Trek ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Trek ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಸೆಪ್ಟೆಂಬರ್ 15, 2011

ನರಸಿಂಹ ಪರ್ವತ ಚಾರಣ / ಟ್ರೆಕ್

ದಿನಾಂಕ : ೦೫.೦೩.೨೦೧೧ ಮತ್ತು ೦೬.೦೩.೨೦೧೧


ಎತ್ತರ: ಸಮುದ್ರ ಮಟ್ಟದಿಂದ ಸುಮಾರು ೩೭೮೦ ಅಡಿಗಳು


ಮಾರ್ಗ: ಬೆಂಗಳೂರು-ಶಿವಮೊಗ್ಗ-ತೀರ್ಥಹಳ್ಳಿ-ಆಗುಂಬೆ-ಬರ್ಕಣ ಜಲಪಾತ-ನರಸಿಂಹ ಪರ್ವತ-ಕಿಗ್ಗ-ಶೃಂಗೇರಿ


ಜಿಲ್ಲೆ: ಶಿವಮೊಗ್ಗ ಮತ್ತು ಚಿಕ್ಕಮಗಳೂರು


ತಂಡ: ಸಂತೋಷ್, ಸಾಯಿಪ್ರಕಾಶ್, ಗಜೇಂದ್ರ ಮತ್ತು ನಾನು


ಒಟ್ಟು ಕ್ರಮಿಸಿದ ದೂರ: ಸುಮಾರು ೨೨ ಕಿ.ಮೀ.


*********************************************************************************

ದಕ್ಷಿಣ ಭಾರತದ ಚಿರಾಪುಂಜಿ ಎಂದೇ ಪ್ರಸಿದ್ದವಾಗಿರುವ ಆಗುಂಬೆಯ ದಟ್ಟ ಕಾನನದಲ್ಲಿರುವ ಬರ್ಕಣ ಜಲಪಾತಕ್ಕೆ ಚಾರಣ ಮಾಡುವ ಶುಭ ಘಳಿಗೆ ಕೊನೆಗೂ ಕೂಡಿ ಬಂತು, ಶುಕ್ರವಾರ ರಾತ್ರಿ ಎಂದಿನಂತೆ ಸಕಲ ಸಿದ್ದತೆಯೊಂದಿಗೆ ಎಲ್ಲರಿಗಿಂತ ಮೊದಲೇ ನಾನು ಮತ್ತು ಗಜೇಂದ್ರ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬಂದೆವು,ನಂತರ ಬಂದ ಸಾಯಿಪ್ರಕಾಶ್ ನಮ್ಮನ್ನು ಕೂಡಿಕೊಂಡರು, ಸಂತೋಷ್ ಮಾತ್ರ ಬರಬೇಕಿತ್ತಷ್ಟೆ ಆಗುಂಬೆಗೆ ಹೊರಡುವ ರಾಜಹಂಸ ಬಸ್ ಆಗಲೇ ಸಿದ್ದವಾಗಿ ನಿಂತ್ತಿತ್ತು, ನಾವು ಮೂವರು ಬಸ್‌ನೊಳಗೆ ಮೊದಲೇ ನಿಗಧಿಯಾಗಿದ್ದ ನಮ್ಮ ಆಸನದಲ್ಲಿ ಕುಳಿತುಕೊಂಡೆವು ಅಷ್ಟರಲ್ಲೇ ಸಂತೋಷ್ ಕೂಡ ಬಂದ್ರು.ರಾತ್ರಿ ೧೦:೧೦ ಕ್ಕೆ ಹೊರಟ ರಾಜಹಂಸ ಶಿವಮೊಗ್ಗ, ತೀರ್ಥಹಳ್ಳಿ ಮಾರ್ಗವಾಗಿ ಆಗುಂಬೆ ತಲುಪಿದಾಗ ಬೆಳಿಗ್ಗೆ ಏಳಾಗಿತ್ತು.

ಬಸ್ ನಿಲ್ದಾಣದ ಹೋಟೆಲ್‌ನಲ್ಲಿ ತಿಂಡಿಯನ್ನು ತಿಂದು ನಕ್ಷಲ್ ಪೀಡಿತ ಪ್ರದೇಶವಾದ್ದರಿಂದ ಚಾರಣಕ್ಕೆ ಅನುಮತಿ ಕೇಳಲು ಸಮೀಪದಲ್ಲೆ ಇದ್ದ ಪೊಲೀಸ್ ಠಾಣೆಗೆ  ಗಜೇಂದ್ರ ಮತ್ತು ಸಾಯಿ ಪ್ರಕಾಶ್ ಹೊರಟರು.

ಸ್ವಲ್ಪ ಸಮಯದ ನಂತರ ಬಂದ ಅವರಿಬ್ಬರು  "ಆ ಪ್ರದೇಶದಲ್ಲಿ ಗಸ್ತು ಪಡೆಯ ಕಾರ್ಯಾಚರಣೆ ಇರುವುದರಿಂದ ಇವತ್ತು ಹೋಗುವುದು ಬೇಡ ನಾಳೆ ಬೇಕಾದ್ರೆ ಹೋಗಿ" ಅಂದ್ರಂತ್ತೆ, ಬಳಿಕ ಸ್ವಲ್ಪ ಹೊತ್ತು ಯೋಚನೆ ಮಾಡಿ ಮೊದಲು ಕೃಷ್ಣಪ್ಪನವರನ್ನು ಭೇಟಿ ಮಾಡುವ ನಿರ್ಧಾರಕ್ಕೆ ಬಂದು ಅಲ್ಲಿಂದ ಆಟೋದಲ್ಲಿ ಹೊರಟೆವು ಮಲಂದೂರಿನ ಕಡೆಗೆ...

ಹಾಗೆಯೇ ಮಾರ್ಗ ಮದ್ಯೆ ಆಟೋ ನಿಲ್ಲಿಸಿ ನಮ್ಮ ಲಗ್ಗೇಜನ್ನು ಆಟೋದಲ್ಲಿ ಬಿಟ್ಟು, ಚಾಲಕನಿಗೆ ಒಂದರ್ಧ ಗಂಟೆಯಲ್ಲಿ ಮರ‍ಳಿ ಬರ್ತೀವಿ ಎಂದು ತಿಳಿಸಿ ಜೋಗಿಗುಂಡಿ ಜಲಪಾತದ ಕಡೆಗೆ ಹೆಜ್ಜೆ ಹಾಕಿದೆವು, ಏಳೆಂಟು ನಿಮಿಷದ ನಡಿಗೆಯ ನಂತರ ಜೋಗಿಗುಂಡಿ ಜಲಧಾರೆಯ ಧರ್ಶನವಾಯ್ತು,
ಈ ಹೊಂಡದಲ್ಲಿ ಸಣ್ಣದಾಗಿ ಧುಮುಕುವ ಮಲಪಹರಿ ನದಿಯು ಹರಿಯುತ್ತ ಮುಂದೆ ತುಂಗಾ ನದಿಯಲ್ಲಿ ಲೀನವಾಗುತ್ತದೆ, ಈ ಸ್ಥಳದಲ್ಲಿ ಜೋಗಿ ಎಂಬ ಋಷಿಮುನಿ ತಪಸ್ಸು ಮಾಡಿದ್ದರಿಂದ ಈ ಜಲಪಾತಕ್ಕೆ "ಜೋಗಿಗುಂಡಿ" ಅನ್ನುವ ಹೆಸರು ಬಂದಿದೆಯಂತೆ.

ನಮ್ಮ ಸ್ನಾನಾಧಿ ಕಾರ್ಯಗಳನ್ನು ಅಲ್ಲಿಯೇ  ಮುಗಿಸಿ ಕೆಲವು ಛಾಯಚಿತ್ರಗಳನ್ನು ತೆಗೆಯುವ ಹೊತ್ತಿಗೆ ಆಟೋ ಚಾಲಕ ಬಂದೆ ಬಿಟ್ಟ,

ಚಾಲಕ: ಬನ್ನಿ ಸಾರ್ ತುಂಬಾ ಹೊತ್ತಾಯ್ತು,

ನಾವು: ಹಾ! ಎರಡೇ ನಿಮಿಷ ಬರ್ತೀವಿ


ಜೋಗಿಗುಂಡಿಯಲ್ಲಿ ನಮ್ಮ ತಂಡ (ಸಾಯಿಪ್ರಕಾಶ್,ನಾನು, ಸಂತೋಷ್ ಮತ್ತು ಗಜೇಂದ್ರ)

ಬಳಿಕ ತಡಮಾಡದೆ ಅಲ್ಲಿಂದ ಹೊರಟು ಮಲಂದೂರಿನ ಕೃಷ್ಣಪ್ಪನವರ ಮನೆಯ ಬಳಿ ಬಂದೆವು,
ಅಷ್ಟೊತ್ತಿಗೆ ಇನ್ನಿಬ್ಬರು ಚಾರಣಿಗರು ಬಂದ್ರು, ಹಿಂದೇನೆ ಪೊಲೀಸ್ ಗಸ್ತು ಪಡೆ ವಾಹನ ಮನೆ ಮುಂದೆ ಹಾದು ಹೋಯಿತು.

ಬಳಿಕ ಸಮಯ ೯:೨೫ ರ ಹೊತ್ತಿಗೆ ಕೃಷ್ಣಪ್ಪನವರನ್ನು ಹಿಂಬಾಲಿಸಿ ಅವರ ಮನೆ ಪಕ್ಕದ ಕಾಡು ಹಾದಿಯಲ್ಲಿ ಚಾರಣ ಶುರು ಮಾಡಿದೆವು, ಕೃಷ್ಣಪ್ಪ ಮತ್ತು ಇನ್ನಿಬ್ಬರು ಚಾರಣಿಗರು ಮುಂದೆ ಹೋಗುತಿದ್ದರೆ ನಾವು ನಾಲ್ವರು ಕಾಡಿನ ಸೌಂಧರ್ಯ ಸವಿಯುತ್ತ ಅಲ್ಲಲ್ಲಿ ಸಿಕ್ಕ ಸುಂದರ ನೋಟವನ್ನ ಕ್ಯಾಮೆರದಲ್ಲಿ ಸೆರೆಹಿಡಿದು ಮುಂದೆ ಸಾಗುತ್ತಿದ್ದೆವು, ಕೆಲವೇ ನಿಮಿಷದಲ್ಲಿ ಸಾಯಿ ಪ್ರಕಾಶ್ ನಮ್ಮನ್ನು ಹಾದಿ ತಪ್ಪಿಸಿದರು ಒಂದು ಸಣ್ಣ ನೀರಿಲ್ಲದ ಹಳ್ಳದೊಳಗೆ ನಡೆಯುತ್ತಿದ್ದೆವು, ಸುತ್ತಲೂ ಮೌನ ಕೃಷ್ಣಪ್ಪನವರ ಸುಳಿವೇ ಇಲ್ಲ ಜೋರಾಗಿ ಕೂಗಿ ಕರೆದೆವು ನಮ್ಮ ಕೂಗು ಅವರಿಗೆ ಕೇಳಿಸಿದ ಮೇಲೆ ದೂರದಲ್ಲೆ ನಿಂತು ನಮ್ಮನ್ನು ಕೂಗಿ ಹಳ್ಳ ಬಿಟ್ಟು ಮೇಲೆ ಬರಲು ತಿಳಿಸಿದರು, ಹಾದಿನೇ ಇಲ್ಲದ ಪೊದೆಯಲ್ಲಿ ಹೇಗೋ ನುಸುಳಿ ಮತ್ತೆ ಅವರನ್ನ ಸೇರಿಕೊಂಡೆವು.


ಮಾರ್ಗಧರ್ಶಿ ನೆರವಿಲ್ಲದೆ ಬಂದರೆ ಕಾಡಿನಲ್ಲಿ ಕಳೆದು ಹೋಗುವುದು ಖಚಿತ, ಚಾರಣದ ಹಾದಿ ಸವೆಸುತ್ತ ಸವೆಸುತ್ತ ಹಾದಿ ಕಿರಿದಾಗತೊಡಗಿತು ಕಾಳಿಂಗಸರ್ಪಗಳ ತವರೂರಾಗಿರುವ ಈ ದಟ್ಟ ಕಾನನದಲ್ಲಿ ನಾವು ಸ್ವಲ್ಪ ಎಚ್ಚರವಹಿಸಿ ಚಾರಣ ಮಾಡುತ್ತಿದ್ದೆವು, ಏರು ಹಾದಿ ಇರದ ಕಾರಣ ಅಷ್ಟೇನು ಶ್ರಮ ಅನ್ನಿಸುತ್ತಿರಲಿಲ್ಲ, ಮರಗಳ ಬೇರು ಬಿಳಲುಗಳೇ ನಮಗೆ ಕಾಳಿಂಗಗಳ ಹಾಗೆ ಗೋಚರಿಸುತ್ತಿದ್ದವು, ಆದರೂ ಒಂದಾದರೂ ಕಾಳಿಂಗ ಸರ್ಪದ ಧರ್ಶನ ಕೂಡ ಆಗಲಿಲ್ಲ, ಕೃಷ್ಣಪ್ಪನವರನ್ನು ಕೇಳಲಾಗಿ ಅವು ಪೊದೆ,ಪೊಟರೆ ಕೆಲವೊಮ್ಮೆ ಮರದ ಮೇಲೂ ಇರುತ್ತವೆಂದು ಹೇಳಿ ಮುಂದೆ ಸಾಗುತ್ತಿದ್ದರು, ಅಷ್ಟೊತ್ತಿಗೆ ನೀರಿನ ಹಳ್ಳವೊಂದು ಸಿಕ್ಕಿತು ಬಾಯಾರಿಕೆ ನೀಗಿಸಿಕೊಂಡು ಚಾರಣ ಮುಂದುವರಿಸಿದೆವು,ಸೂರ್ಯನ ಬಿಸಿಲೆ ಕಾಣದ ಈ  ದುರ್ಗಮ ಕಾಡಿನಲ್ಲಿ ಹಕ್ಕಿಗಳ ಕಲರವ ಬಿಟ್ಟರೆ ಮಿಕ್ಕೆಲ್ಲ ನೀರವ ಮೌನ.

ಆಗಾಗ ನಾನು  ಕೃಷ್ಣಪ್ಪನವರನ್ನು ಮಾತನಾಡಿಸುತ್ತ ನೀವು ಇಲ್ಲಿ ಯಾವಾವ ಪ್ರಾಣಿ ನೋಡಿದ್ದೀರಾ?

ಕೃಷ್ಣಪ್ಪ: ನಾನು ಹಲವಾರು ಸಾರಿ ಹುಲಿ ನೋಡಿದ್ದೀನಿ

ನಾನು: ತೊಂದರೆ ಗಿಂದರೆ ಏನಾದ್ರು...?

ಕೃಷ್ಣಪ್ಪ: ಇಲ್ಲ, ಏನೂ ತೊಂದರೆ ಮಾಡಲ್ಲ, ನಾವು ಅದಕ್ಕೆ ತೊಂದರೆ ಕೊಡಬಾರದು ಅಷ್ಟೆ!
           
ನಮಗೂ ನೋಡುವ ಆಸೆ ಇದ್ದರೂ ಆ ದೃಶ್ಯವನ್ನು ನೆನೆಸಿಕೊಂಡ್ರೆ ಸಾಕು ಈ ತಂಪಾದ ಕಾಡಿನಲ್ಲಿ ಯಾರಿಗೆ ತಾನೆ ಬೆವರು ಬರುವುದಿಲ್ಲ?

ಹೀಗೆ ಮುಂದೆ ಸಾಗುತ್ತ ಇರುವಾಗ ಒಂದು ಚಿಕ್ಕ ಹೊಳೆ ಅಡ್ಡಲಾಗಿ ಸಿಕ್ಕಿತು ಹೊಳೆ ದಾಟಿ ಮುನ್ನಡೆದ ನಾವು ತುಸು ಹೊತ್ತಿನಲ್ಲೆ ಬರ್ಕಣ ಜಲಪಾತದ ತುದಿ ತಲುಪಿದೆವು ೧೧:೩೦,

ಬಳಿಕ ಬೆನ್ನು ಚೀಲಗಳನ್ನಿಳಿಸಿ ಕ್ಯಾಮೆರ ಹಿಡಿದು ಬಂಡೆಗಲ್ಲಿನ ಮೇಲೆ ಒಬ್ಬೊಬ್ಬರೆ ಬೋರಲಾಗಿ ಮಲಗಿ ಕಣಿವೆಯ ಸುಂದರ ದೃಶ್ಯವನ್ನ ಸವಿದು ಸೆರೆಹಿಡಿಯುತ್ತಿದ್ದರು, ಬಂಡೆಯ ಮೇಲೆ ನಾನು ಕೂಡ ಸ್ವಲ್ಪ ಹುಷಾರಾಗಿ ಹೆಜ್ಜೆ ಹಿಡುತ್ತ  ಬೋರಲಾಗಿ ಮಲಗಿ ಮೇಲಿಂದ ಕಣಿವೆಯ ಕಡೆಗೆ ಕಣ್ಣಾಯಿಸಿದೆ.


ಬರ್ಕಣ ಜಲಪಾತದ ಮೇಲಿನ ದೃಶ್ಯ


ಅಬ್ಬಾ! ಜೋಗದ ಗುಂಡಿಯಂತೆ ಕಾಣುವ ಆಳವಾದ ಕಣಿವೆ,

ಸುಮಾರು ೮೫೦ ಅಡಿ ಎತ್ತರದಿಂದ ಈ ಸ್ಥಳದಲ್ಲಿ ಧುಮುಕುವ ಸೀತಾ ನದಿ
"ಬರ್ಕಣ ಜಲಪಾತ"ವೆಂದು ಪ್ರಸಿದ್ಧಿ ಪಡೆದಿದೆ.


ಬರ್ಕಣ ಜಲಪಾತದ ಮೇಲಿಂದ ತೆಗೆದ ದೃಶ್ಯ  

ಜಲಪಾತದ ಎದುರಿಗೆ ಇರುವ "ವಿಹಂಗಮ ನೋಟದ" ಸ್ಥಳದಿಂದ ನಿಂತು ನೋಡಿದರೆ "v" ಆಕಾರದಂತೆ ಕಾಣುವ ಈ ಸುಂದರ ಕಣಿವೆಯ ಸುತ್ತಲೂ ಹಸಿರ ಸೀರೆಯುಟ್ಟ ಹೊನ್ನ ವನರಾಶಿಯ ನಯನ ಮನೋಹರ ದೃಶ್ಯ ಕಾಣಸಿಗುತ್ತದೆ.


ಬರ್ಕಣ ಜಲಪಾತದ ಮೇಲಿಂದ ಕಣಿವೆಯತ್ತ ಒಂದು ನೋಟ...

ಸಿಕ್ಕ ಅವಕಾಶ ಬಿಡದೇ ನನ್ನ ಕ್ಯಾಮೆರಕ್ಕೆ ಬಿಡುವು ಕೊಡದೆ ಸುಂದರ ದೃಶ್ಯಗಳನ್ನ ಸೆರೆಹಿಡಿಯತೊಡಗಿದೆ, ಅಷ್ಟೊತ್ತಿಗಾಗಲೆ ನಮ್ಮ ಹೊಟ್ಟೆಗಳು ಚುರ್‌ಗುಟ್ಟಲು ಶುರುಮಾಡಿದೆವು, ತಡ ಮಾಡದೆ ಚಪಾತಿ ಮತ್ತು MTR ನ ಬಿಸಿಬೇಳೆಬಾತ್ ತಿಂದು ಹಸಿವನ್ನು ಸ್ವಲ್ಪ ಮಟ್ಟಿಗೆ ನೀಗಿಸಿಕೊಂಡೆವು.



ಬಳಿಕ ಜಲಕ್ರೀಡೆಯಾಡುವ ಹಂಬಲದಿಂದ ಮೊದಲು ಗಜೇಂದ್ರ ನೀರಿಗೆ ಇಳಿದೇಬಿಟ್ಟರು ನಂತರ ನಾವು ಒಬ್ಬೊಬ್ಬರಾಗೆ ನೀರಿಗೆ ಇಳಿದೆವು, ಹರಿಯುವ ನೀರಿನಲ್ಲಿ ಸೃಷ್ಟಿಯಾಗಿದ್ದ ಕಿರು ಜಲಪಾತದಿಂದ ಬೀಳುತಿದ್ದ ಜಲಧಾರೆಗೆ ಮೈಯೊಡ್ಡಿದ ಅಧ್ಭುತ ಅನುಭವ ಎಂದಿಗೂ ಮರೆಯಲಾಗದು.


ಗಜೇಂದ್ರ ಮತ್ತು ಸಾಯಿ ಇಬ್ಬರು ಹೊಳೆಯಲ್ಲಿ ಕಿರು ಜಲಪಾತಗಳ ಅನ್ವೇಷಣೆ ಮಾಡುತ್ತ ಮುಂದೆ ಮುಂದೆ ಹೋಗುತಿದ್ದರು,ಬಳಿಕ ನಮ್ಮನ್ನು ಕೂಗಿ ಕರೆದು ಬರಲು ಹೇಳಿದರು, ನಾನು ಮತ್ತು ಸಂತೋಷ್ ಕ್ಯಾಮೆರ ಹಿಡಿದು ಹೊರಟೆವು, ಜಾರಿ ಬೀಳುವ ಅವಕಾಶಗಳೇ ಹೆಚ್ಚಾಗಿದ್ದರಿಂದ ಬಂಡೆಗಲ್ಲಿನ ಮೇಲೆ ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಿದ್ದೆವು ನನ್ನ ಕ್ಯಾಮೆರವನ್ನು ಸಂತೋಷ್ ಕೈಗೆ ಕೊಟ್ಟು  ನೀವು ನನ್ನನ್ನು ಹಿಂಬಾಲಿಸಿ ಎಂದು ಹೊಂಡದಂತಿದ್ದ ಜಾಗಕ್ಕೆ ಹುಷಾರಾಗಿ ಇಳಿದೆ ನಡು ಮಟ್ಟದ ನೀರಿತ್ತು ಹಿಂದೇನೆ ಸಂತೋಷ್ ಕೂಡ ಇಳಿಯುವ ಭರದಲ್ಲಿ  ಆಯತಪ್ಪಿ ಕ್ಯಾಮೆರ ಸಹಿತ ನೀರಿಗೆ ಮಗುಚಿಕೊಂಡ್ರು,
ನನ್ನ ಕ್ಯಾಮೆರಕ್ಕೆ ಲಕ್ವ ಹೊಡೆದು ಮಠ ಸೇರಿತು, ತಕ್ಷಣವೇ ಕ್ಯಾಮೆರದ ಬ್ಯಾಟರಿ ತೆಗೆದು ಬಿಸಿಲಿನಲ್ಲಿ ಒಣಗಲು ಬಿಟ್ಟು ಗಜೇಂದ್ರ ಮತ್ತು ಸಾಯಿ ಇದ್ದ ಸ್ಥಳಕ್ಕೆ ಬಂದೆವು, ಗಜೇಂದ್ರರವರು ಒಂದು ಉದ್ದದ ಕೋಲೊಂದನ್ನು ಹವಣಿಸಿ ತಂದು ನೀರು ಬೀಳುತಿದ್ದ ಸ್ಥಳದಲ್ಲಿ ಕೋಲನ್ನು ಬಿಟ್ಟು ಆಳವನ್ನು ಪರೀಕ್ಷೆ ಮಾಡತೊಡಗಿದರು.

ಅರೇ! ಕೋಲು ಸಂಪೂರ್ಣ ಮುಳುಗಿತು ಮತ್ತೆ ಕೋಲನ್ನು ಹೊರ ತೆಗೆದು ಅಳತೆ ಮಾಡಿದಾಗ ಕೇವಲ ಹನ್ನೆರಡು ಅಡಿ ಇತ್ತು, ಇನ್ನೆಲಲ್ಲಿ ಎಷ್ಟು ಆಳ ಇದೆಯೋ? ಅಂದುಕೊಂಡು ಬೇಗನೇ ಜಲಕ್ರೀಡೆ ಮುಗಿಸಿ ಕ್ಯಾಮೆರ ಇಟ್ಟಿದ್ದ ಸ್ಥಳಕ್ಕೆ ಬಂದೆ ಆದರೆ ಸಂಪೂರ್ಣ ಉಸಿರೆ ನಿಂತುಹೋಗಿತ್ತು.

ಅಷ್ಟೊತ್ತಿಗೆ ಕೃಷ್ಣಪ್ಪನವರು ಬಹಳ ಹೊತ್ತಾಯ್ತು ಹೊರಡೋಣ್ವ? ಅಂದ್ರು

ನಾನು ಅದೇ ಆತುರದಲ್ಲಿ ಕ್ಯಾಮೆರದ ಮೆಮೋರಿ ಕಾರ್ಡು ಬೀಳಿಸಿಬಿಟ್ಟೆ ,ಏನ್ ಗ್ರಹಚಾರವೊ?  ಎಲ್ಲರೂ ಹುಡುಕಲು ಶುರುಮಾಡಿದೆವು ಎಷ್ಟು ಹುಡುಕಿದರೂ ಸಿಗಲಿಲ್ಲ ನಿರಾಶೆಯಾಗಿ ಹೊರಡುವ ಹೊತ್ತಿಗೆ ಎಲ್ಲಿತ್ತೊ ಏನೋ ಯಾರ್ ಕಣ್ಣಿಗೆ ಬೀಳದ್ದು ಸಂತೋಷ್ ಕಣ್ಣಿಗೆ ಬಿದ್ದಿತ್ತು.

ಬಳಿಕ ತಡಮಾಡದೆ ಬರ್ಕಣ ಕಣಿವೆಗೆ ಧನ್ಯವಾದ ಹೇಳಿ ಹೊರಟಾಗ ಸಮಯ ಮದ್ಯಾಹ್ನ ೦೧:೫೦
ಮುಂದೆ ನಡೆಯುತ್ತ ನಡೆಯುತ್ತ ಏರು ಹಾದಿ ಶುರುವಾಯ್ತು ಆ ತಂಪಾದ ಕಾಡಿನಲ್ಲೂ ನಮಗೆ ಬೆವರಿಳಿಯುತಿತ್ತು, ಸೂರ್ಯನ ಕಿರಣಗಳೇ ಬೀಳದ ನಿತ್ಯಹರಿದ್ವರ್ಣದ ದಟ್ಟ ಮಳೆಕಾಡಿನಲ್ಲಿ ಜೀರುಂಡೆ, ಪಕ್ಷಿಗಳ ಇಂಚರ ಬಿಟ್ರೆ ಸುತ್ತೆಲ್ಲಾ ನಿಶ್ಯಬ್ದ ವಾತವರಣ.


ದಟ್ಟ ಕಾನನದಲ್ಲಿ...

ಸುಮಾರು ಎರಡು ಕಿ.ಮೀ ನಡೆದು ಬೆಟ್ಟವನ್ನೇರಿ ದಟ್ಟಕಾಡನ್ನು ಬಿಟ್ಟು ಬಯಲಿನಂತ ಜಾಗಕ್ಕೆ ಬಂದೆವು, ಹಾದಿ ಕವಲಾಗಿತ್ತು ನಾವು ನೇರ ಹಾದಿ ಹಿಡಿದು ಹೊರಟೆವು, ಮಾರ್ಗದರ್ಶಿ ಕೃಷ್ಣಪ್ಪನವರು ನಮ್ಮನ್ನು ನರಸಿಂಹ ಪರ್ವತಕ್ಕೆ ಬಿಟ್ಟು ಬಹುಬೇಗ ಹೊರಡುವ ಆತುರದಲ್ಲಿದ್ದುದರಿಂದ ನಾವೆಲ್ಲರೂ ಅವರನ್ನು ಮುಂದೆ ಹೋಗಲು ಹೇಳಿದೆವು ಅವರು ನಮ್ಮಿಂದ ಚಾರಣ ಶುಲ್ಕ ೧೧೦೦ ರೂಪಾಯಿ ಪಡೆದು ಇನ್ನಿಬ್ಬರು ಚಾರಣಿಗರೊಂದಿಗೆ ಹೊರಟರು, ವಿಶ್ರಮಿಸಿಕೊಳ್ಳಲು ನಾವು ಅಲ್ಲೆ ಸ್ವಲ್ಪ ಹೊತ್ತು ಕುಳಿತೆವು.



ಸುಮಾರು ಅರ್ಧ ತಾಸಿನ ಬಳಿಕ ಬೆನ್ನುಚೀಲಗಳನ್ನೇರಿಸಿ ಹೊರಡಲು ಸನ್ನದ್ದರಾದೆವು, ಮುಂದೆ ನೋಡಿದರೆ ಹಾದಿನೇ ಕಾಣುತಿಲ್ಲ ಎಲ್ಲರೂ ಒಂದೊಂದ್ದು ಕಡೆ ಹಾದಿ ಹುಡುಕಲು ಹೊರಟೆವು ಹಾದಿ ಕಾಣದೆ ನಿರಾಶೆಗೊಂಡು ವಾಪಾಸ್ ಬಂದೆವು ಹೀಗೆ ಸುಮಾರು ಹೊತ್ತಿನ ತನಕ ಹುಡುಕಾಟ ನೆಡೆಯುತ್ತಿದ್ದ ಹೊತ್ತಿನಲ್ಲಿ ಸಂತೋಷ್ ನಮ್ಮನ್ನು ಕೂಗಿ ಕರೆದು ಬನ್ನಿ ಎನ್ನುವಂತೆ "ಗ್ರೀನ್ ಸಿಗ್ನಲ್" ಕೊಟ್ರು, ಅಸ್ಪಸ್ಟವಾಗಿ ಕಾಣುತಿದ್ದ ಜಾಡನ್ನಿಡಿದು ಕಾಡಿನೊಳಗೆ ಕೆಲವು ನಿಮಿಷಗಳ ಚಾರಣ ಸವೆಸಿ ಕಾಡನ್ನು ಬಿಟ್ಟು ಬಯಲಿನಂತಹ ಜಾಗಕ್ಕೆ ಬಂದೆವು.

ಅಲ್ಲಲ್ಲಿ ಬಿದ್ದಿದ್ದ ಕಪ್ಪು ಕಲ್ಲುಗಳ ನಡುವೆ ಸ್ವಲ್ಪ ದೂರ  ನೇರವಾಗಿ ನಡೆದು ಎದುರಿಗೆ ಸಿಕ್ಕ ಸಣ್ಣ ಗುಡ್ಡೆಯ ಅಂಚಿನಲ್ಲಿ ಬಲಕ್ಕೆ ವಾಲಿದಂತಹ ಹಾದಿಯಲ್ಲಿ ಸ್ವಲ್ಪ ದೂರ ನಡೆದು ಅನಂತರ ಮುಖ ನೇರಕ್ಕೆ ಕಾಣುತಿದ್ದ ಸ್ವಲ್ಪ ಎತ್ತರದ ಬೋಳುಗುಡ್ಡ ಏರಿದೆವು ಸಾಲದೆಂಬಂತೆ ಬಿಸಿಲಿನ ಝಳಕ್ಕೆ ಬೆವರು ಕಿತ್ತು ಬರುತಿತ್ತು.


ಅಲ್ಲಲ್ಲಿ ಜಿಲ್ಲಾ ಗಡಿ ಗುರುತಿಗೆ ಹಾಕಿದ್ದ ರಾಶಿ ರಾಶಿ ಕಲ್ಲು ಗುಡ್ಡೆಗಳು ನಮ್ಮ ಕಣ್ಣಿಗೆ ಬಿದ್ದವು,ಇನ್ನೇನು ಬೋಳುಗುಡ್ಡದ ಹಾದಿ ಮುಗಿಯುತ್ತಿದ್ದಂತೆ ಮತ್ತೆ ಕಾಡೊಳಕ್ಕೆ ನುಗ್ಗಿದ ನಾವು ಕೆಲವು ನಿಮಿಷಗಳ ಬಳಿಕ ಕಾಡನ್ನು ಬಿಟ್ಟು ಎತ್ತರದಲ್ಲಿದ್ದ ಬಯಲು ಪ್ರದೇಶದಲ್ಲಿ ಬಂದು ನಿಂತೆವು, ಗಜೇಂದ್ರರವರು ಇದೇ ನರಸಿಂಹ ಪರ್ವತ ಎಂದು ಹೇಳುತ್ತಿದ್ದರೂ ಕೂಡ ಸಾಕ್ಷಿಗೆ ಯಾವ ಕುರುಹು ಕಾಣುತಿರಲಿಲ್ಲ, ಕಾಣುತ್ತಿದ್ದುದ್ದು ಬರೀ ಕಪ್ಪು ಬಂಡೆಗಲ್ಲುಗಳು ಮಾತ್ರ  ಇನ್ನು ಸ್ವಲ್ಪ ದೂರ ನಮ್ಮ ನೇರಕ್ಕೆ ನಡೆದ ಮೇಲೆ ನಮ್ಮ ಕಣ್ಣಿಗೆ ಕಂಡಿದ್ದು ಮಾನವ ನಿರ್ಮಿತ ಕಟ್ಟಡ ಇದೇ ನರಸಿಂಹ ಪರ್ವತವೆಂದು ಖಾತ್ರಿಯಾಯ್ತು, ಪುನಃ ಇಳಿಜಾರಿನಲ್ಲಿ ಇಳಿದು ಆ ಕಟ್ಟಡದ ಬಳಿ ಬಂದೆವು.


ಬೆಳಿಗ್ಗೆಯಿಂದ ನಮ್ಮ ಜೊತೆ ಚಾರಣ ಮಾಡಿದ್ದ ಆ ಇಬ್ಬರು ಚಾರಣಿಗರು ಆಗಲೇ ಟೆಂಟ್ ನಿರ್ಮಿಸಿ ವಿಶ್ರಾಂತಿ ಪಡೆಯುತ್ತಿದ್ದರು, ಬಿಸಿಲಿನ ಬೇಗೆಗೆ ನಮ್ಮ ನೀರಿನ ಬಾಟೆಲ್‌ಗಳು ಖಾಲಿಯಾಗಿ ಭಣಗುಡುತ್ತಿದ್ದವು ಆಗಲೇ ಸಮಯ ಸಂಜೆ ೫:೩೦.

ಬೆನ್ನುಚೀಲಗಳನ್ನಿಳಿಸಿ ಸನಿಹದಲ್ಲೇ ಇದ್ದ ನೀರಿನ ಹೊಂಡದ ಬಳಿ ತೆರಳಿ ಪಾತ್ರೆ ಮತ್ತು ಬಾಟೆಲ್‌ಗಳಲ್ಲಿ ನೀರು ತುಂಬಿಸಿಕೊಂಡು ಪಾಳು ಮನೆಯಲಿದ್ದ ಒಲೆಯ ಮೇಲೆ ಪಾತ್ರೆ ಇಟ್ಟು ಬಿಸಿ ಬಿಸಿ ಚಹಾ ಮಾಡಿ ಕುಡಿದಾಗ ಬಸವಳಿದಿದ್ದ ನಮಗೆ ಸ್ವಲ್ಪ ನೆಮ್ಮದಿ ಸಿಕ್ಕಂತಾಯ್ತು.


ತದನಂತರ ನಾವು ಟೆಂಟ್ ಹಾಕಿ ಸುಂದರ ಸಂಜೆಯ ಸೂರ್ಯಸ್ತಮದ ನೋಟ ಸವಿಯಲು ಪಶ್ಚಿಮ ದಿಕ್ಕಿನಲ್ಲಿದ್ದ ಸಣ್ಣ ಗುಡ್ಡ ಏರಿದೆವು, ಸಾಯಿಪ್ರಕಾಶ್ ಮಾತ್ರ ಗುಡ್ಡ ಏರದೇ ಅಲ್ಲಿಯೇ ಇದ್ದ ಒಂದು ಬಂಡೆಯ ಮೇಲೆ ಕುಳಿತರು, ಅಷ್ಟೊತ್ತಿಗಾಗಲೇ ಸೂರ್ಯನು ತನ್ನ ಲೋಕಕ್ಕೆ ಮರಳುತಿದ್ದ ಸೊಬಗಂತೂ ವರ್ಣಿಸಲಸಾದ್ಯವಾಗಿತ್ತು.

ನನ್ನ ಕ್ಯಾಮೆರ ಕೈಕೊಟ್ಟಿದ್ದರಿಂದ ಆ ಸುಂದರ ಸಂಜೆಯ ನೋಟವನ್ನು ಕ್ಯಾಮೆರದಲ್ಲಿ ಸೆರೆಹಿಡಿಯದೆ ಬರಿಗಣ್ಣಿನಲ್ಲಿ ಸವಿಯುತ್ತ ಬಂಡೆಯ ಮೇಲೆ ಕುಳಿತುಬಿಟ್ಟಿದ್ದೆ, ಗಜೇಂದ್ರ ಮತ್ತು ಸಂತೋಷ್ ಇಬ್ಬರು ಛಾಯ ಚಿತ್ರ ತೆಗೆಯುವುದರಲ್ಲೇ ಮಗ್ನರಾಗಿದ್ದರು.



ಸೂರ್ಯಾಸ್ತಮದ ವಿಹಂಗಮ ದೃಶ್ಯ

ಅಷ್ಟೊತ್ತಿಗಾಗಲೇ ಸುತ್ತಲೂ ಕತ್ತಲು ಆವರಿಸಿತು ಮತ್ತೆ ನಮ್ಮ ಜಾಗಕ್ಕೆ ವಾಪಸಾಗಿ ಆಗಲೇ ಆ ಇಬ್ಬರು ಸಹ ಚಾರಣಿಗರು ಶಿಭಿರಾಗ್ನಿ ಹೊತ್ತಿಸಿಬಿಟ್ಟಿದ್ದರು, ರಾತ್ರಿಯಿಡಿ ಉರಿಯಲು ಮತ್ತಷ್ಟು ಸೌದೆಗಳನ್ನು ಕಲೆಹಾಕಿದೆವು, ಬಳಿಕ ನಾವು  ಒಲೆ ಮೇಲೆ ಪಾತ್ರೆ ಇಟ್ಟು ನೀರು ಬಿಸಿ ಮಾಡಿ ನ್ಯೂಡಲ್ಸ್ ಸಿದ್ದಪಡಿಸುತ್ತಿದ್ದರೆ, ಸಾಯಿಪ್ರಕಾಶ್ ಅಲೂಗೆಡ್ಡೆ ಪುಡಿಗೆ ಬಿಸಿ ನೀರು ಸೇರಿಸಿ ಆಲೂಮ್ಯಾಶ್ ತಯಾರಿಸುತ್ತಿದ್ದರು ಬಳಿಕ ಎಲ್ಲರೂ ಊಟ ಮುಗಿಸಿ ಸ್ವಲ್ಪ ಹೊತ್ತು  ಶಿಭಿರಾಗ್ನಿ ಬಳಿ ಕುಳಿತೆವು ನಂತರ ಗಜೇಂದ್ರ ಮತ್ತು ಸಾಯಿ ಪ್ರಕಾಶ್ ಟೆಂಟ್‌ನೊಳಗೆ ಹೋಗಿ ನಿದ್ರೆಗೆ ಶರಣಾದರು, ನಾನು ಮತ್ತು ಸಂತೋಷ್ ಸುಮಾರು ಹೊತ್ತಿನ ತನಕ ಶಿಭಿರಾಗ್ನಿ ಮುಂದೆ ಮಾತನಾಡುತ್ತ ಕುಳಿತಿದ್ದೆವು, ಬಳಿಕ ನಿದ್ರೆ ಮಾಡುವ ಸಲುವಾಗಿ ಶಿಭಿರಾಗ್ನಿ ಪಕ್ಕದಲ್ಲಿಯೇ ಸ್ಲೀಪಿಂಗ್ ಮ್ಯಾಟ್ ಹಾಸಿ ಮಲಗಿದೆವು ತಕ್ಷಣಕ್ಕೆ ನಿದ್ದೆಯೂ ಬರಲಿಲ್ಲ.

ನನ್ನ ಮನಸಿನಲ್ಲಿ ಏನೋ ತಳಮಳ!

ಏಕೆಂದರೆ ನಾವಿದಿದ್ದು ನಕ್ಷಲೈಟ್ ಪೀಡಿತ ಶಿಖರದ ತುದಿಯಲ್ಲಿನ ಕಾಡೊಂದರ ಕಗ್ಗತ್ತಲಿನಲ್ಲಿ, ಒಂದು ವೇಳೆ ನಕ್ಷಲೈಟ್ ಎಂದು ಪೊಲೀಸರು, ಪೊಲೀಸರೆಂದು ನಕ್ಷಲೈಟ್‌ಗಳು ಅಂತಾ ತಿಳಿದು ಏನಾದರೂ ಅವಘಡ ಸಂಭವಿಸಿದ್ರೆ?

ಸಂತೋಷ್‌ನನ್ನು ಎಬ್ಬಿಸಿ ಮನವರಿಕೆ ಮಾಡಿ ನಂತರ ಪಾಳುಮನೆಯಲ್ಲಿ ಹೋಗಿ ಮಲಗಿದೆವು, ಜೋರಾಗಿ ಬೀಸುತಿದ್ದ ಗಾಳಿಯ ಸದ್ದಿಗೆ ನನಗೆ ನಿದ್ರೆಯಿಂದ ಅನೇಕ ಬಾರಿ ಎಚ್ಚರವಾಗುತಿತ್ತು, ಬಳಿಕ ಕಣ್ಮುಚ್ಚಿದ್ದು ಗೊತ್ತಾಗಲಿಲ್ಲ.

ಗಜೇಂದ್ರ: ಮೋಹನ್ ಬೇಗ ಏಳಿ ಸೂರ್ಯೋದಯ ನೋಡಲು ನಾವು ಹೋಗ್ತಾಯಿದ್ದೀವಿ ಎಂದು ಹೇಳಿ ಹೊರಟರು,

ತಕ್ಷಣವೆ ಎದ್ದು ಗಡಿಯಾರದ ಕಡೆ ಕಣ್ಣಾಯಿಸಿದಾಗ ಸಮಯ ೦೬:೪೫.

ತಡಮಾಡದೆ ಸೂರ್ಯೋದಯ ನೋಡುವ ಹಂಬಲದಿಂದ ಮುಂಜಾನೆಯ ತಂಗಾಳಿಯಲ್ಲಿ ಪರ್ವತದ ಅಂಚಿನತ್ತ ಹೊರಟೆ...

ಬೆಳಗಿನ ಹೊತ್ನಾಗೆ ಆಗಷ್ಟೆ ತಾನೆ ಬಾನಿನಲ್ಲಿ ಕೆಂಪು ಬಣ್ಣದೋಕುಳಿಯನ್ನು ಚೆಲ್ಲಿ ವರ್ಣಚಿತ್ತಾರದ ನಡುವೆ ಕೆಂಡದಂತೆ ಪುಟಿದೇಳುತ್ತಿದ್ದ ಅರುಣೋದಯದ ನೋಟ ಒಂದೆಡೆಯಾದರೆ ಆಗ ತಾನೆ ಮಲಗೆದ್ದ ಹಕ್ಕಿಗಳ ಚಿಲಿಪಿಲಿ ನಾದ ವರ್ಣನಾತೀತವಾಗಿತ್ತು.


ಸೂರ್ಯೋದಯದ ವೀಕ್ಷಣೆಯಲ್ಲಿ...

ಅಷ್ಟೊತ್ತಿಗಾಗಲೇ ಆ ಇಬ್ಬರೂ ಚಾರಣಿಗರು "ಹಾಯ್" ಹೇಳಿ ಹೊರಟರು, ಮತ್ತೆ ನಾವು ಟೆಂಟ್ ಬಳಿ ಬಂದು ಹಾಲು ಕಾಯಿಸಿ ಹಾಲಿನ ಜೊತೆ ಬಿಸ್ಕತ್ ತಿಂದು ಬೆಳಗಿನ ಉಪಹಾರ ಮುಗಿಸಿ ಟೆಂಟ್ ಬಿಚ್ಚಿಟ್ಟು ಬೆನ್ನು ಚೀಲ ಹೆಗಲಿಗೇರಿಸಿ ಹೊರಟಾಗ ಸಮಯ ೦೯:೨೫.

ಹಾದಿಯಲ್ಲಿ ನಿಂತು ನಾವಿದ್ದ ಸ್ಥಳದತ್ತ ಒಮ್ಮೆ ಹಿಂತಿರುಗಿ ನೋಡಿದಾಗ ಧನ್ಯತಾಭಾವ ನನ್ನ ಮನದಲ್ಲಿ ಮನೆ ಮಾಡಿತ್ತು.


ಪರ್ವತದ ತಪ್ಪಲಿನಲ್ಲಿರುವ ಕಿಗ್ಗ ಕೇವಲ ಒಂದೂವರೆ ಗಂಟೆಯ ಚಾರಣದ ಹಾದಿ ಆಗಲೇ ಬಿಸಿಲಿನ ಕಾವು ತಾರಕಕ್ಕೇರಿತು, ಹಾದಿಯುದ್ದಕ್ಕೂ ಮರಗಳಿದ್ದ ಕಾರಣ ಅಷ್ಟೇನು ಆಯಾಸಪಡದೆ ಪರ್ವತವನ್ನಿಳಿದು ಕೆಳಗೆ ಬಂದ ನಮಗೆ ಅಲ್ಲೊಂದು ಮನೆ  ಕಣ್ಣಿಗೆ ಬಿತ್ತು ಜೊತೆಗೆ ಬಾಯಾರಿಕೆಯ ದಾಹ ಬೇರೆ, ನೀರಿನ ದಾಹ ನೀಗಿಸಲು ಮನೆಯ ಬಳಿ ಬರುತ್ತಿದ್ದ ನಮ್ಮನ್ನು ದೂರದಿಂದಲೇ ನೋಡಿದ ವ್ಯಕ್ತಿಯೊಬ್ಬರು ಮನೆಯ ಒಳಗೆ ಹೊರಟು ಹೋದರು, ನಾವು ಮರದ ಗೇಟ್ ಪಕ್ಕಕ್ಕೆ ಸರಿಸಿ ಒಳ ಹೊಕ್ಕುವಷ್ಟರಲ್ಲಿ ನೀರು ತುಂಬಿದ ತಂಬಿಗೆ ಹಿಡಿದು ಬಂದ ಆ ಪುಣ್ಯಾತ್ಮರು ನಮ್ಮ ಬಾಯಾರಿಕೆ ನೀಗಿಸಿದರು, ಒಂದೇ ಸಮನೆ ಬೊಗಳುತಿದ್ದ ನಾಯಿ ಹೆದರಿ ನಡುಗುತಿತ್ತು, ಬಳಿಕ ಅವರನ್ನು ಮಾತನಾಡಿಸಿದಾಗ ನಕ್ಷಲ್ ನಿಗ್ರಹ ಪಡೆಯ ಪೊಲೀಸರು ವಿಚಾರಣೆಗೆಂದು ಆಗಾಗ ಬರುತ್ತಾರೆಂಬ ವಿಷಯ ತಿಳಿಯಿತು.

ಹೀಗೆ ಒಂದು ದಿನ ವಿಚಾರಣೆಗೆಂದು ಬಂದ ಸಂದರ್ಭದಲ್ಲಿ ಅತಿಯಾಗಿ ನಾಯಿ ಬೊಗಳುವುದನ್ನು ಕಂಡ ಪೊಲೀಸ್ ಪೇದೆಯೊಬ್ಬ ಬಂದೂಕಿನ ಹಿಡಿಯಿಂದ ಹೊಡೆದನಂತೆ, ಅದಕ್ಕೆ ಈಗಲೂ ಪೊಲೀಸರನ್ನು ಕಂಡರೆ ಭಯದಿಂದ ನಡುಗುವುದಂತೆ, ಹೆದರಿ ನಡುಗುದನ್ನು ಕಂಡ ನಾವು ಕನಿಕರದಿಂದ ಸ್ವಲ್ಪ ಬಿಸ್ಕತ್‌ಗಳನ್ನು ಹಾಕಿದಾಗ ಹೆದರಿಕೆಯಿಂದ ತಿನ್ನದೇ ಭಯದಿಂದ ನಮ್ಮತ್ತ ನೋಡುತ್ತಲ್ಲೇ ಇತ್ತು.

ಬಳಿಕ ಅವರಿಗೆ ನಾವು ತುಂಬು ಹೃದಯದ ಧನ್ಯವಾದಗಳನ್ನರ್ಪಿಸಿ ಹೊರಟು ಕಿಗ್ಗ ದೇವಸ್ಥಾನದ ಬಳಿ ಬಂದೆವು, ಪಕ್ಕದಲ್ಲೆ ಇದ್ದ ಅಂಗಡಿಯೊಂದರಲ್ಲಿ ಬೆನ್ನು ಚೀಲಗಳನ್ನು ಇಟ್ಟು ಕಿಗ್ಗದ ಪ್ರಸಿದ್ಧ ಋಷ್ಯ ಶೃಂಗೇಶ್ವರ ದೇವಸ್ಥಾನಕ್ಕೆ ತೆರಳಿ ಧರ್ಶನ ಮಾಡಿ ಅಲ್ಲಿಂದ ಅಟೋ ಹತ್ತಿ ಸಿರಿಮನೆ ಜಲಪಾತದತ್ತ ಹೊರಟೆವು.


ಸಿರಿಮನೆ ಜಲಪಾತ

ಸಿರಿಮನೆ ಜಲಪಾತಕ್ಕೆ ನನ್ನ ಎರಡನೇ ಭೇಟಿ ಅದಾಗಿತ್ತು, ಸುಮಾರು ಇಪ್ಪತ್ತು ಅಡಿ ಎತ್ತರದಿಂದ ರಭಸವಾಗಿ ಬೀಳುತಿದ್ದ ಮುತ್ತಿನ ಹನಿಗಳಿಗೆ ಮೈಯೊಡ್ಡಿ ಅನುಭವಿಸಿದ ಆ ಸುಂದರ ಕ್ಷಣಗಳು ನಮ್ಮ ಆಯಾಸವನ್ನ ದೂರ ಮಾಡಿತು.


ಸಿರಿಮನೆಯಲ್ಲಿ ಸಂತೋಷ್, ಗಜೇಂದ್ರ, ಸಾಯಿಪ್ರಕಾಶ್ ಮತ್ತು ನಾನು

ಹೀಗೆ ಸುಮಾರು ಹೊತ್ತು ಜಲಪಾತದಲ್ಲಿ ಆಟವಾಡಿ ನಂತರ ಅದೇ ಆಟೋ ಹತ್ತಿ ಮತ್ತೆ ಕಿಗ್ಗಕ್ಕೆ ಬಂದು ಅಂಗಡಿಯೊಂದರಲ್ಲಿ ಇಟ್ಟಿದ್ದ ಬೆನ್ನು ಚೀಲಗಳನ್ನು ಆಟೋದಲ್ಲಿ ತುಂಬಿಕೊಂಡು ನಾವು ನೇರವಾಗಿ ಶೃಂಗೇರಿ ಕಡೆ ಪ್ರಯಾಣ ಬೆಳೆಸಿದೆವು.

ಮದ್ಯಾಹ್ನದ ಸಮಯ ೦೧:೩೦ ರ ಹೊತ್ತಿಗೆ ಶೃಂಗೇರಿಯಲ್ಲಿ ನಮ್ಮನ್ನು ಇಳಿಸಿದ ಆಟೋ ಚಾಲಕ "ಹಾಯ್" ಹೇಳಿ ಹೊರ‍ಟ, ನಂತರ ದೇವಸ್ಥಾನಕ್ಕೆ ತೆರಳಿದ ನಾವು ಶಾರದಾಂಭೆ ಮಾತೆಯ ಧರ್ಶನ ಮುಗಿಸಿ ಅಲ್ಲೆ ಭೋಜನ ಶಾಲೆಯಲ್ಲಿ ಪ್ರಸಾದ ಸ್ವೀಕರಿಸಿ ಅಲ್ಲಿಂದ ಹೊರಟು ಬಸ್ ನಿಲ್ದಾಣಕ್ಕೆ ಬಂದೆವು.

ಸಾಯಿಪ್ರಕಾಶ್, ಗಜೇಂದ್ರ ಮತ್ತು ಸಂತೋಷ್ ಕರ್ನಾಟಕ ಸಾರಿಗೆ ಬಸ್‌ನಲ್ಲಿ ಬೆಂಗಳೂರಿನ ಹಾದಿ ಹಿಡಿದರೆ ನಾನು ಮೈಸೂರಿಗೆ ಹೊರಡುವ ಬಸ್ ಬರುವ ತನಕ ಕಾದು ಕುಳಿತಿದ್ದೆ, ಕೊನೆಗೂ ಬಂದ ಸಾರಿಗೆ ಬಸ್ ಸಂಜೆ ೦೪:೩೦ ಕ್ಕೆ ಹೊರಟು ಬಾಳೆಹೊನ್ನೂರು,ಆಲ್ದೂರು,ಚಿಕ್ಕಮಗಳೂರು,ಹಾಸನ, ಹೊಳೆನರಸೀಪುರ ಮಾರ್ಗವಾಗಿ ಮೈಸೂರಿಗೆ ಬಂದಾಗ ಸಮಯ ರಾತ್ರಿ ೧೨:೦೦.

ಮೈಸೂರಿನಿಂದ ಬೆಂಗಳೂರಿಗೆ ಹೊರಡುವ ಮತ್ತೊಂದು ಬಸ್ ಹತ್ತಿ ಕೋರಿಕೆಯ ಮೇರೆಗೆ ನನ್ನೂರಾದ ಬೈರಾಪಟ್ಟಣದಲ್ಲಿ ಇಳಿದು ಮನೆ ಸೇರಿದಾಗ ರಾತ್ರಿ ಸಮಯ ಎರಡಾಗಿತ್ತು.


*** ಶುಭಂ ***


ಗುರುವಾರ, ಅಕ್ಟೋಬರ್ 14, 2010

ಅಮೇದಿಕಲ್ / ಮುಂಗಾರು ಚಾರಣ

ದಿನಾಂಕ: 03.07.2010, 04.07.2010 ಮತ್ತು 05.07.2010

ಎತ್ತರ: ಸಮುದ್ರ ಮಟ್ಟದಿಂದ ಸುಮಾರು ೧೨೫೦ ಮೀಟರ್.

ತಂಡ: ಗಜೇಂದ್ರ,ಚಂದಪ್ಪ (ಮಾರ್ಗದರ್ಶಿ) ಮತ್ತು ನಾನು ( ಮೋಹನ್).

ಚಾರಣದ ಅಂತರ : ೧೬ ಕಿ.ಮೀ + ೧೬ ಕಿ.ಮೀ.

******************************************************

ಗಜೇಂದ್ರರವರು ಕರೆ ಮಾಡಿ,
ಮೋಹನ್ ಎಲ್ಲಿಗಾದ್ರು ಚಾರಣಕ್ಕೆ ಹೋಗೊಣ್ವಾ?

ನಾನು: ಹೋಗೋಣ ಸಾರ್,

ಗಜೇಂದ್ರ: ಮೋಹನ್ ಎಲ್ಲಿಗೆ ಹೋಗೋಣ?

ನಾನು: ಪ್ಲಾನ್ ಮಾಡಿ ನಿಮಗೆ ಕರೆ ಮಾಡಿ ತಿಳಿಸ್ತೀನಿ ಸಾರ್,

ಗಜೇಂದ್ರ: ಸರಿ ಹಾಗೆ ಮಾಡಿ,

ನಾನು ಎಲ್ಲಿಗೆ ಹೋಗೋದು ಅಂತಾ ಯೋಚಿಸತೊಡಗಿದೆ,ಮುಂಗಾರು ಮಳೆ ಬೇರೆ ಕೊನೆಗೆ ಕರೆ ಮಾಡಿ ಎಡಕುಮರಿ ಚಾರಣದ ಬಗ್ಗೆ ಪ್ರಸ್ತಾಪಿಸಿದೆ, ಇದಕ್ಕೂ ಮೊದಲೂ ನಾನು ಎಡಕುಮರಿ ಚಾರಣ ಹೋಗಿದ್ದೀನಿ, ಸರಿ ಅಲ್ಲಿಗೇ ಹೋಗೋಣ ಅಂತ ಹೇಳಿದ್ರು, ಆಮೇಲೆ ಏಕೋ ಎನೋ ಎಡಕುಮರಿ ಚಾರಣ ಬೇಡ ಮೋಹನ್, ಯಾವುದಾದ್ರು ಹೊಸ ಜಾಗಕ್ಕೆ ಪ್ಲಾನ್ ಮಾಡಿ ಅಂತ ತಿಳಿಸಿದ್ರು.
ಕೊನೆಗೆ ಎತ್ತಿನಭುಜ ಅಥವಾ ಅಮೇದಿಕಲ್ ಗೆ ಹೋಗಲು ನಿರ್ಧರಿಸಿದೆವು, ಕೂಡಲೆ ನಾನು ಮಾರ್ಗದರ್ಶಿ ಚೆನ್ನಪ್ಪರವರಿಗೆ ಕರೆ ಮಾಡಿ ಚಾರಣಕ್ಕೆ ಬರುವ ವಿಷಯ ತಿಳಿಸಿದೆ,
ಅದಕ್ಕೆ ಅವರು ಇಲ್ಲಿ ಮಳೆ ಬರ್ತಾ ಇದೆ ಅಂದ್ರು, ಪರ್ವಾಗಿಲ್ಲ ನಾವು ಮಳೆಯಲ್ಲೇ ಚಾರಣ ಮಾಡುವುದಾಗಿ ತಿಳಿಸಿದೆ, ನೀವು ಯಾವುದಕ್ಕೂ ಹೊರ‍ಡುವ ಮುನ್ನ ದಿನ ಪುನಃ ಕರೆ ಮಾಡಿ ಬನ್ನಿ ಅಂತ ತಿಳಿಸಿದ್ರು.
ಹೊರಡುವ ಮುನ್ನ ದಿನ ಬಂದೇ ಬಿಟ್ಟಿತ್ತು, ಶಿಶಿಲದ ಚೆನ್ನಪ್ಪರವರಿಗೆ ಕರೆ ಮಾಡಿ ವಿಚಾರಿಸಲಾಗಿ ಮಳೆ ಸ್ವಲ್ಪ ಕಡಿಮೆ ಇದೆ "ಬನ್ನಿ" ಅಂತ ಗ್ರೀನ್ ಸಿಗ್ನಲ್ ಕೊಟ್ಟ್ರು.

ಚಾರಣಕ್ಕೆ ಬೇಕಾದ ಟೆಂಟ್,ಸ್ಲೀಪಿಂಗ್ ಮ್ಯಾಟ್ ಎಲ್ಲವನ್ನು ಸಿದ್ದಪಡಿಸಿಕೊಂಡು ಶನಿವಾರ ರಾತ್ರಿ ೯:೦೦ ಗಂಟೆಗೆ ಕೆಂಪೆಗೌಡ ಬಸ್ ನಿಲ್ದಾಣಕ್ಕೆ ಬಂದು ನನ್ನ ಚಾರಣ ಮಿತ್ರರಾದ ಗಜೇಂದ್ರರವರಿಗೆ ಕರೆ ಮಾಡಿ ಬೇಗ ಬರಲು ತಿಳಿಸಿದೆ, ಗಜೇಂದ್ರರವರು ಬರುವಷ್ಟರಲ್ಲಿ ಸಮಯ ೯:೩೦ ಆಗಿತ್ತು ಧರ್ಮಸ್ಥಳಕ್ಕೆ ಹೋಗುವ ಎಲ್ಲ ರಾಜಹಂಸ ಬಸ್ ಗಳು ಆಗಲೇ ಭರ್ತಿಯಾಗಿದ್ದವು, ಅಲ್ಲಿಯೇ ಸಿಕ್ಕ ಪರಿಚಯ ಇರುವ ಹುಡುಗನೊಬ್ಬ ಖಾಸಗಿ ಟ್ರಾವೆಲ್ ಬಸ್ ನಲ್ಲಿ ಸೀಟ್ ಕೊಡಿಸುವುದಾಗಿ ಹೇಳಿ ಮೆಜೆಸ್ಟಿಕ್ ನ ಸುಬ್ರಮಣ್ಯ ಟ್ರಾವಲ್ಸ್ ನಲ್ಲಿ ಎರಡು ಟಿಕೇಟ್ ಬುಕ್ ಮಾಡಿಸಿ ಕೊಟ್ಟು ಹೊರಟುಹೋದ, ಬಸ್ ರಾತ್ರಿ ಸುಮಾರು ೧೦:೩೦ ಕ್ಕೆ ಹೊರಟು ಧರ್ಮಸ್ಥಳ ತಲುಪಿದಾಗ ಬೆಳಗಿನ ಜಾವ ೫:೫೦.

ಶಿಶಿಲಕ್ಕೆ ಹೋಗುವ ಬಸ್ ಬಗ್ಗೆ ವಿಚಾರಿಸಿದಾದ ಭಾನುವಾರ ಶಾಲೆ ರಜೆ ಇರುವ ಕಾರಣ ಬಸ್ಸನ್ನು ರದ್ದುಗೊಳಿಸಲಾಗಿದೆ ಅಂತ ಮಾಹಿತಿ ಸಿಕ್ಕಿತು, ಮತ್ತೇನು ಮಾಡೋದು ಅಂತ ಯೋಚಿಸಿ ಸುಬ್ರಮಣ್ಯಕ್ಕೆ ಹೋಗುವ ಕೆ.ಎಸ್.ಆರ್.ಟಿ.ಸಿ. ಸಾರಿಗೆ ಬಸ್ ಹತ್ತಿ ಕೊಕ್ಕಡದಲ್ಲಿ ಇಳಿದು ಅಲ್ಲಿಂದ ಜೀಪ್ ನಲ್ಲಿ ಶಿಶಿಲಕ್ಕೆ ತೆರಳಿದವು, ಅಷ್ಟೊತ್ತಿಗಾಗಲೇ ಚೆನ್ನಪ್ಪನವರು ನಮಗೋಸ್ಕರ ಬಸ್ ನಿಲ್ದಾಣದಲ್ಲಿ ಕಾಯುತ್ತ ಇದ್ದರು, ಅವರು ಎತ್ತಿನಭುಜಕ್ಕೆ ಬೇರೊಂದು ಚಾರಣಿಗರ ಗುಂಪಿನ ಜೊತೆ ಹೋಗುವ ನಿಮಿತ್ತ ಚಂದಪ್ಪಗೌಡ ಎಂಬುವವರನ್ನು ನಮ್ಮ ಜೊತೆಗೆ ಕಳುಹಿಸಿ, ಅವರು ಬೇರೊಂದು ಗುಂಪಿನ ಎತ್ತಿನಭುಜಕ್ಕೆ ತೆರಳಿದರು.

ಅಲ್ಲೆ ಇದ್ದ ಹೋಟೆಲ್ ವೊಂದರಲ್ಲಿ ಇಡ್ಲಿ ಸಾಂಬಾರ್,ಕಲ್ತಪ್ಪ (ಖಾಲಿ ದೋಸೆ) ತಿಂದು ಕಾಫಿ ಕುಡಿದು ಬೇಡವಾದ ಲಗ್ಗೇಜನ್ನು ಅದೇ ಹೋಟೆಲ್ ನಲ್ಲಿ ಇರಿಸಿ ಅಲ್ಲಿಂದ ಜೀಪ್ ನಲ್ಲಿ ನಾಲ್ಕು ಕಿ.ಮೀ ದೂರದ ನಮ್ಮ ಚಾರಣ ಶುರುವಾಗುವ "ಕೊಂಬಾರು" ಎಂಬ ಸ್ಥಳಕ್ಕೆ ಹೊರಟೆವು.

ಅಲ್ಲಿಯೇ ಸಿಕ್ಕ ಒಂದು ಚಿಕ್ಕ ತೊರೆಯೊಂದರಲ್ಲಿ ಸ್ನಾನ ಮುಗಿಸಿ ಚಾರಣಕ್ಕೆ ಶುರುಮಾಡಿದಾಗ ಬೆಳಿಗ್ಗೆ ೯:೪೫ ಆಗಿತ್ತು, ಇಲ್ಲಿಂದ ಶುರುವಾಯ್ತು ಕಠಿಣ ಏರುದಾರಿ ದಟ್ಟ ಮಳೆಕಾಡು, ಜೊತೆಗೆ ರಕ್ತ ಹೀರುವ ಜಿಗಣೆಗಳ ಕಾಟ, ನಮ್ಮ ಮಾರ್ಗದರ್ಶಿ ಚಂದಪ್ಪನವರು ಕೈನಲ್ಲಿ ಮಚ್ಚು ಹಿಡಿದು ಮುಂದೆ ಹೋಗುತ್ತಿದ್ದರೆ ನಾವು ಅವರನ್ನು ಹಿಂಬಾಲಿಸಿದೆವು,


ಮಳೆಗಾಲ ಆದ್ದರಿಂದ ಮೋಡದ ದಟ್ಟಣೆಯಿಂದ ಸಂಜೆಗತ್ತಲಿನ ಹಾಗೆ ಭಾಸವಾಗುತಿತ್ತು, ಸುಮಾರು ಎರಡೂವರೆ ಗಂಟೆ ಹಾದಿ ಕ್ರಮಿಸಿದ ಮೇಲೆ ಮಳೆಕಾಡಿನಿಂದ ಹೊರ ಬಂದೆವು ಆಗ ನಮ್ಮ ಕಣ್ಣಿಗೆ ಎದುರಾದುದು ಸುಂದರ ಹಸಿರು ಹುಲ್ಲುಗಾವಲು ಪರ್ವತಗಳು, ವಾವ್! ಸ್ವರ್ಗ ಎಂದರೆ ಇದೇ ಅಲ್ವಾ?




ಪಯಣದ ಹಾದಿಯಲ್ಲಿ ನಾನು.

ನಡೆದು ಸಾಕಷ್ಟು ದಣಿವಾಗಿದ್ದರಿಂದ ಸ್ವಲ್ಪ ಹೊತ್ತು ಕುಳಿತು ವಿಶ್ರಾಂತಿ ಪಡೆದು ಹಾಗೆ ಸ್ವಲ್ಪ ಏನಾದರೂ ತಿನ್ನೋಣ ಅಂತ ಗಜೇಂದ್ರರವರು ತಮ್ಮ ಬ್ಯಾಗಿಂದ ಹೋಳಿಗೆ ತೆಗೆದು ತಲಾ ಎರಡೆರಡು ಹೋಳಿಗೆ ಕೊಟ್ಟರು ತುಂಬಾ ಚೆನ್ನಾಗಿದ್ದರಿಂದ ನಾನು ಬೇಗ ತಿಂದು ಮುಗಿಸಿದೆ ಅಷ್ಟರಲ್ಲೇ ಸನಿಹದಲ್ಲಿ ಏನೋ ಶಬ್ದ!
ಯಾವುದೋ ಪ್ರಾಣಿ ಮರದ ರೆಂಬೆಗಳನ್ನು ಮುರಿದು ನಮ್ಮತ್ತ ಬರುತಿತ್ತು ನನಗೆ ಗಾಬರಿಯಾಗಿ ತಿಂದಿದ್ದ ಹೋಳಿಗೆ ಬಾಯಿಗೆ ಬಂದ್ದತ್ತಾಯಿತು ಕೂಡಲೇ ನಮ್ಮ ಗಜೇಂದ್ರರವರು ಅಲೆರ್ಟ್ ಆಗಿ ಎಲ್ಲರಿಗಿಂತ ಮೊದಲು ಎದ್ದು ನಿಂತು "ಪುಟ್ಗೋಸಿ ಊರುಗೋಲು" ಹಿಡಿದು ಯುದ್ದಕ್ಕೆ ನಿಂತ ಸೈನಿಕನಂತೆ ಫೋಸ್ ಕೊಟ್ಟಿದ್ದು ಮಾತ್ರ ಭಯದ ನಡುವೆಯು ನನಗೆ ನಗು ಬರುತಿತ್ತು,



ಗಜೇಂದ್ರ ಮತ್ತು ಮಾರ್ಗದರ್ಶಿ ಚೆಂದಪ್ಪ

ತಕ್ಷಣವೇ ಚಂದಪ್ಪನವರು "ಹೋಯ್" ಅಂತ ಜೋರಾಗಿ ಒಂದು ಕೂಗು ಹಾಕಿದ್ರು ಅವರ ಜೊತೆಗೆ ನಾನು ಕೂಡ ಜೋರಾಗಿ ಕಿರುಚಿದೆ ಶಬ್ದ ಹಾಗೆ ತಟಸ್ಥವಾದೊಡನೆಯೇ ಚಂದಪ್ಪನವರನ್ನು ಏನದು ಅಂತ ಕೇಳಿದಕ್ಕೆ ಅವರು "ಕಾಡೆಮ್ಮೆ" ಇರಬೇಕು ಅಂದ್ರು, ತಕ್ಷಣವೇ ನಾವು ಅಲ್ಲಿಂದ ಜಾಗ ಖಾಲಿ ಮಾಡಿ ಚಾರಣದ ಹಾದಿ ಹಿಡಿದು ಹೊರಟೆವು ಸ್ವಲ್ಪ ಹೊತ್ತಿನಲ್ಲೇ ಮಳೆ ಶುರುವಾಯ್ತು, ಆದರೇನಂತೆ ಮಳೆಯಲ್ಲಿಯೇ ಚಾರಣ ಮುಂದುವರಿಸಿದೆವು ಚಂದಪ್ಪ ಮಳೆಯ ರಕ್ಷಣೆಗೆ ತಂದಿದ್ದ ಪ್ಲಾಸ್ಟಿಕ್ ಹೊದಿಕೆ ಹೊದ್ದು ಮುಂದೆ ಹೋಗುತ್ತಿದ್ದರು ಮಂಡಿ ಉದ್ದಕ್ಕೆ ಬೆಳೆದ ಹಸಿರು ಹುಲ್ಲಿನ ನಡುವೆ ಹಾದಿ ಮಾಡಿಕೊಂಡು ನಾವು ಅವರನ್ನು ಹಿಂಬಾಲಿಸಿ ಹೊರಟೆವು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ತಪ್ಪಿದಲ್ಲ,


ಯಮಭಾರದ ಲಗ್ಗೇಜನ್ನು ಹೊತ್ತು ಮಳೆಯಲ್ಲಿ ಚಾರಣ ಮಾಡುವುದು ಅಷ್ಟು ಸುಲಭವಲ್ಲ, ಹಾದಿ ನೋಡಿದರೆ ಗೊತ್ತಾಗುತಿತ್ತು ಚಾರಣಿಗರು ಚಾರಣ ಮಾಡಿರುವುದು ಬಹಳ ವಿರಳ ಅಂತಾ, ಮಳೆಯಲ್ಲಿಯೂ ಕೂಡ ಬೆವರು ಕಿತ್ತು ಬರುತಿತ್ತು.




ಪಯಣದ ಹಾದಿಯಲ್ಲಿ ನಾನು ಒಮ್ಮೆ ಹಿಂತಿರುಗಿ ನೋಡಿದಾಗ ಕಂಡ ದೃಶ್ಯ

ಅಬ್ಬಾ! ಎತ್ತಾ ನೋಡಿದರೂ ಬಾನೆತ್ತರಕ್ಕೆ ನಿಂತ ಹಸಿರ ಮುಗಿಲಗಿರಿಗಳು
ಆ ಮುಗಿಲಗಿರಿಗಳನ್ನು ಚುಂಬಿಸುವ ಮೋಡದ ರಾಶಿ ಆ ವಿಷ್ಮಯ ನೋಟ ನನ್ನ ಕಣ್ಣಿಗೆ ಕಟ್ಟಿದಂತಿತ್ತು,
ನಾನು, ಗಜೇಂದ್ರ ಸಾರ್ ಕುಮಾರ ಪರ್ವತ ಚಾರಣಕ್ಕಿಂತ ತುಂಬಾ ಕಷ್ಟ ಅಲ್ವಾ?
ಅದಕ್ಕೆ ಅವರು ಹೌದು ನಾವು ಇಲ್ಲಿಯವರೆಗೂ ಸವೆಸಿದ ಹಾದಿ ಬಹಳ ದುರ್ಗಮ ಇನ್ನು ಮುಂದೆ ಹೇಗಿದೆಯೋ? ಗೊತ್ತಿಲ್ಲ ಅಂದ್ರು,ಚಂದಪ್ಪನವರು ಯಾವುದೇ ಲಗ್ಗೇಜ್ ಇಲ್ಲದ ಕಾರಣ ಬಹು ಬೇಗನೇ ನಡೆದು ಮುಂದೆ ಹೋಗಿ ನಮಗಾಗಿ ಕಾಯುತ್ತಾ ನಿಂತಿರುತ್ತಿದ್ದರು, ಹಾದಿ ಕಾಣದೇ ಇರುವ ಜಾಗದಲ್ಲೆಲ್ಲ ಅಲ್ಲಿಯೇ ಕಾದು ನಿಂತು ನಾವು ಹೇಗೆ ಬರಬೇಕೆಂದು ಸನ್ನೆ ಮಾಡಿ ಸೂಚಿಸುತ್ತಿದ್ದರು,


ಆಗಲೇ ಅದೆಷ್ಟೊ ಗಿರಿ ಕಣಿವೆಗಳಲ್ಲಿ ಸಾಗಿ ಬಂದಿದ್ದೆವು, ಬಹಳ ಪ್ರಯಾಸವಾಗಿ ಯಮ ಭಾರದ ಟೆಂಟನ್ನು ಸರತಿಯಂತೆ ನಾನು ಮತ್ತು ಗಜೇಂದ್ರರವರು ಹೊತ್ತುಕೊಂಡು ಚಾರಣದ ಹಾದಿಯನ್ನು ಸವೆಸುತ್ತಿದ್ದವು.
ನನ್ನ ಚಾರಣದ ಬದುಕಿನಲ್ಲಿ ಇದೇ ಮೊದಲು ಮಳೆಯಲ್ಲಿ ಚಾರಣ ಮಾಡಿದ್ದು, ಮಳೆ ಬಿಡುವು ಕೊಟ್ಟಾಗಲೆಲ್ಲ ಬ್ಯಾಗಿನಿಂದ ಕ್ಯಾಮೆರಾ ತೆಗೆದು ಪ್ರಕೃತಿ ಸೌಂದರ್ಯವನ್ನು ಸೆರೆಹಿಡಿಯುತ್ತಿದ್ದೆವು, ನಾವು ಚಂದಪ್ಪನವರನ್ನು ಇನ್ನು ಎಷ್ಟು ದೂರ ಇದೆ ಅಂತ ಯಾವಾಗ ಕೇಳಿದರೂ ಇಲ್ಲೇ ಸ್ವಲ್ಪ ದೂರ ಅಂತ ಶಾಂತ ಸ್ವಭಾವದಿಂದಲ್ಲೇ ಉತ್ತರಿಸುತ್ತಿದ್ದರು,ಆಗಲೇ ಮದ್ಯಾಹ್ನ ಒಂದೂವರೆ ಗಂಟೆ ಆಗಿತ್ತು, ಕಡಿದಾದ ಹಾದಿಯಲ್ಲಿ ಚಾರಣ ಮಾಡಿ ಬಳಲಿದ್ದ ಕಾರಣ ಹೊಟ್ಟೆ ತುಂಬಾ ಹಸಿವಾಗುತ್ತಿತ್ತು,ಕೊನೆಗೆ ದೊಡ್ಡ ಹೆಬ್ಬಂಡೆ ಬಳಿ ಬಂದೆವು, ಮಳೆಗಾಲವಾದ್ದರಿಂದ ಬೆಟ್ಟದ ಮೇಲೆ ಟೆಂಟ್ ಹಾಕಲು ಸಾದ್ಯವಿಲ್ಲ ಆದ್ದರಿಂದ ಇಲ್ಲಿಯೇ ಟೆಂಟ್ ಹಾಕಲು ಸೂಕ್ತ ಜಾಗ ಎಂದು ಚಂದಪ್ಪನವರು ತಿಳಿಸಿದ್ರು,
ಚಂದಪ್ಪನವರ ಸೂಚನೆ ಮೇರೆಗೆ ಮೊದಲು ಟೆಂಟನ್ನು ಸಿದ್ದಪಡಿಸಿ ನಂತರ ಊಟ ( ಜೋಳದ ರೊಟ್ಟಿ, ಕಡ್ಲೆಕಾಯಿ ಚಟ್ನಿ) ಮುಗಿಸಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಬಳಿಕ ನಮ್ಮ ಲಗ್ಗೇಜನ್ನು ಟೆಂಟ್ ನೊಳಗೆ ಇಟ್ಟು ಮತ್ತೆ ಚಾರಣ ಶುರು ಮಾಡಿದೆವು, ಮುಂದಿನ ಹಾದಿ ಬಹಳ ಕಡಿದಾಗಿತ್ತು ದಟ್ಟ ಮಳೆಕಾಡು ಬೇರೆ ಕೆಲವು ಕಡೆ ಬಗ್ಗಿ ನಡೆಯಬೇಕಿತ್ತು,ಜೀರುಂಡೆಯ ಸದ್ದಿನಲ್ಲಿ ಮರ ಗಿಡಗಳ ರೆಂಬೆ ಕೊಂಬೆಗಳನ್ನು ಆಸರೆಯಾಗಿ ಹಿಡಿದು ಮೇಲೇರುತ್ತಿದ್ದೆವು, ಮುಂಗಾರು ಮಳೆ ಒಂದೇ ಸಮನೆ "ದೋ..." ಅಂತ ಬೀಳುತಲಿತ್ತು ಬೆಳಕಿನ ಅಭಾವದಿಂದ ಕತ್ತಲಾದಂತಿತ್ತು, ಯಾವುದಾದರೂ ಕಾಡು ಪ್ರಾಣಿ ಎದುರಾದರೇ? ಎಂಬ ಭಯ



ಮಳೆಕಾಡು

ಕೊನೆಗಳಿಗೆ ಹತ್ತು ನಿಮಿಷದ ಮಳೆ ಚಾರಣವಂತೂ ತುಂಬಾ ಸಾಹಸಮಯವಾಗಿತ್ತು,
ಮಳೆ ಬೀಳುತ್ತಿದ್ದರಿಂದ ತುಸು ಎಚ್ಚರ ತಪ್ಪಿದರೂ ಅಪಾಯ ಖಂಡಿತ.


ನಮ್ಮ ಮಾರ್ಗದರ್ಶಿ ಚಂದಪ್ಪರವರ ಉಪಯುಕ್ತ ಮಾರ್ಗದರ್ಶನದಿಂದ ಯಾವುದೇ ತೊಂದರೆ ಇಲ್ಲದೇ ಸಂಜೆ ೫ ರ ಹೊತ್ತಿಗೆ ಅಮೇದಿಕಲ್ ಶಿಖರದ ತುಟ್ಟ ತುದಿ ತಲುಪಿಯೇಬಿಟ್ಟೆವು. ಎತ್ತ ನೋಡಿದರೂ ಮೋಡದ ರಾಶಿ ಎತ್ತಿನ ಭುಜ ಕಾಣುವುದಿರಲಿ ಸುತ್ತ ಮುತ್ತಲಿನ ಯಾವುದೇ ಪರ್ವತಗಳ ದರ್ಶನವಾಗಲಿಲ್ಲ,ಚಂದಪ್ಪನವರು ಪಕ್ಕದ ಘಟ್ಟ ಪ್ರದೇಶದ ಕಡೆ ಕೈ ತೋರಿಸಿ ಅದೇ ಚಾರ್ಮಾಡಿ ಘಾಟ್, ಅಗೋ ಅದೇ ಕೊಟ್ಟಿಗೆಹಾರ ಅಂತ ತೋರಿಸುತ್ತಿದ್ದರು ಮೋಡಗಳು ಮುಚ್ಚಿಕೊಂಡಿದ್ದರಿಂದ ಏನೂ ಕಾಣಿಸುತ್ತಿರಲಿಲ್ಲ ಕೊಟ್ಟಿಗೆಹಾರ ಅಮೇದಿಕಲ್ ಗೆ ಬಹಳ ಹತ್ತಿರವಿದ್ದರೂ ಹೋಗಲೂ ಯಾವುದೇ ಹಾದಿಯಿಲ್ಲ,ಸುತ್ತಲೂ ಹಸಿರು ಹೊದ್ದ ಸಾಲು ಸಾಲು ಪರ್ವತಗಳ ರಮಣೀಯ ದೃಶ್ಯ, ರಾಶಿ ರಾಶಿ ಮೋಡಗಳು, ದಟ್ಟ ಮಂಜು, ಏನೀ ಪ್ರಕೃತಿ ವಿಸ್ಮಯ! ಎಂಬ ಭಾವನೆ ನನ್ನ ಮನದಲ್ಲಿ ಹಾಸುಹೊಕ್ಕಾಗಿತ್ತು.
ಸೂರ್ಯಾಸ್ತಮ ನೋಡುವ ಅವಕಾಶವಂತೂ ಖಂಡಿತಾ ಇರಲಿಲ್ಲ ಬಿಡಿ,
ಆಗಲೇ ತುಂಬಾ ಸಮಯವಾದ್ದರಿಂದ ಕತ್ತಲಾಗುವುದೊರಳಗೆ ಟೆಂಟ್ ಬಳಿ ಹೋಗಬೇಕೆಂದು ಚಂದಪ್ಪನವರ ಸೂಚನೆ ಮೇರೆಗೆ ವಾಪಾಸು ಹೊರಟೆವು.
ಕಡಿದಾದ ಇಳಿಜಾರು ಬಹಳ ಎಚ್ಚರಿಕೆಯಿಂದ ಒಂದೊಂದೆ ಹೆಜ್ಜೆ ಹಾಕುತ್ತಿದ್ದೆವು ಈ ಮದ್ಯೆ ಗಜೇಂದ್ರರವರು,ಮೋಹನ್ ಈಗ ನಮ್ಮ ಬ್ಯಾಗ್ ನಲ್ಲಿರುವ ತಿಂಡಿ ವಾಸನೆ ಹಿಡಿದು ಕರಡಿ ಏನಾದರೂ ಟೆಂಟ್ ನೊಳಗೆ ನುಗ್ಗಿ ಕುಳಿತಿದ್ದರೆ ಏನ್ ಗತಿ! ಎಂದು ನಗೆ ಚಟಾಕಿ ಹಾರಿಸಿದ್ರು ನನಗಂತು ನಗು ತಡೆಯೋಕ್ಕೆ ಆಗಲಿಲ್ಲ, ಕೊನೆಗೂ ಕತ್ತಲಾಗುವುದಷ್ಟರಲ್ಲಿ ನಮ್ಮ ಟೆಂಟ್ ಬಳಿ ಬಂದು ಸೇರಿದೆವು, ರಕ್ತ ಹೀರುವ ಜಿಗಣೆಗಳ ಕಾಟ ಜಾಸ್ತಿ ಕಿತ್ತು ಹಾಕುವುದೇ ಒಂದು ದೊಡ್ಡ ಸವಾಲು,
ಚಂದಪ್ಪನವರು ನೀರು ತರಲು ಬಾಟೆಲ್ ಹಿಡಿದು ಕಾಡಿನೊಳಕ್ಕೆ ನುಗ್ಗಿದರು ನಾನು ಕೂಡ ಅವರನ್ನು ಹಿಂಬಾಲಿಸಿದೆ ಹಾದಿ ತುಂಬಾ ಇಳಿಜಾರಾದ್ದರಿಂದ ಮುಂದೆ ಹೋಗಲು ಆಗಲಿಲ್ಲ ಪುನಃ ವಾಪಾಸು ಬಂದೆ, ಅಷ್ಟರಲ್ಲೇ ಚಂದಪ್ಪನವರು ನೀರಿನ ಬಾಟೆಲ್ ಹಿಡಿದು ವಾಪಾಸಾದರು ನಂತರ ಸೌದೆಗಳನ್ನು ಹುಡುಕಿ ತಂದು ಮಳೆ ನೀರು
ಬೀಳದೆ ಇರೋ ಜಾಗದಲ್ಲಿ ರಾಶಿ ಮಾಡಿ ಶಿಭಿರಾಗ್ನಿಗೆ ಸಿದ್ದಪಡಿಸುತ್ತಿದ್ದರು.



ನಮ್ಮ ಶಿಭಿರದ ಮುಂದೆ ಕ್ಷೀರಸಾಗರದಂತೆ ಕಾಣಿಸುತ್ತಿದ್ದ ದೃಶ್ಯ

ನಮ್ಮ ಶಿಭಿರದ ಮುಂದೆ ಕಾಣುತಿದ್ದ ರಾಶಿ ರಾಶಿ ಮೋಡಗಳ ಸೌಂದರ್ಯವನ್ನು ಮರೆಯೋಕ್ಕೆ ಸಾದ್ಯನೇ ಇಲ್ಲ, ಅಷ್ಟರಲ್ಲಿ ಕತ್ತಲು ಆವರಿಸಿತು ಇತ್ತ ಚಂದಪ್ಪನವರು ನಾವು ತಂದಿದ್ದ ದೀಸೆಲ್ ಸಹಾಯದಿಂದ ಹೊತ್ತಿಸಿದ ಶಿಭಿರಾಗ್ನಿ ಮುಂದೆ ಕುಳಿತು ಚಳಿ ಮಳೆಯಿಂದ ಮರಗಟ್ಟಿ ಹೋಗಿದ್ದ ದೇಹವನ್ನು ಬಿಸಿ ಮಾಡಿದೊಡನೆಯೇ ತುಸು ಸಮಾಧಾನ,



ಶಿಭಿರಾಗ್ನಿ

ಬೆಳಿಗ್ಗೆಯಿಂದ ಒಂದೇ ಸಮನೆ ನಡೆದು ಆಯಾಸವಾಗಿದ್ದರಿಂದ ಬೇಗನೆ ಊಟ ಮುಗಿಸಿ ಮಲಗುವುದು ಒಳ್ಳೇದು ಅಂತ ನಿರ್ದಾರ ಮಾಡಿ ಜೊತೆಗೆ ತಂದಿದ್ದ ಚಪಾತಿ, MTR ನ Ready to eat ಬಿಂಧಿ ಮಸಾಲ ಮತ್ತು ಅನ್ನ ಸಾಂಬಾರ್ ಪಾಕೆಟ್ ತೆಗೆದು ಪಾತ್ರೆಯೊಳಗೆ ಹಾಕಿ ಬಳಿಯಿದ್ದ ಚಾಕನ್ನೆ ಸೌಟ್ ರೂಪದಲ್ಲಿ ಬಳಸಿ ಅಡುಗೆ ಸಿದ್ದಪಡಿಸಿದೆವು, ಗಜೇಂದ್ರರವರು ತಮ್ಮ ಟಾರ್ಚ್ ಅನ್ನು ಟೆಂಟ್ ಬಾಗಿಲಿಗೆ ಕಟ್ಟಿ ಬೆಳಕಿನ ಅಭಾವವನ್ನು ನೀಗಿಸಿದರು,


ಕೊನೆಗೆ ಎಲ್ಲರೂ ಕುಳಿತು ಊಟ ಮುಗಿಸಿದೆವು,ಗಜೇಂದ್ರರವರು ಟೆಂಟ್ ನೊಳಗೆ ಹೋಗಿ ಮಲಗಿದರು, ನನಗೆ ಏಕೋ ನಿದ್ರೆ ಬರಲಿಲ್ಲ ಪುನಃ ನಾನು ಶಿಭಿರಾಗ್ನಿ ಮುಂದೆ ಹೋಗಿ ಕುಳಿತೆ ನನ್ನ ಜೊತೆ ಚಂದಪ್ಪ ಕೂಡ ಇದ್ದರು ಆಗಿನ್ನು ಮಳೆ ಬೀಳುತ್ತಲೇ ಇತ್ತು ಶಿಭಿರಾಗ್ನಿಯ ಬಳಿ ನಾವಿಬ್ಬರೆ ತುಂಬಾ ಸಮಯ ಮಾತನಾಡುತ್ತ ಕುಳಿತಿದ್ದೆವು, ನಂತರ ಮಲಗುವ ನಿರ್ದಾರ ಮಾಡಿ ತುಂಬಾ ಹೊತ್ತು ಉರಿಯಲಿ ಅಂತ ಶಿಭಿರಾಗ್ನಿಗೆ ಸಾಕಷ್ಟು ಸೌದೆ ಜೋಡಿಸಿ ಟೆಂಟ್ ನೊಳಗೆ ಬಂದು ಮಲಗಿಕೊಂಡೆ. ಹಿಂದೇನೆ ಚಂದಪ್ಪ ಕೂಡ ಬಂದು ಮಲಗಿದರು.

ಪುನಃ ಬೆಳಿಗ್ಗೆ ಎಚ್ಚರವಾದಾಗ ೬:೪೫, ಚಂದಪ್ಪನವರು ಆಗಲೇ ಎದ್ದು ಶಿಭಿರಾಗ್ನಿ ಮುಂದೆ ಬೆಂಕಿ ಕಾಯುತ್ತ ಕುಳಿತಿದ್ದರು, ಟೆಂಟ್ ನಿಂದ ಆಚೆ ಬಂದು ನೋಡಿದರೆ ಸುತ್ತಲೂ ಮಂಜು ಕವಿದಿದೆ, ರಾತ್ರಿ ಶುರುವಾದ ಮಳೆ ಬಿಡುವಿಲ್ಲದೆ ಒಂದೇ ಸಮನೆ ಬೀಳುತಲಿತ್ತು ಏನೂ ಕಾಣುತಿಲ್ಲ ದಟ್ಟ ಮಂಜು, ನಾನು ಕೂಡ ಶಿಭಿರಾಗ್ನಿ ಮುಂದೆ ಕುಳಿತು ಮೈ ಬೆಚ್ಚಗೆ ಮಾಡಿಕೊಂಡೆ, ಗಜೇಂದ್ರರವರನ್ನು ಕೂಗಿ ಕರೆದು ಸಾರ್ ಬನ್ನಿ ಬೆಂಕಿ ಕಾಯೋಣ ಅಂದೆ, ಅವರು ಇಲ್ಲೇ ಬೆಚ್ಚಗಿದೆ ಇನ್ನು ಸ್ವಲ್ಪ ಹೊತ್ತು ಇಲ್ಲೇ ಇರ್ತೀನಿ ಅಂತ ಟೆಂಟ್ ನೊಳಗೆ ಮಲಗಿದ್ದರು,
ಚಂದಪ್ಪನವರು, ಈಗ ಮಂಜು ಕವಿದಿಲ್ಲದಿದ್ದರೆ ಇದೇ ಜಾಗದಿಂದ ಸೂರ್ಯೋದಯ ವೀಕ್ಷಿಸಬಹುದಿತ್ತು ಅಂದ್ರು, ನಾವು ಬಂದಿರೋದೆ ಮಳೆಯಲ್ಲಿ ನೆನೆಯೋಕ್ಕೆ ಸೂರ್ಯೋದಯ ಇಲ್ಲದಿದ್ದರೇನಂತೆ ಬಿಡಿ ಇನ್ನೊಂದು ಸಾರಿ ಬಂದು ನೋಡೋಣ ಅಂದೆ,
ಎಷ್ಟು ಹೊತ್ತಾದ್ರು ಗಜೇಂದ್ರರವರು ಟೆಂಟ್ ನಿಂದ ಹೊರಗೆ ಬರಲಿಲ್ಲ ಮತ್ತೆ ಕೂಗಿ ಕರೆದೆ ಮತ್ತದೇ ಡೈಲಾಗ್ ಹೊಡೆದ್ರು, ನಂತರ ಅಕ್ಕ ಪಕ್ಕದಲ್ಲಿ ಯಾರೋ ಬಿಸಾಡಿದ್ದ ಪ್ಲಾಸ್ಟಿಕ್ ಕವರ್,ನೀರಿನ ಬಾಟೆಲ್ ಗಳನ್ನು ಒಂದು ಕಡೆ ರಾಶಿ ಮಾಡಿ ಹೊರಡುವ ವೇಳೆಯಲ್ಲಿ ಬೆಂಕಿ ಹೊತ್ತಿಸಿ ಹೊರಟರಾಯಿತು ಅಂತಾ ಯೋಚಿಸಿ ಹಾಗೆ ಬಿಟ್ಟು ಮತ್ತೆ ಗಜೇಂದ್ರರವರನ್ನು ಎಬ್ಬಿಸೋಣ ಅಂತ ಕೂಗಿ ಕರೆದೆ ಕೊನೆಗೂ ಎದ್ದು ಹೊರಗೆ ಬಂದ್ರು ಆಗಲೇ ಬಹಳ ಹೊತ್ತಾಗಿದೆ ಮಳೆಯಂತು ನಿಲ್ಲುವ ಸೂಚನೆ ಕಂಡು ಬರ್ತಾ ಇಲ್ಲ ತಿಂಡಿ ತಿಂದು ಹೊರಡೋಣ ಅಂತ ಯೋಚಿಸಿ ನಾವು ಕಾಡಿನಲ್ಲಿರುದರಿಂದ ಬ್ರಷ್ ನಿಂದ ಹಲ್ಲು ಉಜ್ಜೋದು ಪ್ರಕೃತಿಗೆ ವಿರುದ್ದ ಅಂತ ಹೇಳಿ ಹಾಗೇ ನೀರನ್ನು ಬಾಯಲ್ಲಿ ಮುಕ್ಕಳಿಸಿ ತಿಂಡಿ ತಿನ್ನಲು ಎಲ್ಲರೂ ಟೆಂಟ್ ನೊಳಗೆ ಕುಳಿತು ಬೆಳಗಿನ ಉಪಹಾರಕ್ಕಾಗಿ ತಂದಿದ್ದ ಬನ್ ಮತ್ತು ಗುಲ್ಕನ್ ಅನ್ನು ತಿಂದು ಹೊರಡಲು ಸಿದ್ದವಾದೆವು, ಆಗಲೇ ರಾಶಿ ಮಾಡಿದ್ದ ಪ್ಲಾಸ್ಟಿಕ್ ಕವರ್,ನೀರಿನ ಬಾಟೆಲ್ ಮೇಲೆ
ಸ್ವಲ್ಪ ಡೀಸೆಲ್ ಸುರಿದು ಬೆಂಕಿ ಹಚ್ಚಿದ ನಂತರ ನಮ್ಮ ಲಗ್ಗೇಜು ಸಿದ್ದಪಡಿಸಿಕೊಂಡು ಹೊರಟಾಗ ಹನ್ನೊಂದಾಗಿತ್ತು ಹಾದಿಯುದ್ದಕ್ಕೂ ಮಳೆಯಲ್ಲಿ ನೆನೆದೆ ಚಾರಣ ಮಾಡಿದೆವು, ಹಲವು ಬಾರಿ ಗಜೇಂದ್ರರವರು ಆಯ ತಪ್ಪಿ ಜಾರಿ ಬಿದ್ದುದುಂಟು.


ನಮ್ಮ ಚಾರಣದ ಹಾದಿಗೆ ಅಡ್ಡಲಾಗಿ ಕಟ್ಟಿದ ಜೇಡರಬಲೆ



ನಾನು ಮತ್ತು ನನ್ನ ಸ್ನೇಹಿತರಾದ ಗಜೇಂದ್ರ

ಜಟಿಲ ಕಾನದದ ಪ್ರಕೃತಿ ಸೊಬಗನ್ನು ಸವಿಯುತ್ತ ಚಾರಣದ ಮುಕ್ತಾಯ ಹಂತಕ್ಕೆ ತಲುಪಿದೆವು, ಅಲ್ಲಿಯೇ ಚಿಕ್ಕ ತೊರೆಯೊಂದರಲ್ಲಿ ಮಿಂದೆದ್ದ ನಂತರ ಆಟೋದಲ್ಲಿ ಶಿಶಿಲ ತಲುಪಿದಾಗ ಗಂಟೆ ನಾಲ್ಕಾಗಿತ್ತು, ನನಗಂತೂ ಹೊಟ್ಟೆ ತುಂಬಾ ಹಸಿವಾಗುತಿತ್ತು ಆ ದಿನ ಸೋಮವಾರ "ಭಾರತ್ ಬಂದ್" ಬಿಸಿ ಶಿಶಿಲದ ಸಣ್ಣ ಪುಟ್ಟ ಅಂಗಡಿಗಳಿಗೂ ಬಿಸಿ ತಟ್ಟಿದಂತೆ ಕಾಣಿಸುತಿತ್ತು,ಮನಸ್ಸಿನಲ್ಲಿ ಉಪವಾಸ ಗ್ಯಾರಂಟಿ ಅಂದುಕೊಂಡಿದ್ದು ಉಂಟು, ಅಲ್ಲದೇ ಯಾವುದೇ ವಾಹನಗಳು ಒಡಾಡದಂತೆ ರಸ್ತೆಗೆ ಅಡ್ಡಲಾಗಿ ಮರಗಳನ್ನೂ ಕಡಿದು ಉರುಳಿಸಿದ್ದರು, ಅಷ್ಟರಲ್ಲಿ ಧರ್ಮಸ್ಥಳಕ್ಕೆ ಹೋಗುವ ಬಸ್ ಶಿಶಿಲದ ಬಸ್ ನಿಲ್ದಾಣದಲ್ಲಿ ನಿಂತಿತ್ತು ಹೋಗಿ ವಿಚಾರಿಸಿದಾಗ ಸಂಜೆ ವೇಳೆಗೆ ಬಸ್ ಸಂಚಾರ ಶುರುವಾಗುತ್ತೆ ಎಂದು ಯಾರೋ ಮಹಾಶಯರೊಬ್ಬರು ತಿಳಿಸಿದಾಗ ಮನಸ್ಸಿಗೆ ಕೊಂಚ ದೈರ್ಯ ಬಂತು,
ತದನಂತರ ಚಂದಪ್ಪನವರು ನಮ್ಮನ್ನು ಗೋಖಲೆ ಮನೆಗೆ ಕರೆದೋಯ್ದರು,
ನಂತರ ಗೋಖಲೆ ಮನೆಯವರು ಮಾಡಿಕೊಟ್ಟ "ಚಹಾ"ದಿಂದ ಬಳಲಿ ಬೆಂಡಾಗಿದ್ದ ನಮ್ಮ ಶರೀರಕ್ಕೆ ವಿದ್ಯುತ್ ಸಂಚಲನ ಉಂಟಾಗಿ ಸ್ವಲ್ಪ ಸುಧಾರಿಸಿದೆವು, ಒಂದರ್ದ ಗಂಟೆ ನಮ್ಮ ತೋಟದಲ್ಲಿ ಸುತ್ತಾಡಿ ಬನ್ನಿ ಅಷ್ಟರಲ್ಲಿ ಅಡುಗೆ ಸಿದ್ದವಾಗಿರುತ್ತದೆ ಅಂದ್ರು,
ನಾವಿಬ್ಬರು ಅವರ ಅಡಿಕೆ ತೋಟದಲ್ಲಿ ಸುತ್ತಾಡಿ ಮನಸೂರೆಗೊಂಡ ಕೆಲವು ಮರ,ಗಿಡ ಮತ್ತು ಹೂವುಗಳ ಪೋಟೋಗಳನ್ನು ತೆಗೆದು ತೋಟದ ಬದಿಯಲ್ಲೇ ಹರಿಯುತಿದ್ದ ಕಪಿಲಾ ನದಿಯ ದಡದಲ್ಲಿ ಒಂದಷ್ಟು ಸಮಯ ಕಳೆದೆವು.


ಗೋಖಲೆಯವರ ಜೊತೆ ನಾನು

ನಂತರ ಗೋಖಲೆ ಮನೆಗೆ ಬಂದು ಬಿಸಿ ಬಿಸಿಯಾದ ಊಟ (ಅನ್ನ, ಸಾಂಬಾರ್,ಮಜ್ಜಿಗೆ ಜೊತೆಗೆ ಉಪ್ಪಿನಕಾಯಿ) ಮುಗಿಸಿ ಅವರ ಮನೆಯ ಹೊರಾಂಡದ ಜಗುಲಿ ಮೇಲೆ ಕುಳಿತೊ, ನಿಜಕ್ಕೂ ಗೋಖಲೆ ಮನೆಯವರ ಸತ್ಕಾರ ಮೆಚ್ಚಲೇಬೇಕು, ಅಷ್ಟರಲ್ಲಿ ಬಸ್ಸಿನ ಶಬ್ದ ಕೇಳಿಸಿತು ತಕ್ಷಣವೇ ನಮ್ಮ ಲಗ್ಗೇಜನ್ನು ಬೆನ್ನಿಗೆ ಹೇರಿಸಿಕೊಂಡು ಒಡತೊಡಗಿದೊ ನಮಗೂ ಮುಂಚೆ ಗೋಖಲೆಯವರು ಓಡಿ ಹೋಗಿ ಬಸ್ಸನ್ನು ನಿಲ್ಲಿಸಿದ್ರು, ಗೋಖಲೆಯವರಿಗೆ ನಮ್ಮ ಪ್ರೀತಿಯ ವಂದನೆಗಳನ್ನರ್ಪಿಸಿ ಬಸ್ನಲ್ಲಿ ಆಸೀನರಾಗಿ ದರ್ಮಸ್ಥಳಕ್ಕೆ ಬಂದಾಗ ರಾತ್ರಿ ಏಳಾಗಿತ್ತು.
ನಂತರ ಶ್ರೀ ಮಂಜುನಾಥಸ್ವಾಮಿಯ ದರ್ಶನ ಮುಗಿಸಿ ಭೋಜನ ಗೃಹಕ್ಕೆ ತೆರಳಿ ಊಟ (ಪ್ರಸಾದ) ಮುಗಿಸಿಕೊಂಡು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದೆವು,
ನಾನು ಮೈಸೂರಿಗೆ ಪ್ರಯಾಣ ಬೆಳೆಸಿವ ಉದ್ದೇಶದಿಂದ ಮುಂಗಡ ಟಿಕೇಟ್ ಮಾಡಿಸದೇ ಬಹಳ ತೊಂದರೆ ಅನುಭವಿಸಬೇಕಾಗಿ ಬಂತು, ಕಾರಣ ಮೈಸೂರಿಗೆ ಹೊರಡುವ ಎರಡು ಸಾರಿಗೆ ಬಸ್ ಆಗಲೇ ಭರ್ತಿಯಾಗಿದ್ದವು,ಗಜೇಂದ್ರರವರು ಬೆಂಗಳೂರಿಗೆ ಹೊರಡುವ ರಾತ್ರಿ ಹತ್ತರ ರಾಜಹಂಸ ಬಸ್ಸಿನಲ್ಲಿ ಮುಂಗಡ ಟಿಕೇಟ್ ಖರೀದಿಸಿಯಾಗಿತ್ತು, ಕೊನೆಗೆ ೯:೩೦ ರ ರಾಜಹಂಸ ಹೊರಡುತಿತ್ತು ಕಂಡಕ್ಟರ್ ಬಳಿ ಹೋಗಿ ವಿಚಾರಿಸಲಾಗಿ ಎರಡು ಸೀಟ್ ಖಾಲಿ ಇದೆ ಅಂದ್ರು,
ತಕ್ಷಣವೇ ಗಜೇಂದ್ರರವರಿಗೆ ಹೊರಡುವುದಾಗಿ ತಿಳಿಸಿ ಟಿಕೇಟ್ ಪಡೆದು ಬಸ್ನಲ್ಲಿ ಬಂದು ಕುಳಿತೆ
೯:೩೫ ಕ್ಕೆ ಹೊರಟ ಬಸ್ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬಂದಾಗ ಬೆಳಗಿನ ಜಾವ ೫:೩೦.
ಇನ್ನೊಂದು ಕೆ.ಎಸ್.ಆರ್.ಟಿ.ಸಿ ಬಸ್ ಹಿಡಿದು ಚನ್ನಪಟ್ಟಣ ತಲುಪಿ ಅಲ್ಲಿಂದ ನಮ್ಮ ಮನೆಗೆ ಹೋಗಿ ಲಗ್ಗೇಜ್ ಇಳಿಸಿ ಸ್ನಾನ,ತಿಂಡಿ ಮುಗಿಸಿಕೊಂಡು ಕೆಲಸದ ನಿಮಿತ್ತ ಚಾಮುಂಡಿ Express ರೈಲಿನಲ್ಲಿ ಪುನಃ ರಾಜಧಾನಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದೆ.