಯೇ ಬಾಳ್‌ಗಲ್‌ ತನಕ ಬಂದರು, ಬಾಳ್‌ಗಲ್‌ ತಲುಪಿದಾಗ ಸಮಯ ಮದ್ಯಾಹ್ನ ಸರಿಯಾಗಿ ಒಂದೂವರೆ ಗಂಟೆಯಾಗಿತ್ತು.

ಅಲ್ಲಿಂದ ಕಾರಿನಲ್ಲಿ ಸಂಸೆ,ಕಳಸ ಮಾರ್ಗವಾಗಿ ಹೊರನಾಡು ತಲುಪಿ ಅನ್ನಪೂರ್ಣೇಶ್ವರಿ ದೇವಿಯ ಧರ್ಶನ  ಪಡೆದು ಭೋಜನ ಶಾಲೆಯಲ್ಲಿ ಪ್ರಸಾಧ ಸ್ವೀಕರಿಸಿ ಅಲ್ಲಿಂದ ನೇರವಾಗಿ ಕಳಸಕ್ಕೆ ಬಂದು ಕಳಸೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ತೆರಳಿ ನಂತರ ಕೆಲವು ಉಪಯುಕ್ತ ವಸ್ತುಗಳನ್ನು ಖರೀದಿಸಿ ನಂತರ ಮಾಗುಂಡಿ ಮಾರ್ಗವಾಗಿ ಚಿಕ್ಕಮಗಳೂರಿನ ಕಡೆಗೆ ಪ್ರಯಾಣ ಬೆಳೆಸಿದೆವು.

ಚಿಕ್ಕಮಗಳೂರಿಗೆ ಬರುವುವಷ್ಟರಲ್ಲಿ ರಾತ್ರಿಯಾದ್ದರಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಸಮೀಪ ಇದ್ದ ಹೋಟೆಲೊಂದರಲ್ಲಿ ಊಟ ಮುಗಿಸಿ  ೮:೩೦ ಕ್ಕೆ ಹೊರಟು ಬೇಲೂರು,ಹಾಸನ, ಮಾರ್ಗವಾಗಿ ಬೆಂಗಳೂರಿನ ಸ್ಯಾಟ್ಲೈಟ್ ಬಸ್ ನಿಲ್ದಾಣ ತಲುಪಿದಾಗ ಸಮಯ ರಾತ್ರಿ ಹನ್ನೆರಡು ಮುಕ್ಕಾಲು.

ನಂತರ ನಾನು ಕೆ.ಎಸ್.ಆರ್.ಟಿ.ಸಿ ಬಸ್ ಹತ್ತಿ ಚನ್ನಪಟ್ಟಣದಲ್ಲಿ ಇಳಿದು ರೈಲ್ವೆ ನಿಲ್ದಾಣದ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಬೈಕ್ ಏರಿ ಮನೆ ಸೇರಿದಾಗ ಸಮಯ ಮದ್ಯರಾತ್ರಿ ಎರಡೂವರೆ ಆಗಿತ್ತು.

*** ಶುಭಂ *** 


   




ಗುರುವಾರ, ಸೆಪ್ಟೆಂಬರ್ 15, 2011

ನರಸಿಂಹ ಪರ್ವತ ಚಾರಣ / ಟ್ರೆಕ್

ದಿನಾಂಕ : ೦೫.೦೩.೨೦೧೧ ಮತ್ತು ೦೬.೦೩.೨೦೧೧


ಎತ್ತರ: ಸಮುದ್ರ ಮಟ್ಟದಿಂದ ಸುಮಾರು ೩೭೮೦ ಅಡಿಗಳು


ಮಾರ್ಗ: ಬೆಂಗಳೂರು-ಶಿವಮೊಗ್ಗ-ತೀರ್ಥಹಳ್ಳಿ-ಆಗುಂಬೆ-ಬರ್ಕಣ ಜಲಪಾತ-ನರಸಿಂಹ ಪರ್ವತ-ಕಿಗ್ಗ-ಶೃಂಗೇರಿ


ಜಿಲ್ಲೆ: ಶಿವಮೊಗ್ಗ ಮತ್ತು ಚಿಕ್ಕಮಗಳೂರು


ತಂಡ: ಸಂತೋಷ್, ಸಾಯಿಪ್ರಕಾಶ್, ಗಜೇಂದ್ರ ಮತ್ತು ನಾನು


ಒಟ್ಟು ಕ್ರಮಿಸಿದ ದೂರ: ಸುಮಾರು ೨೨ ಕಿ.ಮೀ.


*********************************************************************************

ದಕ್ಷಿಣ ಭಾರತದ ಚಿರಾಪುಂಜಿ ಎಂದೇ ಪ್ರಸಿದ್ದವಾಗಿರುವ ಆಗುಂಬೆಯ ದಟ್ಟ ಕಾನನದಲ್ಲಿರುವ ಬರ್ಕಣ ಜಲಪಾತಕ್ಕೆ ಚಾರಣ ಮಾಡುವ ಶುಭ ಘಳಿಗೆ ಕೊನೆಗೂ ಕೂಡಿ ಬಂತು, ಶುಕ್ರವಾರ ರಾತ್ರಿ ಎಂದಿನಂತೆ ಸಕಲ ಸಿದ್ದತೆಯೊಂದಿಗೆ ಎಲ್ಲರಿಗಿಂತ ಮೊದಲೇ ನಾನು ಮತ್ತು ಗಜೇಂದ್ರ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬಂದೆವು,ನಂತರ ಬಂದ ಸಾಯಿಪ್ರಕಾಶ್ ನಮ್ಮನ್ನು ಕೂಡಿಕೊಂಡರು, ಸಂತೋಷ್ ಮಾತ್ರ ಬರಬೇಕಿತ್ತಷ್ಟೆ ಆಗುಂಬೆಗೆ ಹೊರಡುವ ರಾಜಹಂಸ ಬಸ್ ಆಗಲೇ ಸಿದ್ದವಾಗಿ ನಿಂತ್ತಿತ್ತು, ನಾವು ಮೂವರು ಬಸ್‌ನೊಳಗೆ ಮೊದಲೇ ನಿಗಧಿಯಾಗಿದ್ದ ನಮ್ಮ ಆಸನದಲ್ಲಿ ಕುಳಿತುಕೊಂಡೆವು ಅಷ್ಟರಲ್ಲೇ ಸಂತೋಷ್ ಕೂಡ ಬಂದ್ರು.ರಾತ್ರಿ ೧೦:೧೦ ಕ್ಕೆ ಹೊರಟ ರಾಜಹಂಸ ಶಿವಮೊಗ್ಗ, ತೀರ್ಥಹಳ್ಳಿ ಮಾರ್ಗವಾಗಿ ಆಗುಂಬೆ ತಲುಪಿದಾಗ ಬೆಳಿಗ್ಗೆ ಏಳಾಗಿತ್ತು.

ಬಸ್ ನಿಲ್ದಾಣದ ಹೋಟೆಲ್‌ನಲ್ಲಿ ತಿಂಡಿಯನ್ನು ತಿಂದು ನಕ್ಷಲ್ ಪೀಡಿತ ಪ್ರದೇಶವಾದ್ದರಿಂದ ಚಾರಣಕ್ಕೆ ಅನುಮತಿ ಕೇಳಲು ಸಮೀಪದಲ್ಲೆ ಇದ್ದ ಪೊಲೀಸ್ ಠಾಣೆಗೆ  ಗಜೇಂದ್ರ ಮತ್ತು ಸಾಯಿ ಪ್ರಕಾಶ್ ಹೊರಟರು.

ಸ್ವಲ್ಪ ಸಮಯದ ನಂತರ ಬಂದ ಅವರಿಬ್ಬರು  "ಆ ಪ್ರದೇಶದಲ್ಲಿ ಗಸ್ತು ಪಡೆಯ ಕಾರ್ಯಾಚರಣೆ ಇರುವುದರಿಂದ ಇವತ್ತು ಹೋಗುವುದು ಬೇಡ ನಾಳೆ ಬೇಕಾದ್ರೆ ಹೋಗಿ" ಅಂದ್ರಂತ್ತೆ, ಬಳಿಕ ಸ್ವಲ್ಪ ಹೊತ್ತು ಯೋಚನೆ ಮಾಡಿ ಮೊದಲು ಕೃಷ್ಣಪ್ಪನವರನ್ನು ಭೇಟಿ ಮಾಡುವ ನಿರ್ಧಾರಕ್ಕೆ ಬಂದು ಅಲ್ಲಿಂದ ಆಟೋದಲ್ಲಿ ಹೊರಟೆವು ಮಲಂದೂರಿನ ಕಡೆಗೆ...

ಹಾಗೆಯೇ ಮಾರ್ಗ ಮದ್ಯೆ ಆಟೋ ನಿಲ್ಲಿಸಿ ನಮ್ಮ ಲಗ್ಗೇಜನ್ನು ಆಟೋದಲ್ಲಿ ಬಿಟ್ಟು, ಚಾಲಕನಿಗೆ ಒಂದರ್ಧ ಗಂಟೆಯಲ್ಲಿ ಮರ‍ಳಿ ಬರ್ತೀವಿ ಎಂದು ತಿಳಿಸಿ ಜೋಗಿಗುಂಡಿ ಜಲಪಾತದ ಕಡೆಗೆ ಹೆಜ್ಜೆ ಹಾಕಿದೆವು, ಏಳೆಂಟು ನಿಮಿಷದ ನಡಿಗೆಯ ನಂತರ ಜೋಗಿಗುಂಡಿ ಜಲಧಾರೆಯ ಧರ್ಶನವಾಯ್ತು,
ಈ ಹೊಂಡದಲ್ಲಿ ಸಣ್ಣದಾಗಿ ಧುಮುಕುವ ಮಲಪಹರಿ ನದಿಯು ಹರಿಯುತ್ತ ಮುಂದೆ ತುಂಗಾ ನದಿಯಲ್ಲಿ ಲೀನವಾಗುತ್ತದೆ, ಈ ಸ್ಥಳದಲ್ಲಿ ಜೋಗಿ ಎಂಬ ಋಷಿಮುನಿ ತಪಸ್ಸು ಮಾಡಿದ್ದರಿಂದ ಈ ಜಲಪಾತಕ್ಕೆ "ಜೋಗಿಗುಂಡಿ" ಅನ್ನುವ ಹೆಸರು ಬಂದಿದೆಯಂತೆ.

ನಮ್ಮ ಸ್ನಾನಾಧಿ ಕಾರ್ಯಗಳನ್ನು ಅಲ್ಲಿಯೇ  ಮುಗಿಸಿ ಕೆಲವು ಛಾಯಚಿತ್ರಗಳನ್ನು ತೆಗೆಯುವ ಹೊತ್ತಿಗೆ ಆಟೋ ಚಾಲಕ ಬಂದೆ ಬಿಟ್ಟ,

ಚಾಲಕ: ಬನ್ನಿ ಸಾರ್ ತುಂಬಾ ಹೊತ್ತಾಯ್ತು,

ನಾವು: ಹಾ! ಎರಡೇ ನಿಮಿಷ ಬರ್ತೀವಿ


ಜೋಗಿಗುಂಡಿಯಲ್ಲಿ ನಮ್ಮ ತಂಡ (ಸಾಯಿಪ್ರಕಾಶ್,ನಾನು, ಸಂತೋಷ್ ಮತ್ತು ಗಜೇಂದ್ರ)

ಬಳಿಕ ತಡಮಾಡದೆ ಅಲ್ಲಿಂದ ಹೊರಟು ಮಲಂದೂರಿನ ಕೃಷ್ಣಪ್ಪನವರ ಮನೆಯ ಬಳಿ ಬಂದೆವು,
ಅಷ್ಟೊತ್ತಿಗೆ ಇನ್ನಿಬ್ಬರು ಚಾರಣಿಗರು ಬಂದ್ರು, ಹಿಂದೇನೆ ಪೊಲೀಸ್ ಗಸ್ತು ಪಡೆ ವಾಹನ ಮನೆ ಮುಂದೆ ಹಾದು ಹೋಯಿತು.

ಬಳಿಕ ಸಮಯ ೯:೨೫ ರ ಹೊತ್ತಿಗೆ ಕೃಷ್ಣಪ್ಪನವರನ್ನು ಹಿಂಬಾಲಿಸಿ ಅವರ ಮನೆ ಪಕ್ಕದ ಕಾಡು ಹಾದಿಯಲ್ಲಿ ಚಾರಣ ಶುರು ಮಾಡಿದೆವು, ಕೃಷ್ಣಪ್ಪ ಮತ್ತು ಇನ್ನಿಬ್ಬರು ಚಾರಣಿಗರು ಮುಂದೆ ಹೋಗುತಿದ್ದರೆ ನಾವು ನಾಲ್ವರು ಕಾಡಿನ ಸೌಂಧರ್ಯ ಸವಿಯುತ್ತ ಅಲ್ಲಲ್ಲಿ ಸಿಕ್ಕ ಸುಂದರ ನೋಟವನ್ನ ಕ್ಯಾಮೆರದಲ್ಲಿ ಸೆರೆಹಿಡಿದು ಮುಂದೆ ಸಾಗುತ್ತಿದ್ದೆವು, ಕೆಲವೇ ನಿಮಿಷದಲ್ಲಿ ಸಾಯಿ ಪ್ರಕಾಶ್ ನಮ್ಮನ್ನು ಹಾದಿ ತಪ್ಪಿಸಿದರು ಒಂದು ಸಣ್ಣ ನೀರಿಲ್ಲದ ಹಳ್ಳದೊಳಗೆ ನಡೆಯುತ್ತಿದ್ದೆವು, ಸುತ್ತಲೂ ಮೌನ ಕೃಷ್ಣಪ್ಪನವರ ಸುಳಿವೇ ಇಲ್ಲ ಜೋರಾಗಿ ಕೂಗಿ ಕರೆದೆವು ನಮ್ಮ ಕೂಗು ಅವರಿಗೆ ಕೇಳಿಸಿದ ಮೇಲೆ ದೂರದಲ್ಲೆ ನಿಂತು ನಮ್ಮನ್ನು ಕೂಗಿ ಹಳ್ಳ ಬಿಟ್ಟು ಮೇಲೆ ಬರಲು ತಿಳಿಸಿದರು, ಹಾದಿನೇ ಇಲ್ಲದ ಪೊದೆಯಲ್ಲಿ ಹೇಗೋ ನುಸುಳಿ ಮತ್ತೆ ಅವರನ್ನ ಸೇರಿಕೊಂಡೆವು.


ಮಾರ್ಗಧರ್ಶಿ ನೆರವಿಲ್ಲದೆ ಬಂದರೆ ಕಾಡಿನಲ್ಲಿ ಕಳೆದು ಹೋಗುವುದು ಖಚಿತ, ಚಾರಣದ ಹಾದಿ ಸವೆಸುತ್ತ ಸವೆಸುತ್ತ ಹಾದಿ ಕಿರಿದಾಗತೊಡಗಿತು ಕಾಳಿಂಗಸರ್ಪಗಳ ತವರೂರಾಗಿರುವ ಈ ದಟ್ಟ ಕಾನನದಲ್ಲಿ ನಾವು ಸ್ವಲ್ಪ ಎಚ್ಚರವಹಿಸಿ ಚಾರಣ ಮಾಡುತ್ತಿದ್ದೆವು, ಏರು ಹಾದಿ ಇರದ ಕಾರಣ ಅಷ್ಟೇನು ಶ್ರಮ ಅನ್ನಿಸುತ್ತಿರಲಿಲ್ಲ, ಮರಗಳ ಬೇರು ಬಿಳಲುಗಳೇ ನಮಗೆ ಕಾಳಿಂಗಗಳ ಹಾಗೆ ಗೋಚರಿಸುತ್ತಿದ್ದವು, ಆದರೂ ಒಂದಾದರೂ ಕಾಳಿಂಗ ಸರ್ಪದ ಧರ್ಶನ ಕೂಡ ಆಗಲಿಲ್ಲ, ಕೃಷ್ಣಪ್ಪನವರನ್ನು ಕೇಳಲಾಗಿ ಅವು ಪೊದೆ,ಪೊಟರೆ ಕೆಲವೊಮ್ಮೆ ಮರದ ಮೇಲೂ ಇರುತ್ತವೆಂದು ಹೇಳಿ ಮುಂದೆ ಸಾಗುತ್ತಿದ್ದರು, ಅಷ್ಟೊತ್ತಿಗೆ ನೀರಿನ ಹಳ್ಳವೊಂದು ಸಿಕ್ಕಿತು ಬಾಯಾರಿಕೆ ನೀಗಿಸಿಕೊಂಡು ಚಾರಣ ಮುಂದುವರಿಸಿದೆವು,ಸೂರ್ಯನ ಬಿಸಿಲೆ ಕಾಣದ ಈ  ದುರ್ಗಮ ಕಾಡಿನಲ್ಲಿ ಹಕ್ಕಿಗಳ ಕಲರವ ಬಿಟ್ಟರೆ ಮಿಕ್ಕೆಲ್ಲ ನೀರವ ಮೌನ.

ಆಗಾಗ ನಾನು  ಕೃಷ್ಣಪ್ಪನವರನ್ನು ಮಾತನಾಡಿಸುತ್ತ ನೀವು ಇಲ್ಲಿ ಯಾವಾವ ಪ್ರಾಣಿ ನೋಡಿದ್ದೀರಾ?

ಕೃಷ್ಣಪ್ಪ: ನಾನು ಹಲವಾರು ಸಾರಿ ಹುಲಿ ನೋಡಿದ್ದೀನಿ

ನಾನು: ತೊಂದರೆ ಗಿಂದರೆ ಏನಾದ್ರು...?

ಕೃಷ್ಣಪ್ಪ: ಇಲ್ಲ, ಏನೂ ತೊಂದರೆ ಮಾಡಲ್ಲ, ನಾವು ಅದಕ್ಕೆ ತೊಂದರೆ ಕೊಡಬಾರದು ಅಷ್ಟೆ!
           
ನಮಗೂ ನೋಡುವ ಆಸೆ ಇದ್ದರೂ ಆ ದೃಶ್ಯವನ್ನು ನೆನೆಸಿಕೊಂಡ್ರೆ ಸಾಕು ಈ ತಂಪಾದ ಕಾಡಿನಲ್ಲಿ ಯಾರಿಗೆ ತಾನೆ ಬೆವರು ಬರುವುದಿಲ್ಲ?

ಹೀಗೆ ಮುಂದೆ ಸಾಗುತ್ತ ಇರುವಾಗ ಒಂದು ಚಿಕ್ಕ ಹೊಳೆ ಅಡ್ಡಲಾಗಿ ಸಿಕ್ಕಿತು ಹೊಳೆ ದಾಟಿ ಮುನ್ನಡೆದ ನಾವು ತುಸು ಹೊತ್ತಿನಲ್ಲೆ ಬರ್ಕಣ ಜಲಪಾತದ ತುದಿ ತಲುಪಿದೆವು ೧೧:೩೦,

ಬಳಿಕ ಬೆನ್ನು ಚೀಲಗಳನ್ನಿಳಿಸಿ ಕ್ಯಾಮೆರ ಹಿಡಿದು ಬಂಡೆಗಲ್ಲಿನ ಮೇಲೆ ಒಬ್ಬೊಬ್ಬರೆ ಬೋರಲಾಗಿ ಮಲಗಿ ಕಣಿವೆಯ ಸುಂದರ ದೃಶ್ಯವನ್ನ ಸವಿದು ಸೆರೆಹಿಡಿಯುತ್ತಿದ್ದರು, ಬಂಡೆಯ ಮೇಲೆ ನಾನು ಕೂಡ ಸ್ವಲ್ಪ ಹುಷಾರಾಗಿ ಹೆಜ್ಜೆ ಹಿಡುತ್ತ  ಬೋರಲಾಗಿ ಮಲಗಿ ಮೇಲಿಂದ ಕಣಿವೆಯ ಕಡೆಗೆ ಕಣ್ಣಾಯಿಸಿದೆ.


ಬರ್ಕಣ ಜಲಪಾತದ ಮೇಲಿನ ದೃಶ್ಯ


ಅಬ್ಬಾ! ಜೋಗದ ಗುಂಡಿಯಂತೆ ಕಾಣುವ ಆಳವಾದ ಕಣಿವೆ,

ಸುಮಾರು ೮೫೦ ಅಡಿ ಎತ್ತರದಿಂದ ಈ ಸ್ಥಳದಲ್ಲಿ ಧುಮುಕುವ ಸೀತಾ ನದಿ
"ಬರ್ಕಣ ಜಲಪಾತ"ವೆಂದು ಪ್ರಸಿದ್ಧಿ ಪಡೆದಿದೆ.


ಬರ್ಕಣ ಜಲಪಾತದ ಮೇಲಿಂದ ತೆಗೆದ ದೃಶ್ಯ  

ಜಲಪಾತದ ಎದುರಿಗೆ ಇರುವ "ವಿಹಂಗಮ ನೋಟದ" ಸ್ಥಳದಿಂದ ನಿಂತು ನೋಡಿದರೆ "v" ಆಕಾರದಂತೆ ಕಾಣುವ ಈ ಸುಂದರ ಕಣಿವೆಯ ಸುತ್ತಲೂ ಹಸಿರ ಸೀರೆಯುಟ್ಟ ಹೊನ್ನ ವನರಾಶಿಯ ನಯನ ಮನೋಹರ ದೃಶ್ಯ ಕಾಣಸಿಗುತ್ತದೆ.


ಬರ್ಕಣ ಜಲಪಾತದ ಮೇಲಿಂದ ಕಣಿವೆಯತ್ತ ಒಂದು ನೋಟ...

ಸಿಕ್ಕ ಅವಕಾಶ ಬಿಡದೇ ನನ್ನ ಕ್ಯಾಮೆರಕ್ಕೆ ಬಿಡುವು ಕೊಡದೆ ಸುಂದರ ದೃಶ್ಯಗಳನ್ನ ಸೆರೆಹಿಡಿಯತೊಡಗಿದೆ, ಅಷ್ಟೊತ್ತಿಗಾಗಲೆ ನಮ್ಮ ಹೊಟ್ಟೆಗಳು ಚುರ್‌ಗುಟ್ಟಲು ಶುರುಮಾಡಿದೆವು, ತಡ ಮಾಡದೆ ಚಪಾತಿ ಮತ್ತು MTR ನ ಬಿಸಿಬೇಳೆಬಾತ್ ತಿಂದು ಹಸಿವನ್ನು ಸ್ವಲ್ಪ ಮಟ್ಟಿಗೆ ನೀಗಿಸಿಕೊಂಡೆವು.



ಬಳಿಕ ಜಲಕ್ರೀಡೆಯಾಡುವ ಹಂಬಲದಿಂದ ಮೊದಲು ಗಜೇಂದ್ರ ನೀರಿಗೆ ಇಳಿದೇಬಿಟ್ಟರು ನಂತರ ನಾವು ಒಬ್ಬೊಬ್ಬರಾಗೆ ನೀರಿಗೆ ಇಳಿದೆವು, ಹರಿಯುವ ನೀರಿನಲ್ಲಿ ಸೃಷ್ಟಿಯಾಗಿದ್ದ ಕಿರು ಜಲಪಾತದಿಂದ ಬೀಳುತಿದ್ದ ಜಲಧಾರೆಗೆ ಮೈಯೊಡ್ಡಿದ ಅಧ್ಭುತ ಅನುಭವ ಎಂದಿಗೂ ಮರೆಯಲಾಗದು.


ಗಜೇಂದ್ರ ಮತ್ತು ಸಾಯಿ ಇಬ್ಬರು ಹೊಳೆಯಲ್ಲಿ ಕಿರು ಜಲಪಾತಗಳ ಅನ್ವೇಷಣೆ ಮಾಡುತ್ತ ಮುಂದೆ ಮುಂದೆ ಹೋಗುತಿದ್ದರು,ಬಳಿಕ ನಮ್ಮನ್ನು ಕೂಗಿ ಕರೆದು ಬರಲು ಹೇಳಿದರು, ನಾನು ಮತ್ತು ಸಂತೋಷ್ ಕ್ಯಾಮೆರ ಹಿಡಿದು ಹೊರಟೆವು, ಜಾರಿ ಬೀಳುವ ಅವಕಾಶಗಳೇ ಹೆಚ್ಚಾಗಿದ್ದರಿಂದ ಬಂಡೆಗಲ್ಲಿನ ಮೇಲೆ ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಿದ್ದೆವು ನನ್ನ ಕ್ಯಾಮೆರವನ್ನು ಸಂತೋಷ್ ಕೈಗೆ ಕೊಟ್ಟು  ನೀವು ನನ್ನನ್ನು ಹಿಂಬಾಲಿಸಿ ಎಂದು ಹೊಂಡದಂತಿದ್ದ ಜಾಗಕ್ಕೆ ಹುಷಾರಾಗಿ ಇಳಿದೆ ನಡು ಮಟ್ಟದ ನೀರಿತ್ತು ಹಿಂದೇನೆ ಸಂತೋಷ್ ಕೂಡ ಇಳಿಯುವ ಭರದಲ್ಲಿ  ಆಯತಪ್ಪಿ ಕ್ಯಾಮೆರ ಸಹಿತ ನೀರಿಗೆ ಮಗುಚಿಕೊಂಡ್ರು,
ನನ್ನ ಕ್ಯಾಮೆರಕ್ಕೆ ಲಕ್ವ ಹೊಡೆದು ಮಠ ಸೇರಿತು, ತಕ್ಷಣವೇ ಕ್ಯಾಮೆರದ ಬ್ಯಾಟರಿ ತೆಗೆದು ಬಿಸಿಲಿನಲ್ಲಿ ಒಣಗಲು ಬಿಟ್ಟು ಗಜೇಂದ್ರ ಮತ್ತು ಸಾಯಿ ಇದ್ದ ಸ್ಥಳಕ್ಕೆ ಬಂದೆವು, ಗಜೇಂದ್ರರವರು ಒಂದು ಉದ್ದದ ಕೋಲೊಂದನ್ನು ಹವಣಿಸಿ ತಂದು ನೀರು ಬೀಳುತಿದ್ದ ಸ್ಥಳದಲ್ಲಿ ಕೋಲನ್ನು ಬಿಟ್ಟು ಆಳವನ್ನು ಪರೀಕ್ಷೆ ಮಾಡತೊಡಗಿದರು.

ಅರೇ! ಕೋಲು ಸಂಪೂರ್ಣ ಮುಳುಗಿತು ಮತ್ತೆ ಕೋಲನ್ನು ಹೊರ ತೆಗೆದು ಅಳತೆ ಮಾಡಿದಾಗ ಕೇವಲ ಹನ್ನೆರಡು ಅಡಿ ಇತ್ತು, ಇನ್ನೆಲಲ್ಲಿ ಎಷ್ಟು ಆಳ ಇದೆಯೋ? ಅಂದುಕೊಂಡು ಬೇಗನೇ ಜಲಕ್ರೀಡೆ ಮುಗಿಸಿ ಕ್ಯಾಮೆರ ಇಟ್ಟಿದ್ದ ಸ್ಥಳಕ್ಕೆ ಬಂದೆ ಆದರೆ ಸಂಪೂರ್ಣ ಉಸಿರೆ ನಿಂತುಹೋಗಿತ್ತು.

ಅಷ್ಟೊತ್ತಿಗೆ ಕೃಷ್ಣಪ್ಪನವರು ಬಹಳ ಹೊತ್ತಾಯ್ತು ಹೊರಡೋಣ್ವ? ಅಂದ್ರು

ನಾನು ಅದೇ ಆತುರದಲ್ಲಿ ಕ್ಯಾಮೆರದ ಮೆಮೋರಿ ಕಾರ್ಡು ಬೀಳಿಸಿಬಿಟ್ಟೆ ,ಏನ್ ಗ್ರಹಚಾರವೊ?  ಎಲ್ಲರೂ ಹುಡುಕಲು ಶುರುಮಾಡಿದೆವು ಎಷ್ಟು ಹುಡುಕಿದರೂ ಸಿಗಲಿಲ್ಲ ನಿರಾಶೆಯಾಗಿ ಹೊರಡುವ ಹೊತ್ತಿಗೆ ಎಲ್ಲಿತ್ತೊ ಏನೋ ಯಾರ್ ಕಣ್ಣಿಗೆ ಬೀಳದ್ದು ಸಂತೋಷ್ ಕಣ್ಣಿಗೆ ಬಿದ್ದಿತ್ತು.

ಬಳಿಕ ತಡಮಾಡದೆ ಬರ್ಕಣ ಕಣಿವೆಗೆ ಧನ್ಯವಾದ ಹೇಳಿ ಹೊರಟಾಗ ಸಮಯ ಮದ್ಯಾಹ್ನ ೦೧:೫೦
ಮುಂದೆ ನಡೆಯುತ್ತ ನಡೆಯುತ್ತ ಏರು ಹಾದಿ ಶುರುವಾಯ್ತು ಆ ತಂಪಾದ ಕಾಡಿನಲ್ಲೂ ನಮಗೆ ಬೆವರಿಳಿಯುತಿತ್ತು, ಸೂರ್ಯನ ಕಿರಣಗಳೇ ಬೀಳದ ನಿತ್ಯಹರಿದ್ವರ್ಣದ ದಟ್ಟ ಮಳೆಕಾಡಿನಲ್ಲಿ ಜೀರುಂಡೆ, ಪಕ್ಷಿಗಳ ಇಂಚರ ಬಿಟ್ರೆ ಸುತ್ತೆಲ್ಲಾ ನಿಶ್ಯಬ್ದ ವಾತವರಣ.


ದಟ್ಟ ಕಾನನದಲ್ಲಿ...

ಸುಮಾರು ಎರಡು ಕಿ.ಮೀ ನಡೆದು ಬೆಟ್ಟವನ್ನೇರಿ ದಟ್ಟಕಾಡನ್ನು ಬಿಟ್ಟು ಬಯಲಿನಂತ ಜಾಗಕ್ಕೆ ಬಂದೆವು, ಹಾದಿ ಕವಲಾಗಿತ್ತು ನಾವು ನೇರ ಹಾದಿ ಹಿಡಿದು ಹೊರಟೆವು, ಮಾರ್ಗದರ್ಶಿ ಕೃಷ್ಣಪ್ಪನವರು ನಮ್ಮನ್ನು ನರಸಿಂಹ ಪರ್ವತಕ್ಕೆ ಬಿಟ್ಟು ಬಹುಬೇಗ ಹೊರಡುವ ಆತುರದಲ್ಲಿದ್ದುದರಿಂದ ನಾವೆಲ್ಲರೂ ಅವರನ್ನು ಮುಂದೆ ಹೋಗಲು ಹೇಳಿದೆವು ಅವರು ನಮ್ಮಿಂದ ಚಾರಣ ಶುಲ್ಕ ೧೧೦೦ ರೂಪಾಯಿ ಪಡೆದು ಇನ್ನಿಬ್ಬರು ಚಾರಣಿಗರೊಂದಿಗೆ ಹೊರಟರು, ವಿಶ್ರಮಿಸಿಕೊಳ್ಳಲು ನಾವು ಅಲ್ಲೆ ಸ್ವಲ್ಪ ಹೊತ್ತು ಕುಳಿತೆವು.



ಸುಮಾರು ಅರ್ಧ ತಾಸಿನ ಬಳಿಕ ಬೆನ್ನುಚೀಲಗಳನ್ನೇರಿಸಿ ಹೊರಡಲು ಸನ್ನದ್ದರಾದೆವು, ಮುಂದೆ ನೋಡಿದರೆ ಹಾದಿನೇ ಕಾಣುತಿಲ್ಲ ಎಲ್ಲರೂ ಒಂದೊಂದ್ದು ಕಡೆ ಹಾದಿ ಹುಡುಕಲು ಹೊರಟೆವು ಹಾದಿ ಕಾಣದೆ ನಿರಾಶೆಗೊಂಡು ವಾಪಾಸ್ ಬಂದೆವು ಹೀಗೆ ಸುಮಾರು ಹೊತ್ತಿನ ತನಕ ಹುಡುಕಾಟ ನೆಡೆಯುತ್ತಿದ್ದ ಹೊತ್ತಿನಲ್ಲಿ ಸಂತೋಷ್ ನಮ್ಮನ್ನು ಕೂಗಿ ಕರೆದು ಬನ್ನಿ ಎನ್ನುವಂತೆ "ಗ್ರೀನ್ ಸಿಗ್ನಲ್" ಕೊಟ್ರು, ಅಸ್ಪಸ್ಟವಾಗಿ ಕಾಣುತಿದ್ದ ಜಾಡನ್ನಿಡಿದು ಕಾಡಿನೊಳಗೆ ಕೆಲವು ನಿಮಿಷಗಳ ಚಾರಣ ಸವೆಸಿ ಕಾಡನ್ನು ಬಿಟ್ಟು ಬಯಲಿನಂತಹ ಜಾಗಕ್ಕೆ ಬಂದೆವು.

ಅಲ್ಲಲ್ಲಿ ಬಿದ್ದಿದ್ದ ಕಪ್ಪು ಕಲ್ಲುಗಳ ನಡುವೆ ಸ್ವಲ್ಪ ದೂರ  ನೇರವಾಗಿ ನಡೆದು ಎದುರಿಗೆ ಸಿಕ್ಕ ಸಣ್ಣ ಗುಡ್ಡೆಯ ಅಂಚಿನಲ್ಲಿ ಬಲಕ್ಕೆ ವಾಲಿದಂತಹ ಹಾದಿಯಲ್ಲಿ ಸ್ವಲ್ಪ ದೂರ ನಡೆದು ಅನಂತರ ಮುಖ ನೇರಕ್ಕೆ ಕಾಣುತಿದ್ದ ಸ್ವಲ್ಪ ಎತ್ತರದ ಬೋಳುಗುಡ್ಡ ಏರಿದೆವು ಸಾಲದೆಂಬಂತೆ ಬಿಸಿಲಿನ ಝಳಕ್ಕೆ ಬೆವರು ಕಿತ್ತು ಬರುತಿತ್ತು.


ಅಲ್ಲಲ್ಲಿ ಜಿಲ್ಲಾ ಗಡಿ ಗುರುತಿಗೆ ಹಾಕಿದ್ದ ರಾಶಿ ರಾಶಿ ಕಲ್ಲು ಗುಡ್ಡೆಗಳು ನಮ್ಮ ಕಣ್ಣಿಗೆ ಬಿದ್ದವು,ಇನ್ನೇನು ಬೋಳುಗುಡ್ಡದ ಹಾದಿ ಮುಗಿಯುತ್ತಿದ್ದಂತೆ ಮತ್ತೆ ಕಾಡೊಳಕ್ಕೆ ನುಗ್ಗಿದ ನಾವು ಕೆಲವು ನಿಮಿಷಗಳ ಬಳಿಕ ಕಾಡನ್ನು ಬಿಟ್ಟು ಎತ್ತರದಲ್ಲಿದ್ದ ಬಯಲು ಪ್ರದೇಶದಲ್ಲಿ ಬಂದು ನಿಂತೆವು, ಗಜೇಂದ್ರರವರು ಇದೇ ನರಸಿಂಹ ಪರ್ವತ ಎಂದು ಹೇಳುತ್ತಿದ್ದರೂ ಕೂಡ ಸಾಕ್ಷಿಗೆ ಯಾವ ಕುರುಹು ಕಾಣುತಿರಲಿಲ್ಲ, ಕಾಣುತ್ತಿದ್ದುದ್ದು ಬರೀ ಕಪ್ಪು ಬಂಡೆಗಲ್ಲುಗಳು ಮಾತ್ರ  ಇನ್ನು ಸ್ವಲ್ಪ ದೂರ ನಮ್ಮ ನೇರಕ್ಕೆ ನಡೆದ ಮೇಲೆ ನಮ್ಮ ಕಣ್ಣಿಗೆ ಕಂಡಿದ್ದು ಮಾನವ ನಿರ್ಮಿತ ಕಟ್ಟಡ ಇದೇ ನರಸಿಂಹ ಪರ್ವತವೆಂದು ಖಾತ್ರಿಯಾಯ್ತು, ಪುನಃ ಇಳಿಜಾರಿನಲ್ಲಿ ಇಳಿದು ಆ ಕಟ್ಟಡದ ಬಳಿ ಬಂದೆವು.


ಬೆಳಿಗ್ಗೆಯಿಂದ ನಮ್ಮ ಜೊತೆ ಚಾರಣ ಮಾಡಿದ್ದ ಆ ಇಬ್ಬರು ಚಾರಣಿಗರು ಆಗಲೇ ಟೆಂಟ್ ನಿರ್ಮಿಸಿ ವಿಶ್ರಾಂತಿ ಪಡೆಯುತ್ತಿದ್ದರು, ಬಿಸಿಲಿನ ಬೇಗೆಗೆ ನಮ್ಮ ನೀರಿನ ಬಾಟೆಲ್‌ಗಳು ಖಾಲಿಯಾಗಿ ಭಣಗುಡುತ್ತಿದ್ದವು ಆಗಲೇ ಸಮಯ ಸಂಜೆ ೫:೩೦.

ಬೆನ್ನುಚೀಲಗಳನ್ನಿಳಿಸಿ ಸನಿಹದಲ್ಲೇ ಇದ್ದ ನೀರಿನ ಹೊಂಡದ ಬಳಿ ತೆರಳಿ ಪಾತ್ರೆ ಮತ್ತು ಬಾಟೆಲ್‌ಗಳಲ್ಲಿ ನೀರು ತುಂಬಿಸಿಕೊಂಡು ಪಾಳು ಮನೆಯಲಿದ್ದ ಒಲೆಯ ಮೇಲೆ ಪಾತ್ರೆ ಇಟ್ಟು ಬಿಸಿ ಬಿಸಿ ಚಹಾ ಮಾಡಿ ಕುಡಿದಾಗ ಬಸವಳಿದಿದ್ದ ನಮಗೆ ಸ್ವಲ್ಪ ನೆಮ್ಮದಿ ಸಿಕ್ಕಂತಾಯ್ತು.


ತದನಂತರ ನಾವು ಟೆಂಟ್ ಹಾಕಿ ಸುಂದರ ಸಂಜೆಯ ಸೂರ್ಯಸ್ತಮದ ನೋಟ ಸವಿಯಲು ಪಶ್ಚಿಮ ದಿಕ್ಕಿನಲ್ಲಿದ್ದ ಸಣ್ಣ ಗುಡ್ಡ ಏರಿದೆವು, ಸಾಯಿಪ್ರಕಾಶ್ ಮಾತ್ರ ಗುಡ್ಡ ಏರದೇ ಅಲ್ಲಿಯೇ ಇದ್ದ ಒಂದು ಬಂಡೆಯ ಮೇಲೆ ಕುಳಿತರು, ಅಷ್ಟೊತ್ತಿಗಾಗಲೇ ಸೂರ್ಯನು ತನ್ನ ಲೋಕಕ್ಕೆ ಮರಳುತಿದ್ದ ಸೊಬಗಂತೂ ವರ್ಣಿಸಲಸಾದ್ಯವಾಗಿತ್ತು.

ನನ್ನ ಕ್ಯಾಮೆರ ಕೈಕೊಟ್ಟಿದ್ದರಿಂದ ಆ ಸುಂದರ ಸಂಜೆಯ ನೋಟವನ್ನು ಕ್ಯಾಮೆರದಲ್ಲಿ ಸೆರೆಹಿಡಿಯದೆ ಬರಿಗಣ್ಣಿನಲ್ಲಿ ಸವಿಯುತ್ತ ಬಂಡೆಯ ಮೇಲೆ ಕುಳಿತುಬಿಟ್ಟಿದ್ದೆ, ಗಜೇಂದ್ರ ಮತ್ತು ಸಂತೋಷ್ ಇಬ್ಬರು ಛಾಯ ಚಿತ್ರ ತೆಗೆಯುವುದರಲ್ಲೇ ಮಗ್ನರಾಗಿದ್ದರು.



ಸೂರ್ಯಾಸ್ತಮದ ವಿಹಂಗಮ ದೃಶ್ಯ

ಅಷ್ಟೊತ್ತಿಗಾಗಲೇ ಸುತ್ತಲೂ ಕತ್ತಲು ಆವರಿಸಿತು ಮತ್ತೆ ನಮ್ಮ ಜಾಗಕ್ಕೆ ವಾಪಸಾಗಿ ಆಗಲೇ ಆ ಇಬ್ಬರು ಸಹ ಚಾರಣಿಗರು ಶಿಭಿರಾಗ್ನಿ ಹೊತ್ತಿಸಿಬಿಟ್ಟಿದ್ದರು, ರಾತ್ರಿಯಿಡಿ ಉರಿಯಲು ಮತ್ತಷ್ಟು ಸೌದೆಗಳನ್ನು ಕಲೆಹಾಕಿದೆವು, ಬಳಿಕ ನಾವು  ಒಲೆ ಮೇಲೆ ಪಾತ್ರೆ ಇಟ್ಟು ನೀರು ಬಿಸಿ ಮಾಡಿ ನ್ಯೂಡಲ್ಸ್ ಸಿದ್ದಪಡಿಸುತ್ತಿದ್ದರೆ, ಸಾಯಿಪ್ರಕಾಶ್ ಅಲೂಗೆಡ್ಡೆ ಪುಡಿಗೆ ಬಿಸಿ ನೀರು ಸೇರಿಸಿ ಆಲೂಮ್ಯಾಶ್ ತಯಾರಿಸುತ್ತಿದ್ದರು ಬಳಿಕ ಎಲ್ಲರೂ ಊಟ ಮುಗಿಸಿ ಸ್ವಲ್ಪ ಹೊತ್ತು  ಶಿಭಿರಾಗ್ನಿ ಬಳಿ ಕುಳಿತೆವು ನಂತರ ಗಜೇಂದ್ರ ಮತ್ತು ಸಾಯಿ ಪ್ರಕಾಶ್ ಟೆಂಟ್‌ನೊಳಗೆ ಹೋಗಿ ನಿದ್ರೆಗೆ ಶರಣಾದರು, ನಾನು ಮತ್ತು ಸಂತೋಷ್ ಸುಮಾರು ಹೊತ್ತಿನ ತನಕ ಶಿಭಿರಾಗ್ನಿ ಮುಂದೆ ಮಾತನಾಡುತ್ತ ಕುಳಿತಿದ್ದೆವು, ಬಳಿಕ ನಿದ್ರೆ ಮಾಡುವ ಸಲುವಾಗಿ ಶಿಭಿರಾಗ್ನಿ ಪಕ್ಕದಲ್ಲಿಯೇ ಸ್ಲೀಪಿಂಗ್ ಮ್ಯಾಟ್ ಹಾಸಿ ಮಲಗಿದೆವು ತಕ್ಷಣಕ್ಕೆ ನಿದ್ದೆಯೂ ಬರಲಿಲ್ಲ.

ನನ್ನ ಮನಸಿನಲ್ಲಿ ಏನೋ ತಳಮಳ!

ಏಕೆಂದರೆ ನಾವಿದಿದ್ದು ನಕ್ಷಲೈಟ್ ಪೀಡಿತ ಶಿಖರದ ತುದಿಯಲ್ಲಿನ ಕಾಡೊಂದರ ಕಗ್ಗತ್ತಲಿನಲ್ಲಿ, ಒಂದು ವೇಳೆ ನಕ್ಷಲೈಟ್ ಎಂದು ಪೊಲೀಸರು, ಪೊಲೀಸರೆಂದು ನಕ್ಷಲೈಟ್‌ಗಳು ಅಂತಾ ತಿಳಿದು ಏನಾದರೂ ಅವಘಡ ಸಂಭವಿಸಿದ್ರೆ?

ಸಂತೋಷ್‌ನನ್ನು ಎಬ್ಬಿಸಿ ಮನವರಿಕೆ ಮಾಡಿ ನಂತರ ಪಾಳುಮನೆಯಲ್ಲಿ ಹೋಗಿ ಮಲಗಿದೆವು, ಜೋರಾಗಿ ಬೀಸುತಿದ್ದ ಗಾಳಿಯ ಸದ್ದಿಗೆ ನನಗೆ ನಿದ್ರೆಯಿಂದ ಅನೇಕ ಬಾರಿ ಎಚ್ಚರವಾಗುತಿತ್ತು, ಬಳಿಕ ಕಣ್ಮುಚ್ಚಿದ್ದು ಗೊತ್ತಾಗಲಿಲ್ಲ.

ಗಜೇಂದ್ರ: ಮೋಹನ್ ಬೇಗ ಏಳಿ ಸೂರ್ಯೋದಯ ನೋಡಲು ನಾವು ಹೋಗ್ತಾಯಿದ್ದೀವಿ ಎಂದು ಹೇಳಿ ಹೊರಟರು,

ತಕ್ಷಣವೆ ಎದ್ದು ಗಡಿಯಾರದ ಕಡೆ ಕಣ್ಣಾಯಿಸಿದಾಗ ಸಮಯ ೦೬:೪೫.

ತಡಮಾಡದೆ ಸೂರ್ಯೋದಯ ನೋಡುವ ಹಂಬಲದಿಂದ ಮುಂಜಾನೆಯ ತಂಗಾಳಿಯಲ್ಲಿ ಪರ್ವತದ ಅಂಚಿನತ್ತ ಹೊರಟೆ...

ಬೆಳಗಿನ ಹೊತ್ನಾಗೆ ಆಗಷ್ಟೆ ತಾನೆ ಬಾನಿನಲ್ಲಿ ಕೆಂಪು ಬಣ್ಣದೋಕುಳಿಯನ್ನು ಚೆಲ್ಲಿ ವರ್ಣಚಿತ್ತಾರದ ನಡುವೆ ಕೆಂಡದಂತೆ ಪುಟಿದೇಳುತ್ತಿದ್ದ ಅರುಣೋದಯದ ನೋಟ ಒಂದೆಡೆಯಾದರೆ ಆಗ ತಾನೆ ಮಲಗೆದ್ದ ಹಕ್ಕಿಗಳ ಚಿಲಿಪಿಲಿ ನಾದ ವರ್ಣನಾತೀತವಾಗಿತ್ತು.


ಸೂರ್ಯೋದಯದ ವೀಕ್ಷಣೆಯಲ್ಲಿ...

ಅಷ್ಟೊತ್ತಿಗಾಗಲೇ ಆ ಇಬ್ಬರೂ ಚಾರಣಿಗರು "ಹಾಯ್" ಹೇಳಿ ಹೊರಟರು, ಮತ್ತೆ ನಾವು ಟೆಂಟ್ ಬಳಿ ಬಂದು ಹಾಲು ಕಾಯಿಸಿ ಹಾಲಿನ ಜೊತೆ ಬಿಸ್ಕತ್ ತಿಂದು ಬೆಳಗಿನ ಉಪಹಾರ ಮುಗಿಸಿ ಟೆಂಟ್ ಬಿಚ್ಚಿಟ್ಟು ಬೆನ್ನು ಚೀಲ ಹೆಗಲಿಗೇರಿಸಿ ಹೊರಟಾಗ ಸಮಯ ೦೯:೨೫.

ಹಾದಿಯಲ್ಲಿ ನಿಂತು ನಾವಿದ್ದ ಸ್ಥಳದತ್ತ ಒಮ್ಮೆ ಹಿಂತಿರುಗಿ ನೋಡಿದಾಗ ಧನ್ಯತಾಭಾವ ನನ್ನ ಮನದಲ್ಲಿ ಮನೆ ಮಾಡಿತ್ತು.


ಪರ್ವತದ ತಪ್ಪಲಿನಲ್ಲಿರುವ ಕಿಗ್ಗ ಕೇವಲ ಒಂದೂವರೆ ಗಂಟೆಯ ಚಾರಣದ ಹಾದಿ ಆಗಲೇ ಬಿಸಿಲಿನ ಕಾವು ತಾರಕಕ್ಕೇರಿತು, ಹಾದಿಯುದ್ದಕ್ಕೂ ಮರಗಳಿದ್ದ ಕಾರಣ ಅಷ್ಟೇನು ಆಯಾಸಪಡದೆ ಪರ್ವತವನ್ನಿಳಿದು ಕೆಳಗೆ ಬಂದ ನಮಗೆ ಅಲ್ಲೊಂದು ಮನೆ  ಕಣ್ಣಿಗೆ ಬಿತ್ತು ಜೊತೆಗೆ ಬಾಯಾರಿಕೆಯ ದಾಹ ಬೇರೆ, ನೀರಿನ ದಾಹ ನೀಗಿಸಲು ಮನೆಯ ಬಳಿ ಬರುತ್ತಿದ್ದ ನಮ್ಮನ್ನು ದೂರದಿಂದಲೇ ನೋಡಿದ ವ್ಯಕ್ತಿಯೊಬ್ಬರು ಮನೆಯ ಒಳಗೆ ಹೊರಟು ಹೋದರು, ನಾವು ಮರದ ಗೇಟ್ ಪಕ್ಕಕ್ಕೆ ಸರಿಸಿ ಒಳ ಹೊಕ್ಕುವಷ್ಟರಲ್ಲಿ ನೀರು ತುಂಬಿದ ತಂಬಿಗೆ ಹಿಡಿದು ಬಂದ ಆ ಪುಣ್ಯಾತ್ಮರು ನಮ್ಮ ಬಾಯಾರಿಕೆ ನೀಗಿಸಿದರು, ಒಂದೇ ಸಮನೆ ಬೊಗಳುತಿದ್ದ ನಾಯಿ ಹೆದರಿ ನಡುಗುತಿತ್ತು, ಬಳಿಕ ಅವರನ್ನು ಮಾತನಾಡಿಸಿದಾಗ ನಕ್ಷಲ್ ನಿಗ್ರಹ ಪಡೆಯ ಪೊಲೀಸರು ವಿಚಾರಣೆಗೆಂದು ಆಗಾಗ ಬರುತ್ತಾರೆಂಬ ವಿಷಯ ತಿಳಿಯಿತು.

ಹೀಗೆ ಒಂದು ದಿನ ವಿಚಾರಣೆಗೆಂದು ಬಂದ ಸಂದರ್ಭದಲ್ಲಿ ಅತಿಯಾಗಿ ನಾಯಿ ಬೊಗಳುವುದನ್ನು ಕಂಡ ಪೊಲೀಸ್ ಪೇದೆಯೊಬ್ಬ ಬಂದೂಕಿನ ಹಿಡಿಯಿಂದ ಹೊಡೆದನಂತೆ, ಅದಕ್ಕೆ ಈಗಲೂ ಪೊಲೀಸರನ್ನು ಕಂಡರೆ ಭಯದಿಂದ ನಡುಗುವುದಂತೆ, ಹೆದರಿ ನಡುಗುದನ್ನು ಕಂಡ ನಾವು ಕನಿಕರದಿಂದ ಸ್ವಲ್ಪ ಬಿಸ್ಕತ್‌ಗಳನ್ನು ಹಾಕಿದಾಗ ಹೆದರಿಕೆಯಿಂದ ತಿನ್ನದೇ ಭಯದಿಂದ ನಮ್ಮತ್ತ ನೋಡುತ್ತಲ್ಲೇ ಇತ್ತು.

ಬಳಿಕ ಅವರಿಗೆ ನಾವು ತುಂಬು ಹೃದಯದ ಧನ್ಯವಾದಗಳನ್ನರ್ಪಿಸಿ ಹೊರಟು ಕಿಗ್ಗ ದೇವಸ್ಥಾನದ ಬಳಿ ಬಂದೆವು, ಪಕ್ಕದಲ್ಲೆ ಇದ್ದ ಅಂಗಡಿಯೊಂದರಲ್ಲಿ ಬೆನ್ನು ಚೀಲಗಳನ್ನು ಇಟ್ಟು ಕಿಗ್ಗದ ಪ್ರಸಿದ್ಧ ಋಷ್ಯ ಶೃಂಗೇಶ್ವರ ದೇವಸ್ಥಾನಕ್ಕೆ ತೆರಳಿ ಧರ್ಶನ ಮಾಡಿ ಅಲ್ಲಿಂದ ಅಟೋ ಹತ್ತಿ ಸಿರಿಮನೆ ಜಲಪಾತದತ್ತ ಹೊರಟೆವು.


ಸಿರಿಮನೆ ಜಲಪಾತ

ಸಿರಿಮನೆ ಜಲಪಾತಕ್ಕೆ ನನ್ನ ಎರಡನೇ ಭೇಟಿ ಅದಾಗಿತ್ತು, ಸುಮಾರು ಇಪ್ಪತ್ತು ಅಡಿ ಎತ್ತರದಿಂದ ರಭಸವಾಗಿ ಬೀಳುತಿದ್ದ ಮುತ್ತಿನ ಹನಿಗಳಿಗೆ ಮೈಯೊಡ್ಡಿ ಅನುಭವಿಸಿದ ಆ ಸುಂದರ ಕ್ಷಣಗಳು ನಮ್ಮ ಆಯಾಸವನ್ನ ದೂರ ಮಾಡಿತು.


ಸಿರಿಮನೆಯಲ್ಲಿ ಸಂತೋಷ್, ಗಜೇಂದ್ರ, ಸಾಯಿಪ್ರಕಾಶ್ ಮತ್ತು ನಾನು

ಹೀಗೆ ಸುಮಾರು ಹೊತ್ತು ಜಲಪಾತದಲ್ಲಿ ಆಟವಾಡಿ ನಂತರ ಅದೇ ಆಟೋ ಹತ್ತಿ ಮತ್ತೆ ಕಿಗ್ಗಕ್ಕೆ ಬಂದು ಅಂಗಡಿಯೊಂದರಲ್ಲಿ ಇಟ್ಟಿದ್ದ ಬೆನ್ನು ಚೀಲಗಳನ್ನು ಆಟೋದಲ್ಲಿ ತುಂಬಿಕೊಂಡು ನಾವು ನೇರವಾಗಿ ಶೃಂಗೇರಿ ಕಡೆ ಪ್ರಯಾಣ ಬೆಳೆಸಿದೆವು.

ಮದ್ಯಾಹ್ನದ ಸಮಯ ೦೧:೩೦ ರ ಹೊತ್ತಿಗೆ ಶೃಂಗೇರಿಯಲ್ಲಿ ನಮ್ಮನ್ನು ಇಳಿಸಿದ ಆಟೋ ಚಾಲಕ "ಹಾಯ್" ಹೇಳಿ ಹೊರ‍ಟ, ನಂತರ ದೇವಸ್ಥಾನಕ್ಕೆ ತೆರಳಿದ ನಾವು ಶಾರದಾಂಭೆ ಮಾತೆಯ ಧರ್ಶನ ಮುಗಿಸಿ ಅಲ್ಲೆ ಭೋಜನ ಶಾಲೆಯಲ್ಲಿ ಪ್ರಸಾದ ಸ್ವೀಕರಿಸಿ ಅಲ್ಲಿಂದ ಹೊರಟು ಬಸ್ ನಿಲ್ದಾಣಕ್ಕೆ ಬಂದೆವು.

ಸಾಯಿಪ್ರಕಾಶ್, ಗಜೇಂದ್ರ ಮತ್ತು ಸಂತೋಷ್ ಕರ್ನಾಟಕ ಸಾರಿಗೆ ಬಸ್‌ನಲ್ಲಿ ಬೆಂಗಳೂರಿನ ಹಾದಿ ಹಿಡಿದರೆ ನಾನು ಮೈಸೂರಿಗೆ ಹೊರಡುವ ಬಸ್ ಬರುವ ತನಕ ಕಾದು ಕುಳಿತಿದ್ದೆ, ಕೊನೆಗೂ ಬಂದ ಸಾರಿಗೆ ಬಸ್ ಸಂಜೆ ೦೪:೩೦ ಕ್ಕೆ ಹೊರಟು ಬಾಳೆಹೊನ್ನೂರು,ಆಲ್ದೂರು,ಚಿಕ್ಕಮಗಳೂರು,ಹಾಸನ, ಹೊಳೆನರಸೀಪುರ ಮಾರ್ಗವಾಗಿ ಮೈಸೂರಿಗೆ ಬಂದಾಗ ಸಮಯ ರಾತ್ರಿ ೧೨:೦೦.

ಮೈಸೂರಿನಿಂದ ಬೆಂಗಳೂರಿಗೆ ಹೊರಡುವ ಮತ್ತೊಂದು ಬಸ್ ಹತ್ತಿ ಕೋರಿಕೆಯ ಮೇರೆಗೆ ನನ್ನೂರಾದ ಬೈರಾಪಟ್ಟಣದಲ್ಲಿ ಇಳಿದು ಮನೆ ಸೇರಿದಾಗ ರಾತ್ರಿ ಸಮಯ ಎರಡಾಗಿತ್ತು.


*** ಶುಭಂ ***


ಮಂಗಳವಾರ, ಮೇ 17, 2011

ಬಂಡಾಜೆ ಜಲಪಾತ - ಬಲ್ಲಾಳರಾಯನದುರ್ಗ ಚಾರಣ / ಟ್ರೆಕ್

ದಿನಾಂಕ: ೨೨.೦೧.೨೦೧೧ ಮತ್ತು ೨೩.೦೧.೨೦೧೧

ಎತ್ತರ : ಸಮುದ್ರ ಮಟ್ಟದಿಂದ ಸುಮಾರು ೭೦೦ ಮೀಟರ್

ಜಿಲ್ಲೆ: ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು

ತಂಡ: ಗಜೇಂದ್ರ, ಸಂತೋಷ್, ರಾಖಿ ಗೌಡ, ಅಂಜು ಗೌಡ, ವಿನಯ್, ಪಣೀಶ್, ಪೃಥ್ವಿ, ಭರತ್,
ಶೀಥಲ್ ಪ್ರಸಾದ್,ವಿಕಾಶ್, ಗೌರವ್ ಮತ್ತು ನಾನು.

ಒಟ್ಟು ಕ್ರಮಿಸಿದ ದೂರ: ಸುಮಾರು ೨೪ ಕಿ.ಮೀ

*********************************************************************************

ಬಂಡಾಜೆ ಜಲಪಾತಕ್ಕೆ ಚಾರಣ ಹೊಗಬೇಕೆಂಬ ಮಹಾದಾಶೆ ಸುಮಾರು ಆರು ತಿಂಗಳಿಂದ ನನ್ನನ್ನು ಕಾಡುತ್ತಲ್ಲೇ ಇತ್ತು.
ಸೆಪ್ಟೆಂಬರ್ ತಿಂಗಳಲ್ಲಿ ಹೋಗಬೇಕೆಂದು ನಾನು ಮತ್ತು ನನ್ನ ಸ್ನೇಹಿತರಾದ ಗಜೇಂದ್ರ ಇಬ್ಬರೂ ಸೇರಿ ನಿರ್ಧಾರ ಮಾಡಿದೆವು, ಅದರಂತೆಯೇ ಗೌಡ್ರುಗೆ ಕರೆ ಮಾಡಿ ಬರುವುದಾಗಿ ತಿಳಿಸಿದಕ್ಕೆ ಈಗ ಆಗಲ್ಲ ಮಳೆ ಜಾಸ್ತಿ ಇದೆ ಹೊಳೆ ದಾಟಿ ಹೋಗಲು ಸಾದ್ಯವಿಲ್ಲ ಮಳೆಗಾಲ ಮುಗಿದ ಮೇಲೆ ಬನ್ನಿ ಅಂತ ಹೇಳಿದ್ರು.

ಒಂದು ತಿಂಗಳ ಬಳಿಕ ಕರೆ ಮಾಡಿದಾಗ ಪುನಃ ಅದೇ ಉತ್ತರ.

ಸದ್ಯಕ್ಕೆ ಬಂಡಾಜೆ ಜಲಪಾತದ ಗೋಜಿಗೆ ಹೋಗದೇ "ತಡಿಯಂಡಮೊಳ್ ಪರ್ವತ" ಮತ್ತು
"ಒಂಬತ್ತು ಗುಡ್ದ" ಚಾರಣ ಮುಗಿಸಿ ಬಂದದ್ದು ಆಯ್ತು.

ಬಳಿಕ ಡಿಸೆಂಬರ್ ತಿಂಗಳಲ್ಲಿ ಗೌಡ್ರುಗೆ ಕರೆ ಮಾಡಿದ್ದಕ್ಕೆ "ಬನ್ನಿ" ಅಂತ ಹೇಳಿದ್ರು ಆದರೆ ಕೆಲವು ತುರ್ತು ಕೆಲಸಗಳಿಂದಾಗಿ ನಾವೇ ಬಂಡಾಜೆ ಚಾರಣವನ್ನು ಕೈಬಿಡಬೇಕಾದ ಸಂದರ್ಭ ಒದಗಿ ಬಂತು.

೨೦೧೧ ರ ಜನವರಿ ತಿಂಗಳು ನನ್ನ ಸ್ನೇಹಿತ ಗಜೇಂದ್ರರವರು ಗೌಡ್ರುಗೆ ಮತ್ತೊಮ್ಮೆ ಕರೆ ಮಾಡಿದಕ್ಕೆ ಇಲ್ಲಿ ಆನೆಗಳ ಹಾವಳಿ ಜಾಸ್ತಿ ಇದೆ ಈ ವಾರ ಆಗಲ್ಲ ಮುಂದಿನ ವಾರ ಕರೆ ಮಾಡಿ ಅಂದ್ರಂತ್ತೆ, ಬಂಡಾಜೆ ಜಲಪಾತಕ್ಕೆ ಇವರೇನು ಓಡೆಯರಾ? ಯಾವಾಗ ಕರೆ ಮಾಡಿದ್ರು ಏನಾದರೂ ಒಂದು ಕಾರಣ ಕೊಡುತ್ತಾರಲ್ಲ, ಎಂದು ಮನಸಿನಲ್ಲಿ ಗೊಣಗಿಕೊಂಡೆ.

ಅಂತರ್ಜಾಲದ ಕೆಲವು ಮಾಹಿತಿ ಪ್ರಕಾರ ಗೌಡ್ರ ಮನೆಯ ಹಿಂಬಾಗದಲ್ಲಿ ಚಾರಣ ಶುರು ಮಾಡಬೇಕಿತ್ತು,
ನಾನು ಮತ್ತು ಗಜೇಂದ್ರರವರು ಬಂಡಾಜೆ ಚಾರಣವನ್ನು ಹೇಗಾದರೂ ಮಾಡಿ ಕೊನೆಗೆ ಗೌಡರ ಕಣ್ತಪ್ಪಿಸಿಯಾದ್ರು ಹೊರಡಲೇಬೇಕೆಂಬ ಅಚಲ ನಿರ್ಧಾರದೊಂದಿಗೆ ತಯಾರಾದೆವು.

ಅಕಸ್ಮಾತ್ ಗೌಡರ ಕಣ್ಣಿಗೆ ಬಿದ್ದು ಚಾರಣವೇನಾದ್ರು ಕೈತಪ್ಪಿದ್ರೆ? ಪರ್ಯಾಯವಾಗಿ ಎತ್ತಿನಭುಜ ಅಥವಾ ಕೆ.ಪಿ. ಚಾರಣವನ್ನಾದ್ರು ಮುಗಿಸೋಣ ಅಂತಾ ತಿರ್ಮಾನಿಸಿದೆವು, ಹೊರಡುವ ದಿನ ನಿಗದಿಯಾಗಿತ್ತು ಮತ್ತೊಬ್ಬ ಸ್ನೇಹಿತ ಸಂತೋಷ್ ಕೂಡ ಬರಲು ಒಪ್ಪಿದರು, ನರಸಿಂಹ ಪರ್ವತ ಚಾರಣ ಮುಗಿಸಿ ಧರ್ಮಸ್ಥಳದಲ್ಲಿ ಸಿಗುವುದಾಗಿ ತಿಳಿಸಿ ಗಜೇಂದ್ರರವರು ಗುರುವಾರ ರಾತ್ರಿನೇ ಶೃಂಗೇರಿ ಕಡೆ ಪ್ರಯಾಣ ಬೆಳೆಸಿದರು.

ಶುಕ್ರವಾರ ಬೆಳಿಗ್ಗೇನೆ ಧರ್ಮಸ್ಥಳಕ್ಕೆ ಎರಡು ಮುಂಗಡ ಟಿಕೇಟ್ ಖರೀದಿಸಿ ಬಂದೆ, ಸಂಜೆ ವೇಳೆಗೆ ಆಫೀಶ್ ಕೆಲಸ ಮುಗಿಸಿ ಚಾರಣಕ್ಕೆ ಬೇಕಾದ ಕೆಲವು ತಿಂಡಿ ತಿನಿಸುಗಳನ್ನು ಖರೀದಿಸಿದ ನಂತರ ಊಟ ಮುಗಿಸಿ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬಂದಾಗ ವೇಳೆ ರಾತ್ರಿ ೯:೦೦, ಬಸ್ ಹೊರಡಲು ಇನ್ನೂ ೪೫ ನಿಮಿಷ ಬಾಕಿ ಉಳಿದಿತ್ತು ಸಂತೋಷ್‌ಗೆ ಕರೆ ಮಾಡಿದೆ ಮನೆ ಬಿಟ್ಟಿರುವುದಾಗಿ ತಿಳಿಸಿದರು, ಸಮಯ ೯:೩೦, ಆದರೂ ಸಂತೋಷ್‌ನ ಸುಳಿವೇ ಇಲ್ಲ ಪುನಃ ಕರೆ ಮಾಡಿದೆ ಕಾರ್ಪೋರೇಷನ್ ಸರ್ಕಲ್‌ ಹತ್ತಿರ ಬರುತ್ತಿರುವುದಾಗಿ ತಿಳಿಸಿದರು, ನನ್ನ ಮನಸಿನಲ್ಲಿ ಏನೋ ತಳಮಳ ಬಸ್ ಹೊರಡುವುದರಷ್ಟರಲ್ಲಿ ಸಂತೋಷ್ ಬರ್ತಾರಾ?
ಇನೈದು ನಿಮಿಷ ಮಾತ್ರ ಬಾಕಿ ಉಳಿದಿತ್ತು ಅಷ್ಟರಲ್ಲಿ ಸಂತೋಷ್‌ ಆಗಮನ ನನ್ನ ಮನಸಿನ ತಳಮಳವನ್ನು ದೂರ ಮಾಡಿತು.

ರಾತ್ರಿ ೯:೫೦ ಕ್ಕೆ ಹೊರಟ ರಾಜಹಂಸ ಶರವೇಗದ ಸರದಾರನಂತೆ ಹಾಸನ ಸಕಲೇಶಪುರ ದಾಟಿ ಶಿರಾಡಿ ಘಟ್ಟಪ್ರದೇಶಕ್ಕೆ ಬಂದಾಗ ಆಗ ತಾನೆ ಬಂದಿದ್ದ ನಿದ್ದೆ ಕೂಡ ಮಾಯವಾಯ್ತು ಯಾಕೆಂದರೆ ಆ ರಸ್ತೆಯ ಪಾಡು ಹಾಗಿತ್ತು, ಬೆಳಗಿನ ಜಾವ ಸುಮಾರು ೪:೫೦ ರ ವೇಳೆಗೆ ನಮ್ಮನ್ನು ಧರ್ಮಸ್ಥಳದಲ್ಲಿ ಇಳಿಸಿದ ರಾಜಹಂಸ ಕುಂದಾಪುರದ ಕಡೆ ಹೊರಟಿತು.

ನಂತರ ಗಜೇಂದ್ರರವರು ಉಳಿದುಕೊಂಡಿದ್ದ ಸಾಕೇತ ವಸತಿ ಗೃಹಕ್ಕೆ ಬಂದು ಸ್ನಾನಾಧಿ ಕಾರ್ಯ ಮುಗಿಸಿ ದರ್ಶನಕ್ಕಾಗಿ ಶ್ರೀ ಮಂಜುನಾಥ ಸ್ವಾಮಿಯ ದೇವಾಲಯದ ಬಳಿ ಬಂದೆವು, ಆ ದಿನ "ಕರ್ನಾಟಕ ಬಂದ್" ಪ್ರಯುಕ್ತ ಭಕ್ತಾದಿಗಳ ದಟ್ಟಣೆ ಕೂಡ ಕಮ್ಮಿ ಇತ್ತು, ಹಾಗಾಗಿ ಮಂಜುನಾಥ ಸ್ವಾಮಿಯ ಧರ್ಶನ ಕೂಡ ಬಹು ಬೇಗನೆ ಮುಗಿಯಿತು.

ನಂತರ ಜೀಪಿನಲ್ಲಿ ಉಜಿರೆ ತಲುಪಿ ಅಲ್ಲೆ ಹೋಟೆಲೊಂದರಲ್ಲಿ ತಿಂಡಿ ತಿನ್ನುತಿದ್ದ ವೇಳೆಯಲ್ಲಿ ನಮ್ಮ ಬೆನ್ನು ಚೀಲಗಳನ್ನು ನೋಡಿದ ಜೀಪ್ ಚಾಲಕನೊಬ್ಬ ನಮ್ಮ ಬಳಿ ಬಂದು,

ಬಂಡಾಜೆಗಾ?

ನಾವು: ಹೌದು

ಚಾಲಕ; ಜೀಪ್ ಇದೆ ಬನ್ನಿ ಹೋಗೋಣ

ನಾನು: ಅಲ್ಲಿ ಯಾರಾದ್ರು ಗೈಡ್ ಸಿಕ್ತಾರಾ?

ಚಾಲಕ: ನೋಡೋಣ, ಫೋನ್ ಮಾಡಿ ಕೇಳ್ತೀನಿ ಇರಿ, ಸಂಭಾಷಣೆ ಮುಗಿದ ಬಳಿಕ ಹಾಂ...! ಇದ್ದಾರೆ, ಹೇಳಿದ್ದೀನಿ ನಿಮ್ಮನ್ನು ಕರ್ಕೊಂಡು ಹೋಗ್ತಾರೆ

ನಂತರ ನಮ್ಮ ಬೆನ್ನು ಚೀಲಗಳನ್ನು ಜೀಪ್‌ನಲ್ಲಿ ಹಾಕಿ ಆಸೀನರಾದ ಬಳಿಕ ಜೀಪ್ ಹೊರಟಿತು ಬಂಡಾಜೆಯ ನಾರಾಯಣ ಗೌಡ್ರು ಮನೆ ಕಡೆಗೆ...

ಚಾಲಕ ದಾರಿಯ ಮದ್ಯೆ ಜೀಪ್ ನಿಲ್ಲಿಸಿ ಅಗೋ ನೋಡಿ ಸಾರ್! ಅಲ್ಲಿ ಕಾಣುತ್ತಿದ್ದೆಯಲ್ಲಾ ಅದೇ ಜಲಪಾತವೆಂದು ತೋರಿಸಿದ, ಮುಗಿಲೆತ್ತರಕ್ಕೆ ಚಾಚಿ ನಿಂತಿದ್ದ ಗಿರಿಶಿಖರದಿಂದ ಸಣ್ಣ ಎಳೆಯಾಗಿ ನೀರು ಬೀಳುತಿದ್ದ ದೃಶ್ಯವಂತೂ ಮನಮೋಹಕವಾಗಿತ್ತು, ದಾರಿಯ ಮದ್ಯೆ ಸಿಕ್ಕ ನಮ್ಮ ಮಾರ್ಗದರ್ಶಿಯನ್ನು ಜೀಪ್‌ನಲ್ಲಿ ಹತ್ತಿಸಿಕೊಂಡು ಗೌಡ್ರು ಮನೆಯ ಬಳಿ ಬಂದೆವು, ಅಷ್ಟರಲ್ಲಿ ಜೀಪ್ ಚಾಲಕ ಗೌಡರನ್ನು ಒಮ್ಮೆ ಮಾತನಾಡಿಸಿ ಹೋಗಿ ಅವರು ಈ ಊರಿನ ಮುಖಂಡರು ಎಂದು ಹೇಳಿ ಹೊರಟ.

ಅಷ್ಟೊತ್ತಿಗಾಗಲೇ ಒಂದು ಚಾರಣಿಗರ ಗುಂಪು ಗೌಡ್ರು ಮನೆ ಮುಂದೆ ನೆರೆದಿತ್ತು, ರಾಜ ಗಾಂಭೀರ್ಯದಲ್ಲಿ ಕುಳಿತಿದ್ದ ಗೌಡ್ರುಗೆ ನಮಸ್ಕರಿಸಿದೆವು,

ಗೌಡ್ರು:ತಾವು ಎಲ್ಲಿಂದ ಬಂದಿದ್ದು?

ನಾವು: ಬೆಂಗಳೂರಿಂದ...

ಕಳೆದ ವರ್ಷ ಹೀಗೆ ಬೆಂಗಳೂರಿನ ಮೂವರು ಚಾರಣಕ್ಕೆಂದು ಬಂದು ಕಾಡೊಳಗೆ ತಪ್ಪಿಸಿಕೊಂಡ ಘಟನೆಯನ್ನು ಗೌಡ್ರು ವಿವರಿಸುತ್ತಿದ್ದರು, ನಾನು ಕೂಡ ಆ ಸಮಯದಲ್ಲೇ ದಿನಪತ್ರಿಕೆ ಓದಿ ವಿಷಯ ತಿಳಿದುಕೊಂಡಿದ್ದು ನೆನಪಾಯಿತು,
ಗೌಡ್ರು ಮನೆಯ ಕಾಫಿ ಕುಡಿದು ಸಮಯ ೯:೦೦ ಆಗಿದ್ದರಿಂದ ನಾವು ತಡ ಮಾಡದೆ ಗೌಡ್ರುಗೆ ಧನ್ಯವಾದ ಹೇಳಿ ಅವರ ಮನೆಯ ಅಂಚಿನಲ್ಲೇ ಚಾರಣ ಹೊರಟೆವು ಬಂಡಾಜೆಯ ಜಾಡನ್ನಿಡಿದು...


ನಾರಾಯಣಗೌಡ್ರು ಮನೆ ಮುಂದೆ ಗಜೇಂದ್ರ, ನಾನು ಮತ್ತು ಸಂತೋಷ್


ಚಾರಣ ಆರಂಭಿಸಿದ ಕೆಲವೇ ನಿಮಿಷದಲ್ಲೇ ಒಂದು ಮರದ ಗೇಟ್ ದಾಟಿ ಕಾಲು ಹಾದಿ ಹಿಡಿದು ಹೊರಟೆವು, ಇಲ್ಲಿಂದ ಮುಂದೆ ತುಂಬಾ ಎಚ್ಚರದಿಂದಿರಬೇಕು ಸರಿ ಹಾದಿಯ ನಡುವೆ ಹಾದಿ ತಪ್ಪಿಸುವ ಹಲವು ಅಡ್ಡಹಾದಿಗಳು ಎದುರಾಗುತ್ತವೆ ಹಾಗೊಂದು ವೇಳೆ ಹಾದಿ ತಪ್ಪಿದರೆ ದೇವರೇ ಗತಿ! ಮಾರ್ಗದರ್ಶಿ ನೆರವಿನಿಂದ ಯಾವುದೇ ಗೋಜಿಲ್ಲದೆ ಮುಂದೆ ಸಾಗಿದೆವು, ಬಳಿಕ ಒಂದು ಸಣ್ಣ ಕಲ್ಲಿನ ಗೋಡೆ ದಾಟಿದ ಮೇಲೆ ಮುಂದೆ ಬಲಕ್ಕೆ ಒಂದು ಮನೆ ಅಲ್ಲೊಂದು ನಾಯಿ ನಮ್ಮನ್ನು ನೋಡಿ ಒಂದೇ ಸಮನೇ ಬೊಗಳುತಿತ್ತು ಅದೆಲ್ಲದರ ನಡುವೆ ಮೌನವಾಗಿ ಸಾಗುತ್ತಿದ್ದ ನಮ್ಮ ಚಾರಣ ನಿಜಕ್ಕೂ ಖುಷಿ ಕೊಡುತಿತ್ತು, ನಂತರ ಒಂದು ನೀರಿಲ್ಲದ ಸಣ್ಣ ಹಳ್ಳ ದಾಟಿ ಮುನ್ನಡೆದೆವು, ಹಾದಿ ಗೊತ್ತಿಲ್ಲದವರಿಗೆ ಸರಿ ಹಾದಿ ಹುಡುಕುವುದು ಬಹಳ ಕಷ್ಟ, ಹಾದಿ ಉದ್ದಕ್ಕೂ ಹೇರ‍ಳವಾಗಿ ಬಿದ್ದಿದ್ದ ಆನೆಗಳ ಲದ್ದಿ ನೋಡಿದ್ರೆ ಎಂತವರಿಗೂ ನಡುಕ ಶುರುವಾಗುತ್ತೆ, ಇದನ್ನೆಲ್ಲಾ ನೋಡಿದ್ರೆ ಆನೆಗಳ ಬಾರಿ ಹಿಂಡೇ ಇರಬೇಕು ಅನ್ನಿಸ್ತು, ಇಲ್ಲಿಂದ ಮುಂದಕ್ಕೆ ಸ್ವಲ್ಪ ಎಚ್ಚರವಹಿಸಬೇಕಾಗುತ್ತೆ ತಪ್ಪಿದ್ರೆ ಅಪಾಯ ಖಂಡಿತಾ!

ವಿಚಿತ್ರ ಶಬ್ದ ! ಯಾವುದೋ ಪ್ರಾಣಿ ನಮ್ಮನ್ನೇ ಅನುಸರಿಸಿ ಬರ್ತಾ ಇರೋದನ್ನ ತಿಳಿಯೋಕ್ಕೆ ನನಗೆ ಬಹಳ ಹೊತ್ತು ಬೇಕಾಗಲಿಲ್ಲ, ಸಂತೋಷ್ ಬಹಳ ಮುಂದೆ ಹೋಗುತ್ತಿದ್ದರು ತಕ್ಷಣವೇ ನಾನು ನನ್ನ ಮಿತ್ರ ಗಜೇಂದ್ರರವರಿಗೆ ತಿಳಿಸಿದೆ ಅವರೂ ಕೂಡ ಆ ಶಬ್ದವನ್ನ ಆಲಿಸಿದರು ಯಾವ ಪ್ರಾಣಿ ಇರಬಹುದು? ಅಂತೆಲ್ಲಾ ಕುತೂಹಲ! ನಮ್ಮನ್ನಾವರಿಸಿತು, ಬಳಿಕ ನಮ್ಮ ಮಾರ್ಗದರ್ಶಿಯನ್ನ ಕೇಳಲಾಗಿ ಅದು ಕಡವೆಯ ಕೂಗು ಅಂತ ಗೊತ್ತಾದ ಮೇಲೆ ನಿಟ್ಟುಸಿರು ಬಿಟ್ಟು ಚಾರಣ ಮುಂದುವರೆಸಿದೆವು.

ಚಾರಣ ಆರಂಭಿಸಿ ಸುಮಾರು ಒಂದೂಕಾಲು ತಾಸು ಆಗಿತ್ತು ದೂರದಲ್ಲೆಲ್ಲೊ ನೀರು ಹರಿವಿನ ಸದ್ದು ಸಣ್ಣದಾಗಿ ಕೇಳಿಸುತಿತ್ತು, ಕೆಲವು ನಿಮಿಷಗಳ ಬಳಿಕ ಆ ಸದ್ದು ನಮ್ಮ ಕಿವಿಗೆ ಜೋರಾಗಿ ಕೇಳಿಸುತಿತ್ತು, ಹಾದಿಯ ಇಕ್ಕೆಲಗಳಲ್ಲಿ ಸಣ್ಣ ಬಿದಿರು ಮರಗಳು (ಸುಮಾರು ಒಂದೂವರೆ ತಾಸಿನ ಚಾರಣದ ಬಳಿಕ ಬಂಡಾಜೆ ಹೊಳೆಯ ನೀರು ಹರಿವಿನ ಶಬ್ದ ಹಾಗೂ ಹಾದಿಯ ಅಕ್ಕ ಪಕ್ಕ ಸಣ್ಣ ಸಣ್ಣ ಬಿದಿರು ಮೆಳೆಗಳು ಇವಿಷ್ಟು ಸಾಕು ನಾವು ಸರಿಯಾದ ಹಾದಿಯಲ್ಲಿದ್ದೀವಿ ಎಂದು ತಿಳಿಯಲು) ಅಲ್ಲೊಂದು ಅಡ್ಡಲಾಗಿ ಸಿಕ್ಕಿದ ಚಿಕ್ಕ ನೀರಿನ ಹಳ್ಳ ದಾಟಿ ಬಂಡಾಜೆಯ ಹೊಳೆ ಬಳಿ ಬಂದೆವು.

ಬಹುತೇಕ ಚಾರಣಿಗರು ಹಾದಿ ತಪ್ಪೊದೇ ಇಲ್ಲಿ ಹೊಳೆ ದಾಟಿ ಏರುಹಾದಿಯಲ್ಲಿ ಹೋಗದೇ ಹೊಳೆಜಾಡನ್ನಿಡಿದು ಹಾದಿ ತಪ್ಪುತ್ತಾರೆ, ಹೊಳೆ ಜಾಡು ಜಲಪಾತದ ತಳಕ್ಕೆ ಕರೆದೋಯ್ದರೆ, ಹೊಳೆ ದಾಟಿದ ನಂತರ ಸಿಗುವ ಏರುಹಾದಿಯಲ್ಲಿ ಸಾಗಿದರೆ ಜಲಪಾತದ ತುಟ್ಟ ತುದಿಗೆ ತಲುಪಬಹುದು.

ನಮ್ಮ ಮಾರ್ಗದರ್ಶಿ ದೂರದಲ್ಲಿ ನಿಂತು ನಮ್ಮನ್ನು "ಬನ್ನಿ" ಎಂದು ಸನ್ನೆ ಮಾಡಿ ಸಂತೋಷ್ ಜೊತೆ ಕಾಡಿನೊಳಗೆ ಹೊರಟರು, ನಾನು ಮತ್ತು ಗಜೇಂದ್ರ ಅವರನ್ನು ಹಿಂಬಾಲಿಸಲು ಸ್ವಲ್ಪ ತಡವಾದ್ದರಿಂದ ಅವರು ಎತ್ತ ಹೋದರು ಅಂತ ಗೊತ್ತಾಗ್ಲೇ ಇಲ್ಲ, ಜೋರಾಗಿ ಕೂಗಿದರೂ ನಮ್ಮ ಕೂಗು ಅವರಿಗೆ ತಲುಪದೆ ಅವರ ಸುಳಿವು ಸಿಗದಂತ್ತಾಯಿತು, ಕೂಗುತ್ತ.. ಕೋಗುತ್ತ.. ಸ್ವಲ್ಪ ಹಾಗೇ ಮುನ್ನಡೆದೆವು ದೂರದಲ್ಲಿ ಸಂತೋಷ್ ಒಂದು ಮರದ ಕೆಳಗೆ ನಿಂತು ತಮ್ಮ ಕ್ಯಾಮೆರದಲ್ಲಿ ಏನನ್ನೋ ಸೆರೆಹಿಡಿಯುತ್ತಿದ್ದರು, ಹತ್ತಿರ ಹೋಗಿ ನೋಡಿದರೆ ಹಲವಾರು ಕಲ್ಲಿನ ನಾಗರಶಿಲ್ಪಗಳು ಮತ್ತು ಅಲ್ಲೆಲ್ಲಾ ನಿಧಿಗೋಷ್ಕರ ಗುಂಡಿ ತೆಗೆದ ಕುರುಹುಗಳು, ನಮಗೆ ಕುತೂಹಲ! ಈ ದಟ್ಟ ಕಾಡಿನೊಳಗೆ ನಾಗರಶಿಲ್ಪಗಳು ಹೇಗೆ ಬಂದವು? ಅವು ಯಾವ ಕಾಲದವೋ? ಗೊತ್ತಿಲ್ಲ, ಬಳಿಕ ಕೆಲವು ಛಾಯಾಚಿತ್ರಗಳನ್ನು ನನ್ನ ಕ್ಯಾಮೆರಾದಲ್ಲಿ ಸೆರೆಹಿಡಿದು ಪುನಃ ಹೊಳೆಯ ಬಳಿ ಬಂದೆವು, ಆಗಲೇ ತುಂಬಾ ಹೊತ್ತು ಕಳೆದಿದ್ದರಿಂದ ಹೊರಡಲು ನಿರ್ಧರಿಸಿ ಬೆನ್ನುಚೀಲವನ್ನು ಹೆಗಲಿಗೇರಿಸಿ ಹೊಳೆ ದಾಟಿ ಏರು ಹಾದಿ ಹಿಡಿದು ಹೊರಟೆವು.

ಮುಂದಿನ ಹಾದಿಯೆಲ್ಲಾ ಮಳೆಕಾಡು, ದಟ್ಟ ಅಡವಿಯ ದುರ್ಗಮ ಹಾದಿಯಲ್ಲಿ ಬೃಹದಾಕಾರದ ಮರಗಳ ನಡುವೆ ಪಕ್ಷಿಗಳ ಚಿಲಿಪಿಲಿ ಕೂಗಿನ ಇಂಪನ್ನು ಆಲಿಸಿ ಚಾರಣ ಮಾಡುತ್ತಿದ್ದ ನಮಗೆ ನಿಜಕ್ಕೂ ಆ ಘಳಿಗೆ ಸದಾ ಕಾಲ ನಮ್ಮ ನೆನಪಿನಲ್ಲಿ ಉಳಿಯುವಂತ್ತಿತ್ತು, ಸತತ ಒಂದು ಘಂಟೆಯ ಸುಧೀರ್ಘ ಚಾರಣದ ನಂತರ ದಟ್ಟ ಕಾಡನ್ನು ಬಿಟ್ಟು ಬೋಳುಗುಡ್ಡ ಪ್ರದೇಶಕ್ಕೆ ಆಗಮಿಸಿದೆವು.


ಬಂಡಾಜೆಯ ಕಣಿವೆಯಲ್ಲಿ...


ಅಲ್ಲಿಂದ್ದಲೇ ನಮ್ಮ ಎಡಕ್ಕೆ ಬಂಡಾಜೆ ಜಲಪಾತವು ದರ್ಶನ ಕೊಟ್ಟಿತ್ತು, ಆಗ ನಮಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ, ಬಿಸಿಲಿನ ಝಳ ತಾಳಲಾರದೇ ಅಲ್ಲೊಂದು ಚಿಕ್ಕ ಮರವನ್ನು ಆಶ್ರಯಿಸಿ ವಿಶ್ರಾಂತಿಗೋಷ್ಕರ ನೆಲಕ್ಕೊರಗಿ ನಂತರ ಜೊತೆಯಲ್ಲಿ ತಂದಿದ್ದ ಸ್ವಲ್ಪ ಬಿಸ್ಕತ್ತು ತಿಂದು ನೀರು ಕುಡಿದ ಬಳಿಕ ಬಳಲಿ ಬೆಂಡಾಗಿ ಹೋಗಿದ್ದ ನಮ್ಮ ದೇಹಕ್ಕೆ ಮರುಜೀವ ಬಂತು, ಜಲಪಾತದ ಸೌಂದರ್ಯವೇನೋ ನಮಗೆ ಅತ್ಯಂತ ಸನಿಹದಲ್ಲೇ ಕಂಡರೂ ಕೂಡ ಜಲಪಾತದ ತುದಿ ತಲುಪಲು ಅಲ್ಲಿಂದ್ದ ನಾವು ತೆಗೆದುಕೊಂಡ ಸಮಯ ಒಂದು ತಾಸು.


ಬಂಡಾಜೆ ಜಲಪಾತ


ಬಂಡಾಜೆ ಕಣಿವೆಯ ಸೊಬಗನ್ನು ನೋಡುತ್ತ ಒಂದು ಕ್ಷಣ ಮೊಕವಿಸ್ಮಿತನಾದೆ, ಜಲಪಾತದ ಮೇಲಿಂದ ಒಮ್ಮೆ ಕೆಳಕ್ಕೆ ಕಣ್ಣಾಯಿಸಿದಾಗ ಮೇಲಿಂದ ಸುಮಾರು ಇನ್ನೂರು ಅಡಿ ಆಳಕ್ಕೆ ಜಲಪಾತದ ನೀರು ದುಮ್ಮಿಕುತ್ತಿದ್ದ ಪರಿಯಂತೂ ಅದ್ಬುತ, ಸ್ವಲ್ಪ ಬಲಕ್ಕೆ ಕಣ್ಣಾಯಿಸಿದಾಗ ದೂರದಲ್ಲಿ "ಗಡಾಯಿಕಲ್ಲು" ಬೆಟ್ಟ ದರ್ಶನ ಕೊಟ್ಟಿತು, ಅಷ್ಟೊತ್ತಿಗಾಗಲೇ ಇನ್ನೊಂದು ಚಾರಣಿಗರ ಗುಂಪು (ರಾಖಿ ಬಳಗ) ನಾವಿದ್ದ ಸ್ಥಳಕ್ಕೆ ಆಗಮಿಸಿತು, ಬಂಡಾಜೆಯ ನೀರಿನಲ್ಲಿ ಜಲಕ್ರೀಡೆಯಾಡುವ ಮನಸಾಗಿ ಗಜೇಂದ್ರ ಮತ್ತು ಸಂತೋಷ್ ನೀರಿಗೆ ಧುಮುಕಿದರು, ಮಂಜುಗಡ್ಡೆಯಂತೆ ಕೊರೆಯುತ್ತಿದ್ದ ನೀರಿನಲ್ಲಿ ಇಳಿಯಲು ತುಂಬಾ ಸಮಯ ತಗೊಂಡು ಹೇಗೋ ಮನಸು ಮಾಡಿ ನೀರಿಗೆ ಇಳಿದೆ.

ಅಬ್ಬಾ! ಕ್ಷಣಾರ್ಧದಲ್ಲಿ ದೇಹವೆಲ್ಲ ಮರಗಟ್ಟಿದ ಅನುಭವ, ಇನ್ನೂ ಸ್ವಲ್ಪ ಹೊತ್ತು ಹೀಗೆ ಇದ್ದರೆ "ಐಸ್ ಕ್ಯಾಂಡಿ" ಆಗುವುದು ಖಚಿತ ಎಂದುಕೊಂಡು ನೀರಿನಿಂದ ಮೇಲೆದ್ದು ಬಂದರೂ ಅವರು ಮಾತ್ರ ಎಮ್ಮೆ ಥರಾ ನೀರಿನಲ್ಲಿ ಒದ್ದಾಡುತ್ತಿದ್ದರು.


ನಮ್ಮ ಶಿಭಿರ

ಕೊನೆಗೆ ಎಲ್ಲರೂ ಸೇರಿ ಟೆಂಟ್ ಸಿದ್ದಪಡಿಸಿ ತಾಳಹಾಕುತ್ತಿದ್ದ ಹೊಟ್ಟೆಗೆ ಎರಡೆರಡು ಚಪಾತಿ ಇಳಿಸಿ ಹೊರಟೆವು ಸೂರ್ಯಾಸ್ತಮದ ಸೊಬಗು ಸವಿಯಲು...


ಸೂರ್ಯಾಸ್ತಮದ ವಿಹಂಗಮ ನೋಟ



ಸಂಜೆಯಾಗುತ್ತಲೇ ತನ್ನ ಸುಂದರವಾದ ಚೆಲುವನ್ನು ನಮ್ಮ ಕಣ್ತುಂಬಿಸಿ ತನ್ನ ಲೋಕಕ್ಕೆ ಮರಳುತ್ತಿದ್ದ ಸೂರ್ಯನನ್ನು ಬೀಳ್ಕೊಟ್ಟು ಟೆಂಟ್ ಬಳಿ ಬರುವಷ್ಟರಲ್ಲೇ ಬೆಳಕು ಇನ್ನಿಲ್ಲದಂತೆ ಮಾಯವಾಗಿ ಕತ್ತಲು ಆವರಿಸತೊಡಗಿತು, ರಾಖಿ ಅಂಡ್ ಗ್ರೂಪ್ಸ್ ಕೂಡ ನಮ್ಮ ಟೆಂಟ್ ಪಕ್ಕದಲ್ಲಿಯೇ ಮಲಗಲು ವ್ಯವಸ್ಥೆ ಮಾಡುತ್ತಿದ್ದರು, ಸಂಪೂರ್ಣ ಕತ್ತಲಾಯಿತು ನಮ್ಮ ಮಾರ್ಗದರ್ಶಿ "ಕುನ್ಯಾ" ಒಣ ಸೌದೆಯನ್ನು ಒಂದೆಡೆ ರಾಶಿ ಮಾಡಿ ಶಿಭಿರಾಗ್ನಿ ಹಾಕಿಯೇ ಬಿಟ್ಟರು, ನಾನು ಮತ್ತು ಗಜೇಂದ್ರ ಇಬ್ಬರೂ ಸೇರಿ ಒಲೆ ಮುಂದೆ ಕುಳಿತು ಬೇಗನೆ ನೂಡಲ್ಸ್ ತಯಾರಿಸಿದ ನಂತರ ಅದೇ ಒಲೆ ಮೇಲೆ ರಾಖಿ ಗ್ರೂಪ್ ಅಡುಗೆ ಸಿದ್ದಪಡಿಸುತ್ತಿದ್ದರು.

ಹೀಗೆ ನಾನು ಮತ್ತು ಅಂಜುಗೌಡ ಪರಸ್ಪರ ಮಾತನಾಡುತ್ತಿದ್ದ ವೇಳೆ ಸುಮಾರು ಒಂದೂವರೆ ವರ್ಷದ ಹಿಂದೆ ನನ್ನ ಸ್ನೇಹಿತನ ಮದುವೆಗೆಂದು ಹೋದ ಸಂದರ್ಭದಲ್ಲಿ ನನ್ನ ಅಣ್ಣ ಇವರಲ್ಲಿ ಕೆಲವರನ್ನು ಪರಿಚಯಿಸಿದ್ದು ನೆನಪಾಯಿತು, ಆದರೆ ಒಂದೇ ಒಂದು ಬಾರಿ ಮುಖ ಪರಿಚಯವಾದ್ದರಿಂದ ಬಹು ಬೇಗನೆ ಗುರುತು ಸಿಕ್ಕಿರಲಿಲ್ಲ, ಆದರೆ ರಾಖಿಯನ್ನು ಮಾತ್ರ ಎಲ್ಲೋ ನೋಡಿರಬಹುದು ಎಂದು ಮನಸಿನಲ್ಲಿ ಅನ್ನಿಸುತಿತ್ತು, ಏಕೆಂದರೆ ಸ್ನೇಹಿತನ ಅರತಕ್ಷತೆಯಲ್ಲಿ ಆರ್ಕೆಸ್ಟ್ರಾ ಸ್ಟೇಜಿಗೆ ಹೋಗಿ "ಮುಂಗಾರು ಮಳೆ" ಚಿತ್ರದ "ಅನಿಸುತಿದೆ ಯಾಕೊ ಇಂದು" ಗೀತೆಯನ್ನು ಸೊಗಸಾಗಿ ಹಾಡಿದ್ದರು.

ಎರಡು ತಂಡವಾಗಿ ಬಂದ ನಾವು ನಂತರ ಒಂದು ತಂಡವಾಗಿ ಮಾರ್ಪಟ್ಟಿತು, ಬಳಿಕ ಎಲ್ಲರು ಜೊತೆಗೆ ಊಟ ಮುಗಿಸಿ ಹರಟೆ ಹೊಡೆಯುತ್ತಾ ಶಿಭಿರಾಗ್ನಿ ಮುಂದೆ ಕುಳಿತು ತುಂಬಾ ಸಮಯ ಕಳೆದವು, ದೂರದಲ್ಲಿ ಯಾವುದೋ ಊರಿನ ದೀಪಗಳು ಪ್ರಕಾಶಮಾನವಾಗಿ ಹೊಳೆಯುತ್ತಿದ್ದವು ನಮ್ಮ ಮಾರ್ಗದರ್ಶಕರನ್ನು ಕೇಳಲಾಗಿ ಅದು "ಉಜಿರೆ" ಅಂತಾ ಗೊತ್ತಾಯಿತು, ನಂತರ ಮಲಗಲು ನಿರ್ಧರಿಸಿ ಟೆಂಟ್ ಒಳಗೆ ಹೋದಾಗ ಸಮಯ ರಾತ್ರಿ ಹನ್ನೊಂದಾಗಿತ್ತು.

ಸುಮಾರು ರಾತ್ರಿ ೩ ರ ಸಮಯದಲ್ಲಿ ಎಚ್ಚರಗೊಂಡ ನಾನು ನಿದ್ದೆ ಬರದೆ ಟೆಂಟ್‌ನಿಂದ ಹೊರಬಂದು ಶಿಭಿರಾಗ್ನಿ ಮುಂದೆ ಕುಳಿತೆ ಅಷ್ಟೊತ್ತಿಗೆ ನಿದ್ದೆ ಬರದೆ ಅಂಜುಗೌಡ ಕೂಡ ಎದ್ದು ಬಂದ್ರು, ನಾವಿಬ್ಬರೆ ಹೀಗೆ ಸುಮಾರು ಹೊತ್ತಿನ ತನಕ ಮಾತನಾಡುತ್ತ ಸಮಯ ಕಳೆದೆವು, ಬೆಳಗಾಗಲು ಇನ್ನೂ ಸಾಕಷ್ಟು ಸಮಯವಿದ್ದುದ್ದರಿಂದ ಪುನಃ ನಾನು ಟೆಂಟೊಳಗೆ ಹೋಗಿ ಮಲಗಿದೆ.

ಬೆಳಿಗ್ಗೆ ೬:೪೫ ರ ಸಮಯ
ಗಜೇಂದ್ರ: ಮೋಹನ್ ಬೇಗ ಏಳಿ ಹೊತ್ತಾಯ್ತು...ನಾವು ಸೂರ್ಯೋದಯ ನೋಡಲು ಗುಡ್ಡದ ಮೇಲೆ ಹೋಗ್ತಾಯಿದ್ದೀವಿ ಬೇಗ ಬನ್ನಿ ಎಂದು ತಿಳಿಸಿ ಸಂತೋಷ್‌ನನ್ನು ಕರ್ಕೊಂಡು ಸೂರ್ಯೋದಯ ವೀಕ್ಷಣೆಗೆ ಸಣ್ಣ ಗುಡ್ಡ ಹತ್ತಲು ಹೊರ‍ಟರು, ತಕ್ಷಣವೇ ನಾನು ಕೂಡ ಕೈನಲ್ಲಿ ಕ್ಯಾಮೆರ ಹಿಡಿದು ಅವರನ್ನು ಹಿಂಬಾಲಿಸಿ ಹೊರಟೆ, ಸಮಯಕ್ಕೆ ಸರಿಯಾಗಿ ಹೇಗೋ ಗುಡ್ಡದ ಮೇಲೆ ಇದ್ದೆವು ಆದರೆ ಕಾರ್ಮೋಡಗಳ ಕಣ್ಣಾಮುಚ್ಚಾಲೆ ಆಟದಿಂದ ಬಂದ ದಾರಿಗೆ ಸುಂಕವಿಲ್ಲದೆ ಗುಡ್ಡ ಇಳಿದು ವಾಪಾಸು ಟೆಂಟ್ ಹಾಕಿದ್ದ ಜಾಗಕ್ಕೆ ಮರಳಿ ಬಂದೆವು.


ಸೂರ್ಯೋದಯ ನೋಡಲು ಹೊರಟಾಗ ನೀಲಾಕಾಶದಲ್ಲಿ ಚಂದ್ರ ಕಂಡಿದ್ದು ಹೀಗೆ.


ಬಂಡೆಗಳ ಬಳಿ ಸೃಷ್ಟಿಯಾಗಿದ್ದ ಕಿರು ಜಲಪಾತಕ್ಕೆ ಬೆಳ್ಳಂಬೆಳಗೆ ಮೈಯೊಡ್ಡಿ ನಿಂತಿದ್ದ ಕೆಲವು ಸ್ನೇಹಿತರು, ನಾನು ಕೂಡ ಇವರಿಗೇನು ಕಮ್ಮಿಯಿಲ್ಲ ಎಂದು ಮೈಯೊಡ್ಡಿ ನಿಂತ ಆ ಮಧುರ ಕ್ಷಣ ಮರೆಯುವುದುಂಟೆ?


ಅಡುಗೆ ಸಿದ್ದಪಡಿಸುತ್ತಿರುವುದು (ನಾನು ಮತ್ತು ಗಜೇಂದ್ರ)

ಬಳಿಕ ಬೆಳಗಿನ ತಿಂಡಿಗೋಸ್ಕರ ಜೊತೆಗೆ ತಂದಿದ್ದ MTR ನ ಪಲಾವ್ ತಿಂದು ಮುಗಿಸಿ ಟೆಂಟ್ ಬಿಚ್ಚಿ ಬೆನ್ನು ಚೀಲವನ್ನು ಹೆಗಲಿಗೇರಿಸಿ "ಬಲ್ಲಾಳರಾಯನ ದುರ್ಗ"ಕ್ಕೆ ಚಾರಣ ಹೊರ‍ಡಲು ಸಿದ್ದವಾಗಿ ನಿಂತೆವು.


ನಮ್ಮ ತಂಡ

ಬಂಡಾಜೆಯಿಂದ ಬಲ್ಲಾಳರಾಯನದುರ್ಗಕ್ಕೆ ಸುಮಾರು ಎರಡು ಗಂಟೆಯ ಸುಧೀರ್ಘ ಚಾರಣ, ಬಂಡಾಜೆಯ ಉತ್ತರಕ್ಕೆ ಕಾಣುವ ಗುಡ್ಡವನ್ನು ಎಡಬದಿಯಲ್ಲೆ ಹತ್ತಿ ಸಾಗಬೇಕು ನಂತರ ಎಡಕ್ಕೆ ಕಾಣುವ ಶೋಲಾ ಕಾಡಂಚಿನಲ್ಲೆ ಮುಂದೆ ಸಾಗಿದರೆ "V" ಆಕಾರದ ದಿಬ್ಬ ಕಾಣ ಸಿಗುತ್ತದೆ ದಿಬ್ಬ ದಾಟಿ ಬಲಕ್ಕೆ ಚಾರಣ ಮಾಡಿದರೆ ದೂರದಿಂದಲೇ ಬಲ್ಲಾಳರಾಯನಕೋಟೆ ಧರ್ಶನವಾಗುತ್ತದೆ, ಬಂಡಾಜೆಯಿಂದ ಬಲ್ಲಾಳರಾಯನದುರ್ಗಕ್ಕೆ ಮಾರ್ಗದರ್ಶಿಯ ಅವಶ್ಯಕತೆ ಇರುವುದಿಲ್ಲ ಎಂಬುದು ನನ್ನ ಅನಿಸಿಕೆ,


ಬೆಳಿಗ್ಗೆ ೯:೩೦ ಕ್ಕೆ ಹೊರಟ ನಾವು ಉತ್ತರ ದಿಕ್ಕಿಗೆ ಇರುವ ಗುಡ್ಡವನ್ನು ಹತ್ತಲು ಶುರು ಮಾಡಿದೆವು ತುದಿ ತಲುಪುವಷ್ಟರಲ್ಲಿ ಅರ್ಧ ತಾಸು ಬೇಕಾಯ್ತು, ನಮ್ಮ ಹಿಂದೆ ಇನ್ನು ಬರುವವರಿದ್ದರು ಅಲ್ಲಿಯ ತನಕ ವಿಶ್ರಾಂತಿಗೆಂದು ಮರದ ಕೆಳಗೆ ನೆಲಕ್ಕೊರಗಿದೆವು ಅಷ್ಟೊತ್ತಿಗೆ ಹಿಂದೆ ಬರುತ್ತಿದ್ದ ಚಾರಣ ಮಿತ್ರರು ಕೂಡ ಬಂದರು, ನಮ್ಮ ಮಾರ್ಗದರ್ಶಿ "ಕುನ್ಯಾ" ಇನ್ನು ನೀವು ಆರಾಮವಾಗಿ ಹೋಗಬಹುದು ನನ್ನ ಅಗತ್ಯವಿರುವುದಿಲ್ಲ ಎಂದು ತಿಳಿಸಿ ಚಾರಣ ಶುಲ್ಕ ೭೦೦ ರೂಪಾಯಿ ಪಡೆದು ಹೊರಟರು, (ಹವ್ಯಾಸಿ ಚಾರಣಿಗರಿಗೆ ಗೌಡ್ರ ಮನೆಯಿಂದ ಕೇವಲ ಇಪ್ಪತ್ತು ನಿಮಿಷದ ಚಾರಣಕಷ್ಟೆ ಮಾತ್ರ ಮಾರ್ಗಧರ್ಶನದ ಅವಶ್ಯಕತೆ ಇದೆ, ಇನ್ನು ಮುಂದಕ್ಕೆ ಸರಿಯಾದ ಮಾಹಿತಿ ಗೊತ್ತಿದ್ರೆ ನಿಸ್ಸಂದೇಹವಾಗಿ ಬಂಡಾಜೆ ಜಲಪಾತ -ಬಲ್ಲಾಳರಾಯನ ದುರ್ಗ ತಲುಪಬಹುದು)


ಪಯಣದ ಹಾದಿಯಲ್ಲಿ...

ಚಾರಣದ ಹಾದಿಯುದ್ದಕ್ಕೂ ಎತ್ತ ನೋಡಿದರೂ ಕಾಣುವ ಬೋಳು ಬೆಟ್ಟಗಳ ಸುಂದರ ರಮಣೀಯ ದೃಶ್ಯ, ಸುಮಾರು ಇಪ್ಪತ್ತು ನಿಮಿಷಗಳ ಬಳಿಕ ಅಡ್ಡಲಾಗಿ ಹಾದು ಹೋಗಿದ್ದ ಒಂದು ಸಣ್ಣ ದಿಬ್ಬ ಅದನ್ನ ಯಾರೋ ಕಡಿದು "v" ಅಕಾರದಲ್ಲಿ ಜಾಗ ಮಾಡಿದಂತಿತ್ತು, ದಾಟಿ ಮುಂದೆ ಬಂದಾಗ ಎದುರಿಗಿದ್ದ ಸುಂದರ ಬೋಳು ಪರ್ವತ ಅಲ್ಲಿಯೂ ಕೂಡ ಒಂದೈದು ನಿಮಿಷ ಸುಂದರ ಪ್ರಕೃತಿಯ ನೋಟವನ್ನು ಕ್ಯಾಮೆರದಲ್ಲಿ ಸೆರೆಹಿಡಿದು ಮತ್ತೆ ಮುಂದುವರಿದೆವು.


ದೂರದಿಂದಲೇ ಬೆಟ್ಟದ ಮೇಲೆ ಕೋಟೆಯ ದರ್ಶನವಾಯಿತು, ಸಹ ಚಾರಣ ಮಿತ್ರರು "ಅಲ್ ನೋಡ್ರೋ..." ಕೋಟೆ ಕಾಣಿಸ್ತಾಯಿದೆ ಅದೇ ಕೋಟೆ ಎಂದು ಬೊಬ್ಬೆಯಿಡುತ್ತಿದ್ದರು.


ದೂರದಲ್ಲಿ ಬಲ್ಲಾಳರಾಯನ ಕೋಟೆಯ ದೃಶ್ಯ

ನಡೆವ ಹಾದಿಯಲ್ಲಿ ಸಣ್ಣ ಪುಟ್ಟ ಮರ ಗಿಡಗಳು ಇಲ್ಲದಿದ್ದರಿಂದ ಬಿಸಿಲ ಬೇಗೆ ತಡೆದುಕೊಳ್ಳುವುದು ಅಸಾಧ್ಯವೆನಿಸುತಿತ್ತು, ಹಾದಿಯ ಎಡಕ್ಕೆ ಕುದ್ರೆಮುಖದ ಸುಂದರ ಪರ್ವತ ಶ್ರೇಣಿಯ ನಡುವೆ ಯಾವುದೋ ಗಿರಿ ಕಂದರದಿಂದ ಸಣ್ಣ ಎಳೆಯಂತೆ ಬೀಳುತಿದ್ದ ಜಲಧಾರೆ ನಮ್ಮ ಮನಸಿಗೆ ಮುದನೀಡುತಿದ್ದರೆ ಎದುರಿಗೆ ಕಾಣಿಸುತ್ತಿದ್ದ ಕೋಟೆ ನಮ್ಮನ್ನು ಅಪ್ಪಿಕೊಳ್ಳುವಂತೆ ಸ್ವಾಗತಿಸುತಿತ್ತು, ಅಂತೂ ಕೋಟೆ ಹೊಕ್ಕಾಗ ಮದ್ಯಾಹ್ನ ಸಮಯ ಹನ್ನೆರಡಾಗಿತ್ತು.


ಬಲ್ಲಾಳರಾಯನ ಕೋಟೆಯ ಮೇಲೆ...



ಜಂಪಿಂಗ್‌ನಲ್ಲಿ ನಿರತರಾಗಿರುವ ವಿನಯ್, ಗಜೇಂದ್ರ ಮತ್ತು ಭರತ್


ಸುತ್ತಲೂ ಆಳೆತ್ತರದ ಗೋಡೆ ಒಳಗೆಲ್ಲ ಪಾಳು ಜಾಗ ಯಾವುದೋ ಒಂದು ಮೂಲೆಯಲ್ಲಿ ಅನಾಥವಾಗಿ ಬಿದ್ದಿದ್ದ ಬೀಸುವ ಕಲ್ಲು, ಹುಲಿಯೋ ಅಥವಾ ಚಿರತೆಯ ದಾಳಿಗೆ ಒಳಗಾದ ಯಾವುದೋ ಪ್ರಾಣಿಯ ತಲೆ ಬುರುಡೆ ಮತ್ತು ಮೂಳೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ದೃಶ್ಯ ಒಂದೆಡೆಯಾದರೆ, ಎಲ್ಲೋ ದೂರದಲ್ಲಿ ನಮ್ಮ ಕಣ್ಣಿಗೆ ಬಿದ್ದ ಗಡಾಯಿಕಲ್ಲು, ಅಮೇದಿಕಲ್ ಮತ್ತು ಎತ್ತಿನಭುಜ ಪರ್ವತಗಳ ನೋಟವನ್ನಂತೂ ಮರೆಯಲು ಸಾಧ್ಯವಿಲ್ಲ, ಇಂಚಿಂಚ್ಚು ಬಿಡದೆ ಸುತ್ತಾಡಿದ ನಂತರ ಎಲ್ಲರೂ ಒಟ್ಟಾಗಿ ಕುಳಿತು ಊಟ ಮುಗಿಸಿ ಹೊರಡಲು ಸಿದ್ದವಾದೆವು ,ನಮ್ಮ ಗುಂಪಿನ ಸಹ ಚಾರಣಿಗ ವಿನಯ್ ಇದಕ್ಕೂ ಮುಂಚೇನೆ ಒಂದು ಬಾರಿ ಇಲ್ಲಿಗೆ ಬಂದಿದ್ರಂತೆ ಹಾಗಾಗಿ ಇಲ್ಲಿಂದ ಅವರೇ ನಮಗೆ ಮಾರ್ಗದರ್ಶಕರಾಗಿ ಮುನ್ನಡೆದರು ನಾವು ಅವರನ್ನು ಹಿಂಬಾಲಿಸಿ ಹೊರಟಾಗ ಸಮಯ ಮದ್ಯಾಹ್ನ ೧:೧೫ ಆಗಿತ್ತು.


ಬಲ್ಲಾಳರಾಯನ ದುರ್ಗದಿಂದ ತೆಗೆದ ದೃಶ್ಯ

ಬಂಡಾಜೆಯಿಂದ ಬಂದ ದಾರಿಯಲ್ಲೆ ವಾಪಾಸ್ ಬಂದು ಬಲಕ್ಕೆ ಹಾದು ಹೋಗಿದ್ದ ಹಾದಿಯಲ್ಲಿ ಕೆಳಗಿಳಿಯತೊಡಗಿದೆವು, ಚಾರಣ ಶುರುಮಾಡಿದ ನಲವತ್ತೈದು ನಿಮಿಷಗಳ ಬಳಿಕ ನಮಗೆ ಎದುರಾದದ್ದು ಕವಲಾದ ಹಾದಿ ಎಡಹಾದಿಯಲ್ಲಿ ಹೋದರೆ ಮಲ್ಲಿಕಾರ್ಜುನ ದೇವಸ್ಥಾನ ಮಾರ್ಗವಾಗಿ ಸುಂಕಶಾಲೆ ತಲುಪಬಹುದು, ಬಲ ಹಾದಿ ಹಿಡಿದು ಹೊರಟರೆ ಓರಿಕಾನ್ ಎಸ್ಟೇಟ್ ಮಾರ್ಗವಾಗಿ ಸುಂಕಶಾಲೆ ತಲುಪಬಹುದು, ವಿನಯ್‌ ಇಲ್ಲೇ ಸಮೀಪದಲ್ಲಿ "ರಾಣಿ ಬಾಗಿಲು" ಇದೆ ಬನ್ನಿ ತೋರಿಸ್ತೀನಿ ಅಂದ್ರು, ಕೆಲ ಮಂದಿ ಮಾತ್ರ ಅವರನ್ನು ಹಿಂಬಾಲಿಸಿ ಹೊರಟೊ ಸುಸೈಡ್ ಪಾಯಿಂಟ್‌ನಂತಿದ್ದ ಆ ಜಾಗದಿಂದ ಕುದ್ರೆಮುಖದ ಸಾಲು ಸಾಲು ಪರ್ವತಗಳ ಭವ್ಯ ರಮಣೀಯ ದೃಶ್ಯ ಅದ್ಭುತವಾಗಿತ್ತು, ಮತ್ತೆ ವಾಪಸಾಗಿ ಎಸ್ಟೇಟ್ ಹಾದಿ ಹಿಡಿದು ಹೊರಟೆವು ಸ್ವಲ್ಪ ಹೊತ್ತಿನ ಬಳಿಕ ಆ ಹಾದಿಯಲೆಲ್ಲ ಗಿಡಗೆಂಟೆಗಳು ಬೆಳೆದು ಇದು ಹಾದಿನಾ? ಅನ್ನೋ ಸ್ಥಿತಿ ನಿರ್ಮಾಣವಾಗಿತ್ತು, ತುಂಬಾ ವರ್ಷಗಳಿಂದ ಕಾಡುಪ್ರಾಣಿಗಳ ಹೊರತಾಗಿ ಮನುಷ್ಯರಾರೂ ಓಡಾಡಿರದ ಹಾದಿ ಅದು, ಇದೆಲ್ಲದರ ನಡುವೆ ಹೇಗೋ ನಮ್ಮ ಚಾರಣದ ಹಾದಿ ಸಾಗುತ್ತಲ್ಲೇ ಇತ್ತು.

ಹೀಗೆ ಸಾಗುತ್ತಿರುವಾಗ ಮತ್ಯಾವುದೋ ಹಾದಿ ಎಡಕ್ಕೆ ಇಳಿಜಾರಿನಲ್ಲಿ ಹಾದುಹೋಗಿತ್ತು ನಾವೆಲ್ಲ ನೇರ ಹಾದಿ ಬಿಟ್ಟು ಎಡ ಹಾದಿ ತುಳಿದು ವಿನಯ್‌ರವರನ್ನು ಹಿಂಬಾಲಿಸಿ ಸ್ವಲ್ಪ ದೂರ ಹೊರಟೆವು ಕ್ರಮೇಣ ಆ ದಾರಿ ಅಲ್ಲಿಗೆ ಮುಕ್ತಾಯಗೊಂಡಿತು, ಸಣ್ಣ ಬಯಲು ಪ್ರದೇಶದಂತಹ ಆ ಜಾಗ ಸುತ್ತಲೂ ಕಾಡು, ಕಾಡೆಮ್ಮೆಗಳು ಬಿದ್ದು ಒದ್ದಾಡಿದ ಗುರುತು ಬಿಟ್ಟರೆ ಬೇರೇನೂ ಕಾಣಿಸುತ್ತಿರಲಿಲ್ಲ ಕೆಲವು ಆಪ್ತ ಸ್ನೇಹಿತರು ವಿನಯ್‌ ಅವರನ್ನ "ಇವನ್ಯಾವನಲೇ ದಾರಿ ಗೊತ್ತೇನೊ? ದೊಡ್ಡದಾಗಿ ಕರ್ಕೊಂಡು ಬಂದು ಬಿಟ್ಟೆಯೆಲ್ಲಾ" ಅಂತೆಲ್ಲಾ ರೇಗಿಸುತ್ತಿದ್ದರು, ಎತ್ತರದ ಮರವನ್ನೇರಿದ್ರೆ ಯಾವುದಾದ್ರು ದಾರಿ ಕಾಣಿಸಬಹುದೇನೊ? ಅಂತ ನಮ್ಮ ವಿನಯ್ ತಡ ಮಾಡದೆ ಹೀರೊನಂತೆ ಅಲ್ಲೇ ಇದ್ದ ಒಂದು ಮರವನ್ನೇರಿದ್ರು, ಸುತ್ತಲೂ ನೋಡಿದ ವಿನಯ್ ಯಾವುದೇ ಪ್ರಯೋಜನವಿಲ್ಲ ಎಂಬಂತೆ ಸಪ್ಪೆ ಮೋರೆ ಮಾಡಿಕೊಂಡು ಮರದಿಂದ ಕೆಳಗಿಳಿದ್ರು.


ಮರವೇರಿ ದಾರಿ ಹುಡುಕುತ್ತಿರುವ ವಿನಯ್.

ಪುನಃ ವಾಪಾಸ್ ಕವಲಾದ ಹಾದಿಗೆ ಬಂದು ನೇರ ಹಾದಿ ಹಿಡಿದು "ಒಂದು ಕೈ ನೋಡಿಯೇ ಬಿಡೋಣ" ಎನ್ನುವಂತೆ ಗಿಡಗೆಂಟೆಗಳ ನಡುವೆ ಚಾರಣ ಮಾಡಿದೆವು, ಸ್ವಲ್ಪ ಹೊತ್ತಿನ ಬಳಿಕ ಎಲ್ಲರನ್ನು ಇಲ್ಲೆ ನಿಲ್ಲುವಂತೆ ಸೂಚಿಸಿ ದಾರಿ ಹುಡುಕಲು ಮರದ ಒಂದು ದೊಡ್ಡ ಕೊಂಟನ್ನಿಡಿದು ತ್ರಿವಿಕ್ರಮನಂತೆ ತಾವೊಬ್ಬರೆ ಮುನ್ನುಗ್ಗಿ ಹೋದ ವಿನಯ್ ತುಂಬಾ ಹೊತ್ತಾದ್ರು ಬರಲೇ ಇಲ್ಲ, ಇನ್ನೊಂದು ದಿನ ಕಾಡಲ್ಲಿ ಉಳಿಯುವ ಸಂದರ್ಭವೇನಾದ್ರು ಒದಗಿ ಬರಬಹುದಾ? ಅಂತಾ ನಾನು ಲೆಕ್ಕಚಾರಮಾಡಒಡಗಿದೆ.

ಅಷ್ಟರಲ್ಲಿ ವಿನಯ್ ವಾಪಾಸ್ ಬಂದು ದೂರದಲ್ಲಿ ಯಾವುದೋ ಮನೆ ತರಹ ಕಾಣ್ತಾ ಇದೆ ಬನ್ನಿ ಹೋಗೋಣ ಅಂದ್ರು, ಪುನಃ ಅವರನ್ನ ಹಿಂಬಾಲಿಸಿ ಹೊರಟೆವು ಸ್ವಲ್ಪ ಹೊತ್ತು ಸಾಗಿದ ಬಳಿಕ ನಾಯಿ ಬೊಗಳುತ್ತಿರುವ ಶಬ್ದ ನಮ್ಮ ಕಿವಿಗೆ ಬಿದ್ದ ಕೂಡಲೇ ಯಾವುದೋ ಮನೆಯಿರುವುದು ಖಚಿತವಾಯ್ತು, ಆ ಹಾದಿ ಅದ್ಯಾವುದೊ "ಭೂತ ಬಂಗಲೆ" ಥರಾ ಇದ್ದ ಎಸ್ಟೇಟೊಂದಕ್ಕೆ ನಮ್ಮನ್ನ ಕರೆದೋಯ್ತು, ಅಲ್ಲಿ ತೂಗು ಹಾಕಿದ್ದ ನಾಮಫಲಕ ನೋಡಿ ತಿಳಿಯಿತು ಇದೇ "ಓರಿಕಾನ್ ಎಸ್ಟೇಟ್" ಅಂತಾ, ಆ ಎಸ್ಟೇಟ್‌ನಲ್ಲಿ ಯಾರೂ ವಾಸವಿರಲಿಲ್ಲ ಅದನ್ನ ನೋಡಿಕೊಳ್ಳೋಕ್ಕೆ ಅಂತ ಪಕ್ಕದಲ್ಲೆ ಒಂದು ಚಿಕ್ಕ ವಾಸದ ಮನೆಯಿತ್ತು, ನಾಯಿ ಒಂದೇ ಸಮನೇ ಬೊಗಳುತ್ತಿದ್ದರಿಂದ ಆ ಮನೆಯಿಂದ ಹೊರಬಂದ ಚಿಕ್ಕ ಹುಡುಗನನ್ನು ಈ ದಾರಿ ಸುಂಕಶಾಲೆಗೆ ಹೋಗುತ್ತಾ? ಅಂತಾ ಕೇಳಿದಕ್ಕೆ ಹೂ! ನೇರ ದಾರೀಲಿ ಹೋದ್ರೆ ಸ್ವಲ್ಪ ಸಮಯ ಹಿಡಿಯುತ್ತೆ ಹೀಗೆ ಅಲ್ಲಿ ಬಲಗಡೆ ಕಾಣಿಸ್ತಾಯಿರೊ ಇಳಿಜಾರಿನಲ್ಲಿ ಹೋಗಿ ಸ್ವಲ್ಪ ಬೇಗ ಹೋಗಬಹುದು ಅಂತಾ ಸಲಹೆ ಕೊಟ್ಟ ಪುಣ್ಯಾತ್ಮ. ನಮ್ಮ ಬೆನ್ನು ಚೀಲದಲ್ಲಿದ್ದ ಬಿಸ್ಕತ್ ಪೊಟ್ಟಣಗಳನ್ನು ಆ ಹುಡುಗನಿಗೆ ಕೊಟ್ಟು ಇಳಿಜಾರಿನಲ್ಲಿ ಇಳಿದು ಹೊರಟೆವು ಅಲ್ಲೊಂದು ಅಡ್ಡಲಾಗಿ ಹರಿಯುತ್ತಿದ್ದ ನೀರಿನ ಹಳ್ಳ ಸಿಕ್ಕಿದ ಕೂಡಲೆ ಮನಸೋ ಇಚ್ಚೆ ನೀರು ಕುಡಿದು ಮುಖಕ್ಕೆ ನೀರೆರಿಚಿದಾಗ ಆಯಾಸವಾಗಿದ್ದ ನಮ್ಮ ಮೈಮನಗಳು ಹಗುರಾದವು, ತದ ನಂತರ ಡಾಂಬರ್ ರಸ್ತೆ ತಲುಪಿ ಚಾರಣವನ್ನು ಹಾಗೆ ಮುಂದುವರೆಸಿದೆವು.

ಹೊರ‍ನಾಡು - ಕೊಟ್ಟಿಗೆಹಾರ ರಸ್ತೆ ನಮಗೆ ಇನ್ನೇನು ಒಂದೆರಡು ಕಿ.ಮೀ ನ ಅಂತರ ಇದೆ ಅನ್ನುವಾಗ ಕಾಫಿ ತೋಟದ ಕೂಲಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಟೆಂಪೊವೊಂದು ನಮ್ಮನ್ನು ಹತ್ತಿಸಿಕೊಂಡು ಕೊಟ್ಟಿಗೆಹಾರ ತನಕ ಬಿಟ್ಟು ಹೋಯ್ತು, ಆದರೆ ಚಾಲಕ ಮಾತ್ರ ನಮ್ಮಿಂದ ನಯಾ ಪೈಸೆನೂ ಅಪೇಕ್ಷಿಸದೆ ಹೊರಟು ಹೋದ, ಅದೇ ನಮ್ಮ ಬೆಂಗಳೂರಿನ ಮಂದಿ ಆಗಿದ್ರೆ? ಮಲೆನಾಡಿಗರಿಗಿರೋ ಪ್ರೀತಿ ವಿಶ್ವಾಸ ನಮ್ಮ ರಾಜಧಾನಿ ಮಂದಿಗೆ ಇದ್ರೆ ಎಷ್ಟು ಚೆನ್ನ ಅಲ್ವಾ!

ನನಗೆ ಕೊಟ್ಟಿಗೆಹಾರ ಅಂದ್ರೆ ತುಂಬಾ ಇಷ್ಟ ಅಲ್ಲಿನ ನೀರ್‌ದೋಸೆ, ಮೆಣಸಿನಕಾಯಿ ಬಜ್ಜಿ ನೆನೆಸಿಕೊಂಡ್ರಂತೂ ಬಾಯಲ್ಲಿ ನೀರೂರುತ್ತೆ, ಬಂದ ತಕ್ಷಣ ನಾನು ಅದೇ ಕೆಲಸ ಮಾಡಿದ್ದು, ಬಳಿಕ ಊಟ ಮುಗಿಸಿ ಜೀಪ್‌ನಲ್ಲಿ ಮೂಡಿಗೆರೆಗೆ ಪ್ರಯಾಣಿಸಿದೆವು ಅಲ್ಲಿಂದ ರಾಖಿ ಗ್ರೂಪ್ಸ್ ಚಿಕ್ಕಮಗಳೂರಿಗೆ ಪ್ರಯಾಣಿಸಿದರೆ, ಗಜೇಂದ್ರ ಮತ್ತು ಸಂತೋಷ್ ಬೆಂಗಳೂರಿನ ಹಾದಿ ಹಿಡಿದು ಹೊರಟರು, ನಾನು ಮೈಸೂರಿನ ಬಸ್ ಬರೋವರೆಗೂ ಕಾದು ಬಸ್ ಬಂದ ಬಳಿಕ ಮೈಸೂರಿಗೆ ಪ್ರಯಾಣ ಬೆಳೆಸಿದ ನಂತರ ಮತ್ತೊಂದು ಬಸ್ನಲ್ಲಿ ಚೆನ್ನಪಟ್ಟಣ ತಲುಪಿ ಅಲ್ಲಿಂದ ಮನೆ ತಲುಪುವಷ್ಟರಲ್ಲಿ ಸಮಯ ಬೆಳಗಿನ ಜಾವ ೩:೩೦ ಆಗಿತ್ತು.

ಗುರುವಾರ, ಅಕ್ಟೋಬರ್ 14, 2010

ಅಮೇದಿಕಲ್ / ಮುಂಗಾರು ಚಾರಣ

ದಿನಾಂಕ: 03.07.2010, 04.07.2010 ಮತ್ತು 05.07.2010

ಎತ್ತರ: ಸಮುದ್ರ ಮಟ್ಟದಿಂದ ಸುಮಾರು ೧೨೫೦ ಮೀಟರ್.

ತಂಡ: ಗಜೇಂದ್ರ,ಚಂದಪ್ಪ (ಮಾರ್ಗದರ್ಶಿ) ಮತ್ತು ನಾನು ( ಮೋಹನ್).

ಚಾರಣದ ಅಂತರ : ೧೬ ಕಿ.ಮೀ + ೧೬ ಕಿ.ಮೀ.

******************************************************

ಗಜೇಂದ್ರರವರು ಕರೆ ಮಾಡಿ,
ಮೋಹನ್ ಎಲ್ಲಿಗಾದ್ರು ಚಾರಣಕ್ಕೆ ಹೋಗೊಣ್ವಾ?

ನಾನು: ಹೋಗೋಣ ಸಾರ್,

ಗಜೇಂದ್ರ: ಮೋಹನ್ ಎಲ್ಲಿಗೆ ಹೋಗೋಣ?

ನಾನು: ಪ್ಲಾನ್ ಮಾಡಿ ನಿಮಗೆ ಕರೆ ಮಾಡಿ ತಿಳಿಸ್ತೀನಿ ಸಾರ್,

ಗಜೇಂದ್ರ: ಸರಿ ಹಾಗೆ ಮಾಡಿ,

ನಾನು ಎಲ್ಲಿಗೆ ಹೋಗೋದು ಅಂತಾ ಯೋಚಿಸತೊಡಗಿದೆ,ಮುಂಗಾರು ಮಳೆ ಬೇರೆ ಕೊನೆಗೆ ಕರೆ ಮಾಡಿ ಎಡಕುಮರಿ ಚಾರಣದ ಬಗ್ಗೆ ಪ್ರಸ್ತಾಪಿಸಿದೆ, ಇದಕ್ಕೂ ಮೊದಲೂ ನಾನು ಎಡಕುಮರಿ ಚಾರಣ ಹೋಗಿದ್ದೀನಿ, ಸರಿ ಅಲ್ಲಿಗೇ ಹೋಗೋಣ ಅಂತ ಹೇಳಿದ್ರು, ಆಮೇಲೆ ಏಕೋ ಎನೋ ಎಡಕುಮರಿ ಚಾರಣ ಬೇಡ ಮೋಹನ್, ಯಾವುದಾದ್ರು ಹೊಸ ಜಾಗಕ್ಕೆ ಪ್ಲಾನ್ ಮಾಡಿ ಅಂತ ತಿಳಿಸಿದ್ರು.
ಕೊನೆಗೆ ಎತ್ತಿನಭುಜ ಅಥವಾ ಅಮೇದಿಕಲ್ ಗೆ ಹೋಗಲು ನಿರ್ಧರಿಸಿದೆವು, ಕೂಡಲೆ ನಾನು ಮಾರ್ಗದರ್ಶಿ ಚೆನ್ನಪ್ಪರವರಿಗೆ ಕರೆ ಮಾಡಿ ಚಾರಣಕ್ಕೆ ಬರುವ ವಿಷಯ ತಿಳಿಸಿದೆ,
ಅದಕ್ಕೆ ಅವರು ಇಲ್ಲಿ ಮಳೆ ಬರ್ತಾ ಇದೆ ಅಂದ್ರು, ಪರ್ವಾಗಿಲ್ಲ ನಾವು ಮಳೆಯಲ್ಲೇ ಚಾರಣ ಮಾಡುವುದಾಗಿ ತಿಳಿಸಿದೆ, ನೀವು ಯಾವುದಕ್ಕೂ ಹೊರ‍ಡುವ ಮುನ್ನ ದಿನ ಪುನಃ ಕರೆ ಮಾಡಿ ಬನ್ನಿ ಅಂತ ತಿಳಿಸಿದ್ರು.
ಹೊರಡುವ ಮುನ್ನ ದಿನ ಬಂದೇ ಬಿಟ್ಟಿತ್ತು, ಶಿಶಿಲದ ಚೆನ್ನಪ್ಪರವರಿಗೆ ಕರೆ ಮಾಡಿ ವಿಚಾರಿಸಲಾಗಿ ಮಳೆ ಸ್ವಲ್ಪ ಕಡಿಮೆ ಇದೆ "ಬನ್ನಿ" ಅಂತ ಗ್ರೀನ್ ಸಿಗ್ನಲ್ ಕೊಟ್ಟ್ರು.

ಚಾರಣಕ್ಕೆ ಬೇಕಾದ ಟೆಂಟ್,ಸ್ಲೀಪಿಂಗ್ ಮ್ಯಾಟ್ ಎಲ್ಲವನ್ನು ಸಿದ್ದಪಡಿಸಿಕೊಂಡು ಶನಿವಾರ ರಾತ್ರಿ ೯:೦೦ ಗಂಟೆಗೆ ಕೆಂಪೆಗೌಡ ಬಸ್ ನಿಲ್ದಾಣಕ್ಕೆ ಬಂದು ನನ್ನ ಚಾರಣ ಮಿತ್ರರಾದ ಗಜೇಂದ್ರರವರಿಗೆ ಕರೆ ಮಾಡಿ ಬೇಗ ಬರಲು ತಿಳಿಸಿದೆ, ಗಜೇಂದ್ರರವರು ಬರುವಷ್ಟರಲ್ಲಿ ಸಮಯ ೯:೩೦ ಆಗಿತ್ತು ಧರ್ಮಸ್ಥಳಕ್ಕೆ ಹೋಗುವ ಎಲ್ಲ ರಾಜಹಂಸ ಬಸ್ ಗಳು ಆಗಲೇ ಭರ್ತಿಯಾಗಿದ್ದವು, ಅಲ್ಲಿಯೇ ಸಿಕ್ಕ ಪರಿಚಯ ಇರುವ ಹುಡುಗನೊಬ್ಬ ಖಾಸಗಿ ಟ್ರಾವೆಲ್ ಬಸ್ ನಲ್ಲಿ ಸೀಟ್ ಕೊಡಿಸುವುದಾಗಿ ಹೇಳಿ ಮೆಜೆಸ್ಟಿಕ್ ನ ಸುಬ್ರಮಣ್ಯ ಟ್ರಾವಲ್ಸ್ ನಲ್ಲಿ ಎರಡು ಟಿಕೇಟ್ ಬುಕ್ ಮಾಡಿಸಿ ಕೊಟ್ಟು ಹೊರಟುಹೋದ, ಬಸ್ ರಾತ್ರಿ ಸುಮಾರು ೧೦:೩೦ ಕ್ಕೆ ಹೊರಟು ಧರ್ಮಸ್ಥಳ ತಲುಪಿದಾಗ ಬೆಳಗಿನ ಜಾವ ೫:೫೦.

ಶಿಶಿಲಕ್ಕೆ ಹೋಗುವ ಬಸ್ ಬಗ್ಗೆ ವಿಚಾರಿಸಿದಾದ ಭಾನುವಾರ ಶಾಲೆ ರಜೆ ಇರುವ ಕಾರಣ ಬಸ್ಸನ್ನು ರದ್ದುಗೊಳಿಸಲಾಗಿದೆ ಅಂತ ಮಾಹಿತಿ ಸಿಕ್ಕಿತು, ಮತ್ತೇನು ಮಾಡೋದು ಅಂತ ಯೋಚಿಸಿ ಸುಬ್ರಮಣ್ಯಕ್ಕೆ ಹೋಗುವ ಕೆ.ಎಸ್.ಆರ್.ಟಿ.ಸಿ. ಸಾರಿಗೆ ಬಸ್ ಹತ್ತಿ ಕೊಕ್ಕಡದಲ್ಲಿ ಇಳಿದು ಅಲ್ಲಿಂದ ಜೀಪ್ ನಲ್ಲಿ ಶಿಶಿಲಕ್ಕೆ ತೆರಳಿದವು, ಅಷ್ಟೊತ್ತಿಗಾಗಲೇ ಚೆನ್ನಪ್ಪನವರು ನಮಗೋಸ್ಕರ ಬಸ್ ನಿಲ್ದಾಣದಲ್ಲಿ ಕಾಯುತ್ತ ಇದ್ದರು, ಅವರು ಎತ್ತಿನಭುಜಕ್ಕೆ ಬೇರೊಂದು ಚಾರಣಿಗರ ಗುಂಪಿನ ಜೊತೆ ಹೋಗುವ ನಿಮಿತ್ತ ಚಂದಪ್ಪಗೌಡ ಎಂಬುವವರನ್ನು ನಮ್ಮ ಜೊತೆಗೆ ಕಳುಹಿಸಿ, ಅವರು ಬೇರೊಂದು ಗುಂಪಿನ ಎತ್ತಿನಭುಜಕ್ಕೆ ತೆರಳಿದರು.

ಅಲ್ಲೆ ಇದ್ದ ಹೋಟೆಲ್ ವೊಂದರಲ್ಲಿ ಇಡ್ಲಿ ಸಾಂಬಾರ್,ಕಲ್ತಪ್ಪ (ಖಾಲಿ ದೋಸೆ) ತಿಂದು ಕಾಫಿ ಕುಡಿದು ಬೇಡವಾದ ಲಗ್ಗೇಜನ್ನು ಅದೇ ಹೋಟೆಲ್ ನಲ್ಲಿ ಇರಿಸಿ ಅಲ್ಲಿಂದ ಜೀಪ್ ನಲ್ಲಿ ನಾಲ್ಕು ಕಿ.ಮೀ ದೂರದ ನಮ್ಮ ಚಾರಣ ಶುರುವಾಗುವ "ಕೊಂಬಾರು" ಎಂಬ ಸ್ಥಳಕ್ಕೆ ಹೊರಟೆವು.

ಅಲ್ಲಿಯೇ ಸಿಕ್ಕ ಒಂದು ಚಿಕ್ಕ ತೊರೆಯೊಂದರಲ್ಲಿ ಸ್ನಾನ ಮುಗಿಸಿ ಚಾರಣಕ್ಕೆ ಶುರುಮಾಡಿದಾಗ ಬೆಳಿಗ್ಗೆ ೯:೪೫ ಆಗಿತ್ತು, ಇಲ್ಲಿಂದ ಶುರುವಾಯ್ತು ಕಠಿಣ ಏರುದಾರಿ ದಟ್ಟ ಮಳೆಕಾಡು, ಜೊತೆಗೆ ರಕ್ತ ಹೀರುವ ಜಿಗಣೆಗಳ ಕಾಟ, ನಮ್ಮ ಮಾರ್ಗದರ್ಶಿ ಚಂದಪ್ಪನವರು ಕೈನಲ್ಲಿ ಮಚ್ಚು ಹಿಡಿದು ಮುಂದೆ ಹೋಗುತ್ತಿದ್ದರೆ ನಾವು ಅವರನ್ನು ಹಿಂಬಾಲಿಸಿದೆವು,


ಮಳೆಗಾಲ ಆದ್ದರಿಂದ ಮೋಡದ ದಟ್ಟಣೆಯಿಂದ ಸಂಜೆಗತ್ತಲಿನ ಹಾಗೆ ಭಾಸವಾಗುತಿತ್ತು, ಸುಮಾರು ಎರಡೂವರೆ ಗಂಟೆ ಹಾದಿ ಕ್ರಮಿಸಿದ ಮೇಲೆ ಮಳೆಕಾಡಿನಿಂದ ಹೊರ ಬಂದೆವು ಆಗ ನಮ್ಮ ಕಣ್ಣಿಗೆ ಎದುರಾದುದು ಸುಂದರ ಹಸಿರು ಹುಲ್ಲುಗಾವಲು ಪರ್ವತಗಳು, ವಾವ್! ಸ್ವರ್ಗ ಎಂದರೆ ಇದೇ ಅಲ್ವಾ?




ಪಯಣದ ಹಾದಿಯಲ್ಲಿ ನಾನು.

ನಡೆದು ಸಾಕಷ್ಟು ದಣಿವಾಗಿದ್ದರಿಂದ ಸ್ವಲ್ಪ ಹೊತ್ತು ಕುಳಿತು ವಿಶ್ರಾಂತಿ ಪಡೆದು ಹಾಗೆ ಸ್ವಲ್ಪ ಏನಾದರೂ ತಿನ್ನೋಣ ಅಂತ ಗಜೇಂದ್ರರವರು ತಮ್ಮ ಬ್ಯಾಗಿಂದ ಹೋಳಿಗೆ ತೆಗೆದು ತಲಾ ಎರಡೆರಡು ಹೋಳಿಗೆ ಕೊಟ್ಟರು ತುಂಬಾ ಚೆನ್ನಾಗಿದ್ದರಿಂದ ನಾನು ಬೇಗ ತಿಂದು ಮುಗಿಸಿದೆ ಅಷ್ಟರಲ್ಲೇ ಸನಿಹದಲ್ಲಿ ಏನೋ ಶಬ್ದ!
ಯಾವುದೋ ಪ್ರಾಣಿ ಮರದ ರೆಂಬೆಗಳನ್ನು ಮುರಿದು ನಮ್ಮತ್ತ ಬರುತಿತ್ತು ನನಗೆ ಗಾಬರಿಯಾಗಿ ತಿಂದಿದ್ದ ಹೋಳಿಗೆ ಬಾಯಿಗೆ ಬಂದ್ದತ್ತಾಯಿತು ಕೂಡಲೇ ನಮ್ಮ ಗಜೇಂದ್ರರವರು ಅಲೆರ್ಟ್ ಆಗಿ ಎಲ್ಲರಿಗಿಂತ ಮೊದಲು ಎದ್ದು ನಿಂತು "ಪುಟ್ಗೋಸಿ ಊರುಗೋಲು" ಹಿಡಿದು ಯುದ್ದಕ್ಕೆ ನಿಂತ ಸೈನಿಕನಂತೆ ಫೋಸ್ ಕೊಟ್ಟಿದ್ದು ಮಾತ್ರ ಭಯದ ನಡುವೆಯು ನನಗೆ ನಗು ಬರುತಿತ್ತು,



ಗಜೇಂದ್ರ ಮತ್ತು ಮಾರ್ಗದರ್ಶಿ ಚೆಂದಪ್ಪ

ತಕ್ಷಣವೇ ಚಂದಪ್ಪನವರು "ಹೋಯ್" ಅಂತ ಜೋರಾಗಿ ಒಂದು ಕೂಗು ಹಾಕಿದ್ರು ಅವರ ಜೊತೆಗೆ ನಾನು ಕೂಡ ಜೋರಾಗಿ ಕಿರುಚಿದೆ ಶಬ್ದ ಹಾಗೆ ತಟಸ್ಥವಾದೊಡನೆಯೇ ಚಂದಪ್ಪನವರನ್ನು ಏನದು ಅಂತ ಕೇಳಿದಕ್ಕೆ ಅವರು "ಕಾಡೆಮ್ಮೆ" ಇರಬೇಕು ಅಂದ್ರು, ತಕ್ಷಣವೇ ನಾವು ಅಲ್ಲಿಂದ ಜಾಗ ಖಾಲಿ ಮಾಡಿ ಚಾರಣದ ಹಾದಿ ಹಿಡಿದು ಹೊರಟೆವು ಸ್ವಲ್ಪ ಹೊತ್ತಿನಲ್ಲೇ ಮಳೆ ಶುರುವಾಯ್ತು, ಆದರೇನಂತೆ ಮಳೆಯಲ್ಲಿಯೇ ಚಾರಣ ಮುಂದುವರಿಸಿದೆವು ಚಂದಪ್ಪ ಮಳೆಯ ರಕ್ಷಣೆಗೆ ತಂದಿದ್ದ ಪ್ಲಾಸ್ಟಿಕ್ ಹೊದಿಕೆ ಹೊದ್ದು ಮುಂದೆ ಹೋಗುತ್ತಿದ್ದರು ಮಂಡಿ ಉದ್ದಕ್ಕೆ ಬೆಳೆದ ಹಸಿರು ಹುಲ್ಲಿನ ನಡುವೆ ಹಾದಿ ಮಾಡಿಕೊಂಡು ನಾವು ಅವರನ್ನು ಹಿಂಬಾಲಿಸಿ ಹೊರಟೆವು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ತಪ್ಪಿದಲ್ಲ,


ಯಮಭಾರದ ಲಗ್ಗೇಜನ್ನು ಹೊತ್ತು ಮಳೆಯಲ್ಲಿ ಚಾರಣ ಮಾಡುವುದು ಅಷ್ಟು ಸುಲಭವಲ್ಲ, ಹಾದಿ ನೋಡಿದರೆ ಗೊತ್ತಾಗುತಿತ್ತು ಚಾರಣಿಗರು ಚಾರಣ ಮಾಡಿರುವುದು ಬಹಳ ವಿರಳ ಅಂತಾ, ಮಳೆಯಲ್ಲಿಯೂ ಕೂಡ ಬೆವರು ಕಿತ್ತು ಬರುತಿತ್ತು.




ಪಯಣದ ಹಾದಿಯಲ್ಲಿ ನಾನು ಒಮ್ಮೆ ಹಿಂತಿರುಗಿ ನೋಡಿದಾಗ ಕಂಡ ದೃಶ್ಯ

ಅಬ್ಬಾ! ಎತ್ತಾ ನೋಡಿದರೂ ಬಾನೆತ್ತರಕ್ಕೆ ನಿಂತ ಹಸಿರ ಮುಗಿಲಗಿರಿಗಳು
ಆ ಮುಗಿಲಗಿರಿಗಳನ್ನು ಚುಂಬಿಸುವ ಮೋಡದ ರಾಶಿ ಆ ವಿಷ್ಮಯ ನೋಟ ನನ್ನ ಕಣ್ಣಿಗೆ ಕಟ್ಟಿದಂತಿತ್ತು,
ನಾನು, ಗಜೇಂದ್ರ ಸಾರ್ ಕುಮಾರ ಪರ್ವತ ಚಾರಣಕ್ಕಿಂತ ತುಂಬಾ ಕಷ್ಟ ಅಲ್ವಾ?
ಅದಕ್ಕೆ ಅವರು ಹೌದು ನಾವು ಇಲ್ಲಿಯವರೆಗೂ ಸವೆಸಿದ ಹಾದಿ ಬಹಳ ದುರ್ಗಮ ಇನ್ನು ಮುಂದೆ ಹೇಗಿದೆಯೋ? ಗೊತ್ತಿಲ್ಲ ಅಂದ್ರು,ಚಂದಪ್ಪನವರು ಯಾವುದೇ ಲಗ್ಗೇಜ್ ಇಲ್ಲದ ಕಾರಣ ಬಹು ಬೇಗನೇ ನಡೆದು ಮುಂದೆ ಹೋಗಿ ನಮಗಾಗಿ ಕಾಯುತ್ತಾ ನಿಂತಿರುತ್ತಿದ್ದರು, ಹಾದಿ ಕಾಣದೇ ಇರುವ ಜಾಗದಲ್ಲೆಲ್ಲ ಅಲ್ಲಿಯೇ ಕಾದು ನಿಂತು ನಾವು ಹೇಗೆ ಬರಬೇಕೆಂದು ಸನ್ನೆ ಮಾಡಿ ಸೂಚಿಸುತ್ತಿದ್ದರು,


ಆಗಲೇ ಅದೆಷ್ಟೊ ಗಿರಿ ಕಣಿವೆಗಳಲ್ಲಿ ಸಾಗಿ ಬಂದಿದ್ದೆವು, ಬಹಳ ಪ್ರಯಾಸವಾಗಿ ಯಮ ಭಾರದ ಟೆಂಟನ್ನು ಸರತಿಯಂತೆ ನಾನು ಮತ್ತು ಗಜೇಂದ್ರರವರು ಹೊತ್ತುಕೊಂಡು ಚಾರಣದ ಹಾದಿಯನ್ನು ಸವೆಸುತ್ತಿದ್ದವು.
ನನ್ನ ಚಾರಣದ ಬದುಕಿನಲ್ಲಿ ಇದೇ ಮೊದಲು ಮಳೆಯಲ್ಲಿ ಚಾರಣ ಮಾಡಿದ್ದು, ಮಳೆ ಬಿಡುವು ಕೊಟ್ಟಾಗಲೆಲ್ಲ ಬ್ಯಾಗಿನಿಂದ ಕ್ಯಾಮೆರಾ ತೆಗೆದು ಪ್ರಕೃತಿ ಸೌಂದರ್ಯವನ್ನು ಸೆರೆಹಿಡಿಯುತ್ತಿದ್ದೆವು, ನಾವು ಚಂದಪ್ಪನವರನ್ನು ಇನ್ನು ಎಷ್ಟು ದೂರ ಇದೆ ಅಂತ ಯಾವಾಗ ಕೇಳಿದರೂ ಇಲ್ಲೇ ಸ್ವಲ್ಪ ದೂರ ಅಂತ ಶಾಂತ ಸ್ವಭಾವದಿಂದಲ್ಲೇ ಉತ್ತರಿಸುತ್ತಿದ್ದರು,ಆಗಲೇ ಮದ್ಯಾಹ್ನ ಒಂದೂವರೆ ಗಂಟೆ ಆಗಿತ್ತು, ಕಡಿದಾದ ಹಾದಿಯಲ್ಲಿ ಚಾರಣ ಮಾಡಿ ಬಳಲಿದ್ದ ಕಾರಣ ಹೊಟ್ಟೆ ತುಂಬಾ ಹಸಿವಾಗುತ್ತಿತ್ತು,ಕೊನೆಗೆ ದೊಡ್ಡ ಹೆಬ್ಬಂಡೆ ಬಳಿ ಬಂದೆವು, ಮಳೆಗಾಲವಾದ್ದರಿಂದ ಬೆಟ್ಟದ ಮೇಲೆ ಟೆಂಟ್ ಹಾಕಲು ಸಾದ್ಯವಿಲ್ಲ ಆದ್ದರಿಂದ ಇಲ್ಲಿಯೇ ಟೆಂಟ್ ಹಾಕಲು ಸೂಕ್ತ ಜಾಗ ಎಂದು ಚಂದಪ್ಪನವರು ತಿಳಿಸಿದ್ರು,
ಚಂದಪ್ಪನವರ ಸೂಚನೆ ಮೇರೆಗೆ ಮೊದಲು ಟೆಂಟನ್ನು ಸಿದ್ದಪಡಿಸಿ ನಂತರ ಊಟ ( ಜೋಳದ ರೊಟ್ಟಿ, ಕಡ್ಲೆಕಾಯಿ ಚಟ್ನಿ) ಮುಗಿಸಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಬಳಿಕ ನಮ್ಮ ಲಗ್ಗೇಜನ್ನು ಟೆಂಟ್ ನೊಳಗೆ ಇಟ್ಟು ಮತ್ತೆ ಚಾರಣ ಶುರು ಮಾಡಿದೆವು, ಮುಂದಿನ ಹಾದಿ ಬಹಳ ಕಡಿದಾಗಿತ್ತು ದಟ್ಟ ಮಳೆಕಾಡು ಬೇರೆ ಕೆಲವು ಕಡೆ ಬಗ್ಗಿ ನಡೆಯಬೇಕಿತ್ತು,ಜೀರುಂಡೆಯ ಸದ್ದಿನಲ್ಲಿ ಮರ ಗಿಡಗಳ ರೆಂಬೆ ಕೊಂಬೆಗಳನ್ನು ಆಸರೆಯಾಗಿ ಹಿಡಿದು ಮೇಲೇರುತ್ತಿದ್ದೆವು, ಮುಂಗಾರು ಮಳೆ ಒಂದೇ ಸಮನೆ "ದೋ..." ಅಂತ ಬೀಳುತಲಿತ್ತು ಬೆಳಕಿನ ಅಭಾವದಿಂದ ಕತ್ತಲಾದಂತಿತ್ತು, ಯಾವುದಾದರೂ ಕಾಡು ಪ್ರಾಣಿ ಎದುರಾದರೇ? ಎಂಬ ಭಯ



ಮಳೆಕಾಡು

ಕೊನೆಗಳಿಗೆ ಹತ್ತು ನಿಮಿಷದ ಮಳೆ ಚಾರಣವಂತೂ ತುಂಬಾ ಸಾಹಸಮಯವಾಗಿತ್ತು,
ಮಳೆ ಬೀಳುತ್ತಿದ್ದರಿಂದ ತುಸು ಎಚ್ಚರ ತಪ್ಪಿದರೂ ಅಪಾಯ ಖಂಡಿತ.


ನಮ್ಮ ಮಾರ್ಗದರ್ಶಿ ಚಂದಪ್ಪರವರ ಉಪಯುಕ್ತ ಮಾರ್ಗದರ್ಶನದಿಂದ ಯಾವುದೇ ತೊಂದರೆ ಇಲ್ಲದೇ ಸಂಜೆ ೫ ರ ಹೊತ್ತಿಗೆ ಅಮೇದಿಕಲ್ ಶಿಖರದ ತುಟ್ಟ ತುದಿ ತಲುಪಿಯೇಬಿಟ್ಟೆವು. ಎತ್ತ ನೋಡಿದರೂ ಮೋಡದ ರಾಶಿ ಎತ್ತಿನ ಭುಜ ಕಾಣುವುದಿರಲಿ ಸುತ್ತ ಮುತ್ತಲಿನ ಯಾವುದೇ ಪರ್ವತಗಳ ದರ್ಶನವಾಗಲಿಲ್ಲ,ಚಂದಪ್ಪನವರು ಪಕ್ಕದ ಘಟ್ಟ ಪ್ರದೇಶದ ಕಡೆ ಕೈ ತೋರಿಸಿ ಅದೇ ಚಾರ್ಮಾಡಿ ಘಾಟ್, ಅಗೋ ಅದೇ ಕೊಟ್ಟಿಗೆಹಾರ ಅಂತ ತೋರಿಸುತ್ತಿದ್ದರು ಮೋಡಗಳು ಮುಚ್ಚಿಕೊಂಡಿದ್ದರಿಂದ ಏನೂ ಕಾಣಿಸುತ್ತಿರಲಿಲ್ಲ ಕೊಟ್ಟಿಗೆಹಾರ ಅಮೇದಿಕಲ್ ಗೆ ಬಹಳ ಹತ್ತಿರವಿದ್ದರೂ ಹೋಗಲೂ ಯಾವುದೇ ಹಾದಿಯಿಲ್ಲ,ಸುತ್ತಲೂ ಹಸಿರು ಹೊದ್ದ ಸಾಲು ಸಾಲು ಪರ್ವತಗಳ ರಮಣೀಯ ದೃಶ್ಯ, ರಾಶಿ ರಾಶಿ ಮೋಡಗಳು, ದಟ್ಟ ಮಂಜು, ಏನೀ ಪ್ರಕೃತಿ ವಿಸ್ಮಯ! ಎಂಬ ಭಾವನೆ ನನ್ನ ಮನದಲ್ಲಿ ಹಾಸುಹೊಕ್ಕಾಗಿತ್ತು.
ಸೂರ್ಯಾಸ್ತಮ ನೋಡುವ ಅವಕಾಶವಂತೂ ಖಂಡಿತಾ ಇರಲಿಲ್ಲ ಬಿಡಿ,
ಆಗಲೇ ತುಂಬಾ ಸಮಯವಾದ್ದರಿಂದ ಕತ್ತಲಾಗುವುದೊರಳಗೆ ಟೆಂಟ್ ಬಳಿ ಹೋಗಬೇಕೆಂದು ಚಂದಪ್ಪನವರ ಸೂಚನೆ ಮೇರೆಗೆ ವಾಪಾಸು ಹೊರಟೆವು.
ಕಡಿದಾದ ಇಳಿಜಾರು ಬಹಳ ಎಚ್ಚರಿಕೆಯಿಂದ ಒಂದೊಂದೆ ಹೆಜ್ಜೆ ಹಾಕುತ್ತಿದ್ದೆವು ಈ ಮದ್ಯೆ ಗಜೇಂದ್ರರವರು,ಮೋಹನ್ ಈಗ ನಮ್ಮ ಬ್ಯಾಗ್ ನಲ್ಲಿರುವ ತಿಂಡಿ ವಾಸನೆ ಹಿಡಿದು ಕರಡಿ ಏನಾದರೂ ಟೆಂಟ್ ನೊಳಗೆ ನುಗ್ಗಿ ಕುಳಿತಿದ್ದರೆ ಏನ್ ಗತಿ! ಎಂದು ನಗೆ ಚಟಾಕಿ ಹಾರಿಸಿದ್ರು ನನಗಂತು ನಗು ತಡೆಯೋಕ್ಕೆ ಆಗಲಿಲ್ಲ, ಕೊನೆಗೂ ಕತ್ತಲಾಗುವುದಷ್ಟರಲ್ಲಿ ನಮ್ಮ ಟೆಂಟ್ ಬಳಿ ಬಂದು ಸೇರಿದೆವು, ರಕ್ತ ಹೀರುವ ಜಿಗಣೆಗಳ ಕಾಟ ಜಾಸ್ತಿ ಕಿತ್ತು ಹಾಕುವುದೇ ಒಂದು ದೊಡ್ಡ ಸವಾಲು,
ಚಂದಪ್ಪನವರು ನೀರು ತರಲು ಬಾಟೆಲ್ ಹಿಡಿದು ಕಾಡಿನೊಳಕ್ಕೆ ನುಗ್ಗಿದರು ನಾನು ಕೂಡ ಅವರನ್ನು ಹಿಂಬಾಲಿಸಿದೆ ಹಾದಿ ತುಂಬಾ ಇಳಿಜಾರಾದ್ದರಿಂದ ಮುಂದೆ ಹೋಗಲು ಆಗಲಿಲ್ಲ ಪುನಃ ವಾಪಾಸು ಬಂದೆ, ಅಷ್ಟರಲ್ಲೇ ಚಂದಪ್ಪನವರು ನೀರಿನ ಬಾಟೆಲ್ ಹಿಡಿದು ವಾಪಾಸಾದರು ನಂತರ ಸೌದೆಗಳನ್ನು ಹುಡುಕಿ ತಂದು ಮಳೆ ನೀರು
ಬೀಳದೆ ಇರೋ ಜಾಗದಲ್ಲಿ ರಾಶಿ ಮಾಡಿ ಶಿಭಿರಾಗ್ನಿಗೆ ಸಿದ್ದಪಡಿಸುತ್ತಿದ್ದರು.



ನಮ್ಮ ಶಿಭಿರದ ಮುಂದೆ ಕ್ಷೀರಸಾಗರದಂತೆ ಕಾಣಿಸುತ್ತಿದ್ದ ದೃಶ್ಯ

ನಮ್ಮ ಶಿಭಿರದ ಮುಂದೆ ಕಾಣುತಿದ್ದ ರಾಶಿ ರಾಶಿ ಮೋಡಗಳ ಸೌಂದರ್ಯವನ್ನು ಮರೆಯೋಕ್ಕೆ ಸಾದ್ಯನೇ ಇಲ್ಲ, ಅಷ್ಟರಲ್ಲಿ ಕತ್ತಲು ಆವರಿಸಿತು ಇತ್ತ ಚಂದಪ್ಪನವರು ನಾವು ತಂದಿದ್ದ ದೀಸೆಲ್ ಸಹಾಯದಿಂದ ಹೊತ್ತಿಸಿದ ಶಿಭಿರಾಗ್ನಿ ಮುಂದೆ ಕುಳಿತು ಚಳಿ ಮಳೆಯಿಂದ ಮರಗಟ್ಟಿ ಹೋಗಿದ್ದ ದೇಹವನ್ನು ಬಿಸಿ ಮಾಡಿದೊಡನೆಯೇ ತುಸು ಸಮಾಧಾನ,



ಶಿಭಿರಾಗ್ನಿ

ಬೆಳಿಗ್ಗೆಯಿಂದ ಒಂದೇ ಸಮನೆ ನಡೆದು ಆಯಾಸವಾಗಿದ್ದರಿಂದ ಬೇಗನೆ ಊಟ ಮುಗಿಸಿ ಮಲಗುವುದು ಒಳ್ಳೇದು ಅಂತ ನಿರ್ದಾರ ಮಾಡಿ ಜೊತೆಗೆ ತಂದಿದ್ದ ಚಪಾತಿ, MTR ನ Ready to eat ಬಿಂಧಿ ಮಸಾಲ ಮತ್ತು ಅನ್ನ ಸಾಂಬಾರ್ ಪಾಕೆಟ್ ತೆಗೆದು ಪಾತ್ರೆಯೊಳಗೆ ಹಾಕಿ ಬಳಿಯಿದ್ದ ಚಾಕನ್ನೆ ಸೌಟ್ ರೂಪದಲ್ಲಿ ಬಳಸಿ ಅಡುಗೆ ಸಿದ್ದಪಡಿಸಿದೆವು, ಗಜೇಂದ್ರರವರು ತಮ್ಮ ಟಾರ್ಚ್ ಅನ್ನು ಟೆಂಟ್ ಬಾಗಿಲಿಗೆ ಕಟ್ಟಿ ಬೆಳಕಿನ ಅಭಾವವನ್ನು ನೀಗಿಸಿದರು,


ಕೊನೆಗೆ ಎಲ್ಲರೂ ಕುಳಿತು ಊಟ ಮುಗಿಸಿದೆವು,ಗಜೇಂದ್ರರವರು ಟೆಂಟ್ ನೊಳಗೆ ಹೋಗಿ ಮಲಗಿದರು, ನನಗೆ ಏಕೋ ನಿದ್ರೆ ಬರಲಿಲ್ಲ ಪುನಃ ನಾನು ಶಿಭಿರಾಗ್ನಿ ಮುಂದೆ ಹೋಗಿ ಕುಳಿತೆ ನನ್ನ ಜೊತೆ ಚಂದಪ್ಪ ಕೂಡ ಇದ್ದರು ಆಗಿನ್ನು ಮಳೆ ಬೀಳುತ್ತಲೇ ಇತ್ತು ಶಿಭಿರಾಗ್ನಿಯ ಬಳಿ ನಾವಿಬ್ಬರೆ ತುಂಬಾ ಸಮಯ ಮಾತನಾಡುತ್ತ ಕುಳಿತಿದ್ದೆವು, ನಂತರ ಮಲಗುವ ನಿರ್ದಾರ ಮಾಡಿ ತುಂಬಾ ಹೊತ್ತು ಉರಿಯಲಿ ಅಂತ ಶಿಭಿರಾಗ್ನಿಗೆ ಸಾಕಷ್ಟು ಸೌದೆ ಜೋಡಿಸಿ ಟೆಂಟ್ ನೊಳಗೆ ಬಂದು ಮಲಗಿಕೊಂಡೆ. ಹಿಂದೇನೆ ಚಂದಪ್ಪ ಕೂಡ ಬಂದು ಮಲಗಿದರು.

ಪುನಃ ಬೆಳಿಗ್ಗೆ ಎಚ್ಚರವಾದಾಗ ೬:೪೫, ಚಂದಪ್ಪನವರು ಆಗಲೇ ಎದ್ದು ಶಿಭಿರಾಗ್ನಿ ಮುಂದೆ ಬೆಂಕಿ ಕಾಯುತ್ತ ಕುಳಿತಿದ್ದರು, ಟೆಂಟ್ ನಿಂದ ಆಚೆ ಬಂದು ನೋಡಿದರೆ ಸುತ್ತಲೂ ಮಂಜು ಕವಿದಿದೆ, ರಾತ್ರಿ ಶುರುವಾದ ಮಳೆ ಬಿಡುವಿಲ್ಲದೆ ಒಂದೇ ಸಮನೆ ಬೀಳುತಲಿತ್ತು ಏನೂ ಕಾಣುತಿಲ್ಲ ದಟ್ಟ ಮಂಜು, ನಾನು ಕೂಡ ಶಿಭಿರಾಗ್ನಿ ಮುಂದೆ ಕುಳಿತು ಮೈ ಬೆಚ್ಚಗೆ ಮಾಡಿಕೊಂಡೆ, ಗಜೇಂದ್ರರವರನ್ನು ಕೂಗಿ ಕರೆದು ಸಾರ್ ಬನ್ನಿ ಬೆಂಕಿ ಕಾಯೋಣ ಅಂದೆ, ಅವರು ಇಲ್ಲೇ ಬೆಚ್ಚಗಿದೆ ಇನ್ನು ಸ್ವಲ್ಪ ಹೊತ್ತು ಇಲ್ಲೇ ಇರ್ತೀನಿ ಅಂತ ಟೆಂಟ್ ನೊಳಗೆ ಮಲಗಿದ್ದರು,
ಚಂದಪ್ಪನವರು, ಈಗ ಮಂಜು ಕವಿದಿಲ್ಲದಿದ್ದರೆ ಇದೇ ಜಾಗದಿಂದ ಸೂರ್ಯೋದಯ ವೀಕ್ಷಿಸಬಹುದಿತ್ತು ಅಂದ್ರು, ನಾವು ಬಂದಿರೋದೆ ಮಳೆಯಲ್ಲಿ ನೆನೆಯೋಕ್ಕೆ ಸೂರ್ಯೋದಯ ಇಲ್ಲದಿದ್ದರೇನಂತೆ ಬಿಡಿ ಇನ್ನೊಂದು ಸಾರಿ ಬಂದು ನೋಡೋಣ ಅಂದೆ,
ಎಷ್ಟು ಹೊತ್ತಾದ್ರು ಗಜೇಂದ್ರರವರು ಟೆಂಟ್ ನಿಂದ ಹೊರಗೆ ಬರಲಿಲ್ಲ ಮತ್ತೆ ಕೂಗಿ ಕರೆದೆ ಮತ್ತದೇ ಡೈಲಾಗ್ ಹೊಡೆದ್ರು, ನಂತರ ಅಕ್ಕ ಪಕ್ಕದಲ್ಲಿ ಯಾರೋ ಬಿಸಾಡಿದ್ದ ಪ್ಲಾಸ್ಟಿಕ್ ಕವರ್,ನೀರಿನ ಬಾಟೆಲ್ ಗಳನ್ನು ಒಂದು ಕಡೆ ರಾಶಿ ಮಾಡಿ ಹೊರಡುವ ವೇಳೆಯಲ್ಲಿ ಬೆಂಕಿ ಹೊತ್ತಿಸಿ ಹೊರಟರಾಯಿತು ಅಂತಾ ಯೋಚಿಸಿ ಹಾಗೆ ಬಿಟ್ಟು ಮತ್ತೆ ಗಜೇಂದ್ರರವರನ್ನು ಎಬ್ಬಿಸೋಣ ಅಂತ ಕೂಗಿ ಕರೆದೆ ಕೊನೆಗೂ ಎದ್ದು ಹೊರಗೆ ಬಂದ್ರು ಆಗಲೇ ಬಹಳ ಹೊತ್ತಾಗಿದೆ ಮಳೆಯಂತು ನಿಲ್ಲುವ ಸೂಚನೆ ಕಂಡು ಬರ್ತಾ ಇಲ್ಲ ತಿಂಡಿ ತಿಂದು ಹೊರಡೋಣ ಅಂತ ಯೋಚಿಸಿ ನಾವು ಕಾಡಿನಲ್ಲಿರುದರಿಂದ ಬ್ರಷ್ ನಿಂದ ಹಲ್ಲು ಉಜ್ಜೋದು ಪ್ರಕೃತಿಗೆ ವಿರುದ್ದ ಅಂತ ಹೇಳಿ ಹಾಗೇ ನೀರನ್ನು ಬಾಯಲ್ಲಿ ಮುಕ್ಕಳಿಸಿ ತಿಂಡಿ ತಿನ್ನಲು ಎಲ್ಲರೂ ಟೆಂಟ್ ನೊಳಗೆ ಕುಳಿತು ಬೆಳಗಿನ ಉಪಹಾರಕ್ಕಾಗಿ ತಂದಿದ್ದ ಬನ್ ಮತ್ತು ಗುಲ್ಕನ್ ಅನ್ನು ತಿಂದು ಹೊರಡಲು ಸಿದ್ದವಾದೆವು, ಆಗಲೇ ರಾಶಿ ಮಾಡಿದ್ದ ಪ್ಲಾಸ್ಟಿಕ್ ಕವರ್,ನೀರಿನ ಬಾಟೆಲ್ ಮೇಲೆ
ಸ್ವಲ್ಪ ಡೀಸೆಲ್ ಸುರಿದು ಬೆಂಕಿ ಹಚ್ಚಿದ ನಂತರ ನಮ್ಮ ಲಗ್ಗೇಜು ಸಿದ್ದಪಡಿಸಿಕೊಂಡು ಹೊರಟಾಗ ಹನ್ನೊಂದಾಗಿತ್ತು ಹಾದಿಯುದ್ದಕ್ಕೂ ಮಳೆಯಲ್ಲಿ ನೆನೆದೆ ಚಾರಣ ಮಾಡಿದೆವು, ಹಲವು ಬಾರಿ ಗಜೇಂದ್ರರವರು ಆಯ ತಪ್ಪಿ ಜಾರಿ ಬಿದ್ದುದುಂಟು.


ನಮ್ಮ ಚಾರಣದ ಹಾದಿಗೆ ಅಡ್ಡಲಾಗಿ ಕಟ್ಟಿದ ಜೇಡರಬಲೆ



ನಾನು ಮತ್ತು ನನ್ನ ಸ್ನೇಹಿತರಾದ ಗಜೇಂದ್ರ

ಜಟಿಲ ಕಾನದದ ಪ್ರಕೃತಿ ಸೊಬಗನ್ನು ಸವಿಯುತ್ತ ಚಾರಣದ ಮುಕ್ತಾಯ ಹಂತಕ್ಕೆ ತಲುಪಿದೆವು, ಅಲ್ಲಿಯೇ ಚಿಕ್ಕ ತೊರೆಯೊಂದರಲ್ಲಿ ಮಿಂದೆದ್ದ ನಂತರ ಆಟೋದಲ್ಲಿ ಶಿಶಿಲ ತಲುಪಿದಾಗ ಗಂಟೆ ನಾಲ್ಕಾಗಿತ್ತು, ನನಗಂತೂ ಹೊಟ್ಟೆ ತುಂಬಾ ಹಸಿವಾಗುತಿತ್ತು ಆ ದಿನ ಸೋಮವಾರ "ಭಾರತ್ ಬಂದ್" ಬಿಸಿ ಶಿಶಿಲದ ಸಣ್ಣ ಪುಟ್ಟ ಅಂಗಡಿಗಳಿಗೂ ಬಿಸಿ ತಟ್ಟಿದಂತೆ ಕಾಣಿಸುತಿತ್ತು,ಮನಸ್ಸಿನಲ್ಲಿ ಉಪವಾಸ ಗ್ಯಾರಂಟಿ ಅಂದುಕೊಂಡಿದ್ದು ಉಂಟು, ಅಲ್ಲದೇ ಯಾವುದೇ ವಾಹನಗಳು ಒಡಾಡದಂತೆ ರಸ್ತೆಗೆ ಅಡ್ಡಲಾಗಿ ಮರಗಳನ್ನೂ ಕಡಿದು ಉರುಳಿಸಿದ್ದರು, ಅಷ್ಟರಲ್ಲಿ ಧರ್ಮಸ್ಥಳಕ್ಕೆ ಹೋಗುವ ಬಸ್ ಶಿಶಿಲದ ಬಸ್ ನಿಲ್ದಾಣದಲ್ಲಿ ನಿಂತಿತ್ತು ಹೋಗಿ ವಿಚಾರಿಸಿದಾಗ ಸಂಜೆ ವೇಳೆಗೆ ಬಸ್ ಸಂಚಾರ ಶುರುವಾಗುತ್ತೆ ಎಂದು ಯಾರೋ ಮಹಾಶಯರೊಬ್ಬರು ತಿಳಿಸಿದಾಗ ಮನಸ್ಸಿಗೆ ಕೊಂಚ ದೈರ್ಯ ಬಂತು,
ತದನಂತರ ಚಂದಪ್ಪನವರು ನಮ್ಮನ್ನು ಗೋಖಲೆ ಮನೆಗೆ ಕರೆದೋಯ್ದರು,
ನಂತರ ಗೋಖಲೆ ಮನೆಯವರು ಮಾಡಿಕೊಟ್ಟ "ಚಹಾ"ದಿಂದ ಬಳಲಿ ಬೆಂಡಾಗಿದ್ದ ನಮ್ಮ ಶರೀರಕ್ಕೆ ವಿದ್ಯುತ್ ಸಂಚಲನ ಉಂಟಾಗಿ ಸ್ವಲ್ಪ ಸುಧಾರಿಸಿದೆವು, ಒಂದರ್ದ ಗಂಟೆ ನಮ್ಮ ತೋಟದಲ್ಲಿ ಸುತ್ತಾಡಿ ಬನ್ನಿ ಅಷ್ಟರಲ್ಲಿ ಅಡುಗೆ ಸಿದ್ದವಾಗಿರುತ್ತದೆ ಅಂದ್ರು,
ನಾವಿಬ್ಬರು ಅವರ ಅಡಿಕೆ ತೋಟದಲ್ಲಿ ಸುತ್ತಾಡಿ ಮನಸೂರೆಗೊಂಡ ಕೆಲವು ಮರ,ಗಿಡ ಮತ್ತು ಹೂವುಗಳ ಪೋಟೋಗಳನ್ನು ತೆಗೆದು ತೋಟದ ಬದಿಯಲ್ಲೇ ಹರಿಯುತಿದ್ದ ಕಪಿಲಾ ನದಿಯ ದಡದಲ್ಲಿ ಒಂದಷ್ಟು ಸಮಯ ಕಳೆದೆವು.


ಗೋಖಲೆಯವರ ಜೊತೆ ನಾನು

ನಂತರ ಗೋಖಲೆ ಮನೆಗೆ ಬಂದು ಬಿಸಿ ಬಿಸಿಯಾದ ಊಟ (ಅನ್ನ, ಸಾಂಬಾರ್,ಮಜ್ಜಿಗೆ ಜೊತೆಗೆ ಉಪ್ಪಿನಕಾಯಿ) ಮುಗಿಸಿ ಅವರ ಮನೆಯ ಹೊರಾಂಡದ ಜಗುಲಿ ಮೇಲೆ ಕುಳಿತೊ, ನಿಜಕ್ಕೂ ಗೋಖಲೆ ಮನೆಯವರ ಸತ್ಕಾರ ಮೆಚ್ಚಲೇಬೇಕು, ಅಷ್ಟರಲ್ಲಿ ಬಸ್ಸಿನ ಶಬ್ದ ಕೇಳಿಸಿತು ತಕ್ಷಣವೇ ನಮ್ಮ ಲಗ್ಗೇಜನ್ನು ಬೆನ್ನಿಗೆ ಹೇರಿಸಿಕೊಂಡು ಒಡತೊಡಗಿದೊ ನಮಗೂ ಮುಂಚೆ ಗೋಖಲೆಯವರು ಓಡಿ ಹೋಗಿ ಬಸ್ಸನ್ನು ನಿಲ್ಲಿಸಿದ್ರು, ಗೋಖಲೆಯವರಿಗೆ ನಮ್ಮ ಪ್ರೀತಿಯ ವಂದನೆಗಳನ್ನರ್ಪಿಸಿ ಬಸ್ನಲ್ಲಿ ಆಸೀನರಾಗಿ ದರ್ಮಸ್ಥಳಕ್ಕೆ ಬಂದಾಗ ರಾತ್ರಿ ಏಳಾಗಿತ್ತು.
ನಂತರ ಶ್ರೀ ಮಂಜುನಾಥಸ್ವಾಮಿಯ ದರ್ಶನ ಮುಗಿಸಿ ಭೋಜನ ಗೃಹಕ್ಕೆ ತೆರಳಿ ಊಟ (ಪ್ರಸಾದ) ಮುಗಿಸಿಕೊಂಡು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದೆವು,
ನಾನು ಮೈಸೂರಿಗೆ ಪ್ರಯಾಣ ಬೆಳೆಸಿವ ಉದ್ದೇಶದಿಂದ ಮುಂಗಡ ಟಿಕೇಟ್ ಮಾಡಿಸದೇ ಬಹಳ ತೊಂದರೆ ಅನುಭವಿಸಬೇಕಾಗಿ ಬಂತು, ಕಾರಣ ಮೈಸೂರಿಗೆ ಹೊರಡುವ ಎರಡು ಸಾರಿಗೆ ಬಸ್ ಆಗಲೇ ಭರ್ತಿಯಾಗಿದ್ದವು,ಗಜೇಂದ್ರರವರು ಬೆಂಗಳೂರಿಗೆ ಹೊರಡುವ ರಾತ್ರಿ ಹತ್ತರ ರಾಜಹಂಸ ಬಸ್ಸಿನಲ್ಲಿ ಮುಂಗಡ ಟಿಕೇಟ್ ಖರೀದಿಸಿಯಾಗಿತ್ತು, ಕೊನೆಗೆ ೯:೩೦ ರ ರಾಜಹಂಸ ಹೊರಡುತಿತ್ತು ಕಂಡಕ್ಟರ್ ಬಳಿ ಹೋಗಿ ವಿಚಾರಿಸಲಾಗಿ ಎರಡು ಸೀಟ್ ಖಾಲಿ ಇದೆ ಅಂದ್ರು,
ತಕ್ಷಣವೇ ಗಜೇಂದ್ರರವರಿಗೆ ಹೊರಡುವುದಾಗಿ ತಿಳಿಸಿ ಟಿಕೇಟ್ ಪಡೆದು ಬಸ್ನಲ್ಲಿ ಬಂದು ಕುಳಿತೆ
೯:೩೫ ಕ್ಕೆ ಹೊರಟ ಬಸ್ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬಂದಾಗ ಬೆಳಗಿನ ಜಾವ ೫:೩೦.
ಇನ್ನೊಂದು ಕೆ.ಎಸ್.ಆರ್.ಟಿ.ಸಿ ಬಸ್ ಹಿಡಿದು ಚನ್ನಪಟ್ಟಣ ತಲುಪಿ ಅಲ್ಲಿಂದ ನಮ್ಮ ಮನೆಗೆ ಹೋಗಿ ಲಗ್ಗೇಜ್ ಇಳಿಸಿ ಸ್ನಾನ,ತಿಂಡಿ ಮುಗಿಸಿಕೊಂಡು ಕೆಲಸದ ನಿಮಿತ್ತ ಚಾಮುಂಡಿ Express ರೈಲಿನಲ್ಲಿ ಪುನಃ ರಾಜಧಾನಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದೆ.