ಟ್ರೆಕ್ಕಿಂಗ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಟ್ರೆಕ್ಕಿಂಗ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಆಗಸ್ಟ್ 23, 2010

ಕೋಟೆ ಬೆಟ್ಟ ಚಾರಣ - ೨

ಮುಂದುವರಿದ ಭಾಗ...

ಮರವನ್ನು ಮುರಿಯುತಿದ್ದ ಶಬ್ದ ಈಗಂತು ಸ್ಪಷ್ಟವಾಗೆ ಕೇಳಿಸಿತು ಗೋವಿಂದ ಕೂಡ ಅಲೆರ್ಟ್ ಆದ, ನಮಗೆ ಅನುಮಾನ ಅದು ಆನೆಗಳದ್ದೆ ಇರಬಹುದು ಅಂತ ಒಮ್ಮೆ ಹೂಂಕರಿಸಿತು ನೋಡಿ! ಅದು ಆ ನಾಲ್ವರು ಮಲಗಿದ್ದ ಗುಂಪಿನ ಸನಿಹದಲ್ಲೆ,
ಅದೂ ಅಲ್ಲದೇ ಅವರಿಗೆ ಎಚ್ಚರವಾಗಲೇ ಇಲ್ಲ.

ಹೊಯ್ ಗೋವಿಂದ ಆನೆಗಳು ಕಣೋ... ಎಂದೆ
ತಕ್ಷಣ ಗೋವಿಂದ ಮತ್ತಷ್ಟು ಸೌದೆ ಹಾಕಿ ಬೆಂಕಿಯನ್ನು ಜೋರಾಗಿ ಉರಿಸತೊಡಗಿದ,
ನಾನು, ಗೋವಿಂದ ಬೇಗ ಬಾರೊ ಅವರನ್ನ ಎಬ್ಬಿಸೋಣ ಅಂತ ಹೇಳಿ ನಾನು ಗೋವಿಂದನನ್ನ ಕರ್ಕೊಂಡು ಅವರು ಮಲಗಿದ್ದ ಕಡೆಗೆ ಓಡಿ ಹೋಗಿ ಎಲ್ಲರನ್ನು ಎಬ್ಬಿಸಿ ವಿಷಯ ತಿಳಿಸಿದೊ, ಅವರು ಹಾಕಿದ್ದ ಬೆಂಕಿ ಕೂಡ ಆರಿಹೋಗಿತ್ತು.

ಹಾಗೆ ಇರಿ ನನ್ನ ಹತ್ರ ಡೀಸೆಲ್ ಇದೆ ತಗೊಂಡು ಬರ್ತೀನಿ ಅಂತ ಪುನಃ ನಮ್ಮ ಟೆಂಟ್ ಬಳಿ ಬಂದು ಡೀಸೆಲ್ ಇದ್ದ ಬಾಟೆಲ್ ತಗೊಂಡು ಮತ್ತೆ ಅಲ್ಲಿಗೆ ಓಡಿ ಹೋಗಿ ಕೆಂಡದ ಮೇಲೆ ಸುರಿದೆ
ಬಗ್ ಅಂತ ಬೆಂಕಿ ಹೊತ್ತಿಕೊಂಡಿತು, ತಕ್ಷಣ ಎಲ್ರೂ ಅದರ ಮೇಲೆ ಸ್ವಲ್ಪ ಸೌದೆ ಹಾಕಿದೊ,
ಬೆಂಕಿ ದಗದಗನೆ ಹೊತ್ತಿ ಉರಿಯಿತು.
ಆ ಗುಂಪಿನವರು, ಸಾರ್ ನಾವು ನೀವಿರೊ ಜಾಗಕ್ಕೆ ಬಂದುಬಿಡ್ತೀವಿ ಅಂದ್ರು,
ತಕ್ಷಣವೇ ಆ ಜಾಗ ಖಾಲಿ ಮಾಡಿ ಎಲ್ರೂ ನಮ್ಮ ಟೆಂಟ್ ಬಳಿ ಬಂದು ನಮ್ಮ ಶಿಭಿರಾಗ್ನಿಗೆ ಇನ್ನಷ್ಟು ಸೌದೆ ಜೋರಾಗಿ ಬೆಂಕಿ ಹೊತ್ತಿಸಿದೊ, ಅಷ್ಟೊತ್ತಿಗೆ ಟೆಂಟ್ನಲ್ಲಿ ಮಲಗಿದ್ದ ವೀರನನ್ನ ಎಬ್ಬಿಸಿ ಆಚೆ ಕಳುಹಿಸಿ ಕುಂಭಕರ್ಣನ ಹಾಗೆ ಮಲಗಿದ್ದ ನರೇಂದ್ರನನ್ನ ಎಬ್ಬಿಸಲು ಮಾಡಿದ ಪ್ರಯತ್ನವೆಲ್ಲ ವ್ಯರ್ಥವಾಯ್ತು,
ಕೊನೆಗೆ ಇದಕೆಲ್ಲ ಬಗ್ಗೊ ಮಗ ಆಲ್ಲ ಇವನು ಅಂತ ಯೋಚಿಸಿ ಟೆಂಟ್ ನಿಂದ ಹೊರಬಂದು
ಬಾಟೆಲ್ನಲ್ಲಿದ್ದ ನೀರನ್ನು ತೆಗೆದು ಕುಂಭಕರ್ಣನ ಮೈಮೇಲೆ ಸುರಿದೆ,
ತಕ್ಷಣವೇ ದಡಾರನೆ ಎದ್ದ ಅವನು ಕಣ್ಣುಜ್ಜಿಕೊಳ್ಳುತ್ತ, ಥೂ... ಯಾಕೊ! ಅಂದ,
ನರೇಂದ್ರ ಆನೆಗಳು ಬಂದಿವೆ ಕಣೋ,ಎಂದಾಕ್ಷಣ ಎದ್ದೆನೋ ಬಿದ್ದೆನೋ ಅಂತ ಟೆಂಟ್ ನಿಂದ ಆಚೆ ಓಡಿದ ಭೂಪ.
ಆನೆಗಳು ಆಗ ಚಿಕ್ಕ ಗುಡಿಯ ಹತ್ರ ಬಂದು ನಿಂತೊ,ಕತ್ತಲಾದ್ದರಿಂದ ಅವು ನಮಗೆ ಅಸ್ಪ್ರಷ್ಟವಾಗಿ ಕಾಣಿಸುತಿದ್ದವು,
ಯಾವುದಕ್ಕೂ ಇರಲಿ ಅಂತ ತಕ್ಷಣ ಬ್ಯಾಗ್ ನಿಂದ ಪಟಾಕಿ ಹೊರತೆಗೆದು ಎಲ್ರು ಕೈಗೂ ಒಂದೊಂದು ಕೊಟ್ಟು ನಾ ಹೇಳೊವರೆಗೂ ಯಾರೂ ಹೊತ್ತಿಸಬೇಡಿ ಅಂತಲೂ ಹೇಳಿದೆ,
ಅಕಸ್ಮಾತ್ ನಮ್ಮತ್ತ ದಾಳಿ ಏನಾದ್ರು ಮಾಡಿದ್ರೆ ತಪ್ಪಿಸಿಕೊಳ್ಳೊಕ್ಕೆ ಅಂತ ಇಳಿಜಾರಿನಂತಿದ್ದ ಜಾಗದ ಬಳಿಯೇ ಎಲ್ರೂ ನಿಂತಿದ್ದೆವು,
ಯಾವುದಕ್ಕೂ ಆನೆಗಳಿಗೆ ಭಯ ಇರಲಿ ಅಂತ ಒಂದು ಪಟಾಕಿ ತೆಗೆದು ನಾವು ಹಾಕಿದ್ದ ಶಿಭಿರಾಗ್ನಿಯ ಮೇಲೆ ಪಟಾಕಿ ಎಸೆದು ಎಲ್ರೂ ದೂರ ಓಡಿದೆವು ಅಷ್ಟೆ ಅದು "ಡಂ" ಅಂತ ಸಿಡಿಯಿತು, ಅಷ್ಟೆ ಕಿಡಿ ಬಿದ್ದು ನನ್ನ ಪ್ಯಾಂಟ್ ಮತ್ತು ಅವರ ಸ್ಲೀಪಿಂಗ್ ಬ್ಯಾಗ್ ಸಹಃ ತೂತಾಯಿತು, ಏನೊ ಮಾಡಲು ಹೋಗಿ ಇನ್ನೇನೊ ಆಯ್ತು ಅನ್ನೊತರಹ ನಮ್ಮ ಪಾಡು,.ಆನೆಗಳಿಗೆ ಗಾಬರಿ ಆಗಿ ಅವು ನಮ್ಮತ್ತ ಬರದೆ ಹಾಗೆ ಮರೆಯಲ್ಲೆ ನಿಂತಿದ್ದವು ಅಂತ ಕಾಣುತ್ತೆ,ಏಕೆಂದರೆ ಕತ್ತಲಾದ್ದರಿಂದ ಅವು ನಮ್ಮಕಣ್ಣಿಗೆ ಕಾಣದೆ ಅವುಗಳ ಶಬ್ದ ಮಾತ್ರ ಕೇಳಿಸ್ತಾ ಇತ್ತು, ನಮ್ಮ ಅದೃಷ್ಟ ಚೆನ್ನಾಗಿತ್ತು ಅವು ನಮ್ಮತ್ತ ಬರಲಿಲ್ಲ, ಬಂದಿದ್ದರೆ ಏನಾಗುತಿತ್ತೊ! ಯಾರಿಗೆ ಗೊತ್ತು.
ನಾನು ಎಚ್ಚರವಾಗೆ ಕಾಯುತ್ತ ಇರ್ತೀನಿ, ಬೇಕಾದರೆ ನೀವು ಮಲಗಿಕೊಳ್ಳಿ ಅಂದಾಕ್ಷಣ
ನನ್ನ ಜೊತೆ ಆ ಗುಂಪಿನಲೊಬ್ಬರನ್ನು ಬಿಟ್ಟರೆ ಎಲ್ರೂ ಸ್ಲೀಪಿಂಗ್ ಬ್ಯಾಗ್ ನೊಳಗೆ ನುಸುಳಿ ನಿದ್ರೆಗೆ ಶರಣಾದರು, ನಮ್ಮ ತಂಡದ ನರೇಂದ್ರ,ಗೋವಿಂದ ಟೆಂಟ್ ನೊಳಗೆ ಹೋಗಿ ಮಲಗಿದರು.ನಾವಿಬ್ಬರೆ ಸುಮಾರು ಹೊತ್ತಿನ ತನಕ ಮಾತನಾಡುತ್ತ ಬೆಂಕಿ ಮುಂದೆ ಕುಳಿತಿದ್ದೆವು.
ಕ್ರಮೇಣ ಆನೆಗಳ ಕೂಗು ದೂರದಲ್ಲೆಲ್ಲೊ ಕೇಳಿಸಿತು ಬಹುಶಃ ಅವು ಬೆಟ್ಟ ಇಳಿದು ಕೆಳಗೆ ಹೋಗುತಿದ್ದವೇನೊ ಆಗ ಬೆಳಗಿನ ಜಾವ ಸುಮಾರು ೫:೩೦ ಆಗಿತ್ತು, ನನಗೆ ಆಗ ಸ್ವಲ್ಪ ದೈರ್ಯ ಬಂತು,ರಾತ್ರಿಯಿಡಿ ನಿದ್ದೆಗೆಟ್ಟಿದ್ದರಿಂದ ನನಗೂ ಕೂಡ ತೂಕಡಿಕೆ ಬರುತ್ತಿತ್ತು
ನಾನು ಸಹ ಟೆಂಟ್ ನೊಳಗೆ ಹೋಗಿ ಮಲಗಿಕೊಂಡೆ ಪುನಃ ಎಚ್ಚರವಾಗಿದ್ದು ಬೆಳಿಗ್ಗೆ ೭ ಕ್ಕೆ,
ಎದ್ದು ಬೆಟ್ಟದ ಮೇಲಿಂದ ಕಣಿವೆ ಕಡೆಗೆ ಕಣ್ಣಾಯಿಸಿದಾಗ ವಾವ್! ಸುತ್ತಲೂ ಮಂಜಿನ ರಾಶಿ ನೋಡಿದರೆ ನೋಡಲು ಕಣ್ಣೆರಡು ಸಾಲದು ಎಂಬಂತ್ತೆ ಕಾಣಿಸುತಿತ್ತು.

ಮುಂಜಾನೆ ಕಂಡ ನೋಟ

ನರೇಂದ್ರ. ಗೋವಿಂದ, ಮತ್ತು ವೀರಭದ್ರ ಆಗಲೇ ಎದ್ದು ಶಿಭಿರಾಗ್ನಿ ಮುಂದೆ ಕುಳಿತಿದ್ದರು ನಾನು ಕೂಡ ಅವರ ಜೊತೆ ಸೇರಿಕೊಂಡೆ ಬಳಿಕ ಒಲೆ ಹಚ್ಚಿ ಪಾತ್ರೆ ಇಟ್ಟು ಚಹಾ ಕಾಯಿಸಿ ಕುಡಿದು ಜೊತೆಗೆ ತಂದಿದ್ದ ಬನ್ ಜಾಮ್ ತಿಂದು ಬೆಳಗಿನ ಉಪಹಾರ ಮುಗಿಸಿ




ನಂತರ ನೀರಿನ ಹೊಂಡದ ಬಳಿ ಹೋಗಿ ಗಮನಿಸಿದಾಗ ಅನೆಗಳು ಒಡಾಡಿದ ಹೆಜ್ಜೆ ಗುರುತು ಸ್ಪ್ರಷ್ಟವಾಗಿ ಕಾಣಿಸುತಿತ್ತು, ಬಹುಶಃ ಬೇಸಿಗೆ ಶುರುವಾಗಿದ್ದ ಕಾರಣ ಆನೆಗಳು ನೀರನ್ನು ಹುಡುಕಿಕೊಂಡು ಬೆಟ್ಟದ ಮೇಲೆ ಇರುವ ಹೊಂಡದ ಬಳಿ ಬಂದಿರಬೇಕು,
ಅದೇನೆ ಇರಲಿ ಪ್ರಕೃತಿ ಮಡಿಲಲ್ಲಿ ನಾವು ಆ ರಾತ್ರಿ ಕಳೆದದ್ದು ಮಾತ್ರ ಸ್ವಲ್ಪ ಭಯದ ಜೊತೆಗೆ ಒಂಥರಾ ಥ್ರಿಲ್ ಕೂಡ ಇತ್ತು, ಎದೆಯಾಳದಲ್ಲಿ ಉಳಿದುಕೊಂಡು ಬಿಟ್ಟಿತ್ತು ಯಾವತ್ತು ಮರೆಯೋಹಾಗಿಲ್ಲ.
ಸ್ವಲ್ಪ ಹೊತ್ತು ಅಲ್ಲೆಲ್ಲಾ ಸುತ್ತಾಡಿ ಹೊರಡಲು ತಿರ್ಮಾನಿಸಿ ನಮ್ಮ ಟೆಂಟ್ ಬಿಚ್ಚಿ ಗಂಟು ಮೊಟೆ ಕಟ್ಟಿ ಸಹ ಗುಂಪಿನ ಚಾರಣ ಮಿತ್ರರಿಗೆ ವಂದನೆಗಳನ್ನರ್ಪಿಸಿ ಹೊರಟೆವು ಹಟ್ಟಿಹೊಳೆಯ ಜಾಡನ್ನಿಡಿದು...

ಮರಳಿ ಗೂಡಿಗೆ...


ವಾಪಾಸ್ ಹೊರಡುವಾಗ ಹಾದಿಯಲ್ಲಿ ಆನೆಗಳ ಲದ್ದಿ ಕಂಡುಬಂದಿತು, ಲದ್ದಿ ನೋಡಿ ವೀರಭದ್ರ ಬೆದರಿದ ಕಾಗೆ ಹಾಗೆ ಮುಖ ಮಾಡಿಕೊಂಡು ಬರುತಿದ್ದ,


ಒಮ್ಮೆ ಹಿಂತಿರುಗಿ ನೋಡಿದಾಗ ಕಾಣುತ್ತಿರುವ ಕೋಟೆಬೆಟ್ಟದ ದೃಶ್ಯ


ಪುನಃ ಅದೇ ಹಾದಿಯಲ್ಲಿ ಕಾಡು ಹರಟೆ ಹೊಡೆಯುತ್ತ ಸಾಗಿತ್ತು ನಮ್ಮ ಪಯಣ.
ಆ ಒಂಟಿ ಮನೆಯ ಹತ್ತಿರ ಬಂದಾಗ ಮದ್ಯಾಹ್ನ ೧೨.೧೫, ನಾವು ಬರುವ ಹೊತ್ತಿಗೆ ನಾಯಿ ಬೊಗಳುತಿದ್ದರಿಂದ ಮನೆಯವರೆಲ್ಲೆರು ಹೊರಗೆ ಬಂದ್ರು
ಹಾಗೆ ಕುಡಿಯಲು ನೀರು ತರಲು ಹೇಳಿದೆವು, ಪಯಣ ಎಲ್ಲ ಚೆನ್ನಾಗಿತ್ತ? ಅಂದ್ರು ರಾತ್ರಿ ನಡೆದ ವಿಷಯವನ್ನು ಹೇಳಿದಾಗ ಹೌದಾ! ಎಂದು ಬೆರಗಾದರು ಸದ್ಯ ಏನು ತೊಂದ್ರೆಯಾಗಿಲ್ಲವಲ್ಲ ಬಿಡಿ ಅಂದುಕೊಂಡು ಅಷ್ಟರಲ್ಲಿ ಕುಡಿಯಲು ನೀರು ಕೊಟ್ಟ್ರು,ನೀರು ಕುಡಿದು ಅವರಿಗೆ ಧನ್ಯವಾದಗಳನ್ನ ಹೇಳಿ ಚಾರಣಕ್ಕೆ ಚಾಲನೆ ಕೊಟ್ಟೆವು.


ಕಾಫಿ ಹಣ್ಣಿನ ಗೊನೆ


ಕೊನೆಗೆ ಹಟ್ಟಿಹೊಳೆ ತಲುಪಿದಾಗ ೨:೦೦ ರ ಗಡಿ ದಾಟಿತ್ತು, ಅಲ್ಲೆ ಹಟ್ಟಿಹೊಳೆಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಹು ಕಾಲ ನೀರಿನಲ್ಲಿ ಮಿಂದಿದ್ದು,ದಣಿದಿದ್ದ ನಮ್ಮ ದೇಹಗಳಿಗೆ ಕೊಂಚ ಅರಾಮನೆನಿಸಿತು.

ಹಟ್ಟಿಹೊಳೆಯಲ್ಲಿ ಸ್ನಾನ

ನಂತರ ನಾವು ಹಟ್ಟಿಹೊಳೆಯ ಬಸ್ ನಿಲ್ದಾಣಕ್ಕೆ ಬಂದೆವು, ಅಷ್ಟರಲ್ಲಿ ಮಡಿಕೇರಿ ಕಡೆಗೆ ಹೊಗುವ ಬಸ್ ಬರುವುದಕ್ಕೂ ಒಂದೇ ಆಯ್ತು, ಬಸ್ನಲ್ಲಿ ಪ್ರಯಾಣ ಮಾಡಿ ಮಡಿಕೇರಿಗೆ ಬಂದಾಗ ಸಂಜೆ ಆಗಿತ್ತು, ಹೊಟ್ಟೆ ಬಹಳ ಹಸಿದಿದ್ದರಿಂದ ಮೊದಲು ಹೋಟೆಲ್ ನಲ್ಲಿ ಊಟ ಮುಗಿಸಿ ಕೆ.ಎಸ್.ಅರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದೊ,ಮಡಿಕೇರಿಯ ಸ್ನೇಹಿತರಾದ ಶಿವರಾಮ್ ರವರ ಮನೆಗೆ ನಿನ್ನೆ ತಂದಿದ್ದ ಪಾತ್ರೆ ಹಿಂತಿರುಗಿಸಿ ಬರಲು ಹೋಗಿದ್ದ ನರೇದ್ರ ಮತ್ತು ವೀರ ತನ್ನ ಒಂದು ಗಂಟೆಯಾದ್ರು ಸುಳಿವೇ ಇಲ್ಲ, ಗೋವಿಂದ ಮತ್ತು ನಾನು ಕೆ.ಎಸ್.ಅರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಇಬ್ಬರೇ ಕಾಯುತ್ತ ಕುಳಿತಿದ್ದೊ, ಕೊನೆಗೂ ಅಸಾಮಿಗಳು ಎಂಟ್ರಿ ಕೊಟ್ಟ್ರು,
ಅಲ್ಲೆ ಇದ್ದ ಮಾರುತಿ ವ್ಯಾನ್ ನಲ್ಲಿ ಮೈಸೂರಿಗೆ ಪ್ರಯಾಣಿಸಿ ಅಲ್ಲಿಂದ ನರೇಂದ್ರ ಮತ್ತು ಗೋವಿಂದ ಐರಾವತದಲ್ಲಿ ಬೆಂಗಳೂರಿಗೆ ಹೊರಟರು, ನಾನು ಮತ್ತು ವೀರ ಕೆ.ಎಸ್.ಅರ್.ಟಿ.ಸಿ ಬಸ್ ನಲ್ಲಿ ಚನ್ನಪಟ್ಟಣ್ಣ ತಲುಪಿದಾಗ ರಾತ್ರಿ ೧೦:೩೦ ಆಗಿತ್ತು, ಅಲ್ಲಿಂದ ರೈಲ್ವೆ ಸ್ಟೇಷನ್ ಗೆ ನಡೆದು ಹೋಗಿ ಅಲ್ಲಿ ಪಾರ್ಕ್ ಮಾಡಿದ್ದ ಬೈಕ್ ತಗೊಂಡು ಮನೆ ಸೇರಿಕೊಂಡೆ, ಊಟ ಮುಗಿಸಿ ಮಲಗಿಕೊಂಡ್ರು ಆ ಹಟ್ಟಿಹೊಳೆ, ಕೋಟೆಬೆಟ್ಟದ ಮೇಲೆ ರಾತ್ರಿ ಕಳೆದ ಅನುಭವ ಎಲ್ಲವೂ ಕಣ್ಮುಂದೆಯೇ ಬಂದತ್ತಾಗಿ ನಿದ್ದೆ ಬರದೇ ಹೊರಳಾಡಿದ್ದು ನಿಜಕ್ಕೂ ಕೋಟೆಬೆಟ್ಟ ಚಾರಣ ನನ್ನ ಮನಸಿನಲ್ಲಿ ಅವಿಸ್ಮರಣೀಯ ಚಾರಣವಾಗಿ ಉಳಿಯಿತು.

ಸೋಮವಾರ, ಜುಲೈ 19, 2010

ಕೋಟೆ ಬೆಟ್ಟ ಚಾರಣ - ೧

೨೬.೦೨.೧೦, ೨೭.೦೨.೧೦ ಮತ್ತು ೨೮.೦೨.೧೦


ಕೊಡಗಿನಲ್ಲೇ ಮೊರನೇ ಅತೀ ಎತ್ತರವಾದ ಪರ್ವತ.


ಎತ್ತರ: ಸಮುದ್ರ ಮಟ್ಟದಿಂದ ಸುಮಾರು ೫೪೦೦ ಅಡಿ.


ತಂಡ: ಗೋವಿಂದ, ನರೇಂದ್ರ, ವೀರ ಮತ್ತು ನಾನು ( ಮೋಹನ್).


ಚಾರಣದ ಅಂತರ : ೧೪ ಕಿ.ಮೀ + ೧೪ ಕಿ.ಮೀ.


ತುಂಬಾ ದಿನದಿಂದ ನನ್ನ ಮನಸಿನಲ್ಲಿ ಹಾಗೇ ಉಳಿದಿದ್ದ "ಕೋಟೆಬೆಟ್ಟ ಚಾರಣ"ಕ್ಕೆ ಕೊನೆಗೂ ಶುಭಗಳಿಗೆ ಕೂಡಿಬಂದಿತ್ತು, ಚಾರಣ ಮಿತ್ರರಿಂದ ಸಮ್ಮತಿ ಪಡೆದು ಎರಡು ದಿನ ಮುಂಚಿತವಾಗೇ ಐರಾವತ ಬಸ್ ನಲ್ಲಿ ನಾಲ್ಕು ಆಸನಗಳನ್ನು ಕಾಯ್ದಿರಿಸಿ ಬಂದೆ,

ಅವತ್ತು ಶುಕ್ರವಾರ ನಾವು ಹೊರಡಬೇಕಾಗಿದ್ದ ಐರಾವತ ಬಸ್ ರಾತ್ರಿ ೯:೪೫ ಕ್ಕೆ ಇದ್ದುದ್ದರಿಂದ
ತರಾತುರಿಯಲ್ಲಿ ಬಹುಬೇಗನೇ ಊಟ ಮುಗಿಸಿ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಅಡಿಇಟ್ಟೆವು.
ಐರಾವತ ರಾತ್ರಿ ೧೦:೦೦ ಕ್ಕೆ ಹೊರಟಿತು ಹಾಗೇ ಸ್ಯಾಟ್ಲೈಟ್ ಬಸ್ ನಿಲ್ದಾಣದಲ್ಲಿ ನರೇಂದ್ರ ಕೂಡ ಬಂದು ಸೇರಿಕೊಂಡ ಅಲ್ಲಿಂದ ಹೊರಟ ಐರಾವತ ಎಲ್ಲ ವಾಹನಗಳನ್ನು ಹಿಂದೆ ಹಾಕುತ್ತಾ ಮಿಂಚಿನ ವೇಗದಲ್ಲಿ ಮಡಿಕೇರಿಗೆ ತಂದು ಹಾಕಿದಾಗ ಬೆಳಗಿನ ಜಾವ ೩:೧೫,
ಇಲ್ಲೆ ಸ್ವಲ್ಪ ಹೊತ್ತು ಮಲಗೋಣ ಅಂತ ಯೋಚಿಸಿ ಬಸ್ ನಿಲ್ದಾಣದಲೆಲ್ಲ ಸುತ್ತಾಡಿದೆವು ಆದರೆ ಬಸ್ ನಿಲ್ದಾಣದಲ್ಲಿ ಕಾಮಗಾರಿ ನಡೆಯುತ್ತಿದ್ದರಿಂದ ಅಲ್ಲೆಲ್ಲೂ ಸರಿಯಾದ ಜಾಗ ಸಿಗದೆ ಕೊನೆಗೆ ಸಿಕ್ಕ ಒಂಚೂರು ಜಾಗದಲ್ಲಿ ಎಲ್ರೂ ಮಲಗಿಕೊಂಡೊ, ಅಷ್ಟರಲ್ಲೇ ಚುಮು ಚುಮು ಬೆಳಕಾಗತೊಡಗಿತು ನಂತರ ಎದ್ದು ಬಸ್ ನಿಲ್ದಾಣದ ಸನಿಹದಲ್ಲೇ ಇದ್ದ ನರೇಂದ್ರನ ಸ್ನೇಹಿತರ ಮನೆಗೆ ಹೋಗಿ ಅಲ್ಲೇ ತಿಂಡಿ, ಕಾಫಿ, ಮುಗಿಸಿಕೊಂಡು ಖಾಸಗಿ ನಿಲ್ದಾಣದ ಕಡೆಗೆ ನಡೆದು ಬಂದೊ, ಅಷ್ಟರಲ್ಲಿ ಸೋಮವಾರಪೇಟೆ ಕಡೆಗೆ ಹೋಗುವ ಬಸ್ ಹೊರಡಲು ಸಿದ್ದವಾಗಿ ನಿಂತಿತ್ತು, ಎಲ್ರೂ ಹೋಗಿ ಕುಳಿತ ಸ್ವಲ್ಪ ಹೊತ್ತಿನಲ್ಲೇ ಬಸ್ ಹೊರಟಿತು ಬಸ್ ನಲ್ಲಿ ಹಾಕಿದ್ದ ಸೊಗಸಾದ ಕನ್ನಡ ಗೀತೆಗಳನ್ನು ಕೇಳುತ್ತಾ ಮೈ ಮರೆತು ಹಟ್ಟಿಹೊಳೆ ಬಂದದ್ದೆ ಗೊತ್ತಾಗಲಿಲ್ಲ ಬಸ್ ನಿಂದ ನಮ್ಮ ಲಗ್ಗೇಜುಗಳನ್ನು ಕೆಳಗಿಳಿಸಿ ಅಲ್ಲೇ ಇದ್ದ ಹೋಟೆಲ್ ಹಟ್ಟಿಹೊಳೆಯಲ್ಲಿ ಮದ್ಯಾಹ್ನದ ಊಟಕ್ಕೆಂದು ಪರೋಟ, ಕಾಯಿಬಜ್ಜಿ (ಬಹು ಬೇಗನೆ ಮಾಡಬಹುದಾದಂತ
ಸಾಂಬಾರ್ ಇದು ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು ಭಾಗಗಳಲ್ಲಿ ಹೆಚ್ಚು ಪ್ರಚಲಿತ) ಕಟ್ಟಿಸಿಕೊಂಡು ಪಕ್ಕದಲ್ಲೇ
ಪ್ರಶಾಂತವಾಗಿ ಹರಿಯುತಿದ್ದ ಹಟ್ಟಿಹೊಳೆಯಲ್ಲಿ ಸ್ನಾನ ಮುಗಿಸಿ ಚಾರಣವನ್ನು ಶುರು ಮಾಡಿದೆವು,


ಪ್ರಶಾಂತವಾಗಿ ಹರಿಯುತ್ತಿರುವ ಹಟ್ಟಿಹೊಳೆ

ರಸ್ತೆಯ ಎಡ ಬದಿಯಲ್ಲಿ ಪ್ರಶಾಂತವಾಗಿ ಹರಿಯುತಿದ್ದ ಹಟ್ಟಿಹೊಳೆ ಒಂದೆಡೆಯಾದರೆ
ಬಲ ಬದಿಯಲ್ಲಿ ಸುಂದರವಾದ ಕಾಫಿ ಎಸ್ಟೇಟ್, ಅಲ್ಲೊಂದು ಇಲ್ಲೊಂದು ಪುಟ್ಟ ಮನೆ, ಮನೆಯ ಆವರಣದಲ್ಲಿ ಸುಂದರವಾದ ಬಗೆ ಬಗೆಯ ಹೂ ಗಿಡಗಳು ಎಂತವರ ಮನಸನ್ನು ಪುಳಕಗೊಳಿಸುವಂತಿದ್ದವು, ಅಲ್ಲಲ್ಲಿ ಮನೆಗಳ ಮುಂದೆ ಇದ್ದ ಹೂಗಳ ಕೆಲವು ಪೋಟೋಗಳನ್ನು ತೆಗೆದುಕೊಂಡು ಮುಂದೆ ಸಾಗುತ್ತಿದ್ದೆವು,
ಸುಮಾರು ಮೊರು ಕಿ.ಮೀ. ಸಾಗುವಷ್ಟರಲ್ಲಿ ರಸ್ತೆಯ ಎಡಕ್ಕೆ ತೂಗುಸೇತುವೆ ಸಿಕ್ತು ಅಲ್ಲೆಲ್ಲ ಒಡಾಡಿ ಕೆಲವು ಛಾಯಚಿತ್ರ ತೆಗೆದು ಮತ್ತೆ ರಸ್ತೆಗೆ ಬಂದು ಚಾರಣವನ್ನು ಶುರು ಮಾಡಿದೆವು,
ಇನ್ನೊಂದು ಕಿ.ಮೀ. ಸಾಗಿದ ಬಳಿಕ ಮರವೊಂದರಲ್ಲಿ ಫಲಕ ನೇತುಹಾಕಿದ್ದರು ಅದರಲ್ಲಿ ಕೋಟೆಬೆಟ್ಟ ೭ ಕಿ.ಮೀ. ಎಂದು ಹಾಕಿತ್ತು ಅಲ್ಲಿ ನಾವು ಬಲಕ್ಕೆ ತಿರುಗಿ ಕಾಫಿ ಎಸ್ಟೇಟ್ ಗಳ ನಡುವೆ ಸಾಗುತಿತ್ತು ನಮ್ಮ ಚಾರಣ, ಸ್ವಲ್ಪ ದೂರ ಮುಂದೆ ಬಂದಾಗ ಕಾಫಿ
ಎಸ್ಟೇಟ್ ವೊಂದರಲ್ಲಿ ಜುಳು ಜುಳು ಶಬ್ದ ಕೇಳಿಸಿದ್ದರಿಂದ ಮರದ ಗೇಟ್ ಬಳಿ ಬಂದು ನೋಡಿದಾಗ ನೀರು ಕೊಳವೆ ಮೂಲಕ ಸಣ್ಣಗೆ ಹರಿಯುತಿತ್ತು,
ನೀರು ಯಾವಾಗ ಇನ್ನೆಷ್ಟು ದೂರದಲ್ಲಿ ಸಿಗುತ್ತೊ ಏನೋ ? ಅಂದುಕೊಂಡು ಬಾಟೆಲ್ ತೆಗೆದು ನೀರನ್ನು ಮನಸೊ ಇಚ್ಚೆ ಕುಡಿದು ಖಾಲಿ ಮಾಡಿ ಮತ್ತೆ ನೀರನ್ನು ತುಂಬಿಕೊಳ್ಳುವುದಕ್ಕೆ ಮರದ ಗೇಟ್ ತಳ್ಳಿ ಒಳ ನಡೆದೆ,
ಅನುಮತಿ ಇಲ್ಲದೆ ಕಾಫಿ ತೋಟಕ್ಕೆ ದನ ನುಗ್ಗಿದ ಹಾಗೇ ನುಗ್ಗಿದನ್ನು ನೋಡಿ ಯಾರಾದರು ಬೈಯುತ್ತಾರೆನೊ ಅಂದುಕೊಂಡೆ ಸದ್ಯ ಅಲ್ಲಿ ಯಾರು ಇರಲಿಲ್ಲ ವೀರನು ಸಹ ಹಿಂದೆನೇ ಬಂದ
ನೀರನ್ನು ತುಂಬಿಸಿಕೊಂಡು ಮರದ ಗೇಟನ್ನು ಮೊದಲಿದ್ದ ಹಾಗೇ ಮುಚ್ಚಿ ಹೊರ ಬಂದೆ,
ಹಾಗೆ ಸ್ವಲ್ಪ ದೂರ ನಡೆಯುವಷ್ಟರಲ್ಲಿ ಟಾರ್ ರಸ್ತೆ ಮುಕ್ತಾಯಗೊಂಡಿತು, ಅಲ್ಲಿ ಅಸಾಮಿಯೊಬ್ರು ತೋಟದಲ್ಲಿ ಬಾಳೆಗೊನೆ ಕತ್ತರಿಸ್ತಾಯಿದಿದ್ದನ್ನು ನೋಡಿ ಹಾಗೆ ನಿಂತೆವು ನಮ್ಮನ್ನು ನೋಡಿ ಬಾಳೆ ಹಣ್ಣು ಬೇಕಾ ಅಂದ್ರು ಅಷ್ಟರಲ್ಲಿ ನಮ್ಮ ನರ‍ೆಂದ್ರ ಎಷ್ಟು ಹಣ ಅಂದ ಅದಕ್ಕೆ ಅವರು ಹಣ ಗಿಣ ಏನು ಬೇಡ ತಗೊಳ್ಳಿ ಅಂದ್ರು ಅದು ಅವರ ದೊಡ್ಡ ಗುಣ ಬಿಡಿ, ಸುಮಾರು ಅರ್ಧ ಗೊನೆ ಇತ್ತು ಅದರಲ್ಲಿ ಕೆಲವು ಹಣ್ಣಾಗಿದ್ದ ಬಾಳೆಹಣ್ಣನ್ನು ಅಲ್ಲಿಯೆ ತಿಂದು ಮುಗಿಸಿದೆವು ಮಿಕ್ಕಿದ ಬಾಳೆಕಾಯನ್ನು ಕರಿಯ ( ವೀರ) ನಾನು ಮನೆಗೆ ತಗೊಂಡು ಹೋಗಿ ಬಜ್ಜಿ ಮಾಡಿಸ್ತೀನಿ ಅಂತ ಪ್ಲಾಸ್ಟಿಕ್ ಕವರಲ್ಲಿ ಸುತ್ತಿ ಬ್ಯಾಗ್ ನೊಳಗೆ ಹಾಕಲು ಹೋದ,
ಅವಾಗ ನಾನು, ಲೇ ಮಂಗ ಈಗಲೇ ಹೊತ್ಕೊಂಡು ಹೋಗೊಕೆ ಆಗ್ತಾ ಇಲ್ಲ ಅದ್ ಬೇರೆ ಸಿಗಾಕ್ತಾವನೆ ಅಲ್ಲೆಲಾದ್ರು ಪೊದೇಲಿ ಹಾಕ್ಲ ಅಂದೆ,
ವೀರ ಪೊದೇಲಿ ಇಟ್ಟು ಗುರುತು ಮಾಡಿ ಬಂದ ಸ್ವಲ್ಪ ದೂರ ನಡೆಯುವಷ್ಟರಲ್ಲಿ ಎಡಕ್ಕೆ ಒಂದು ಮನೆಯೊಂದು ಕಾಣಿಸಿತು ಮನೆಯ ಗೇಟ್ ಬಳಿ ಬಂದಾಗ ನಾಯಿ ಒಂದೆ ಸಮನೆ ಬೊಗುಳುತಿತ್ತು ಬಹುಶಃ ಅದಕ್ಕೆ ನಾವು ಕಾಫಿ ಬೀಜ ಕದಿಯಲು ಬಂದ ಕಳ್ಳರಂತೆ ಕಾಣಿಸಿರಬೇಕು, ನಾಯಿ ಬೊಗಳುವ ಶಬ್ದ ಕೇಳಿ ಮನೆಯಿಂದ ಒಂದು ಹುಡುಗಿ ಬಂತು ನಮ್ಮ ಬಾಟೆಲ್ ನಲ್ಲಿದ್ದ ಇದ್ದ ಸ್ವಲ್ಪ ನೀರನ್ನು ಕುಡಿದು ಖಾಲಿ ಮಾಡಿ ಅವರ ಕೈಗೆ ಕೊಟ್ಟು ನೀರನ್ನು ತುಂಬಿಕೊಡುವಂತೆ ಹೇಳಿದೊ,
ಅಷ್ಟರಲ್ಲಿ ಹುಡುಗಿಯ ತಾಯಿ ಕೂಡ ಬಂದ್ರು ಎಲ್ಲಿಂದ ಬಂದ್ರಿ? ಅಂತ ಕೇಳಿದ್ರು
ಅದಕ್ಕೆ ನಾವು ಬೆಂಗಳೂರಿನವರು ಕೋಟೆಬೆಟ್ಟಕ್ಕೆ ಹೋಗ್ತಾ ಇದ್ದೀವಿ ರಾತ್ರಿ ಅಲ್ಲೇ ಉಳಿತೀವಿ
ಏನು ತೊಂದ್ರೆ ಇಲ್ವಾ? ಅಂತ ಕೇಳಿದೆವು,
ಪ್ರಾಣಿಗಳಿವೆ ಆದ್ರೆ ತೊಂದ್ರೆ ಏನು ಕೊಡಲ್ಲ ಹೋಗಬಹುದು ನಮ್ಮ ಮಗ ಮಗಳು ಹೋಗಿ ಈಗ ತಾನೆ ಬಂದ್ರು ಅಂತ ಹೇಳಿದ್ರು.
ಓದೋಕೆ ಶಾಲೆ ಎಲ್ಲಿದೆ? ಅಂದದ್ದಕ್ಕೆ ಮಡಿಕೇರಿಗೆ ಹೋಗ್ಬೇಕು ಇವರು ಇಲ್ಲಿಂದ ಹಟ್ಟಿಹೊಳೆಗೆ ನಡ್ಕೊಂಡು ಹೋಗಿ ಅಲ್ಲಿಂದ ಬಸ್ ಹತ್ತಿ ಮಡಿಕೇರಿಗೆ ಹೋಗ್ತಾರೆ ಅಂದ್ರು,
ನಾವು ಒಬ್ಬರ ಮುಖ ಒಬ್ಬರು ನೋಡಿಕೊಂಡು ನೀವು ಪ್ರತಿದಿನ ಮಾಡುವ ಚಾರಣದ ಮುಂದೆ ನಮ್ಮ ಚಾರಣ ಏನಿಲ್ಲ ಬಿಡಿ ಅಂತ ಮನಸಿನಲ್ಲೆ ಅಂದುಕೊಂಡು ನಾವು ಬರ್ತೀವಿ ಅಂತ ಹೇಳಿ ಹೊರಡಲು ಮುಂದಾದೆವು.

ಬಿಸಿಲಿನ ಜಳ ಜಾಸ್ತಿಯಾದರೂ ಕೂಡ ಸಾಕಷ್ಟು ಕಾಡು ಇದ್ದರಿಂದ ಅಷ್ಟೇನು ಅದರ ಪ್ರಭಾವ ಬೀರಲಿಲ್ಲ, ನಡೆದು ನಡೆದು ಬಹಳ ಅಯಾಸವಾಗಿತ್ತು ಎಡಕ್ಕೆ ಪರ್ವತ ಶ್ರೇಣಿಯಲ್ಲಿ ಯಾವುದೊ ಒಂದು ಎತ್ತರವಾದ ಬೆಟ್ಟ ನೋಡಿ ಇದೇ ಕೋಟೆಬೆಟ್ಟ ಇರಬಹುದು ಕಣ್ರೋ ಅಂತ ತೋರಿಸಿದೆ, ಆಗಲೇ ಸಮಯ ಮದ್ಯಾಹ್ನ ಎರಡಾದ್ದರಿಂದ ಹಸಿವಿನಿಂದ ಹೊಟ್ಟೆ ಬೇರೆ ತಾಳ ಹಾಕುತಿತ್ತು ಊಟ ಮಾಡೋಣವಾ? ಅಂದೆ, ಎಲ್ರೂ ಸಮ್ಮತಿ ಸೂಚಿಸಿ ಒಂದು ಮರದ ಕೆಳಗೆ ಪ್ಲಾಸ್ಟಿಕ್ ಟಾರ್ಪಾಲ್ ಹಾಸಿ ಕೈ ತೊಳೆದು ಎಲ್ರೂ ಕುಳಿತೊ, ಮೊದಲೇ ಹಟ್ಟಿಹೊಳೆಯಲ್ಲಿ
ಕಟ್ಟಿಸಿಕೊಂಡು ಬಂದಿದ್ದ ಪರೋಟ, ಸಾಂಬಾರ್,ಜೊತೆಗೆ ಉಪ್ಪಿನಕಾಯಿ ತಿಂದು ಮುಗಿಸಿ ಸ್ವಲ್ಪ ಹೊತ್ತು ಹಾಗೇ ನೆಲಕ್ಕೊರಗಿದೊ.

ತದ ನಂತರ ಶುರುವಾಯ್ತು ನಮ್ಮ ಚಾರಣ ಸುಮಾರು ದೂರ ಕ್ರಮಿಸಿದ ಮೇಲೆ ಕೋಟೆಬೆಟ್ಟ ನಮ್ಮ ಕಣ್ಣಿಗೆ ಗೋಚರಿಸಿತು, ಹಿಂದೆ ಯಾವುದೊ ಬೆಟ್ಟವನ್ನು ನೋಡಿ ಕೋಟೆಬೆಟ್ಟ ಎಂದು ತಪ್ಪು ತಿಳಿದಿದ್ದೊ,

ಪಯಣದ ಹಾದಿಯಲ್ಲಿ ನಾನು.

ಇಲ್ಲಿಂದ ಸುಮಾರು ದೂರ ನಡೆದು ಕೋಟೆಬೆಟ್ಟದ ತಪ್ಪಲಿಗೆ ಬಂದೆಬಿಟ್ಟೆವು ಮುಂದೆ ದಾರಿ ಕವಲಾದಂತಿತ್ತು ಮೇಲಕ್ಕೆ ನೇರ ದಾರಿ ಅಷ್ಟು ಸ್ಪ್ರಷ್ಟವಾಗಿಲ್ಲದರಿಂದ ಬಲಕ್ಕೆ ವಾಲಿದಂತ ದಾರಿಯಲ್ಲಿ ಸ್ವಲ್ಪ ದೂರ ನಡೆದೊ ಆ ದಾರಿ ಮತ್ತೆ ಕಾಡಿನೊಳಕ್ಕೆ ಕರೆದೋಯ್ತು,
ನಾನು ಎಲ್ಲರಿಗೂ ಹೇಳ್ದೆ ನಾವು ಬಂದಿರೋದು ತಪ್ಪು ದಾರಿ ಕಣ್ರೋ ಅಂತ, ಮತ್ತೆ ವಾಪಸು ಬಂದು ಕವಲಾದ ಜಾಗಕ್ಕೆ ವಾಪಸಾಗಿ
ಏರುದಾರಿ ಜಾಡನ್ನಿಡಿದು ಹೊರಟೆವು.



ದೇಗುಲದ ಮುಂದೆ ನಮ್ಮ ತಂಡ

ಅಂತೂ ಕೋಟೆಬೆಟ್ಟ ತಲುಪಿದಾಗ ಸಂಜೆ ಐದುವರೆಯಾಗಿತ್ತು, ಅಲ್ಲಿ ನಮಗೆ ಮೊದಲು ಕಂಡಿದ್ದು ಸ್ವಲ್ಪ ಬಯಲಾದ ಪ್ರದೇಶ,ಎರಡು ಚಿಕ್ಕ ದೇವಳ, ಮೊರ್ನಾಲ್ಕು ಚಿಕ್ಕ ನಂದಿ ಕಲ್ಲುಗಳು,ಮತ್ತೆರಡು ಚಿಕ್ಕ ನೀರಿನ ಹೊಂಡಗಳು,ಬೆಟ್ಟದ ಮೇಲೆ ಬೀಸುತಿದ್ದ ಹಿತವಾದ ತಂಗಾಳಿಗೆ ಮನಸೋತು ಮೈಯೊಡ್ಡಿ ಮೈಮರತ ಆ ಒಂದು ಕ್ಷಣ ಚಿರಕಾಲ ನೆನಪಲ್ಲಿ ಉಳಿಯುವಂತದ್ದು. ಬೆಟ್ಟದ ಮೇಲಿಂದ ಕಣಿವೆಯ ಕಡೆಗೆ ಕಣ್ಣಾಯಿಸಿದಾಗ ವಾಹ್! ಸ್ವರ್ಗ,
ಕಣಿವೆಯ ತುಂಬಾ ಮಂಜಿನ ರಾಶಿ, ಏನೀ ಪ್ರಕೃತಿ ಮಾತೆಯ ಅವತಾರಗಳು ಅವಳ ಮಡಿಲಲ್ಲಿ ಆನಂದ ಪಡುತ್ತಿರುವ ನಾವೆಷ್ಟು ಧನ್ಯರು.
ಒಂದು ಗುಂಪು ನಮಗಿಂತ ಮುಂಚಿತವಾಗಿ ಬಂದು ಶಿಭಿರಾಗ್ನಿ ಮುಂದೆ ಕೂತಿದ್ದರು ನಾವು ನೇರವಾಗಿ ಹೋಗಿ ಮಾತನಾಡಿಸಿದಾಗ ಒಬ್ಬರು ಮಂಗಳೂರಿನಿಂದ, ಇನ್ನೊಬ್ಬರು ಮೈಸೂರಿನಿಂದ, ಮತ್ತಿಬ್ಬರು ಬೆಂಗಳೂರಿನಿಂದ ಬಂದವರಾಗಿದ್ದರು, ಅವರು ನಾವು ಬಂದ ಹಾದಿಯಲ್ಲಿ ಬಂದಿರಲಿಲ್ಲ ಮುಕ್ಕೋಡ್ಲು ಮಾರ್ಗವಾಗಿ ಬಂದಿದ್ರಂತೆ, ನಂತರ ದೇವಸ್ಥಾನದ ಬಳಿ ಹೋಗಿ ದೇವರಿಗೆ ನಮಸ್ಕರಿಸಿ ಬಂದೆವು, ಅಷ್ಟರಲ್ಲಿ ಬಾನಲ್ಲಿ ರವಿ ತನ್ನ ದೈನಂದಿನ ಕೆಲಸ ಮುಗಿಸಿ ತನ್ನ ಲೋಕಕ್ಕೆ ಮರಳುವಾಗ ತನ್ನ ಸೌಂದರ್ಯವನ್ನು ನಮ್ಮ ಕಣ್ತುಂಬಿಸಿ ಹೊರಟ,
ಕತ್ತಲಾಗುತಿತ್ತು ಟೆಂಟ್ ಹಾಕೊ ಕೆಲಸ ಬಾಕಿ ಇತ್ತು, ಜಾಗ ಚೆನ್ನಾಗಿದೆ ಇಲ್ಲೆ ಹಾಕೊಣ ಎಂದೆ ಎಲ್ರೂ ಒಪ್ಪಿದ್ರು ಅಷ್ಟರಲ್ಲೆ ಗೋವಿಂದ ರಾಗ ತೆಗೆದ ಇಲ್ಲಿ ಬೇಡ ಬೆಟ್ಟದ ತುದಿಯಲ್ಲೆ ಟೆಂಟ್ ಹಾಕೊಣ ಅಂದ ಅದಕ್ಕೆ ಯಾರು ಸಮ್ಮತಿ ಸೂಚಿಸಲಿಲ್ಲ ಅದಕ್ಕೆ ಗೋವಿಂದ ಇಂಗು ತಿಂದ ಮಂಗನಂತೆ ಮುಖವನ್ನು ಮಾಡಿಕೊಂಡು ನಿಮ್ಮಿಷ್ಟ ಅಂತ ಹೇಳಿ ಸ್ವಲ್ಪ ದೂರದಲ್ಲಿ ಇದ್ದ ಬಂಡೆಗಲ್ಲಿನ ಮೇಲೆ ಹೋಗಿ ಕುಳಿತ,
ಹೇ ಬರ್ರೊ ಪರವಾಗಿಲ್ಲ ನಾವೆ ಹಾಕೋಣ ಅಂದೆ ನನ್ನ ಜೊತೆ ನರೇಂದ್ರ ಮತ್ತು ವೀರ ಕೈಜೋಡಿಸಿದ್ರು ಸ್ವಲ್ಪ ಹೊತ್ತಲ್ಲೆ ನಮ್ಮ ಟೆಂಟ್ ಸಿದ್ದವಾಯಿತು,
ಸಂಪೂರ್ಣ ಕತ್ತಲಾಗಿತ್ತು ನಾನು ಹೋಗಿ ಮುನಿಸಿಕೊಂಡಿದ್ದ ಗೋವಿಂದನ ಬಳಿ ಹೋಗಿ
ಹೇ ಗೋವಿಂದ ಎಂದೆ ಅವನು ನನ್ನತ್ತ ತಿರುಗಿ ಸಣ್ಣದಾಗಿ ನಕ್ಕ ಥೂ ನಿನ್ನ! ಎದ್ದು ಬಾರೋ ಅಂತ ಹೇಳಿ ಕರ್ಕೊಂಡು ಬಂದೆ.



ನಮ್ಮ ಶಿಭಿರ

ಶಿಭಿರಾಗ್ನಿ ಹಾಕಲು ಸೌದೆಯ ಅವಶ್ಯಕತೆಯಿದ್ದರಿಂದ ಎಲ್ರೂ ದಟ್ಟ ಕಾಡಿನೊಳಕ್ಕೆ ನುಗ್ಗಿದೊ
ಸುಮ್ಮನೆ ಹೋಗಲಿಲ್ಲ ಎಲ್ರೂ ಕೈನಲ್ಲೂ ಟಾರ್ಚ್ ಮತ್ತೆ ಚಾಕು ಇತ್ತು ಕಾಡೊಳಗೆ ಅಡ್ಡಾಡಿ ಓಣಗಿದ ಕೊಂಟು,ಪುಳ್ಳೆಯಂತ ಸೌದೆಗಳನ್ನು ಒಂದಲ್ಲ ಮೂರು ಸಾರಿ ಹೋಗಿ ಹೆಕ್ಕಿ ತಂದು ರಾಶಿ ಮಾಡಿದೊ, ನಂತರ ಎಲ್ರೂ ಶಿಭಿರಾಗ್ನಿ ಮುಂದೆ ಕುಳಿತು ಸ್ವಲ್ಪ ಕಾಲ ಕಾಡು ಹರಟೆ ಕಾರ್ಯಕ್ರಮ ನಡೆಸಿದೆವು.

ಶಿಭಿರಾಗ್ನಿ ಮುಂದೆ ನರೇಂದ್ರ ಮತ್ತು ಗೋವಿಂದ

ಶಿಭಿರಾಗ್ನಿ ಮುಂದೆ ಗೋವಿಂದ ಮತ್ತು ನಾನು

ಹಾಗೆ ಗಡಿಯಾರದ ಕಡೆಗೆ ನೋಡಿದಾಗ ರಾತ್ರಿ ಎಂಟುವರೆಯಾಗಿತ್ತು, ಹೊಟ್ಟೆ ಬೇರೆ ಹಸಿವಾಗುತ್ತ ಇತ್ತು, ಸರತಿಯಂತೆ ನರೇಂದ್ರ, ಗೋವಿಂದ ಇಬ್ಬರು ಮೊರು ಕಲ್ಲನಿಟ್ಟು ಒಲೆ ಸಿದ್ದಪಡಿಸಿಯೇಬಿಟ್ಟರು,ನಂತರ ಒಲೆಯ ಬೆಂಕಿ ಹಾರದಂತೆ ನೋಡಿಕೊಳ್ಳುವ ಕೆಲಸ ವೀರನದು, ಮತ್ತೆ ನನ್ನ ಕೆಲಸ ಮ್ಯಾಗಿ ನೂಡಲ್ಸ್ ಸಿದ್ದಪಡಿಸುವುದು,
ನಂತರ ಒಲೆ ಮೇಲೆ ಪಾತ್ರೆಯನಿಟ್ಟು ನೀರನ್ನು ಬಿಸಿ ಮಾಡಿ ನೂಡಲ್ಸ್ ಪಾಕೆಟ್ ಒಡೆದು ಹಾಕಿದ ಸ್ವಲ್ಪ ಹೊತ್ತಿಗೆ ಬಿಸಿ ಬಿಸಿಯಾದ ನೂಡಲ್ಸ್ ತಯಾರಾಗೆಬಿಟ್ಟಿತ್ತು,


ಒಟ್ಟಾಗಿ ಕುಳಿತು ನೂಡಲ್ಸ್ ಜೊತೆಗೆ ಉಪ್ಪಿನಕಾಯಿ,ನಿಪ್ಪಟ್ಟು,ಚಕ್ಲಿ ತಿಂದು ನೀರನ್ನು ಕುಡಿದ ಮೇಲೆ ದಣಿದು ಸುಸ್ತಾದಿದ್ದ ನಮ್ಮ ದೇಹಗಳಿಗೆ ಆನೆ ಬಲ ಬಂದಂತಾಯ್ತು,
ಅತ್ತ ಕಡೆಯ ಗುಂಪಿನವರು ಆಗಲೇ ಸ್ಲೀಪಿಂಗ್ ಬ್ಯಾಗ್ ನೊಳಗೆ ನುಗ್ಗಿ ಅಲ್ಲೊಬ್ರು,ಇಲ್ಲೊಬ್ರು ಎಂಬಂತೆ ಬಿದ್ದಿದ್ರು, ನರೇಂದ್ರ, ವೀರ ಇಬ್ಬರು ನಮಗೆ ನಿದ್ದೆ ಬರ್ತಾ ಇದೆ ಮಲಗ್ತೀವಿ ಅಂತ ಹೇಳಿ ಟೆಂಟ್ ನೊಳಗೆ ಹೋಗಿ ಮಲಕೊಂಡ್ರು.

ಆಗಲೇ ಗಡಿಯಾರದ ಮುಳ್ಳು ಹನ್ನೊಂದು ದಾಟಿತ್ತು ನನಗ್ಯಾಕೊ ನಿದ್ದೆನೇ ಬರಲಿಲ್ಲ ಜೊತೆಗೆ ಗೋವಿಂದ ಕೂಡ ಇದ್ದ, ಶಿಭಿರಾಗ್ನಿ ಮುಂದೆ ಇಬ್ಬರು ಮಾತನಾಡುತ್ತ ಕುಳಿತಿದ್ದೆವು ನಂತರ ಬಾಯಾರಿಕೆಯಾಗಿ ನೀರು ಕುಡಿಯಲು ಬಾಟೆಲ್ ತೆಗೆದೆ ಬಾಟೆಲ್ ಬೇರೆ ಖಾಲಿಯಾಗಿತ್ತು, ಸರಿ ಅಂತ ನೀರು ತರಲು ಹೊಂಡದ ಬಳಿ ಹೋಗಿ ಅಲ್ಲಿಯೇ ನೀರನ್ನು ಕುಡಿದು ಬಾಟೆಲ್ ನಲ್ಲಿ ನೀರು ತುಂಬಿಸಿಕೊಂಡು ಪುನಃ ಬಂದು ಶಿಭಿರಾಗ್ನಿ ಮುಂದೆ ಕುಳಿತೊ ಸಮಯ ಮದ್ಯರಾತ್ರಿ ೧೨:೩೦ ಆಗಿತ್ತು, ದೂರದಲ್ಲಿ ಏನೊ ಶಬ್ದ ಕೇಳಿಸಿತು ಕೂಡಲೆ ನಾನು ಗೋವಿಂದನ ಕಡೆಗೆ ತಿರುಗಿ ನೋಡಿದೆ ಅವನು ನನ್ನತ್ತ ತಿರುಗಿ ಹೌದು ಎಂಬಂತೆ ತಲೆಯಾಡಿಸಿದ, ತಕ್ಷಣ ನಾವಿಬ್ಬರು ಇನ್ನೊಂದು ಗುಂಪಿನ ಕಡೆಗೆ ಕಣ್ಣಾಯಿಸಿದಾಗ ಅವರೆಲ್ಲ ಮಲಗಿದ್ರು ಅವರು ಹಾಕಿದ್ದ ಬೆಂಕಿ ಕೂಡ ನಂದಿಹೋಗಿತ್ತು ಮತ್ತೊಮ್ಮೆ ಅದೇ ಶಬ್ದ ನಮಗೂ ಕೂಡ ಸ್ವಲ್ಪ ಭಯ ಆಯ್ತು ಅದು ಸನಿಹದಲ್ಲೆ !

ಮುಂದುವರಿದ ಭಾಗ ಸದ್ಯದಲ್ಲೇ...

ಸೋಮವಾರ, ಮೇ 31, 2010

ಕುಮಾರ ಪರ್ವತ / ಪುಷ್ಫಗಿರಿ ಚಾರಣ

೨೭.೧೧.೨೦೦೯,೨೮.೧೧.೨೦೦೯, ಮತ್ತು ೨೯.೧೧.೨೦೦೯
ಸಮುದ್ರ ಮಟ್ಟದಿಂದ ಸುಮಾರು ೫೬೨೫ ಅಡಿ ಎತ್ತರ ಕೊಡಗಿನಲ್ಲೇ ಎರಡನೇ ಅತಿ ಎತ್ತರವಾದ ಪರ್ವತ ತಂಡ : ನರೇಂದ್ರ,ಗೋವಿಂದ,ವೀರ ಮತ್ತು ನಾನು ( ಮೋಹನ್) ಶುಕ್ರವಾರ ರಾತ್ರಿ ಸಕಲ ಸಿದ್ದತೆಗಳೊಂದಿಗೆ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬಂದಾಗ ರಾತ್ರಿ ೯:೦೦ ಗಂಟೆ ಆಗಿತ್ತು, ಆ ದಿನ ಕುಕ್ಕೆ ಕಡೆಗೆ ಹೋಗುವ ರಾಜಹಂಸ ಬಸ್ ಗಳನೆಲ್ಲ ವಿಚಾರಿಸಿದಾಗ ಸೀಟ್ ಖಾಲಿಯಿಲ್ಲ ಎನ್ನುವ ಉತ್ತರ ಬಂತು, ಮುಂದೆ ಏನು ಮಾಡಬೇಕೆಂದು ಯೋಚಿಸುವಷ್ಟರಲ್ಲಿ ನನಗೆ ಪರಿಚಯ ಇರುವ ಹುಡುಗನೊಬ್ಬ(ರಘು) ಬಂದು ಕುಕ್ಕೆಗೆ ನಾನು ಸೀಟ್ ಕೊಡಿಸ್ತೀನಿ ಬನ್ನಿ ಎಂದ, ಹೇಗೂ ಅವನು ಟ್ರಾವೆಲ್ಸ್ ನಲ್ಲಿ ಕೆಲಸ ಮಾಡುತ್ತಿದ್ದರಿಂದ ಸರಿ ಅಂತ ನಾವೆಲ್ಲ ಅವನನ್ನ ಹಿಂಬಾಲಿಸಿದೊ, ಮೆಜೆಸ್ಟಿಕ್ ನ ಸುಬ್ರಮಣ್ಯ ಟ್ರಾವೆಲ್ಸ್ ನಲ್ಲಿ ನಾಲ್ಕು ಟಿಕೇಟ್ ಕೊಡ್ಸಿ ರಘು ಟಾಟ ಮಾಡಿ ಹೊರಟ, ಅಂತೂ ೯:೩೦ ಕ್ಕೆ ಬಸ್ ಅಗಮನವಾಯಿತು, ಬಸ್ ೯:೪೫ ಕ್ಕೆ ಹೊರಟು ಸುಬ್ರಮಣ್ಯ ತಲುಪಿದಾಗ ಬೆಳಗಿನ ಜಾವ ೫: ೪೫, ಆಗ ಇನ್ನು ಬೆಳಕಾಗಿರಲಿಲ್ಲ ೨ ಕಿ.ಮೀ ದೂರದಲ್ಲಿರುವ ಕುಮಾರಧಾರ ನದಿಯಲ್ಲಿ ಸ್ನಾನ ಮುಗಿಸಿ ಹೊರಡುವ ವೇಳೆಯಲ್ಲಿ ನಮ್ಮ ಬೆನ್ನಿಗೇರಿದ್ದ ಲಗ್ಗೇಜು ನೋಡಿ ಮೈಸೂರಿನ ಯುವಕರ ಗುಂಪೊಂದು ಎಲ್ಲಿಗೆ ಹೊಗ್ತಾಯಿದ್ದೀರಾ ಅಂತಾ ಪ್ರಶ್ನಿಸಿತು, ಆಗ ತಾನೇ ಕುಮಾರಪರ್ವತ ಬೆಟ್ಟದ ಶ್ರೇಣಿಯ ಬೆನ್ನಿನ ಹಿಂದೆ ಉದಯವಾಗತೊಡಗಿದ ಸೂರ್ಯನನ್ನ ತೋರಿಸಿ ನಾವು ಆ ಪರ್ವತಕ್ಕೆ ಚಾರಣ ಮಾಡುತ್ತಿರುವುದಾಗಿ ತಿಳಿಸಿದೆ, ಅದಕ್ಕೆ ಅವರು ಅಲ್ಲಿ ತನಕ ಹೋಗ್ತೀರಾ? ಅಂದ್ರು, ಹೌದು ನಾವು ಈ ದಿನ ರಾತ್ರಿ ಆ ಬೆಟ್ಟದ ಮೇಲೆ ಉಳಿತೀವಿ ಅಂದದಕ್ಕೆ ಅವರು ನಮ್ಮನ್ನ ಕುತೂಹಲದಿಂದ ದಿಟ್ಟಿಸಿ ನೋಡುತ್ತ ಇದ್ದರು,
ನಾವು ನಮ್ಮ ಲಗ್ಗೇಜುಗಳನ್ನು ಬೆನ್ನಿಗೇರಿಸಿ ದೇವಸ್ಥಾನ ಕಡೆಗೆ ಹೆಜ್ಜೆ ಹಾಕತೊಡಗಿದೊ, ಅಲ್ಲೆ ದಾರಿಯಲ್ಲಿ ಸಿಕ್ಕ ಪೆಟ್ರೋಲ್ ಬಂಕ್ ನಲ್ಲಿ ಅರ್ಧ ಲೀಟರ್ ಡೀಸಲ್ ತಗೊಂಡು ಬ್ಯಾಗಿನಲ್ಲಿ ಭದ್ರವಾಗಿರಿಸಿಕೊಂಡು ಸ್ವಲ್ಪ ದೂರ ನಡೆಯುವಷ್ಟರಲ್ಲಿ ವ್ಯಕ್ತಿಯೊಬ್ಬರು ತಟ್ಟನೆ ಎದುರಾಗಿ ಕುಮಾರಪರ್ವತಕ್ಕ ಅಂತ ಕೇಳಿದ್ರು ಅದಕ್ಕೆ ನಾವು ಹೌದು ಅಂತಲೂ, ಅದಕ್ಕೆ ಅವರು ನಾನು ಬರ್ತೀನಿ ಅಂತ ಹೇಳಿದ್ರು ಅದಕ್ಕೆ ನಾವು ದೇವರ ದರ್ಶನ ಮಾಡಿ ನಂತರ ನಾಷ್ಟ ಮಾಡಿ ಹೊರಡುತ್ತೇವೆ ಅಂತ ತಿಳಿಸಿದ ನಂತರ ಅವರು ನಾನು ದೇವರ ದರ್ಶನ ಮಾಡಾಯ್ತು, ಸರಿ ಹಾಗಾದರೆ ನಾನು ನಿಮಗೆ ಭಟ್ಟರ ಮನೆಯಲ್ಲೇ ಸಿಗುತ್ತೇನೆ ಅಂತ ಹೇಳಿ ಹೊರಟರು,
ಶ್ರೀ ಕ್ಷೇತ್ರ ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನದ ಮುಂಭಾಗದಲ್ಲಿರುವ ಕುಮಾರಪರ್ವತ ಆ ದಿನ ದೇವಸ್ಥಾನದಲ್ಲಿ ಭಕ್ತಾದಿಗಳು ಜಾಸ್ತಿ ಇದ್ದಿದ್ದರಿಂದ ಧರ್ಶನ ತಡವಾಗಿ ಆಯ್ತು , ಹೊಟ್ಟೆಯ ಜಠರಾಗ್ನಿ ಶಮನಗೊಳಿಸಲು ಅಲ್ಲಿಯೇ ಇದ್ದ ಹೋಟೆಲ್ ನೊಳಗೆ ನುಗ್ಗಿ ಪರೋಟ, ನೀರ್ ದೋಸೆ, ಶಾವಿಗೆ ತಿಂದು ಹೊರಬಂದು ಸ್ವಲ್ಪ ಹಣ್ಣು ಮತ್ತು ಮಜ್ಜಿಗೆ ಪೊಟ್ಟಣ ಖರೀದಿಸಿ ಬಾಟೆಲ್ ಗಳಲ್ಲಿ ನೀರನ್ನು ತುಂಬಿಸಿಕೊಂಡು ದೇವಸ್ತಾನದ ಬಲಗಡೆ ಇರುವ ರಸ್ತೆಯಲ್ಲಿ ನಮ್ಮ ಚಾರಣ ಶುರುಮಾಡಿದೆವು, ಸುಮಾರು ಪರ್ಲಾಂಗು ದೂರ ನಡೆಯುವಷ್ಟರಲ್ಲಿ ಕುಮಾರಪರ್ವತ ಚಾರಣಿಗರಿಗೆ ಸ್ವಾಗತ ಎಂಬ ಫಲಕ ಎದುರಾಯ್ತು ಅದರಲ್ಲಿ ಪ್ರಥಮವಾಗಿ ನೀರು ಸಿಗುವ ಸ್ಥಳ, ಮತ್ತು ದೂರ ಹಾಗೂ ಇನ್ನಿತರ ಕೆಲವು ಮಾಹಿತಿಯನ್ನು ಅದರಲ್ಲಿ ಬರೆದಿತ್ತು,
ನಾನು ನಮ್ಮ ಮನೆ ದೇವರನ್ನ ನೆನೆದು ಹೆಜ್ಜೆ ಹಾಕತೊಡಗಿದೆ ಅಲ್ಲಿಂದ ಶುರುವಾಯ್ತು ದಟ್ಟ ಕಾಡಿನೊಳಗೆ ನಮ್ಮ ಚಾರಣ, ನಡೆಯುತ್ತ ನಡೆಯುತ್ತ ಏರು ದಾರಿ ಜಾಸ್ತಿಯಾಗತೊಡಗಿತು ಮೈಯೆಲ್ಲ ಬೆವರಲು ಶುರುವಾಯ್ತು, ಗೋವಿಂದ ರೇಸ್ ಕುದುರೆ ಥರಾ ಮುಂದೆ ನಡೆಯತೊಡಗಿದರೆ ವೀರ ನಾನೇನು ಕಮ್ಮಿಯಿಲ್ಲ ಎನ್ನುವಂತೆ ಅವನನ್ನು ಹಿಂಬಾಲಿಸತೊಡಗಿದ ಈಕಡೆ ನರೇಂದ್ರ ಈಗ ತಾನೆ ಹುಟ್ಟಿದ ಎಮ್ಮೆಕರು ಥರಾ ಕಾಲೆಳೆದುಕೊಂಡು ಬರುತ್ತಿದ್ದ, ಸುಮಾರು ೨ ಕಿ.ಮೀ. ಕ್ರಮಿಸಿದ ಮೇಲೆ ಅಯಾಸವಾಗಿ ಎಲ್ಲರೂ ಮರದ ಕೆಳಗೆ ಕುಳಿತು ವಿಶ್ರಾಂತಿ ಪಡೆದು ಬ್ಯಾಗಿನಿಂದ್ದ ಸ್ವಲ್ಪ ತಿಂಡಿಗಳನ್ನು ತೆಗೆದು ( ಚಕ್ಲಿ, ಕೋಡ್ ಬಳೆ, ಕಡಲೆಪುರಿ) ತಿಂದು ನೀರು ಕುಡಿದು ಸ್ವಲ್ಪ ಹೊತ್ತು ದಣಿವಾರಿಸಿಕೊಂಡು ಹೊರಟೆವು,ಹೊರಡುವಾಗ ಒಬ್ಬ ಅಸಾಮಿಯೊಬ್ಬರು ಎದುರಾದ್ರು ಅವರು ನಿಲ್ಲದೆ ಹಾಗೆ ಒಡುತ್ತಾ ಇದ್ರು ಜೊತೆಗೆ ಅವರ ಕೈನಲ್ಲಿ ಹಿಡಿದಿದ್ದ ಪ್ಲಾಸ್ಟಿಕ್ ಕ್ಯಾನ್ ನಲ್ಲಿ ಎನೋ ದ್ರವ ರೂಪದ ಬಿಳಿ ವಸ್ತು ಇತ್ತು, ನಾನು ನೀರಾ ಇರಬಹುದು ಅಂದುಕೊಂಡು ಅವರನ್ನ ಕೂಗಿ ಕರೆದು ಏನದು ಅಂತ ಕೇಳಿದಾಗ ಇದು ಹಾಲು ಭಟ್ಟರ ಮನೆಯಿಂದ ಸುಬ್ರಮಣ್ಯಕ್ಕೆ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿ ಹೊರಟರು, ಭಟ್ಟರ ಮನೆ ಎಷ್ಟು ದೂರ ಅಂತ ಕೇಳಿದ್ದಕ್ಕೆ ಸ್ವಲ್ಪ ದೂರ ಅಷ್ಟೆ , ೩ ಬೆಟ್ಟ ಹತ್ತಿ ಇಳಿದರೆ ಸಿಗುತ್ತೆ ಅಂತ ಸಲೀಸಾಗಿ ಹೇಳಿ ಹೊರಟರು, ಇವರಿಗೆ ೩ ಬೆಟ್ಟ ಕೇವಲ, ಒಳ್ಳೆ ಅಸಾಮಿ ಅಂತ ಮನಸಿನಲ್ಲೇ ಗೊಣಗಿಕ್ಕೊಂಡು ಹೊರಟೆ,
ಆಗೋ ಈಗೋ ೧ ಕಿ.ಮೀ. ಕ್ರಮಿಸಿ ಮುಂದೆ ಹೋದಾಗ ಒಂದು ದೊಡ್ಡ ಹೆಬ್ಬಂಡೆ ಎದುರಾಯಿತು ಇದೇ ಬೀಮನಕಲ್ಲು ಇರಬಹುದು ಎಂದುಕೊಂಡೆ ನನ್ನ ಊಹೆ ನಿಜವಾಯಿತು, ಬಂಡೆಯ ಮೇಲೆ ಸ್ವಲ್ಪ ಹೊತ್ತು ವಿಶ್ರಮಿಸಿ ಕೆಲವು ಛಾಯಚಿತ್ರ ತಗೊಂಡು ಪ್ರಥಮವಾಗಿ ನೀರು ಸಿಕ್ಕುವ ಸ್ಥಳ ಎಂದು ಫಲಕದಲ್ಲಿ ಹಾಕಿದಿದ್ದರಿಂದ ಎಷ್ಟೆ ಹುಡುಕಾಡಿದರೂ ನೀರಿನ ಒರತೆ ಕಂಡು ಬರಲಿಲ್ಲ, ಸರಿ ಎಂದು ಅದರ ಪಾಡಿಗೆ ಅದನ್ನು ಬಿಟ್ಟು ಚಾರಣದ ಹಾದಿಯಲ್ಲಿ ಸಾಗಿತ್ತು ನಮ್ಮ ಪಯಣ,
ಭೀಮನ ಕಲ್ಲು
ಬಹುಪಾಲು ದಟ್ಟಕಾಡು ಇಲ್ಲಿಗೆ ಕೊನೆಯಾದಂತಿತ್ತು. ಮುಂದೆಲ್ಲಾ ಕುರುಚಲು ಹುಲ್ಲುಗಾವಲು ಅರಣ್ಯ ಪ್ರದೇಶ. ಅಂತೂ ಭಟ್ಟರ ಮನೆ ತಲುಪಿದಾಗ ಮದ್ಯಾಹ್ನ ೨ ಗಂಟೆ,ಹೊಟ್ಟೆ ಬೇರೆ ತಾಳ ಹಾಕುತಿತ್ತು, ಭಟ್ರುಗೆ ಮೊದಲೇ ಕರೆ ಮಾಡಿ ಬರುವ ವಿಷಯ ತಿಳಿಸಿದ್ದರಿಂದ ಭೋಜನ ನಮಗಾಗಿ ಸಿದ್ದವಾಗಿತ್ತು,
ಗಿರಿಗದ್ದೆ ಭಟ್ಟರ ಮನೆ ಕುಕ್ಕೆಯಲ್ಲಿ ಸಿಕ್ಕಿದ್ದ ಗಜೇಂದ್ರರವರು ಆಗಲೇ ಊಟ ಮಾಡಿ ಮೊವರಿದ್ದ ಒಂದು ಗುಂಪಿನೊಡನೆ ಸೇರಿ ಹೊರಟರು, ನಂತರ ಭಟ್ಟರ ದರ್ಶನವಾಯಿತು ಭಟ್ಟರು ನೀವೆನಾ ಫೋನ್ ಮಾಡಿದ್ದು ಅಂತ ಕೇಳಿದ್ರು ನಾವು ಹೌದು ಅಂತ ತಲೆಯಾಡಿಸಿದೊ, ಸರಿ ನೀವೆ ಬಡಿಸಿಕ್ಕೊಂಡು ಊಟ ಮಾಡಿ ಅಂತ ಹೇಳಿ ಮನೆಯೊಳಗೆ ಹೋದ್ರು, ನಾವು ತಡ ಮಾಡದೆ ತಟ್ಟೆ ತಗೊಂಡು ನಾವೇ ಬಡಿಸಿಕ್ಕೊಂಡು ಊಟ ( ಅನ್ನ, ಸಾಂಬಾರ್, ಮಜ್ಜಿಗೆ, ಜೊತೆಗೆ ಉಪ್ಪಿನಕಾಯಿ) ಮಾಡಿದೆವು, ಊಟ ಬಹಳ ಚೆನ್ನಾಗಿದ್ದರಿಂದ ಕುತ್ತಿಗೆಗೆ ಬರೋ ತನಕ ತಿಂದು ಭಟ್ಟರಿಗೆ ೨೦೦ ರೂ ಕೊಟ್ಟು ಅವರದ್ದೆ ಆದ ಅಡಿಕೆ ತೋಟದಲ್ಲಿ ಸ್ವಲ್ಪ ಹೊತ್ತು ಮಲಗಿ ಎದ್ದೊ. ಗಂಟೆ ನಾಲ್ಕಾದರಿಂದ ಹೊರಡಲು ತೀರ್ಮಾನಿಸಿ ಇಲ್ಲಿಂದ ಸ್ವಲ್ಪ ದೂರದಲ್ಲೆ ಇರುವ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಕಡೆಗೆ ಹೊರಟೆವು, ಸನಿಹದಲ್ಲೆ ಅರಣ್ಯ ಇಲಾಖೆಯವರು ಎರಡು ಕಡೆ ವ್ಯೂ ಪಾಯಿಂಟ್ ನಿರ್ಮಿಸಿದ್ದಾರೆ ಇಲ್ಲಿಂದ ಪ್ರಕೃತಿ ರಮಣೀಯ ಸೊಬಗನ್ನು ಸವಿಯಬಹುದು, ಚೆಕ್ ಪೋಸ್ಟ್ ನಲ್ಲಿ ತಲಾ ಒಬ್ಬರಿಗೆ ೧೧೫.೦೦ ಮತ್ತು ಕ್ಯಾಮರಕ್ಕೆ ೧೦೦.೦೦ ರೂ ಪಾವತಿಸಿ ರಸೀದಿ ಪಡೆದು ಅವರಿಂದ ಕೆಲವು ಉಪಯುಕ್ತ ಸಲಹೆಗಳನ್ನು ಪಡೆದು ಸೂರ್ಯಾಸ್ತಮದ ದೃಶ್ಯವನ್ನು ವೀಕ್ಸಿಸಲು ಮಂಟಪದ ಕಡೆಗೆ ಬಹು ಬೇಗವಾಗಿ ಹೆಜ್ಜೆಹಾಕತೊಡಗಿದೊ, ಸೂರ್ಯಾಸ್ತಮ ಆಗುವುದೊಳಗಾಗಿ ಮಂಟಪ ಸೇರಿದೆವು ( ಸಂಜೆ ೫:೫೫) ಆದ್ರೆ ಮೋಡದ ಅವಕೃಪೆಯಿಂದ ಸೂರ್ಯಾಸ್ತಮವನ್ನು ಸರಿಯಾಗಿ ವೀಕ್ಷಿಸಲು ಆಗಲಿಲ್ಲ, ನಡೆದು ಬಹಳ ಸುಸ್ತಾಗಿದ್ದರಿಂದ ಮಜ್ಜಿಗೆ ಕುಡಿದು ಸ್ವಲ್ಪ ಹೊತ್ತು ವಿಶ್ರಾಂತಿ ತಗೊಂಡೊ, ಮಂಟಪದ ಸನಿಹದಲ್ಲೆ ನೀರು ಸಿಗುವುದರಿಂದ ನೀರಿನ ದಾಹವನ್ನು ಮನ ತಣಿಯುವಷ್ಟು
ನೀಗಿಸಿಕೊಳ್ಳಬಹುದು,
ಕಲ್ಲಿನ ಮಂಟಪ
ಅಷ್ಟೊತ್ತಿಗಾಗಲೇ ಸೂರ್ಯ ತನ್ನ ದೈನಂದಿನ ಕಾರ್ಯ ಮುಗಿಸಿ ತನ್ನ ಲೋಕಕ್ಕೆ ಮರಳಿದ್ದರಿಂದ ಕತ್ತಲೆ ಆವರಿಸಿತು, ಆಗಲೆ ನನ್ನ ಮನಸ್ಸಿನಲ್ಲಿ ಹಲವಾರು ಯೋಚನೆ ಮೊಡತೊಡಗಿದೊ ಬೀದಳ್ಳಿ ಮಾರ್ಗ ಆಯ್ಕೆ ಮಾಡಿಕ್ಕೊಂಡರೆ ಸೋಮವಾರಪೇಟೆಗೆ ಹೋಗುವ ಬಸ್ ಬೀದಳ್ಳಿಯಿಂದ ಮದ್ಯಾಹ್ನ ೩:೩೦ ಕ್ಕೆ ಹೊರಡುತ್ತದೆ,ಆದ್ದರಿಂದ ಕನಿಷ್ಟ ಪಕ್ಷ ಮದ್ಯಾಹ್ನ ೧:೩೦ ಕ್ಕೆ ಪುಷ್ಪಗಿರಿ ಅರಣ್ಯ ಇಲಾಖೆ ಕಚೇರಿ ತಲುಪಲೇಬೇಕು, ಅದು ತಪ್ಪಿದರೆ ಮತ್ತೊಂದು ರಾತ್ರಿ ಅಲ್ಲೇ ಉಳಿದು ಮರುದಿನ ಬೆಳಿಗ್ಗೆಯ ಬಸ್ ನಲ್ಲಿ ಸೋಮವಾರಪೇಟೆ ಸೇರಬೇಕಾಗುತ್ತದೆ ಆದ್ದರಿಂದ ಭತ್ತದ ರಾಶಿ ( ಪರ್ವತದ ಹೆಸರು) ದಾಟಿ ಶೇಷಪರ್ವತ ತಲುಪುವ ಅನಿವಾರ್ಯ ಇದ್ದುದರಿಂದ ರಾತ್ರಿ ಚಾರಣ ಮಾಡಲು ಮಿತ್ರರಿಂದ ಸಮ್ಮತಿ ದೊರೆಯಿತು,ಕತ್ತಲು ಆವರಿಸಿದ್ದರಿಂದ ನಾನು ಬ್ಯಾಗ್ ನಿಂದ ಮಚ್ಚು,ಎಲ್.ಸಿ.ಡಿ. ಟಾರ್ಚ್, ಮತ್ತು ಚಾಕನ್ನು ತೆಗೆದುಕ್ಕೊಂಡು ದೇವರನ್ನು ನೆನೆಯುತ್ತ ಹೆಜ್ಜೆ ಹಾಕಿದೆ, ಈಗ ನಮ್ಮ ಮುಂದಿದ್ದ ದಾರಿಯೆಲ್ಲ ಏರು ದಾರಿಯಾಗಿತ್ತು ಹೆಜ್ಜೆ ಹೆಜ್ಜೆಗೂ ಬಹಳ ಕಷ್ಟಪಟ್ಟು ನಡೆಯಬೇಕಾಗುತ್ತಿತ್ತು, ಹೀಗೆ ನಮ್ಮ ಚಾರಣದ ಹಾದಿ ಸಾಗುತ್ತಿರಬೇಕಾದರೆ ಬೀದಳ್ಳಿ ಕಡೆ ಹೋಗುವ ಬೈಪಾಸ್ ದಾರಿ ಸಿಕ್ಕಿತ್ತು ಈ ದಾರಿಯಲ್ಲಿ ಹೋದರೆ ಕುಮಾರಪರ್ವತಕ್ಕೆ ಹೋಗದೆ ಬೀದಳ್ಳಿ ತಲುಪಬಹುದು ಕುಮಾರಪರ್ವತದಿಂದ ಬೀದಳ್ಳಿ ಮಾರ್ಗದಲ್ಲಿ ಸುಮಾರು ೨.೭೫ ಕಿ.ಮೀ ದೂರದಲ್ಲಿ ಬಂದು ಸೇರುತ್ತದೆ.
ರಾತ್ರಿ ಚಾರಣದ ಸಮಯದಲ್ಲಿ ನಾನು ಮತ್ತು ಗೋವಿಂದ
ಯಾವುದಾದರೂ ವಿಷಜಂತುಗಳು ಅಡಗಿರಬಹುದೇನೊ ಅಂತ ಕೈನಲ್ಲಿ ಹಿಡಿದಿದ್ದ ದೊಣ್ಣೆಯಿಂದ ದಾರಿಯ ಎರಡು ಇಕ್ಕೆಲಗಳಲ್ಲಿ ಬೆಳೆದು ನಿಂತ ಹುಲ್ಲನ್ನು ಬಡಿಯುತ್ತ ನಡೆದೆ, ಮತ್ತಿನ್ಯಾವುದಾದರೂ ಪ್ರಾಣಿ ಅಡಗಿ ನಮ್ಮತ್ತ ನೋಡುತ್ತಿರಬಹುದೇನೊ ಅಂತಾ ಊಹಿಸಿ ಟಾರ್ಚ್ ಬೆಳಕನ್ನು ಆ ಕಡೆ ಈ ಕಡೆ ಬಿಟ್ಟು ನೋಡುತ್ತ ಮುಂದೆ ಸಾಗುತ್ತಿದ್ದೊ, ಮೊದಲ ಪಂಕ್ತಿಯಲ್ಲಿದ್ದ ವೀರ ಯಾಕೊ ಏನೋ ತಟ್ಟನೆ ನಿಂತು ನನ್ನ ಕೈನಲ್ಲಿ ಬರಿ ದೊಣ್ಣೆ ಇದೆ ನಿನ್ ಕೈನಲ್ಲಿ ಮಚ್ಚು ಇದೆ ನೀನೆ ಮೊದಲು ಹೋಗು ಎಂದು ನನ್ನನ್ನು ಮುಂದೆ ಬಿಟ್ಟು ಹಿಂದೆ ಬರತೊಡಗಿದ ಹೇಳಬೇಕೆಂದರೆ ವೀರ ಸ್ವಲ್ಪ ಪುಕ್ಕಲು ಸ್ವಭಾವದವನು, ಅವನ ಹಿಂದೆ ಗೋವಿಂದ ಕೊನೆಯಲ್ಲಿ ನರೇಂದ್ರ ಹೀಗೆ ಒಬ್ಬರ ಹಿಂದೆ ಒಬ್ಬರು ಬೆಟ್ಟವೇರುತಿದ್ದೆವು, ನಾವೇನಾದ್ರು ಸ್ವಲ್ಪ ನಡಿಗೆಯ ವೇಗ ಹೆಚ್ಚಿಸಿದ್ರಂತು ಕೂಡಲೇ ನರೇಂದ್ರ ಲೇ ಇರ್ರೋ ನನ್ ಬಿಟ್ಟು ಹೋಗ್ಬೇಡಿ ಭಯ ಆಗುತ್ತೆ ಅಂತ ಕಿರುಚಿಕೊಳ್ಳುತ್ತಿದ್ದ, ಅವನಿಗೆ ಭಯವಾಗುವುದಿರಲಿ ಅವನು ಕಿರುಚಿಕೊಳ್ಳುವ ಶಬ್ದಕ್ಕೆ ಪ್ರಾಣಿಗಳೇ ಹೆದರಿ ಒಡಿ ಹೋಗುತ್ತಿದ್ದವೇನೊ? ಎದುರಿಗಿದ್ದ ಬೆಟ್ಟವನ್ನು ಬಳಸಿಕ್ಕೊಂಡು ದಾಟಿದೊಡನೆಯೆ ನಮ್ಮ ಬಲಕ್ಕೆ ಕಾಣಿಸಿತು ಶೇಷಪರ್ವತ, ನಮ್ಮ ಮನಸ್ಸಿನಲ್ಲಿ ಏನೇನೋ ಯೋಚನೆಗಳು ಅದೇನೆಂದರೆ ಶೇಷಪರ್ವತದಲ್ಲಿ ರಾತ್ರಿ ಕಳೆಯುವುದೊ ಅಥವಾ ಪುಷ್ಪಗಿರಿಗೆ ಚಾರಣ ಬೆಳೆಸುವುದೊ ಅಂತ,ಅಷ್ಟರಲ್ಲಿ ಗೋವಿಂದ ನಡಿರ್ರೊ ಆಗಿದ್ದಾಗ್ಲಿ ಹೋಗೆಬಿಡೋಣ ಅಂದ ನರೇಂದ್ರ ಮಾತ್ರ ಇಷ್ಟೊತ್ನಲ್ಲಿ ಹೋಗೋದ್ ಬೇಡ ಇಲ್ಲೆ ಎಲ್ಲಾದ್ರು ಕ್ಯಾಂಪ್ ಹಾಕೋಣ ಬೆಳಿಗ್ಗೆ ಎದ್ದು ಹೋದ್ರಾಯ್ತು ಅಂದ ನನಗೂ ಸಹ ಸರಿ ಅನ್ನಿಸಿತು ಏಕೆಂದರೆ ಕುಮಾರಪರ್ವತದಲ್ಲಿ ಟ್ರೆಕ್ ಮಾಡ್ತಾ ಇರೋದು ಇದೇ ಮೊದಲು ಬಾರಿ, ದಾರಿ ಮುಂದೆ ಹೇಗಿದೆಯೋ ಎನೋ ಅಂತ ಹಲವು ವಿಚಾರಗಳು ನನ್ನ ಮನಸನ್ನು ಕೊರೆಯುತ್ತಿತ್ತು. ಅಷ್ಟರಲ್ಲಿ ಶೇಷಪರ್ವತದ ಕಡೆಯಿಂದ ಯಾರೋ ಮಾತನಾಡುತಿದ್ದ ಶಬ್ದ ಕೇಳಿಬಂತು, ನಾವು ಒಂದು ನಿಮಿಷ ಹಾಗೆ ಮೌನವಾಗಿ ನಿಂತು ಕಿವಿಗೊಟ್ಟು ಆಲಿಸಿದೊ, ಕೊನೆಗೂ ನಮ್ಮ ಊಹೆ ನಿಜವಾಯಿತು ನಮ್ಮ ಟಾರ್ಚ್ ಬೆಳಕನ್ನು ಬೆಟ್ಟದ ಕಡೆಗೆ ಸಿಗ್ನಲ್ ಎಂಬಂತೆ ತೋರಿಸಿದೊ ಅತ್ತ ಕಡೆಯಿಂದಲೂ ಟಾರ್ಚ್ ಬೆಳಕನ್ನು ನಮ್ಮತ್ತ ಹಾಯಿಸಿದರು, ಆಗ ನಾನು ಜೋರಾಗಿ ಯಾರಾದ್ರು ಇದ್ದೀರ ಅಂತ ಕೂಗಿದೆ, ಅದಕ್ಕೆ ಉತ್ತರವಾಗಿ ಅತ್ತ ಕಡೆಯಿಂದ ಹಾ... ಇದ್ದೀವಿ ಅಂತ ಯಾರೋ ಕೂಗಿ ಹೇಳಿದಾಗ ಮನಸಿಗೆ ಸ್ವಲ್ಪ ಸಮಾದಾನ ಆಯ್ತು, ಹತ್ತಿರ ಹೋಗಿ ನೋಡಿದರೆ ಕುಕ್ಕೆಯಲ್ಲಿ ಪರಿಚಯವಾಗಿದ್ದ ಗಜೇಂದ್ರರವರು ಅವರಾಗಲೇ ಟೆಂಟ್ ಹಾಕಿ ಊಟ ಮುಗಿಸಿ ಶಿಭಿರಾಗ್ನಿ ಹಾಕಲು ತಯಾರಾಗುತ್ತಿದ್ರು, ನಾವು ನಮ್ಮ ಟಾರ್ಪಾಲ್ ಶೀಟನ್ನು ಕೆಳಗೆ ಹಾಸಿ ಟಾರ್ಚ್ ಬೆಳಕಿನಿಂದ ಊಟ ಮುಗಿಸಿದೊ( ಚಪಾತಿ, ಉಪ್ಪಿನಕಾಯಿ,ಚಟ್ನಿ,ಅವಲಕ್ಕಿ,ಕೋಡ್ಬಳೆ ) . ವಿಪರೀತ ಗಾಳಿ ಬೀಸುತ್ತಿದ್ದರಿಂದ ಗಜೇಂದ್ರ ಮತ್ತು ಸ್ನೇಹಿತರು ಬೆಂಕಿ ಹಚ್ಚಲು ಬಹಳ ಪರದಾಡುತ್ತಿದ್ದರು, ನಮ್ಮ ಬತ್ತಳಿಕೆಯಲ್ಲಿದ್ದ ಡೀಸಲ್ ಸಹಾಯದಿಂದ ಹೇಗೋ ಬೆಂಕಿ ಹೊತ್ತಿಸಿದರು, ಶಿಭಿರಾಗ್ನಿ ಮುಂದೆ ಕುಳಿತು ಚಳಿಯಿಂದ ಮರಗಟ್ಟಿದ ದೇಹವನ್ನು ಬಿಸಿ ಮಾಡುವಾಗ ಏನೋ ಒಂಥರ ಅನುಭವ,
ರಾತ್ರಿ ಶೇಷಪರ್ವತದಲ್ಲಿ ಶಿಭಿರಾಗ್ನಿ ಮುಂದೆ
ಕೋಟಿ ಕೋಟಿ ಹಣ ಇದ್ದರೇನಂತೆ ಈ ತರಹದ ಅನುಭವ ಸಿಗುತ್ತಾ? ಅದನ್ನು ಅನುಭವಿಸಿದವರಿಗೇ ಗೊತ್ತು ಅದರ ಗಮ್ಮತ್ತು. ನಡೆದು ಬಹಳ ಸುಸ್ತಾಗಿದ್ದ ಕಾರಣ ನಾನು ಮತ್ತು ವೀರ ಹೊರತುಪಡಿಸಿ ಮಿಕ್ಕವರೆಲ್ಲರು ಮಲಕೊಂಡ್ರು, ನಾವು ಸುಮಾರು ಹೊತ್ತಿನ ತನಕ ಬೆಂಕಿ ಕಾಯುತ್ತಾ ಕುಳಿತಿದ್ದೊ ಗಾಳಿ ಜೋರಾಗಿ ಬೀಸುತ್ತಿದ್ದ ಕಾರಣ ಬೆಂಕಿಯ ಕಿಡಿ ಟೆಂಟ್ ಮೇಲೆ ಬೀಳುತ್ತಾ ಇತ್ತು ನಂತರ ನಾವೇ ನೀರನ್ನು ಹಾಕಿ ಬೆಂಕಿ ಕೆಡಿಸಿ ಮಲಗಿಕೊಂಡೊ,ಅಬ್ಬಾ ಎಂಥಾ ಗಾಳಿ! ನನ್ನ ಜೀವನದಲ್ಲಿ ಮರೆಯಲಾಗದಂತ ಒಂದು ಸುಂದರ ರೋಚಕ ಅನುಭವ ನನ್ನದಾಯ್ತು. ಕೆಲವು ಕಾಡು ಪ್ರಾಣಿಗಳ ಕೂಗು ಹಾಗೂ ಪೊದೆಯಲ್ಲಿ ಎನೋ ಸರಿದಾಡಿದಂತ ವಿಚಿತ್ರ ಶಬ್ದಗಳು ಆಗಾಗ ಕೇಳಿಬರುತ್ತಿತ್ತು, ವಿಪರೀತ ಗಾಳಿ ಮತ್ತು ಚಳಿ ನಡುವೆ ನಿದ್ದೆ ಬರದೇ ಹೊರಳಾಟದ ನಡುವೆಯೊ ಎಚ್ಚರವಾದಾಗ ಬೆಳಿಗ್ಗೆ ೬:೩೦. ಅಬ್ಬಾ! ಅದ್ಭುತ ರಮಣೀಯ ದೃಶ್ಯ ಹಿಮದ ಹೊದಿಕೆಯನ್ನೆ ಹೊದ್ದುಕೊಂಡಿರುವ ಪರ್ವತಗಳು ಒಂದೆಡೆಯಾದರೇ, ಪುಷ್ಪಗಿರಿ ಬೆನ್ನಿನ ಹಿಂದೆ ಆಗಸದಲ್ಲಿ ಬಣ್ಣದ ಚಿತ್ತಾರ ಮೊಡಿಸಲು ಬೆಂಕಿಯ ಚೆಂಡಿನಂತೆ ಮೇಲೇರುತ್ತಿದ್ದ ಸೂರ್ಯನ ನೋಟ ಇನ್ನೊಂದೆಡೆ. ಎಲ್ಲರೂ ಮೂಕವಿಶ್ಮಿತರಾಗಿ ನೋಡುತ್ತಿದ್ದರು,
ನಂತರ ನಾವು ಶಿಭಿರಾಗ್ನಿ ಹೊತ್ತಿಸಿ ಎಲ್ರೂ ಸುತ್ತಲೂ ಕುಳಿತು ವಿಪರೀತ ಚಳಿಯಿಂದ ಮರಗಟ್ಟಿ ಹೋಗಿದ್ದ ನಮ್ಮ ದೇಹವನ್ನು ಬಿಸಿ ಮಾಡಿದ ನಂತರ ಸ್ವಲ್ಪ ಆರಾಮೆನಿಸಿತು,
ಬಳಿಕ ಗಜೇಂದ್ರ ಮತ್ತು ಅವರ ಇನ್ಫೊಸಿಸ್ ಗೆಳೆಯರು ಇದೇ ದಾರಿಯಲ್ಲಿ ಕುಕ್ಕೆಗೆ ವಾಪಾಸ್ ತೆರಳುವುದರಿಂದ ಟೆಂಟ್ ಮತ್ತು ಬ್ಯಾಗ್ ಗಳನ್ನು ಅಲ್ಲೇ ಬಿಟ್ಟು ಕುಮಾರಪರ್ವತದ ಕಡೆಗೆ ಹೊರಟರು ಸ್ವಲ್ಪ ಸಮಯದ ಬಳಿಕ ಲಗ್ಗೇಜು ಪ್ಯಾಕ್ ಮಾಡಿಕೊಂಡು ನಾವು ಕೂಡ ಹೊರಟೆವು ಮುಂದಿನ ದಾರಿಯೆಲ್ಲ ಮಳೆಕಾಡು
ದಾರಿಯ ಪಕ್ಕದಲ್ಲೆ ನೀರು ಹರಿವಿನ ಜುಳು ಜುಳು ಶಬ್ದ ಕೇಳಿಸಿತು, ಪೊದೆಯಲ್ಲಿ ಹೇಗೋ ದಾರಿ ಮಾಡಿಕೊಂಡು ಇಳಿದು ಹೋದಾಗ ಸಣ್ಣ ಝರಿಯೊಂದು ಕಣ್ಣಿಗೆ ಕಾಣಿಸಿತು ಅಲ್ಲೇ ಬಾಯಾರಿಕೆ ನೀಗಿಸಿಕೊಂಡು ಖಾಲಿಯಾಗಿದ್ದ ಬಾಟೆಲ್ ಗಳಲ್ಲಿ ನೀರು ತುಂಬಿಕೊಂಡು ಹೊರಟಾಗ ಅನತಿ ದೂರದಲ್ಲೆ ಇಬ್ಬರು ಬೆಂಕಿ ಕಾಯುತ್ತಾ ಕುಳಿತಿದ್ದರು, ವಿಚಾರಿಸಲಾಗಿ ಬೆಂಗಳೂರಿನವರೆಂದು ಒಬ್ಬರ ಹೆಸರು ಭಂಡಾರಿ ಅಂತಲೂ, ಆ ರಾತ್ರಿ ಇಬ್ಬರೇ ಕಾಡಿನಲ್ಲಿದ್ದರಂತೆ, ಬಳಿಕ ಮುಂದುವರೆಯಿತು ನಮ್ಮ ಚಾರಣ ಸ್ವಲ್ಪ ದೂರದಲ್ಲೆ ದೊಡ್ಡ ಹೆಬ್ಬಂಡೆಯೊಂದು ಎದುರಾಯಿತು ಈ ಬಂಡೆ ದಾಟಿದರೆ ಸ್ವಲ್ಪ ಹೊತ್ತಿನಲ್ಲೆ ಕುಮಾರಪರ್ವತದ ತುದಿ ತಲುಪಬಹುದು, ಯಾರ‍ೋ ಮೊವರು ಬಂಡೆಯ ಇಳಿಜಾರಿನ ಮೇಲೆ ಕುಳಿತು ಕೆಳಗಿಳಿಯಲು ಹರಸಾಹಸಪಡುತಿದ್ದರು ನಾವು ಅವರನ್ನ ಕೇಳಲಾಗಿ ನಾವು ಸುಮಾರು ಅರ್ದ ಗಂಟೆಯಿಂದ ಪ್ರಯತ್ನಪಡ್ತಾಯಿದ್ದೀವಿ ಅಂತ ತಿಳಿಸಿದ್ರು, ಬಂಡೆಯ ಇಳಿಜಾರಿನ ಮೇಲೆ ನೀರು ಜಿನುಗಿತ್ತಿದ್ದರಿಂದ ಏರಲು ಬಹಳ ಕಷ್ಟನೇ, ಬಹುಶ: ಇದು ಮಳೆಗಾಲದಲ್ಲಿ ಜಲಪಾತವಾಗಿ ಮಾರ್ಪಡುತ್ತದ್ದೆ, ಹೇಗೋ ಪ್ರಯಾಸಪಟ್ಟು ಏರಿ ಸ್ವಲ್ಪ್ಪ
ಸಮಯದಲ್ಲೇ ಕುಮಾರಪರ್ವತದ ತುದಿ ತಲುಪಿದೆವು, ಅಷ್ಟರಲ್ಲಿ ಗಜೇಂದ್ರ ಮತ್ತು ಅವರ ತಂಡ ವಾಪಾಸ್ ಹೋಗುವುದರಲ್ಲಿತ್ತು.
ಕುಮಾರಪರ್ವತದ ತುದಿಯಲ್ಲಿ ನಮ್ಮ ತಂಡ
ಬೆಟ್ಟದ ತುದಿಯಲ್ಲಿ ಕಲ್ಲಿಂದ ಜೋಡಿಸಿದ್ದ ೩ ಚಿಕ್ಕ ದೇವಸ್ಥಾನಗಳಿದ್ದು ಒಳಗೆ ಶಿವಲಿಂಗ ಇಟ್ತಿದ್ದಾರೆ ಸ್ವಲ್ಪ್ಪ ಹೊತ್ತು ಕುಳಿತು ಅಲ್ಲೆಲ್ಲಾ ಸುತ್ತಾಡಿ ಉತ್ತರಕ್ಕೆ ಬಿಸಿಲೆ ಕಾಡು, ದಕ್ಷಿಣಕ್ಕೆ ಕೊಡಗಿನ ಪರ್ವತ ಶ್ರೇಣಿಗಳು ಇನ್ನೂ ಪಶ್ಚಿಮಕ್ಕೆ ಮಾರಿಗುಂಡಿ, ಶೇಷಪರ್ವತದ ಮನಮೋಹಕ ದೃಶ್ಯಗಳನ್ನು ಕಣ್ತುಂಬಿಕ್ಕೊಂಡು ಕೊನೆಗೆ ಬೀದಳ್ಳಿ ಮಾರ್ಗವಾಗಿ ಹೋಗಲು ನಿರ್ಧರಿಸಿ ಬೆಳಗಿನ ಉಪಹಾರಕ್ಕಾಗಿ ನಮ್ಮ ಬಳಿ ಉಳಿದಿದ್ದ ಚಪಾತಿ ಮತ್ತು ಉಪ್ಪಿನಕಾಯಿ ತಿಂದು ಮುಗಿಸುವಷ್ಟರಲ್ಲಿ ಭಂಡಾರಿ ಮತ್ತು ಅವರ ಸ್ನೇಹಿತರು ಬಂದು ನಾವು ಹೊರಡುತ್ತಾ ಇದ್ದೀವಿ ನೀವು ಬರುವದಾದರೇ ಬನ್ನಿ ಬೀದಳ್ಳಿಯಿಂದ ಸೋಮವಾರಪೇಟೆತನಕ ನಮ್ಮ ಕಾರಿನಲ್ಲೇ ಬಿಡ್ತೇವೆ ಅಂತಾ ಹೇಳಿದ್ರು, ಸರಿ ಎಲ್ಲರೂ ಜೊತೆಗೆ ಹೋಗೋಣ ಆಂತ ತೀರ್ಮಾನಿಸಿ ಎಲ್ಲಾ ಪ್ಯಾಕ್ ಮಾಡಿಕೋಂಡು ಜೊತೆಗೆ ಹೊರಟೆವು,
ಮುಂದಿನದೆಲ್ಲ ಮಳೆಕಾಡಾದ್ದರಿಂದ ಬಿಸಿಲಿನ ಜಳವಿಲ್ಲದೆ ಆರಾಮವಾಗಿ ನಮ್ಮ ಚಾರಣ ಮುಂದುವರಿಯುತ್ತ ಇತ್ತು, ದಾರಿಯಲ್ಲಿ ಎರಡು ಇಳಿಜಾರಿನ ಬಂಡೆಗಲ್ಲನ್ನ ಬಹಳ ಹುಷಾರಾಗಿ ಇಳಿದು ಮುಂದೆ ಬಂದಾಗ ಎಡಗಡೆಗೆ ಮಂಟಪ ಗಿರಿಗದ್ದೆಗೆ ಹೋಗುವ ಬೈಪಾಸ್ ದಾರಿ ಸಿಕ್ತು ಇದು ಶೇಷಪರ್ವತ - ಮಂಟಪ ನಡುವೆ ಬಂದು ಸೇರುತ್ತೆ, ಇದರ ಸನಿಹದಲ್ಲೇ ವ್ಯೂ ಪಾಯಿಂಟ್ ಇದೆ ,
ಅಲ್ಲಲ್ಲಿ ಕಾಡೆಮ್ಮೆಗಳ ಗೊರಸಿನ ಗುರುತು ಕಂಡುಬಂದ್ದುದರಿಂದ ಒಳೊಳಗೆ ಭಯ ಆವರಿಸುತ್ತಾ ಇತ್ತು.
ಪಯಣದ ಹಾದಿಯಲ್ಲಿ ನಾನು
ಭಂಡಾರಿಯವರಿಗೆ ೫೨ ವಯಸ್ಸಂತೆ ಆದರೂ ಅವರು ನಮಗಿಂತ ಬಹಳ ವೇಗವಾಗಿ ಕೆಳಗಿಳಿಯುತ್ತಿದ್ದರು, ಅದೂ ಅಲ್ಲದೇ ಈ ವಾರದಲ್ಲೇ ಅವರು ಎರಡನೇ ಭಾರಿ ಕುಮಾರಪರ್ವತಕ್ಕೆ ಚಾರಣ ಮಾಡುತ್ತಿರುವುದು ತಿಳಿದು ಆಶ್ಚರ್ಯವಾಯ್ತು, ತುಂಬಾ ಬಳಲಿದ್ದ ಕಾರಣ ಅವ್ರೂ ನಮಗೆಲ್ಲ ೧೦ ನಿಮಿಷಗಳ ಕಾಲ ಶವಾಸನ ಮಾಡಿಸಿದರು ಬಳಿಕ ಬಳಲಿದ್ದ ನಮ್ಮ ಮೈಮನವೆಲ್ಲ ಹಗುರಾಗಿ ಉತ್ಸುಕರಾಗಿ ಮತ್ತೆ ಚಾರಣ ಮುಂದುವರೆಸಿದೆವು,
ಒಳಗೆ ಹೋದಂತೆಲ್ಲಾ ಕಾಡು ದಟ್ಟವಾಗಿ ಹಸಿರು ವನಸಿರಿಯನ್ನು ಆಸ್ವಾದಿಸುತ್ತಾ ಬಾನೆತ್ತರಕ್ಕೆ ಬೆಳೆದು ನಿಂತ ದೈತ್ಯ ಮರಗಳು, ಜೀರುಂಡೆ ಸದ್ದು, ಹಕ್ಕಿಗಳ ಇಂಪಾದ ಕೂಗು ಒಮ್ಮೆ ನೆನೆಸಿಕೊಂಡ್ರೆ ನಾನೇ ಅದೃಷ್ಟವಂತನೇನೊ ಅಂತಾ ಅನ್ನಿಸ್ತಾಯಿತ್ತು , ಈ ದಾರಿಯಲ್ಲಿ ಝರಿ,ತೊರೆಗಳು ಆಗಾಗ ಸಿಕ್ಕುವುದರಿಂದ ನೀರಿನ ಕೊರತೆ ಅಷ್ಟಾಗಿ ಕಾಣಬರುವುದಿಲ್ಲ, ಅರಣ್ಯ ಇಲಾಖೆ ಇನ್ನೊಂದು ಫರ್ಲಾಂಗು ದೂರ ಇದೆ ಅನ್ನುವಷ್ಟರಲ್ಲಿ ಕಾಡಿನ ಒಳಗೆ ಜಲಪಾತದ ಸದ್ದು ಕೇಳಿಬರುತ್ತಿತ್ತು ಸಮಯದ ಅಭಾವದಿಂದ ಅದರ ಪಾಡಿಗೆ ಅದನ್ನು ಬಿಟ್ಟು ಮುನ್ನಡೆದೊ ಸ್ವಲ್ಪ ದೂರ ಕ್ರಮಿಸುವಷ್ಟರಲ್ಲಿ ಒಂದು ನದಿಯೊಂದು ಅಡ್ಡಲಾಯಿತು ಅದಕ್ಕೆ ಅರಣ್ಯ ಇಲಾಖೆಯವರು ತೂಗು ಸೇತುವೆಯೊಂದನ್ನು ನಿರ್ಮಿಸಿದಾರೆ, ಸೇತುವೆ ದಾಟಿ ಮುಂದೆ ಬಂದಾಗ ಬಲಕ್ಕೆ ಇರುವ ಅರಣ್ಯ ಇಲಾಖೆ ಎದುರಾಯ್ತು, ಅಲ್ಲೇ ಸ್ವಲ್ಪ ಹೊತ್ತು ಕುಳಿತು ವಿಶ್ರಾಂತಿ ಪಡೆದು ಹೊರಡುವಾಗ ಇಲಾಖೆ ಸಿಬ್ಬಂದಿಗೆ ನಮ್ಮ ಬ್ಯಾಗ್ ನಲ್ಲಿ ಇದ್ದ ಕಡಲೆ ಮಿಠಾಯಿ,ಅವಲಕ್ಕಿ ಪೊಟ್ಟಣಗಳನ್ನು ಕೊಟ್ಟು ಹೊರಟೆವು. ಸುಮಾರು ೨ ಕಿ.ಮೀ ದೂರ ನಡೆದು ಮಲ್ಲಿಕಾರ್ಜುನ ದೇವಸ್ತಾನ ಬಳಿ ಬಂದು ಅಲ್ಲಿಂದ ಭಂಡಾರಿಯವರು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಸೋಮವಾರಪೇಟೆಯಲ್ಲಿ ತಂದು ಬಿಟ್ಟು ನಮ್ಮ ಜೊತೆ ಒಂದು ಪೋಟೊ ತೆಗೆಸಿಕ್ಕೊಂಡು ಟಾಟಾ ಮಾಡಿ ಅವರ ಸ್ನೇಹಿತರೊಂದಿಗೆ ಹೊರಟರು.
ಭಂಡಾರಿ ಮತ್ತು ಅವರ ಸ್ನೇಹಿತರೊಂದಿಗೆ ನಮ್ಮ ತಂಡ
ನಾವು ಅಲ್ಲೇ ಇದ್ದ ಹೋಟೆಲೊಂದರಲ್ಲಿ ಊಟ ಮುಗಿಸಿ ಕೆ.ಎಸ್.ಅರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಬಂದು ಮೈಸೂರು ಕಡೆಗೆ ಹೋಗುವ ಬಸ್ ಗಾಗಿ ಕಾಯುತ್ತಾ ಕುಳಿತೊ, ಸುಮಾರು ೬:೧೦ ರ ಹೊತ್ತಿಗೆ ಕುಂದಾಪುರದಿಂದ ಬಂದು ಮೈಸೂರಿಗೆ ಹೋಗುವ ಬಸ್ ಬಂದೇ ಬಿಡ್ತು ಅಲ್ಲಿಂದ ಮೈಸೂರಿಗೆ ಬಂದು, ತದನಂತರ ನರೇಂದ್ರ, ಗೋವಿಂದ ರಾಜಹಂಸ ಬಸ್ನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ರು, ನಾನು ಮತ್ತು ವೀರ ಕೆಂಪು ಬಸ್ಸಿನಲ್ಲಿ ಪ್ರಯಾಣಿಸಿ ಚನ್ನಪಟ್ಟಣ್ಣದಲ್ಲಿ ಇಳ್ಕೊಂಡು ಅಲ್ಲಿಂದ ರೈಲ್ವೆ ಸ್ತೇಷನ್ ಗೆ ಹೋಗಿ ಅಲ್ಲಿ ಪಾರ್ಕ್ ಮಾಡಿದ್ದ ಬೈಕ್ ತಗೊಂಡು ನನ್ನೂರಾದ ಬೈರಾಪಟ್ಟಣ್ಣದಲ್ಲಿ ಇಳಿಸಿ ಅವನು ಶೆಟ್ಟಿಹಳ್ಳಿಗೆ ತೆರಳಿದ. ಇದಕ್ಕೂ ಮೊದಲೂ ನಾನು ಎರಡು ಬಾರಿ ಕೊಡಚಾದ್ರಿ ಚಾರಣ, ಹೆಬ್ಬೆ ಜಲಪಾತ ಚಾರಣ, ತಡಿಯಂಡಮೊಳ್ ಚಾರಣ ಮಾಡಿದ್ರೂ ಕೂಡ ಕುಮಾರಪರ್ವತ ಚಾರಣ ನನ್ನ ಜೀವನದಲ್ಲಿ ಮರೆಯಲಾಗದಂತ ಅವಿಸ್ಮರಣೀಯ ಚಾರಣವಾಗಿ ಉಳಿಯಿತು.
* ಶುಭಂ *